ಸ್ಥಳೀಯ ಆಡಳಿತ ತನ್ನ ನೈತಿಕ ಹೊಣೆಗಾರಿಕೆಯನ್ನರಿತು ಕಾರ್ಯನಿರ್ವಹಿಸುವುದು ಅತ್ಯವಶ್ಯ
ನಾ ದಿವಾಕರ
ವಿವೇಕರಹಿತ ಆಗ್ರಹ-ಆದ್ಯತೆಗಳು
ಈ ದುರ್ಭಾಗ್ಯ ಘಟನೆಗಳ ಬಗ್ಗೆ ಚರ್ಚೆ ನಡೆಸಬೇಕಾದ ಪಾಲಿಕೆ ಕೌನ್ಸಿಲ್ ಉದಯರವಿ ರಸ್ತೆಯ ಮರುನಾಮಕರಣದ ಸುತ್ತ ಚರ್ಚಿಸಿರುವುದು ಅಕ್ಷಮ್ಯ. ರಸ್ತೆ, ವೃತ್ತ, ಸೇತುವೆ, ಕಟ್ಟಡ ಇನ್ನಿತರ ಯಾವುದೇ ಸ್ಥಾವರಗಳಿಗೆ ನಾಮಕರಣ ಮಾಡುವುದು ಆಯಾ ಚಾರಿತ್ರಿಕ ಸಂದರ್ಭಲ್ಲಿ ನೆನೆಯಬಹುದಾದ ಮಹನೀಯರ ಸ್ಮರಣೆಯಲ್ಲಿ. ನಮ್ಮನ್ನು ಅಗಲಿ ಹೋಗಿರುವ ಹೋರಾಟಗಾರರು, ಸಾಹಿತಿಗಳು, ಕಲಾವಿದರು, ಸಾಮಾಜಿಕ ನೇತಾರರು ಇತಿಹಾಸದ ವಿಸ್ಮೃತಿಗೆ ಜಾರದೆ ಚಿರಸ್ಥಾಯಿಯಾಗಿ ಭವಿಷ್ಯದ ಪೀಳಿಗೆಯ ನಡುವೆಯೂ ಸಾಂಕೇತಿಕವಾಗಿ ಆದರೂ ಉಳಿದಿರಲಿ ಎನ್ನುವ ಉದ್ದೇಶದ ಹೊರತು ಈ ನಾಮಕರಣಗಳಲ್ಲಿ ಮತ್ತಾವ ಪುರುಷಾರ್ಥವನ್ನೂ ಕಾಣಲಾಗುವುದಿಲ್ಲ.
ಕುವೆಂಪು ನಗರದ ಎಲ್ಲ ರಸ್ತೆಗಳನ್ನೂ ರಾಷ್ಟ್ರಕವಿಯ ಕಾವ್ಯಾತ್ಮಕ ಅಭಿವ್ಯಕ್ತಿಯ ನೆನಹುಗಳ ರೂಪದಲ್ಲಿ ಹೆಸರಿಸಲಾಗಿರುವುದು ಆಕರ್ಷಕವಷ್ಟೇ ಅಲ್ಲ, ಕನ್ನಡ ನಾಡಿನ ಸಾಕ್ಷಿಪ್ರಜ್ಞೆಯಾಗಿ ಮೈಸೂರು-ಕುಕ್ಕರಹಳ್ಳಿ-ಮಾನಸಗಂಗೋತ್ರಿಯನ್ನು ತಮ್ಮ ಬೌದ್ಧಿಕ ತವರು ಎಂದೇ ಭಾವಿಸಿದ್ದ ಕುವೆಂಪು ಅವರ ಶಾಶ್ವತ ನೆನಪಿನ ಸಂಕೇತಗಳಾಗಿ ಕಾಣಲಾಗುತ್ತಿದೆ. ಇಂತಹ ಒಂದು ರಸ್ತೆಯ ಹೆಸರು “ ಉದಯರವಿ ”.
![](https://pratidhvani.com/wp-content/uploads/2023/08/download-9.jpg)
ಈಗ ಉದಯರವಿ ಹೆಸರಿನ ಔಚಿತ್ಯವನ್ನೋ, ಅಧಿಕೃತತೆಯನ್ನೋ ಪ್ರಶ್ನಿಸುವುದು ಬಾಲಿಶ ಎನಿಸುವುದಿಲ್ಲವೇ ? ʼಉದಯರವಿʼ ಯನ್ನು ಅಳಿಸಿಹಾಕಿ ಸಂವಿಧಾನ ಕರ್ತೃ ಡಾ. ಬಿ.ಆರ್. ಅಂಬೇಡ್ಕರ್ ಅವರ ತಂದೆ ರಾಮ್ಜಿ ಸಕ್ಪಾಲ್ ಅವರ ಹೆಸರಿಡುವ ಆಗ್ರಹಕ್ಕೆ ಯಾವ ತಾತ್ವಿಕ ಸಮರ್ಥನೆ ನೀಡಲು ಸಾಧ್ಯ ? ಈ ಆಗ್ರಹದ ಮೂಲ ಯಾವುದೇ ಇರಲಿ, ಡಾ. ಬಿ.ಆರ್ ಅಂಬೇಡ್ಕರ್ ಕಂಡ ಸಮನ್ವಯ ಭಾರತದ ಕನಸನ್ನು ಸಾಕಾರಗೊಳಿಸುವ ಸಾಹಿತ್ಯಕ ಸಂದೇಶವನ್ನು ನೀಡಿದ ಹಾಗೂ ಕರ್ನಾಟಕದ ಸಮನ್ವಯ-ಸೌಹಾರ್ದ ಸಂಸ್ಕೃತಿಗೆ ಅಡಿಪಾಯ ಹಾಕಿದ, ರಾಷ್ಟ್ರಕವಿ ಕುವೆಂಪು ಅವರ ನೆನಪನ್ನು ಅಳಿಸಿಹಾಕಿ, ಅಂಬೇಡ್ಕರ್ ಅವರ ತಂದೆಯ ಹೆಸರಿಡುವುದು ಇಬ್ಬರೂ ಮಹನೀಯರಿಗೆ ಮಾಡುವ ಅಪಚಾರ ಎನಿಸುವುದಿಲ್ಲವೇ ? ಬಹುಮುಖ್ಯವಾಗಿ ಸ್ವತಃ ಕುವೆಂಪು ಅವರಷ್ಟೇ ಅಂಬೇಡ್ಕರರೂ ಸಹ ಸ್ಥಾವರ ವಿರೋಧಿಯಾಗಿದ್ದವರು. ಆದರೆ ಭವಿಷ್ಯದ ತಲೆಮಾರಿಗೆ ಈ ಮಹನೀಯರನ್ನು ದಾಟಿಸಲು ಸ್ಥಾವರಗಳ ನಾಮಕರಣಗಳು ಸಂಕೇತಿಕವಾಗಿ ನೆರವಾಗುತ್ತವೆ. ಅಂಬೇಡ್ಕರ್ ಅವರ ತಂದೆಯ ಹೆಸರಿಡಲು ಅನ್ಯ ರಸ್ತೆಗಳೂ ಇವೆ ಅಲ್ಲವೇ ? ಆದರೆ ಅಲ್ಲಿ ಮತ್ತೊಂದು ಅಸ್ಮಿತೆಯ ಸ್ಥಾವರ ಸ್ಥಾಪಿತವಾಗಿಬಿಟ್ಟಿರುತ್ತದೆ. ಅದನ್ನು ಪಲ್ಲಟಗೊಳಿಸುವುದು ಅಸಾಧ್ಯವೂ ಆಗಿರುತ್ತದೆ. ಹಾಗಾಗಿ ಅಸ್ಮಿತೆಯ ರಾಜಕಾರಣದಲ್ಲಿ ಕುವೆಂಪು ಅವರಂತಹ ಧೀಮಂತ ವ್ಯಕ್ತಿತ್ವಗಳೂ ಸಾಫ್ಟ್ ಟಾರ್ಗೆಟ್ ಆಗಿಬಿಡುತ್ತಾರೆ. ʼ ಉದಯರವಿ ʼ ಅಳಿಸಿಹಾಕಬಹುದಾದ ಹೆಸರಾಗಿಬಿಡುತ್ತದೆ. ಪಾಲಿಕೆಯ ಸದಸ್ಯರಲ್ಲಿ ಈ ಸೂಕ್ಷ್ಮ ಪ್ರಜ್ಞೆ ಇರಬೇಕಲ್ಲವೇ ?
ರಸ್ತೆ-ವೃತ್ತ-ಸೇತುವೆಗಳ ಮರುನಾಮಕರಣದ ಭರಾಟೆಯಲ್ಲಿ ಚರಿತ್ರೆಯ ನೆನಹುಗಳನ್ನು ಅಳಿಸಿಹಾಕುವ ಕ್ಷುದ್ರ ರಾಜಕಾರಣವನ್ನು ಬಿಟ್ಟು ನಗರಪಾಲಿಕೆಯ ಸದಸ್ಯರು, ಮೈಸೂರು ನಗರ ಎದುರಿಸುತ್ತಿರುವ ಸಾಮಾಜಿಕ ಕ್ಷೋಭೆಯತ್ತ ಗಮನಹರಿಸಬೇಕಿದೆ. ಟಿ ನರಸೀಪುರದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತನ ಹತ್ಯೆಯ ಕಾವು ತಣ್ಣಗಾಗುವ ಮುನ್ನವೇ ನಗರದಲ್ಲಿ ಎರಡು ಪ್ರಕರಣಗಳು ಸಂಭವಿಸಿವೆ. ಈ ಹತ್ಯೆಗಳಲ್ಲಿ ಆರೋಪಿಗಳೆಲ್ಲರೂ 20-30 ವಯೋಮಾನದ ಯುವಕರೇ ಆಗಿದ್ದಾರೆ. ಸಾಂಸ್ಕೃತಿಕ ನಗರಿ ಎಂದು ಬೆನ್ನು ತಟ್ಟಿಕೊಳ್ಳುವ ಮೈಸೂರು ಈ ಪ್ರಕರಣಗಳನ್ನು ಕೇವಲ ಕಾನೂನು ಸುವ್ಯವಸ್ಥೆಯ ದೃಷ್ಟಿಯಲ್ಲಿ ನೋಡಿ ಸುಮ್ಮನಿರಲಾಗುವುದೇ ? ಯುವ ಸಮೂಹ ತನ್ನ ಜವಾಬ್ದಾರಿಗಳನ್ನು ಮರೆತು ಹಿಂಸಾತ್ಮಕ ಧೋರಣೆಯನ್ನು ಪ್ರಚೋದಿಸುವಂತಹ ವಿಚಾರಧಾರೆಗಳಿಗೆ ಬಲಿಯಾಗುತ್ತಿರುವುದು ಸಮಾಜದ ಅಂತಃಪ್ರಜ್ಞೆಯನ್ನು ಕಲಕಬೇಕಲ್ಲವೇ ? ಮೈಸೂರು ನಗರದ ಸ್ಥಳೀಯ ಪ್ರತಿನಿಧಿಗಳಿಗೆ ಹಾಗೂ ಶಾಸಕ-ಸಂಸದರಿಗೆ ಈ ಪ್ರಕರಣಗಳಲ್ಲಿ ಸಾಮಾಜಿಕ ಕ್ಷೋಭೆ ಮತ್ತು ಅಸ್ವಸ್ಥತೆ ಕಾಣಲೇಬೇಕಲ್ಲವೇ ?
![](https://pratidhvani.com/wp-content/uploads/2023/08/download-10-edited.jpg)
ಬಹುಶಃ ನಮ್ಮ “ ಜನಪ್ರತಿನಿಧಿಗಳಲ್ಲಿ” ಅಂತಹ ಆಡಳಿತ ಸೂಕ್ಷ್ಮತೆ ನಶಿಸಿಹೋಗಿದೆ ಅಥವಾ ಶಿಥಿಲವಾಗುತ್ತಿದೆ ಎನಿಸುತ್ತದೆ. ನಿತ್ಯ ಜನಸಾಮಾನ್ಯರೊಡನೆ ಬೆರೆಯುತ್ತಾ ಸಮಾಜದ ಒಂದು ಭಾಗವಾಗಿರುವ ಸ್ಥಳೀಯ ಆಡಳಿತದಲ್ಲಾದರೂ ಕೊಂಚ ವಿವೇಕ-ವಿವೇಚನೆಯನ್ನು ಅಪೇಕ್ಷಿಸುವ ಹಕ್ಕು ನಾಗರಿಕರದ್ದಾಗಿರುತ್ತದೆ. ಮೇಲೆ ಉಲ್ಲೇಖಿಸಿದ ಎರಡು ಘಟನೆಗಳು ಅದನ್ನೇ ನೆನಪಿಸುತ್ತವೆ ಅಲ್ಲವೇ ?
ಜನಪ್ರತಿನಿಧಿಗಳು ಕಣ್ತೆರೆದು ನೋಡಿ ಪ್ಲೀಸ್.-೦-೦-೦-೦-