• Home
  • About Us
  • ಕರ್ನಾಟಕ
Saturday, June 28, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ಅಂಕಣ | ಸಂತ್ರಸ್ತರೊಡನೆ ನಿಲ್ಲುವ ಸಮಾಜ ಕಟ್ಟಬೇಕಿದೆ

ನಾ ದಿವಾಕರ by ನಾ ದಿವಾಕರ
August 16, 2023
in ಅಂಕಣ, ಅಭಿಮತ
0
ಅಂಕಣ | ಸಂತ್ರಸ್ತರೊಡನೆ ನಿಲ್ಲುವ ಸಮಾಜ ಕಟ್ಟಬೇಕಿದೆ
Share on WhatsAppShare on FacebookShare on Telegram

ನೊಂದವರಿಗೆ ಸಾಂತ್ವನ ಹೇಳುವುದು ಒಂದು ಸ್ವಸ್ಥ ಸಮಾಜದ ನೈತಿಕ ಆದ್ಯತೆಯಾಗಬೇಕು

ADVERTISEMENT

~ನಾ ದಿವಾಕರ

ಹನ್ನೊಂದು ವರ್ಷಗಳ ಹಿಂದೆ ಹತ್ಯೆಗೀಡಾದ ಒಬ್ಬ ಬಾಲಕಿ ಇಂದು ಕರ್ನಾಟಕದ ಪ್ರಜ್ಞಾವಂತ ಮನಸುಗಳನ್ನು ಗಂಭೀರವಾಗಿ ಕದಡಿಬಿಟ್ಟಿದ್ದಾಳೆ. “ಸೌಜನ್ಯಾಳಿಗೆ ನ್ಯಾಯ ಕೊಡಿ” ಎಂಬ ಕೂಗು ರಾಜ್ಯಾದ್ಯಂತ ಮಾರ್ದನಿಸುತ್ತಿದ್ದು, ಈವರೆಗೂ ಅಗೋಚರವಾಗಿಯೇ ಉಳಿದಿರುವ ಅತ್ಯಾಚಾರಿಗಳನ್ನು-ಹಂತಕರನ್ನು ಕಂಡುಹಿಡಿಯುವುದು ಕಾನೂನು ವ್ಯವಸ್ಥೆಗೂ ಒಂದು ಸವಾಲಾಗಿ ಪರಿಣಮಿಸಿದೆ. ಹತ್ತು ವರ್ಷಗಳ ಕಾಲ ನಡೆದ ತನಿಖೆಯ ಬಗ್ಗೆ ಸಿಬಿಐ ನ್ಯಾಯಾಲಯವೇ ಅಸಮಾಧಾನ ವ್ಯಕ್ತಪಡಿಸಿದ್ದು, ಅಮಾಯಕ ವ್ಯಕ್ತಿಯೊಬ್ಬನನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಮೂಲಕ ಆತನೂ ಆರು ವರ್ಷಗಳ ಸೆರೆವಾಸ ಅನುಭವಿಸಿ ಈಗ ಆರೋಪ ಮುಕ್ತನಾಗಿದ್ದಾನೆ. ಈ ಪ್ರಕರಣವನ್ನು ವಿಷಯನಿಷ್ಠತೆಯಿಂದ ಅಥವಾ ವ್ಯಕ್ತಿನಿಷ್ಠ ನೆಲೆಯಲ್ಲಿ ನೋಡದೆ ವಸ್ತುನಿಷ್ಠವಾಗಿ ಗಮನಿಸಿದಾಗ ನಮಗೆ ಕಾಣಬೇಕಿರುವುದು ಒಂದು ಅಮಾಯಕ ಸಂತ್ರಸ್ತ ಜೀವಿ ಮತ್ತು ಅಪರಾಧಿ ಸಮಾಜ. ಹನ್ನೊಂದು ವರ್ಷದ ಹಿಂದೆ ನಡೆದ, ಈ ವೇಳೆಗೆ ವಿಸ್ಮೃತಿಗೆ ಜಾರಬೇಕಾಗಿದ್ದ ಒಂದು ಅಮಾನುಷ ಘಟನೆ ಮತ್ತೊಮ್ಮೆ ನಾಡಿನ ಸೂಕ್ಷ್ಮ ಮನಸುಗಳನ್ನು ಜಾಗೃತಗೊಳಿಸಿರುವುದು ನಮ್ಮೊಳಗೆ ಅವ್ಯಕ್ತವಾಗಿಯೇ ಉಳಿದಿರಬಹುದಾದ ಅಪರಾಧಿ ಪ್ರಜ್ಞೆಯ ದ್ಯೋತಕವಾಗಿಯೇ ಕಾಣುತ್ತದೆ.

ಈಗ ಸೌಜನ್ಯಾಳಿಗೆ ನ್ಯಾಯ ಕೊಡಿ ಎಂದರೆ ಏನರ್ಥ ? ಆ ಬಾಲಕಿಯ ಜೀವ ಪಂಚಭೂತಗಳಲ್ಲಿ ಲೀನವಾಗಿ ಹೋಗಿದೆ. ಆಕೆ ಅನುಭವಿಸಿದ ಯಾತನೆ, ನೋವು ಮತ್ತು ಚಿತ್ರಹಿಂಸೆಗಳು ಇತಿಹಾಸದಲ್ಲಿ ಹುದುಗಿಹೋಗಿವೆ. ಆಕೆಯ ಅಂತಿಮ ಕ್ಷಣದ ಆಕ್ರಂದನ, ಯಾತನಾಮಯ ಕೂಗು ಅಥವಾ ಸಹಜವಾಗಿ ಕೇಳಿಬರುವ ʼ ಅಮ್ಮಾ ʼ ಎಂಬ ನೋವಿನ ಧ್ವನಿ ಈಗ ನಮಗೆ ಊಹಿಸಲು ಮಾತ್ರ ಸಾಧ್ಯ. ಅಪ್ರಾಪ್ತ ಬಾಲಕಿಯೊಬ್ಬಳು ಅತ್ಯಾಚಾರಕ್ಕೊಳಗಾದಾಗ ಅನುಭವಿಸುವ ಯಾತನೆಯನ್ನು ಹೇಗೆ ಅನುಭಾವೀಕರಿಸಲು ಸಾಧ್ಯ ? ಅಥವಾ ಸಮಕಾಲೀನ ಅನುಭವದ ನೆಲೆಯಲ್ಲಿ ನಿಂತು ನೋಡಿದಾಗ, ಈ ರೀತಿಯ ಕೂಗು ನಮ್ಮ ಸುತ್ತಲೂ ಕೇಳುತ್ತಲೇ ಇರುವ ವರ್ತಮಾನದ ಸಂದರ್ಭದಲ್ಲಿ, ಸಮಾಜವೊಂದು ಆಗಿಹೋದ ಆ ಬಾಲಕಿಯ ಮನದಾಳದ ವೇದನೆಯನ್ನು ಹೇಗೆ ಸಾಕ್ಷೀಕರಿಸಲು ಸಾಧ್ಯ ? ಇಲ್ಲಿ ಒಂದು ಸಮಾಜವಾಗಿ ನಮ್ಮೊಳಗಿನ ಅಪರಾಧಿ ಪ್ರಜ್ಞೆ ಜಾಗೃತವಾಗಬೇಕಾಗುತ್ತದೆ.

ಮನುಜ ಸೂಕ್ಷ್ಮತೆಗೆ ಸವಾಲು

“ ಮನುಷ್ಯ ಜಾತಿ ತಾನೊಂದೇ ವಲಂ ” ಎಂಬ ದಾರ್ಶನಿಕ ನುಡಿಗಳ ತವರೂರಾದ ಕರ್ನಾಟಕದಲ್ಲಿ ಇಂದು ಸೌಜನ್ಯ ಕೇವಲ ವ್ಯಕ್ತಿಯಾಗಿ ಅಥವಾ ನಿರ್ಜಿವ ಸಂತ್ರಸ್ತೆಯಾಗಿ ಉಳಿದಿಲ್ಲ. ಬದಲಾಗಿ ಒಂದು ರೂಪಕವಾಗಿ ಕಾಣುತ್ತಾಳೆ.  ಆಕೆಯನ್ನು ಕರ್ನಾಟಕದ ನಿರ್ಭಯ ಎನ್ನಲೂ ಸಾಧ್ಯವಿಲ್ಲ ಏಕೆಂದರೆ ನಿರ್ಭಯಾಳಿಗೆ ತ್ವರಿತ ನ್ಯಾಯ ದೊರೆತಿದೆ, ಆಕೆಯ ಹಂತಕರು ಶಿಕ್ಷೆಗೊಳಗಾಗಿದ್ದಾರೆ, ಆಕೆಯ ಸಾವಿನ ಸುತ್ತ ಎದ್ದ ಕೂಗು ಒಂದು ಹೊಸ ಕಾನೂನಿಗೆ ಜನ್ಮ ನೀಡಿದೆ. ಎಂತಹ ನ್ಯಾಯವ್ಯವಸ್ಥೆಯಲ್ಲಾದರೂ ಅಪರಾಧದ ನಿಷ್ಕರ್ಷೆಯಲ್ಲಿ ಅಪರಾಧಿಗಳ ಸಾಮಾಜಿಕ ಪ್ರಾಬಲ್ಯ ಮತ್ತು ಪ್ರಭಾವಿ ವಲಯ ಎಷ್ಟು ಪ್ರಧಾನವಾಗುತ್ತದೆ ಎನ್ನುವುದು ನ್ಯಾಯಶಾಸ್ತ್ರದ ಸಂಕಥನದಲ್ಲಿ ಬಹುಚರ್ಚಿತ ವಿಚಾರ. ಸೌಜನ್ಯಗಳ ಪ್ರಕರಣದಲ್ಲೂ ನ್ಯಾಯವ್ಯವಸ್ಥೆ ತನ್ನ ಕರ್ತವ್ಯವನ್ನು ಮಾಡಿದೆ. ಸರ್ಕಾರಗಳು ಯಾಂತ್ರಿಕವಾಗಿ ತಮ್ಮ ಜವಾಬ್ದಾರಿಯನ್ನು ಪೂರೈಸಿವೆ. ಕಾನೂನು ಪಾಲಕರ ಲೋಪಗಳನ್ನು ನ್ಯಾಯಾಂಗವೇ ಎತ್ತಿ ತೋರಿಸಿದೆ. ಆದರೆ ಇಡೀ ಪ್ರಕ್ರಿಯೆ ಮತ್ತೊಬ್ಬ ಅಮಾಯಕ ಸಂತ್ರಸ್ತನನ್ನು ಹುಟ್ಟುಹಾಕಿದೆ. ಯಾವ ಅಪರಾಧವನ್ನೂ ಮಾಡದ ಅಮಾಯಕ ವ್ಯಕ್ತಿಯೊಬ್ಬ ಆರು ವರ್ಷಗಳ ಸೆರೆವಾಸ ಅನುಭವಿಸಿ ಹೊರಬಂದಿದ್ದಾನೆ. ಆತನಿಗೆ ಸಾಂತ್ವನ ಹೇಳಲು ನಮಗೆ ಶಕ್ತಿ ಇದೆಯೇ ? ಇರುವುದೇ ಆದರೆ ಹೇಗೆ ? ಮಾಡದ ತಪ್ಪಿಗೆ ದೀರ್ಘಶಿಕ್ಷೆ ಅನುಭವಿಸಿರುವ ಹತಭಾಗ್ಯರು ನಮ್ಮ ನಡುವೆ ಅಪಾರ ಸಂಖ್ಯೆಯಲ್ಲಿದ್ದಾರೆ.

ಒಂದು ಸಮಾಜವಾಗಿ ನಮಗೆ ಕಾಣಬೇಕಾದ ವಾಸ್ತವ ಇಲ್ಲಿ ಅಡಗಿದೆ. ಸೌಜನ್ಯ ರೂಪಕವಾಗಿ ಕಂಡರೂ ಏಕಾಂಗಿಯಾಗಿ ಕಾಣುವುದಿಲ್ಲ. ಸುತ್ತಲಿನ ನಿತ್ಯ ವಾರ್ತೆಗಳನ್ನು ಗಮನಿಸುತ್ತಿದ್ದರೆ ದಿನಕ್ಕೊಬ್ಬ ಸೌಜನ್ಯ ನಮ್ಮ ನಡುವೆ ಎದ್ದು ನಿಲ್ಲುತ್ತಾಳೆ. ಸಹಜವಾಗಿ ನಮ್ಮ ನಡುವಿನ ದುರಂತ ಪ್ರತಿಮೆಯಾಗಿಬಿಡುತ್ತಾಳೆ. ಭವಾರಿ ದೇವಿ, ಬಿಲ್ಕಿಸ್‌ ಬಾನೊ ಅವರಂತಹ ಹಲವು ಸಂತ್ರಸ್ತೆಯರು ಈ ಪ್ರತಿಮೆಗಳ ರೂಪದಲ್ಲಿ ನಮ್ಮನ್ನು ಕಾಡುತ್ತಲೇ ಇರುತ್ತಾರೆ.  ನಡುರಾತ್ರಿಯಲ್ಲಿ ಮುಕ್ತಿ ಪಡೆದ ಹಾಥ್ರಸ್‌ನ ಸಂತ್ರಸ್ತೆ ನಿಗೂಢ ಪ್ರತಿಮೆಯಾಗಿ ಕಾಡುತ್ತಲೇ ಹೋಗುತ್ತಾಳೆ. ನಿತ್ಯ ಜೀವನದಲ್ಲಿ ಅಸ್ಪೃಶ್ಯತೆ ಅನುಭವಿಸುವ ಹೆಣ್ಣುಮಕ್ಕಳು ಅತ್ಯಾಚಾರಗಳ ಸಂದರ್ಭಗಳಲ್ಲಿ ಸ್ಪೃಶ್ಯರಾಗಿಬಿಡುವ ಒಂದು ವೈಚಿತ್ರ್ಯವನ್ನೂ ನಮ್ಮ ಸಮಾಜದಲ್ಲಿ ಕಾಣುತ್ತಿದ್ದೇವೆ. ಹಾಗೆಯೇ ಮಾನವ ಜೀವಿಯ ಸಹಜ ಗುಣ ಆಗಿರಬೇಕಾದ ಪ್ರೀತಿ-ಪ್ರೇಮ-ಮಮತೆ ಮತ್ತು ವಾತ್ಸಲ್ಯ ಹೆಣ್ಣುಮಕ್ಕಳ ಪಾಲಿಗೆ ಮಾರಣಾಂತಿಕವಾಗಿ ಪರಿಣಮಿಸುವ ವಿಕೃತಿಯನ್ನು ಮರ್ಯಾದೆಗೇಡು ಹತ್ಯೆಗಳಲ್ಲಿ ಕಾಣುತ್ತಿದ್ದೇವೆ. ಕರುಳ ಕುಡಿಯ ಕತ್ತು ಕತ್ತರಿಸಲು ಜಾತಿ ಶ್ರೇಷ್ಠತೆ ಒಂದು ಅಸ್ತ್ರವಾಗಿ ಕಂಡರೆ, ಪ್ರೀತಿಸಿದ ಹೃದಯವನ್ನು ಕಿವುಚಿಹಾಕಲು ಪುರುಷ ಶ್ರೇಷ್ಠತೆ ಸಾಧನವಾಗಿ ಕಾಣುತ್ತದೆ. ಈ ಎರಡೂ ಕ್ರೌರ್ಯಗಳ ನಡುವೆ ಸಾವಿರಾರು ಹೆಣ್ಣುಮಕ್ಕಳು ಮೌನವಾಗಿಯೇ ಭವಿಷ್ಯದ ರೂಪಕಗಳಾಗುತ್ತಿದ್ದಾರೆ.

ಈ ನಡುವೆ ಮಣಿಪುರದಲ್ಲಿ ನಡೆದಿರುವ ದೌರ್ಜನ್ಯಗಳು ಇಡೀ ದೇಶವನ್ನು ( ಕೆಲವು ರಾಜಕೀಯ ನಾಯಕರನ್ನು ಹೊರತುಪಡಿಸಿ) ಬೆಚ್ಚಿಬೀಳಿಸಿದೆ. ಆಡಳಿತ ವ್ಯವಸ್ಥೆಗೆ, ಕಾನೂನು ಪಾಲಕರಿಗೆ ಮಣಿಪುರದ ಬೆತ್ತಲೆ ಮೆರವಣಿಗೆ ಮತ್ತು ಸಾಮೂಹಿಕ ಅತ್ಯಾಚಾರ-ಹತ್ಯೆಗಳು ಕೇವಲ ಸಾಮಾಜಿಕ ಅಪರಾಧಗಳಾಗಿ ಕಾಣುತ್ತವೆ. ಆದರೆ ಮನುಜ ಸೂಕ್ಷ್ಮತೆ ಇರುವ ಒಂದು ಸಮಾಜಕ್ಕೆ ಈ ಘಟನೆಯ ಹಿಂದೆ ಅಡಗಿರುವ ಒಂದು ಕ್ರೂರ ಜಗತ್ತು ಮತ್ತು ಅನಾಗರಿಕ ಮನಸ್ಥಿತಿ ಕಾಣಲೇಬೇಕಲ್ಲವೇ ? ಬೆತ್ತಲೆಯಾದವರ ಅಥವಾ ಬೆತ್ತಲೆ ಮಾಡಿದವರ ಅಸ್ಮಿತೆಗಳಿಗಿಂತಲೂ ನಮ್ಮನ್ನು ಕಾಡಬೇಕಿರುವುದು, ಹಲ್ಲೆಗೊಳಗಾದ ಹೆಣ್ಣುಮಕ್ಕಳ ಅಂತರಂಗದ ವೇದನೆ ಮತ್ತು ಯಾತನೆ. ಈ ರೀತಿಯ ಒಳಬೇಗುದಿಯನ್ನು ಮೌನವಾಗಿ ಸಹಿಸಿಕೊಂಡವರಲ್ಲಿ ಮಣಿಪುರದ ಅಮಾಯಕ ಮಹಿಳೆಯರು ಮೊದಲಿಗರೇನಲ್ಲ ಅಥವಾ ನಮ್ಮ ಸಮಾಜ ತೆರೆದುಕೊಳ್ಳುತ್ತಿರುವುದನ್ನು ಗಮನಿಸಿದರೆ ಕೊನೆಯದೂ ಆಗಲಾರದು ಎನಿಸುತ್ತದೆ. ಏಕೆಂದರೆ ಈ ಹೆಣ್ಣುಮಕ್ಕಳ ಆಕ್ರಂದನದ ಹಿಂದೆ ವಿಶಾಲ ಸಮಾಜಕ್ಕೆ ಅಸ್ಮಿತೆಗಳ ಧ್ವನಿಯೇ ಪ್ರಧಾನವಾಗಿ ಕಾಣುತ್ತದೆ.

ಮಣಿಪುರದ ಗಲಭೆಗಳಲ್ಲಿ ಹತ್ಯೆಗೀಡಾದ ನೂರಾರು ಜನರ ಪೈಕಿ ನೂರಕ್ಕೂ ಹೆಚ್ಚು ಶವಗಳ ಗುರುತು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಈ ಮೃತದೇಹಗಳು ಅನ್ಯದೇಶದಿಂದ ಅಕ್ರಮವಾಗಿ ನುಸುಳಿ ಬಂದಿರುವ ಜನರದ್ದಾಗಿರಬಹುದೇ ಎಂಬ ಚರ್ಚೆಯೂ ನಡೆಯುತ್ತಿದೆ. ಕೆಲವೆಡೆ ಮೃತ ದೇಹಗಳ ಅಂತ್ಯಕ್ರಿಯೆಗೂ ಆಕ್ಷೇಪ ವ್ಯಕ್ತವಾಗುತ್ತಿದ್ದು, ಶವಗಳನ್ನೂ ಜನಾಂಗೀಯ ಅಸ್ಮಿತೆಗಳಿಗೆ ಒಳಪಡಿಸಿ ವಿಂಗಡಿಸಲಾಗುತ್ತಿದೆ. ಇದು ಏನನ್ನು ಸೂಚಿಸುತ್ತದೆ ? ಹುಟ್ಟಿನಿಂದ ಮಾತ್ರವೇ ಅಲ್ಲದೆ ನಮ್ಮ ಸಮಾಜ ಮನುಷ್ಯನನ್ನು ಸಾವಿನ ನಂತರವೂ ಅಸ್ಮಿತೆಗಳ ಚೌಕಟ್ಟಿನೊಳಗೇ ಇಟ್ಟು ನೋಡುತ್ತದೆ. ಇದು ಹೊಸ ವಿದ್ಯಮಾನವೇನಲ್ಲವಾದರೂ, ಸಹಜೀವಿಯ ಸಾವು ನಮ್ಮ ಸೂಕ್ಷ್ಮ ಪ್ರಜ್ಞೆಯೊಳಗೆ ಸಂವೇದನೆಯನ್ನು ಸೃಜಿಸಲು ಸಾಧ್ಯವಾಗುತ್ತಿಲ್ಲ ಎಂದೇ ಅರ್ಥ ಅಲ್ಲವೇ ? ಇದಕ್ಕೆ ಕಾರಣ, ಈ ಸಾವುಗಳು ಏಕೆ ಸಂಭವಿಸುತ್ತಿವೆ ಎನ್ನುವುದಕ್ಕಿಂತಲೂ ನಮ್ಮನ್ನು ಬಾಧಿಸುತ್ತಿರುವುದು ಸತ್ತವರ ಜಾತಿ, ಧರ್ಮ, ಜನಾಂಗ ಮತ್ತು ಪ್ರಾದೇಶಿಕ ಅಸ್ಮಿತೆಗಳು.

ಸಾಮಾಜಿಕ ಪ್ರಜ್ಞೆಯ ಸವಾಲು

ಇಂತಹ ಒಂದು ವಾತಾವರಣದಲ್ಲಿ ಒಂದು ಆರೋಗ್ಯಕರ ಸಮಾಜದ ಆದ್ಯತೆ ಏನಾಗಬೇಕು ? ಒಂದು ಮಾನವೀಯ ಸಮಾಜವಾಗಿ ನಾವು ಯಾರೊಡನೆ ನಿಲ್ಲಬೇಕು ? ನೊಂದವರೊಡನೆ ನಿಲ್ಲಲು, ಅಂತರಾಳದ ವೇದನೆಗೆ ಸ್ಪಂದಿಸಲು, ಹಲ್ಲೆಗೊಳಗಾದ ಅಮಾಯಕರಿಗೆ ಮಿಡಿಯಲು ನಮಗೆ ನಾವೇ ಕಲ್ಪಿಸಿಕೊಂಡಿರುವ ಅಸ್ಮಿತೆಗಳು ಅಡ್ಡಿಯಾಗಬೇಕೇ ? ಅಥವಾ ನಮ್ಮ ರಾಜಕೀಯ ನಂಬಿಕೆಗಳು, ಸೈದ್ದಾಂತಿಕ ಒಲುಮೆ-ನಿಲುಮೆಗಳು ಆಸರೆಯಾಗಬೇಕೇ ? ಹತ್ಯೆ-ಅತ್ಯಾಚಾರ-ಸಾಮೂಹಿಕ ಹತ್ಯಾಕಾಂಡಗಳ ಸಂದರ್ಭದಲ್ಲಿ ಇಂತಹ ಅಪಸವ್ಯಗಳನ್ನು ಮಾನವ ಜಗತ್ತು ಬಹಳಷ್ಟು ಕಂಡಿದೆ. ಕಳೆದ ಮೂರು ದಶಕಗಳಲ್ಲಿ ಭಾರತೀಯ ಸಮಾಜವೂ ಇದಕ್ಕೆ ಸಾಕ್ಷಿಯಾಗಿದೆ. ಸಾವುಗಳನ್ನು ಸಂಭ್ರಮಿಸುವ ಅಥವಾ ಮೌನವಾಗಿ ಸಮ್ಮತಿಸುವ ಅಸೂಕ್ಷ್ಮತೆಯನ್ನು ಒಂದು ಸಮಾಜವಾಗಿ ನಾವೇ ರೂಢಿಸಿಕೊಂಡಿದ್ದೇವೆ ಅಥವಾ ಪೋಷಿಸುತ್ತಿದ್ದೇವೆ. ಅಧಿಕಾರ ರಾಜಕಾರಣದ ತಾತ್ವಿಕ ಶ್ರದ್ಧಾನಂಬಿಕೆಗಳೂ ಈ ರೀತಿಯ ಒಂದು ತಣ್ಣನೆಯ ಕ್ರೌರ್ಯವನ್ನು ಸಮಾಜದಲ್ಲಿ ಬಿತ್ತುತ್ತಾ ಹೋಗುತ್ತವೆ.

ಸಮಾಜದಲ್ಲಿ ಘಟಿಸುವ ಎಲ್ಲ ಅನ್ಯಾಯಗಳಿಗೂ ಕಾನೂನು-ನ್ಯಾಯ ವ್ಯವಸ್ಥೆಯಲ್ಲಿ ಅಂತಿಮ ನ್ಯಾಯ ಅಪೇಕ್ಷಿಸಲಾಗುವುದಿಲ್ಲ. ಏಕೆಂದರೆ ಅಲ್ಲಿ ಸಾಕ್ಷ್ಯಾಧಾರಗಳು ಮುಖ್ಯವಾಗುತ್ತವೆ. ಮಾನವನ ಕ್ರೌರ್ಯ ಮತ್ತು ಈ ಕ್ರೌರ್ಯಕ್ಕೆ ಬಲಿಯಾಗುವ ಅಮಾಯಕರ ವೇದನೆಗೆ ಸಾಕ್ಷ್ಯಾಧಾರಗಳನ್ನು ಎಲ್ಲಿಂದ ತರಲು ಸಾಧ್ಯ ? ಸಾಕ್ಷಿ ಪುರಾವೆಗಳನ್ನು ಶೋಧಿಸುವ ಒಂದು ಸಮಾಜಕ್ಕೆ ತನ್ನ ಅಂತಃಪ್ರಜ್ಞೆ ಜಾಗೃತಾವಸ್ಥೆಯಲ್ಲಿಟ್ಟುಕೊಳ್ಳುವ ವ್ಯವಧಾನ ಇದ್ದರೆ, ಆತ್ಮಸಾಕ್ಷಿಯೇ ಅಂತಿಮ ಸಾಕ್ಷಿಯೂ ಆಗುತ್ತದೆ. ಇಲ್ಲಿ ಅಂತಿಮ ನ್ಯಾಯವನ್ನು ನಿಷ್ಕರ್ಷೆ ಮಾಡುವ ಜವಾಬ್ದಾರಿ ಆರೋಗ್ಯಕರ ಸಮಾಜದ ಮೇಲಿರುತ್ತದೆ. ಈ ಜವಾಬ್ದಾರಿಯನ್ನು ಹೊರಬೇಕಾದರೆ ಸಮಾಜದ ಆಂತರ್ಯದಲ್ಲಿ ಪಾಪಪ್ರಜ್ಞೆ ಅಥವಾ ಮಾನವೀಯ ಪ್ರಜ್ಞೆ, ಮಾನವ ಸಂವೇದನೆ ಮತ್ತು ಮನುಜ ಸೂಕ್ಷ್ಮತೆಯು ಸದಾ ಜಾಗೃತಾವಸ್ಥೆಯಲ್ಲಿರಬೇಕಾಗುತ್ತದೆ. ಇದು ನಮಗೆ ಸಾಧ್ಯವಾಗಿದೆಯೇ ? ಈ ಪ್ರಶ್ನೆಗೆ ಉತ್ತರ ಶೋಧಿಸುತ್ತಾ ಹೋದಾಗ ನಮಗೆ ನೂರಾರು ಸಿಕ್ಕುಗಳು, ಅಸ್ಮಿತೆಗಳ ಜಟಿಲ ಒಳಬಿರುಕುಗಳು ಎದುರಾಗುತ್ತವೆ. ಸಾಮಾಜಿಕ-ಸಾಂಸ್ಕೃತಿಕ-ಧಾರ್ಮಿಕ ಶ್ರೇಣೀಕೃತ ಕಂದರಗಳು ಎದುರಾಗುತ್ತವೆ.

ಈ ಕಂದರಗಳನ್ನು ದಾಟಿ ಮುನ್ನಡೆಯುವ ಮನುಜ ಸೂಕ್ಷ್ಮತೆಯನ್ನು ನಮ್ಮ ಸಮಾಜ ಕಳೆದುಕೊಂಡಿರುವುದರಿಂದಲೇ ಸೌಜನ್ಯಳಂತಹ ಸಾವಿರಾರು ಜೀವಗಳು, ಮಣಿಪುರದಂತಹ ಘಟನೆಗಳು ಶಾಶ್ವತವಾಗಿ ರೂಪಕಗಳಾಗಿಯೇ ಉಳಿದುಬಿಡುತ್ತವೆ. ದುರಂತ ಎಂದರೆ ಸಮಾಜದ ಕ್ರೌರ್ಯಕ್ಕೊಳಗಾಗಿ ನಿರಂತರ ವೇದನೆಯನ್ನು ಅನುಭವಿಸುವ ಸಾವಿರಾರು ಜೀವಗಳು ನಮ್ಮ ನಡುವೆಯೇ ಉಸಿರಾಡುತ್ತಲಿದ್ದರೂ ರೂಪಕಗಳಾಗಿಯೇ ಉಳಿದುಬಿಡುತ್ತವೆ. ಈ ಅಸೂಕ್ಷ್ಮತೆಯ ಬಲೆಯಿಂದ ಮಾನವ ಸಮಾಜ ಮುಕ್ತವಾಗಬೇಕಿದೆ. ಯಾವುದೇ ಅಮಾನುಷ ಕೃತ್ಯ ಸಂಭವಿಸಿದಾಗಲೂ ಸಂತ್ರಸ್ತರೊಡನೆ ನಿಲ್ಲುವ ಒಂದು ಮಾನವೀಯ ಜಗತ್ತನ್ನು ನಾವು ಹೊಸದಾಗಿ ಸೃಷ್ಟಿಸಬೇಕಿದೆ. ಆಗಲೇ ನಮಗೆ ಪಂಪನ “ ಮನುಷ್ಯ ಜಾತಿ ತಾನೊಂದೇ ವಲಂ ” ಎಂಬ ದಾರ್ಶನಿಕ ನುಡಿಗಳನ್ನು, ಠಾಗೂರ್-ಕುವೆಂಪು ಅವರ ವಿಶ್ವಮಾನವತೆಯ ಔದಾತ್ಯವನ್ನು ಉಚ್ಚರಿಸುವ ನೈತಿಕ ಹಕ್ಕು ಇರಲು ಸಾಧ್ಯ.  ಮನುಷ್ಯ ಸಮಾಜವನ್ನು ಅಸೂಕ್ಷ್ಮತೆಯ ಜಟಿಲ ಸಿಕ್ಕುಗಳಿಂದ-ಬೌದ್ಧಿಕವಾಗಿಯಾದರೂ- ಬಿಡುಗಡೆ ಮಾಡಬೇಕಿದೆ. ಸೌಜನ್ಯಾಗೆ ನ್ಯಾಯ ಕೊಡಿ ಎನ್ನುವ ಒಂದು ಸಾಮೂಹಿಕ ಕೂಗು ಈ ವಿಮೋಚನೆಯ ಒಂದು ಧ್ವನಿಯಾದರೆ ಸಾರ್ಥಕವಾದೀತು.

-೦-೦-೦-೦-೦-

Tags: cmsiddaramiahDarmasthalaMahesh shetty thimarodiSowjanya
Previous Post

ಡಿಸಿಎಂ ವಿರುದ್ಧ ಆರೋಪ ಮಾಡಿದ್ರೆ ಬೆದರಿಸೋ ಕೆಲಸ ಮಾಡಿದ್ರಾ ಡಿ.ಕೆ ಶಿವಕುಮಾರ್​..?

Next Post

ದೀಪಾವಳಿಗೆ ದುನಿಯಾ ವಿಜಯ್ ಅಭಿನಯದ ‘ಭೀಮ’ನ ದರ್ಶನ?

Related Posts

Top Story

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

by ಪ್ರತಿಧ್ವನಿ
June 27, 2025
0

"ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಬೇಕು. ಪ್ರತಿ ವರ್ಷ ಕೆಂಪೇಗೌಡ ಜಯಂತಿ ಕಾರ್ಯಕ್ರಮ ಮಾಡಬೇಕು" ಎಂದು...

Read moreDetails

HD Kumarswamy: ಜನರನ್ನೇ ಸುಲಿದು ಪಂಚ ಗ್ಯಾರಂಟಿ ಕೊಡುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

June 27, 2025

Rangitharanga: “ರಂಗಿತರಂಗ” ಮತ್ತೆ ತೆರೆಗೆ: ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಚಿತ್ರತಂಡ

June 27, 2025

KJ George: ರಾಜ್ಯದ ಎಲ್ಲ ಸೌರ ವಿದ್ಯುತ್‌ ಘಟಕಗಳಲ್ಲಿ ಬ್ಯಾಟರಿ ಸ್ಟೋರೇಜ್‌ ವ್ಯವಸ್ಥೆ: ಜಾರ್ಜ್‌

June 27, 2025

Anil Shetty: ಸ್ಟಾರ್ಟಪ್ ಉದ್ಯಮಿ ಹಾಗೂ ಯುವರಾಜಕಾರಣಿ ಅನಿಲ್ ಶೆಟ್ಟಿ ನಾಯಕ ನಟನಾಗಿ ಚಲನ ಚಿತ್ರರಂಗಕ್ಕೆ ಪಾದಾರ್ಪಣೆ

June 26, 2025
Next Post
ದೀಪಾವಳಿಗೆ ದುನಿಯಾ ವಿಜಯ್ ಅಭಿನಯದ ‘ಭೀಮ’ನ ದರ್ಶನ?

ದೀಪಾವಳಿಗೆ ದುನಿಯಾ ವಿಜಯ್ ಅಭಿನಯದ 'ಭೀಮ'ನ ದರ್ಶನ?

Please login to join discussion

Recent News

Top Story

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

by ಪ್ರತಿಧ್ವನಿ
June 27, 2025
Top Story

HD Kumarswamy: ಜನರನ್ನೇ ಸುಲಿದು ಪಂಚ ಗ್ಯಾರಂಟಿ ಕೊಡುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

by ಪ್ರತಿಧ್ವನಿ
June 27, 2025
Top Story

Rangitharanga: “ರಂಗಿತರಂಗ” ಮತ್ತೆ ತೆರೆಗೆ: ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಚಿತ್ರತಂಡ

by ಪ್ರತಿಧ್ವನಿ
June 27, 2025
Top Story

KJ George: ರಾಜ್ಯದ ಎಲ್ಲ ಸೌರ ವಿದ್ಯುತ್‌ ಘಟಕಗಳಲ್ಲಿ ಬ್ಯಾಟರಿ ಸ್ಟೋರೇಜ್‌ ವ್ಯವಸ್ಥೆ: ಜಾರ್ಜ್‌

by ಪ್ರತಿಧ್ವನಿ
June 27, 2025
Top Story

ರೈತ ಜಮೀನು ಕಿತ್ತು ತಿನ್ನುವ ಸರ್ಕಾರ

by ಪ್ರತಿಧ್ವನಿ
June 27, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

June 27, 2025

HD Kumarswamy: ಜನರನ್ನೇ ಸುಲಿದು ಪಂಚ ಗ್ಯಾರಂಟಿ ಕೊಡುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

June 27, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada