ಮಹಿಷ ದಸರಾ ಆರಂಭ ಮಾಡಿ ಮೈಸೂರಿನ ಸ್ವಾಸ್ಥ್ಯ ಕೆಡಿಸಿದ್ದು ಸಿದ್ದರಾಮಯ್ಯ ತಾನೇ? ಟಿಪ್ಪು ಜಯಂತಿ ಮಾಡಿ ರಾಜ್ಯದ ಸೌಹಾರ್ದತೆ ಕೆಡಿಸಿದ್ದು ಸಿಎಂ ಸಿದ್ದರಾಮಯ್ಯ ಎಂದು ಸಂಸದ ಪ್ರತಾಪ್ ಸಿಂಹ ಶನಿವಾರ (ಸೆಪ್ಟೆಂಬರ್ 2) ಹೇಳಿದ್ದಾರೆ.
ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಅವರು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ಟಿಪ್ಪು ಜಯಂತಿ ಹಿನ್ನೆಲೆಯಲ್ಲಿ ಸಾಲು ಸಾಲು ಹಿಂದೂ ಕಾರ್ಯಕರ್ತರ ಕೊಲೆಯಾಯಿತು. ಇದಕ್ಕೆ ಯಾರು ಕಾರಣ? ಎಂದು ಪ್ರಶ್ನಿಸಿದರು.
ಸಂಸದ ಪ್ರತಾಪ್ ಸಿಂಹನನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸೋಲಿಸಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿರುವ ವಿಚಾರ.
ಸಿಎಂ ಯಾವ ಬಡಾವಣೆಯಲ್ಲಿ ನಿಂತು ನನ್ನನ್ನು ಸೋಲಿಸಿ ಎಂದು ಹೇಳಿದ್ದಾರೆ ಎಂಬುದನ್ನು ನೋಡಿದೆ.
ಮೈಸೂರಿನ ಕುವೆಂಪುನಗರದಲ್ಲೋ, ಸರಸ್ವತಿಪುರಂನಲ್ಲೋ, ಸಿದ್ದಾರ್ಥ ಲೇಹೌಟ್ ಬಡಾವಣೆಯಲ್ಲೋ ಬಂದು ಸಿಎಂ ಈ ರೀತಿ ಹೇಳೋಕೆ ಆಗುವುದಿಲ್ಲ.
ಉದಯಗಿರಿಯಲ್ಲಿ ಸಿದ್ದರಾಮಯ್ಯ ಅವರ ಬಾಂಧವರ ಮುಂದೆ ಹೋಗಿ ಕೈ ಮುಗಿದು ನನ್ನನ್ನು ಸೋಲಿಸಲು ಕರೆ ಕೊಟ್ಟಿದ್ದಾರೆ.
ತಮ್ಮ ಬಾಂಧವರ ಉದ್ಧಾರಕ್ಕೆ ಮಾತ್ರ ಸಿದ್ದರಾಮಯ್ಯ ಇರೋದು ಎಂಬುದು ನನಗೆ ಗೊತ್ತು.
ತಮ್ಮ ಬಾಂಧವರ ಮುಂದೆ ಕೈಮಗಿದು ನನ್ನನ್ನು ಸೋಲಿಸಿ ಎಂದು ಕೇಳುವ ದೈನೇಸಿ ಸ್ಥಿತಿ ಸಿಎಂ ಸಿದ್ದರಾಮಯ್ಯಗೆ ಬರಬಾರದಿತ್ತು.
ನನ್ನನ್ನು ಜನ ಯಾಕೆ ಸೋಲಿಸ ಬೇಕು ಎಂದು ಸಿಎಂ ಐದರಿಂದ ಹತ್ತು ಕಾರಣ ಕೊಡಲಿ.
ಮೈಸೂರು-ಬೆಂಗಳೂರು ಹೈವೇ ಮಾಡಿಸಿದ್ದು ನನ್ನ ತಪ್ಪಾ? ಗ್ರೇಟರ್ ಮೈಸೂರು ಮಾಡಲು ಹೊರಟ್ಟಿದ್ದು ನನ್ನ ತಪ್ಪಾ? ವಿಮಾನ ನಿಲ್ದಾಣದ ಅಭಿವೃದ್ಧಿ ಮಾಡಲು ಹೊರಟ್ಟಿದ್ದು ತಪ್ಪಾ? ಚಾಮುಂಡಿ ಬೆಟ್ಟದ ಅಭಿವೃದ್ಧಿ ಮಾಡುತ್ತಿರುವುದು ತಪ್ಪಾ?
ಯಾವ ಕಾರಣಕ್ಕೆ ಮೈಸೂರು ಜನ ಪ್ರತಾಪ್ ಸಿಂಹನನ್ನು ಸೋಲಿಸಬೇಕು ಹೇಳಿ?
40 ವರ್ಷದಿಂದ ಸಿದ್ದರಾಮಯ್ಯ ರಾಜಕೀಯದಲ್ಲಿದ್ದಾರೆ. ಮೈಸೂರಿಗೆ ಮಾಡಿರುವ ಕೆಲಸ ಏನು ಎಂಬುದನ್ನು ಅವರು ಹೇಳಲಿ.
ಕೆಲಸ ಮಾಡಿದವನನ್ನು ಸೋಲಿಸಬೇಕು ಎಂದು ಕೈ ಮುಗಿದು ಸಿಎಂ ಕೇಳಿದರೆ ಜನ ಅದನ್ನು ಒಪ್ಪುತ್ತಾರಾ?
ಸಿದ್ದರಾಮಯ್ಯ ಅವರಿಗೆ ಬಡವರ ಮಕ್ಕಳ ಉದ್ಧಾರವಾಗಬಾರದು. ಬಡವರ ಮಕ್ಕಳು ಬೆಳೆಯಬಾರದು.
ಅವರ ಮಕ್ಕಳು ಮಾತ್ರ ರಾಜಕಾರಣ ಮಾಡ್ತಾ ಇರಬೇಕು ಅಷ್ಟೇ.
ಸಿದ್ದರಾಮಯ್ಯ ಪ್ರತಿ ಬಾರಿಯೂ ಮೋದಿ ವಿರುದ್ದ ಮಾತನಾಡುತ್ತಾರೆ.
ಇದು ಒಂಥರ ಆಕಾಶದ ಕಡೆ ಮುಖ ಮಾಡಿ ಉಗಿದಂತೆ.
ಈ ಕೆಲಸವನ್ನು ನಿರಂತರವಾಗಿ ಸಿದ್ದರಾಮಯ್ಯ ಮಾಡುತ್ತಲೇ ಇದ್ದಾರೆ ಎಂದು ಪ್ರತಾಪ್ ಸಿಂಹ ಕುಹಕವಾಡಿದರು.







