ಅಯೋಧ್ಯೆ : ಕೋಟ್ಯಾಂತರ ಭಾರತೀಯರ ಮನೆ-ಮನಗಳಲ್ಲಿ ಬೆರೆತು ಹೋದ ಶ್ರೀರಾಮ ಅಯೋಧ್ಯೆಯಲ್ಲಿ ಇನ್ನೇನು ಕೆಲವೇ ಗಂಟೆಗಳಲ್ಲಿ ಬಾಲರಾಮನಾಗಿ ಸ್ಥಾಪಿತನಾಗಲಿದ್ದಾನೆ.
ಶ್ರೀರಾಮಚಂದ್ರ ಭಾರತೀಯರ ಆರಾಧ್ಯದೈವ. ನೂರು ಟೀಕೆಗಳ ಬಳಿಕವೂ ಜನರ ಮನೆ- ಮನಸಲ್ಲಿ ನೆಲೆನಿಂತ ಶ್ರೀರಾಮನ ಪ್ರಾಣಪ್ರತಿಷ್ಠೆ ಭಾರತೀಯರ ಪಾಲಿಗೆ ಅಪೂರ್ವ ಗಳಿಗೆ.
ಇಂತಹ ಒಂದು ಘನಕಾರ್ಯಕ್ಕೆ ಮನೆ-ಮನೆಗೂ ಆಹ್ವಾನ ತಲುಪಿಸಲಾಗಿದೆ. ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಆಹ್ವಾನದ ಜೊತೆಗೆ ಮಂತ್ರಾಕ್ಷತೆ ನೀಡಿ ಸಾಂಪ್ರದಾಯಿಕವಾಗಿ ಎಲ್ಲರನ್ನೂ ಆಹ್ವಾನಿಸಲಾಗಿದೆ.
ಈ ಮಧ್ಯೆ ಅಯೋಧ್ಯೆಯಿಂದಲೇ ಆಹ್ವಾನ ಪತ್ರಿಕೆ ಹಂಚುವ ಕಾರ್ಯ ಆರಂಭವಾಗಿದ್ದು, ದೇಶದ ಎಲ್ಲ ಕಡೆಗೂ ಸ್ಥಳೀಯ ಭಾಷೆಯಲ್ಲೇ ಆಹ್ವಾನ ಪತ್ರಿಕೆ ಹಾಗೂ ಮಂತ್ರಾಕ್ಷತೆ ತಲುಪಿಸುವ ಕಾರ್ಯ ಸಂಪನ್ನಗೊಂಡಿದೆ. ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ಜನವರಿ 22ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದೆ. ಈ ವೇಳೆ ನಿಮ್ಮ ಗ್ರಾಮ,ಊರಿನಲ್ಲಿ ಎಲ್ ಇಡಿ ಪ್ರಾಜೆಕ್ಟರ್ ಗಳ ಮೂಲಕ ಕಾರ್ಯಕ್ರಮದ ಪ್ರಸಾರ ಮಾಡಿ. ದೇವಾಲಯಗಳಲ್ಲಿ ಪೂಜೆ ಮಾಡಿ, ಜನವರಿ 22ರ ಸಂಜೆ ಕನಿಷ್ಠ ಐದು ದೀಪ ಹಚ್ಚಿ ಶ್ರೀರಾಮನ ಜಪ, ಸುಂದರಕಾಂಡ ಪಾರಾಯಣ, ಶ್ರೀರಾಮಕತೆಯ ಶ್ರವಣ, ಭಜನೆ ಮಾಡಿ ಶ್ರೀರಾಮನ ಕೃಪೆಗೆ ಪಾತ್ರರಾಗಿ ಎಂದು ಆಹ್ವಾನ ಪತ್ರಿಕೆಯಲ್ಲಿ ಮನವಿ ಮಾಡಲಾಗಿದೆ.
ಆಹ್ವಾನ ಪತ್ರಿಕೆಯ ಹಿಂದಿನ ಪುಟದಲ್ಲಿ ಎಲ್ಲರಿಗೂ ಅರ್ಥವಾಗುವಂತೆ ನಿರ್ಮಾಣವಾಗುತ್ತಿರುವ ಶ್ರೀರಾಮನಭವ್ಯ ಮಂದಿರದ ಚಿತ್ರಣ ಕಟ್ಟಿಕೊಡಲಾಗಿದೆ.
![](https://pratidhvani.com/wp-content/uploads/2024/01/Ayodya_1702962438787_1702962442491-1-1024x576.webp)
- ಶ್ರೀರಾಮ ಜನ್ಮಭೂಮಿ ಮಂದಿರದ ವಿವರಣೆ ಮತ್ತು ಪರಿಚಯ:
- ಪರಂಪರಾನುಗತ ಶೈಲಿಯಲ್ಲಿ ಮಂದಿರ ನಿರ್ಮಾಣ.
- ಪೂರ್ವ-ಪಶ್ಚಿಮವಾಗಿ ಉದ್ದ 380 ಅಡಿ, ಅಗಲ 250 ಅಡಿ ಮತ್ತು ಎತ್ತರ 161 ಅಡಿ ಅಳತೆಯಲ್ಲಿ ಮಂದಿರ ನಿರ್ಮಾಣ.
- 3 ಮಹಡಿಗಳ ಮಂದಿರ – ಪ್ರತಿ ಮಹಡಿಯ ಎತ್ತರ 20 ಅಡಿ, ಒಟ್ಟು 392 ಸ್ತಂಭಗಳು ಮತ್ತು 44 ಬಾಗಿಲುಗಳು.
- ನೆಲಮಹಡಿಯ ಗರ್ಭಗೃಹದಲ್ಲಿ ಶ್ರೀರಾಮಲಲ್ಲಾ(ಬಾಲರಾಮ)ನ ವಿಗ್ರಹ ಮತ್ತು ಮೊದಲನೇ ಮಹಡಿಯ ಗರ್ಭಗುಡಿಯಲ್ಲಿ ಶ್ರೀರಾಮ ದರ್ಬಾರ್.
- ಒಟ್ಟು 5 ಮಂಟಪಗಳು: ನೃತ್ಯಮಂಟಪ, ರಂಗಮಂಟಪ, ಸಭಾಮಂಟಪ, ಪ್ರಾರ್ಥನಾ ಮಂಟಪ ಮತ್ತು ಕೀರ್ತನಾಮಂಟಪ.
- ಸ್ತಂಭಗಳು ಮತ್ತು ಬಾಗಿಲುಗಳ ಮೇಲೆ ದೇವಾಧಿದೇವತೆಗಳ ಮತ್ತು ದೇವಾಂಗನೆಯರ ಮೂರ್ತಿಗಳು.
- 16.5 ಅಡಿ ಎತ್ತರವನ್ನು 32 ಮೆಟ್ಟಿಲುಗಳಲ್ಲಿ ಕ್ರಮಿಸಿ, ಸಿಂಹದ್ವಾರದ ಮೂಲಕ ಪೂರ್ವದಿಕ್ಕಿನಿಂದ ಮಂದಿರಕ್ಕೆ ಪ್ರವೇಶ.
- ದಿವ್ಯಾಂಗರು ಮತ್ತು ವೃದ್ಧರಿಗಾಗಿ ಜಾರು ಮೆಟ್ಟಿಲು (Ramp) ಮತ್ತು ಲಿಫ್ಟ್ ವ್ಯವಸ್ಥೆ.
- ಆಯತಾಕಾರವಾಗಿ ಮಂದಿರದ ಸುತ್ತಲೂ ಪರಿಕ್ರಮ- ಉದ್ದ 732 ಮೀಟರ್, ಅಗಲ 4.25 3.
- ಮಂದಿರದ ನಾಲ್ಕು ಮೂಲೆಗಳಲ್ಲಿ ನಾಲ್ಕು ಮಂದಿರಗಳು- ಭಗವಾನ್ ಸೂರ್ಯ, ಭಗವಾನ್ ಶಂಕರ, ಭಗವಾನ್ ಗಣಪತಿ, ದೇವಿ ಭಗವತೀ, ದಕ್ಷಿಣ ದಿಕ್ಕಿನಲ್ಲಿ ಹನುಮಂತ ಮತ್ತು ಉತ್ತರ ದಿಕ್ಕಿನಲ್ಲಿ ಮಾತಾ ಅನ್ನಪೂರ್ಣೇಶ್ವರಿಯ ಮಂದಿರ.
- ಮಂದಿರದ ಸಮೀಪದಲ್ಲಿ ಪೌರಾಣಿಕ ಕಾಲದ ಸೀತಾ ಕೊಳ.
- ಶ್ರೀರಾಮ ಜನ್ಮಭೂಮಿ ಮಂದಿರದ ಪರಿಸರದಲ್ಲಿ ಪ್ರಸ್ತಾವಿತ ಅನ್ಯ ಮಂದಿರಗಳು- ಮಹರ್ಷಿ ವಾಲ್ಮೀಕಿ, ಮಹರ್ಷಿ ವಿಶ್ವಾಮಿತ್ರ, ಮಹರ್ಷಿ ಅಗಸ್ತ್ರ, ನಿಷಾದರಾಜ ಗುಹ, ಮಾತಾ ಶಬರೀ ಮತ್ತು ದೇವಿ ಅಹಲ್ಯಾ.
- ನೈರುತ್ಯ ಭಾಗದಲ್ಲಿ ನವರತ್ನ ಕುಬೇರ ಪೀಠದಲ್ಲಿ ಸ್ಥಿತನಾದ ಶಿವ ಮಂದಿರದ ಜೀರ್ಣೋದ್ಧಾರ ಮತ್ತು ರಾಮಭಕ್ತ ಜಟಾಯು ರಾಜನ ಪ್ರತಿಮೆಯ ಸ್ಥಾಪನೆ.
ಒಟ್ಟಾರೆ ಆಹ್ವಾನ ಪತ್ರಿಕೆ ರಾಮಭಕ್ತರ ಉತ್ಸಾಹ ಹೆಚ್ಚಿಸಿದ್ದು, ಮುಂದಿನ ದಿನದಲ್ಲಿ ಕಾಶಿಯಂತೆ ಪವಿತ್ರ ಯಾತ್ರಾ ಕ್ಷೇತ್ರವಾಗಿ ಭಾರತೀಯರ ಶೃದ್ಧೆಯ ಕ್ಷೇತ್ರವಾಗಿ ಬೆಳೆಯುವುದು ನಿಶ್ಚಿತವಾಗಿದೆ.