ಪರಿಸರ ಉಳಿಸಲು ಅಧಿಕಾರಿಗಳ ವಿರುದ್ಧ ಬಂಡೆದ್ದು ಹತ್ತಾರು ಪ್ರಕರಣಗಳನ್ನ ಹಾಕಿಸಿಕೊಂಡು ಪೊಲೀಸ್ ಠಾಣೆ, ಕೋರ್ಟ್ ಅಲೆದಾಡೋರು ನಾವು, ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಗಳು ಅಧಿಕಾರಿಗಳಿಗೆ ದುಡ್ಡು ತುಂಬಿ ಚಾರಣ, ಮ್ಯಾರಥಾನ್ ಹೆಸರಲ್ಲಿ ಪರಿಸರ ಹಾಳು ಮಾಡೋದು, ನಾವಿದನ್ನ ಸುಮ್ಮನೇ ಬಿಡಲ್ಲ ಎಂದು ಮೂಡಿಗೆರೆಯ ಯುವ ಪರಿಸರಾಕ್ತರು ಕೆಂಡಾಮಂಡಲವಾಗಿದ್ದರು. ಶುಕ್ರವಾರದಂದು ಮೂಡಿಗೆರೆಯ ಬೈರಾಪುರದಲ್ಲಿ ಎತ್ತಿನಭುಜದ ಆಸುಪಾಸು ಮ್ಯಾರಥಾನ್ಗೆ ಬಂದಿಳಿದಿದ್ದ ನೂರಾರು ಜನರನ್ನ ಕಂಡು ಗಾಬರಿಯಾಗಿದ್ದರು. ಇವರೆಲ್ಲರೂ ಕಾಯ್ದಿರಿಸಿದ ಅರಣ್ಯ ವ್ಯಾಪ್ತಿಯೊಳಗೆ ನುಗ್ಗಿದರೆ ಪರಸರದ ಮೇಲೆ ಎಂಥಹ ದುಷ್ಪರಿಣಾಮ ಬೀರಬಹುದು ಎಂದು ಶಪಿಸತೊಡಗಿದರು.
ಅಭಿವೃದ್ಧಿ ಹೆಸರಲ್ಲಿ ಮಲೆನಾಡಿಗರಿಗೇ ಬೇಡವಾದ ಯೋಜನೆಗಳನ್ನ ಪಶ್ಚಿಮಘಟ್ಟದಲ್ಲಿ ಅನುಷ್ಠಾನ ಮಾಡುತ್ತಾ ಬಂದ ರಾಜಕಾರಣಿಗಳು ಹಾಗೂ ಅವರ ತಾಳಕ್ಕೆ ಕುಣಿಯುವ ಅಧಿಕಾರಿ ವರ್ಗ ಪದೇ ಪದೇ ಬೆತ್ತಲಾಗುತ್ತಿದೆ. ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿಯೂ ಆಗಿದ್ದು ಇದೆ. ದಿ ಮಲ್ನಾಡ್ ಅಲ್ಟ್ರಾ ಎಂಬ ಸಂಸ್ಥೆ ಸಾಮಾಜಿಕ ಜಾಲತಾಣದಲ್ಲಿ ಜನರಿಗೆ ಗಾಳ ಹಾಕಿ ಸುಮಾರು ಐನೂರು ಜನರನ್ನ ಸೇರಿಸಿ ಬಿಗ್ ಮ್ಯಾರಥಾನ್ನ್ನ ಎತ್ತಿನಭುಜ ವ್ಯಾಪ್ತಿಯಲ್ಲಿ ಶನಿವಾರ ಆಯೋಜಿಸಿತ್ತು. ಪ್ರತಿಯೊಬ್ಬರಿಗೆ ಮೂರು ಸಾವಿರದ ಐನೂರು ರೂಪಾಯಿ ಕಲೆಕ್ಟ್ ಮಾಡಲಾಗಿತ್ತು. ಏನಿಲ್ಲವೆಂದರೂ ಹತ್ತು ಹನ್ನೆರಡು ಲಕ್ಷ ರುಪಾಯಿ ಹಣ ಸಂಗ್ರಹವಾಗಿತ್ತು. ಶುಕ್ರವಾರ ಸಂಜೆಯೇ ಉಳಿದುಕೊಂಡು ಶನಿವಾರ ಮುಂಜಾನೆ ಓಟ ಹಾಗೂ ಚಾರಣಕ್ಕೆ ಸಿದ್ಧರಾಗಿದ್ದವರನ್ನ ಅಧಿಕಾರಿಗಳು ಒಲ್ಲದ ಮನಸ್ಸಿನಿಂದ ತಡೆಯುವ ಪ್ರಸಂಗ ಎದುರಾಯ್ತು. ದುರಂತ ಎಂದರೆ ಮೂಡಿಗೆರೆ ತಾಲೂಕು ಆಡಳಿತ, ಡಿಸಿಎಫ್ ಕ್ರಾಂತಿ ಎಂಬುವರಿಗೂ ಕೂಡ ಈ ಇವೆಂಟ್ ಬಗ್ಗೆ ಮಾಹಿತಿ ಇರಲಿಲ್ಲವೆಂಬುದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಮೂಡಿಗೆರೆಯ ಕಾರ್ತಿಕ್ ಆದಿತ್ಯಾ ಎಂಬುವರು ಬೆಳಗೋಡು ಎಂಬುವರು ಈ ಬಗ್ಗೆ ಚಕಾರ ಎತ್ತಿದರು, ತಕ್ಷಣ ಇಲಾಖೆ ಹಾಗೂ ತಾಲೂಕು ಆಡಳಿತಕ್ಕೆ ಬಿಸಿ ಮುಟ್ಟಿಸಿ ತಪ್ಪಿತಸ್ಥ ಅಧಿಕಾರಿ ವಿರುದ್ಧವೇ ಪ್ರಕರಣ ದಾಖಲಿಸುವುದಾಗಿ ಹೇಳಿದರು. ಆಗ ನಿಧಾನವಾಗಿ ಅಧಿಕಾರಿಗಳು ತಮಗೆ ಈ ಇವೆಂಟ್ ಬಗ್ಗೆ ಸಂಬಂಧವೇ ಇಲ್ಲ ಎಂಬುವಂತೆ ಮಾತನಾಡಿದ್ದು ತೀರಾ ಬಾಲಿಶ ಎನಿಸಿತು.
ಈ ಮ್ಯಾರಥಾನ್ ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಯಾವ ಉದ್ದೇಶಕ್ಕೆ, ಯಾರ ಉದ್ಧಾರಕ್ಕೆ ಎಂದು ಅರ್ಥವಾಗುತ್ತಿಲ್ಲ. ಇಷ್ಟೊಂದು ಜನ ಒಟ್ಟಿಗೇ ಚಟುವಟಿಕೆ ಪ್ರಾರಂಭಿಸಿದರೆ ಪರಿಸರ ಸೂಕ್ಷ್ಮ ಪ್ರದೇಶದ ಗತಿಯೇನು !? ಇವರ ಶೌಚ ಕ್ರಿಯೆಯಿಂದಾಗಿ ಅಲ್ಲಿನ ಜಲಮೂಲಗಳು ಕುಲಗೆಟ್ಟು ಹೋಗುವುದಕ್ಕೆ ಯಾರು ಹೊಣೆ ? ಜಿಲ್ಲಾಡಳಿತ, ಅರಣ್ಯ ಇಲಾಖೆ ಹೇಗೆ ಇಂತಹ ಇವೆಂಟ್ಗಳಿಗೆ ಅನುಮತಿ ನೀಡಿತು.? ನಮ್ಮ ಪ್ರಶ್ನೆಗಳಿಗೆ ಜಿಲ್ಲಾ ಉಪಸಂರಕ್ಷಣಾಧಿಕಾರಿಗಳು ಬರೀ ಹಾರಿಕೆಯ ಉತ್ತರವನ್ನಷ್ಟೇ ನೀಡುತ್ತಿದ್ದಾರೆ.
ಈ ಮ್ಯಾರಥಾನ್ ನ ಸಂಚಾಲಕರೇ ಮಾಹಿತಿ ನೀಡಿರುವಂತೆ ಮ್ಯಾರಥಾನ್ ನಲ್ಲಿ ಭಾಗವಹಿಸುವವರಿಗೆ ತಲಾ 3000-3500 ರುಪಾಯಿ ನಿಗದಿಪಡಿಸಲಾಗಿದೆ. 3000*400 ಜನ ಎಂದುಕೊಂಡರೂ 12 ಲಕ್ಷವಾಯಿತು. ಯಾವುದೋ ಖಾಸಗಿ ಈವೆಂಟ್ ಸಂಸ್ಥೆಗೆ ಲಾಭ ಮಾಡಿಕೊಳ್ಳುವ ಸಲುವಾಗಿ ಜಿಲ್ಲಾಡಳಿತ ಪಶ್ಚಿಮಘಟ್ಟ ವನ್ನು ಧಾರೆಯೆರೆಯಿತಾ ?
ಉತ್ತರ ನೀಡುವವರು ಮುಗುಮ್ಮಾಗಿದ್ದಾರೆ ಎಂದು ಕಾರ್ತಿಕ್ ಆರೋಪಿಸಿದ್ದಾರೆ.
ಬಹಳ ಮಜಾ ಎಂದರೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆಎನ್ ರಮೇಶ್ ಅವರಿಗೂ ಈ ಮಾಹಿತಿ ಗೊತ್ತಿರಲಿಲ್ಲವಂತೆ. ಯಾವವ ಕೊರೋನಾ ಪ್ರಕರಣಗಳು ಹೆಚ್ಚುತ್ತಿದ್ದಂತೆ ರಾಜ್ಯ ಸರ್ಕಾರ ಕಟ್ಟಿನಿಟ್ಟಿನ ಕ್ರಮಕ್ಕೆ ಆದೇಶ ನೀಡಿತೋ ಆಗ ಈ ಇವೆಂಟ್ ಕೂಡ ತಮ್ಮ ತಲೆಗೆ ಸುತ್ತಿಕೊಳ್ಳಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಂದ ಬೇಲಿ ಹಾಕಿಸಿದ್ದಾರೆ. ಮ್ಯಾರಥಾನ್ ಮಾಡಲು ಬಂದವರು ರಸ್ತೆ ಬದಿಯಲ್ಲಿ ಕೆಲವು ಕಿಲೋಮೀಟರ್ ಓಡಿ ವಾಪಸ್ ಮರಳಿದ್ದಾರೆ. ಆದರೆ ಇವರಿಗೆ ಅನುಮತಿ ನೀಡಿದವರ್ಯಾರು ಎಂಬುದು ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ. ಸೋಮವಾರ ಕಾರ್ತಿಕ್ ಹಾಗೂ ಸ್ನೇಹಿತರು ಮೂಡಿಗೆರೆ ತಾಲೂಕು ಆಡಳಿತಕ್ಕೆ ದೂರು ನೀಡಲಿದ್ದಾರೆ.
ಇಂದು ಎತ್ತಿನಭುಜ ಮುಂದೆ ಕೊಡಚಾದ್ರಿ, ಆಗುಂಬೆ ಕಾಡುಗಳಲ್ಲಿಯೂ ಸಹ ಇಂತಹ ಇವೆಂಟ್ಗಳು ನಡೆಯುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿವೆ. ಪರಿಸರ ಪ್ರೇಮಿಗಳಿಗೆ, ಪತ್ರಕರ್ತರಿಗೂ ಚಾರಣಕ್ಕೆ ಅನುಮತಿ ನೀಡದೇ ಅಲೆಸುವ ಅರಣ್ಯ ಇಲಾಖೆ ಇಂತಹ ಇವೆಂಟ್ಗಳಿಗೆ ಸಲೀಸಾಗಿ ಅನುಮತಿ ನೀಡುತ್ತಿರುವುದರ ಹಿಂದೆ ಲಾಭಿ ಇದೆ ಎನ್ನುತ್ತಾರೆ ಶಿವಮೊಗ್ಗ ಮೂಲದ ಪರಿಸರಾಸಕ್ತ ಅಜಯ್ ಕುಮಾರ್ ಶರ್ಮಾ.
ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಗಳು ಮಲೆನಾಡಿಗೆ ಬೇಡ, ಸ್ಥಳೀಯರಿಂದ ಮೂಡಿಗೆರೆ ತಹಸೀಲ್ದಾರ್ಗೆ ದೂರು
ಎತ್ತಿನಭುಜಕ್ಕೆ ಐನೂರು ಜನರನ್ನ ಮ್ಯಾರಥಾನ್ಗೆ ಕರೆತಂದ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ವಿರುದ್ಧ ಕಾನೂನು ಕ್ರಮಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ. ಕಾರ್ತಿಕ್ ಆದಿತ್ಯಾ, ವಿನೋದ್ ಕಣಚೂರ್, ಸಂಜಯ್ ಕೊಟ್ಟಿಗೆಹಾರ ಇಂದು ಮೂಡಿಗೆರೆ ತಹಸೀಲ್ದಾರ್ ನಾಗರಾಜ್ರನ್ನ ಭೇಟಿ ಮಾಡಿ ದೂರು ಸಲ್ಲಿಸಿದರು. ಅನುಮತಿ ಇಲ್ಲದೇ ಅತಿಕ್ರಮ ಪ್ರವೇಶ ಕಾನೂನು ಬಾಹಿರ, ಇಂತಹ ಯಾವುದೇ ಚಟುವಟಿಕೆಗಳು ಮಲೆನಾಡು ಪರಿಸರಕ್ಕೆ ಬೇಕಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.