
ಕಾಂತರಾಜು ಸಮಿತಿ ವರದಿಯನ್ನ ಅಧ್ಯಯನ ಮಾಡಿ, ಆರ್ಥಿಕ, ಸಾಮಾಜಿ, ಶೈಕ್ಷಣಿಕ ವರದಿಯನ್ನ ಓದಿಕೊಳ್ಳಿ. ಅನುಮಾನಗಳಿದ್ರೆ ಪಕ್ಷದ ವೇದಿಕೆಯಲ್ಲೇ ಚರ್ಚೆ ಮಾಡಿ. ಸರ್ಕಾರದ ಕಾನೂನು ತಜ್ಞರಿಂದ ಅನುಮಾನ ಬಗೆಹರಿಸಿಕೊಳ್ಳಿ, ಜಾತಿ ಜನಗಣತಿ ವರದಿ ಎಲ್ಲೂ ಸೋರಿಕೆ ಆಗಬಾರದು. ಏನೇ ಇದ್ರೂ ಏಪ್ರಿಲ್ 17ರೊಳಗೆ ಬಗೆಹರಿಸಿಕೊಂಡು ಸಂಪುಟ ಸಭೆಗೆ ಬನ್ನಿ. ಏಪ್ರಿಲ್ 17ರ ವಿಶೇಷ ಸಚಿವ ಸಂಪುಟ ಸಭೆಯಲ್ಲೇ ಈ ಬಗ್ಗೆ ಚರ್ಚಿಸಿ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸಚಿವ ಸಂಪುಟ ಸಭೆಯಲ್ಲಿ ಸಂಪುಟ ಸಚಿವರುಗಳೆಲ್ಲಾ ಅಭಿಪ್ರಾಯ ಹೇಳಿದ್ಮೇಲೆ ಜಾತಿ ಜನಗಣತಿ ವರದಿಗೆ ಭಿನ್ನಾಭಿಪ್ರಾಯ ಎದುರಾದರೆ ಸಂಪುಟ ಉಪಸಮಿತಿ ರಚಿಸಬಹುದು. ಸಚಿವರುಗಳಿಂದ ತೀವ್ರ ವಿರೋಧ ವ್ಯಕ್ತವಾದ್ರೆ ಜನಾಭಿಪ್ರಾಯ ಸಂಗ್ರಹಿಸೋ ಲೆಕ್ಕಾಚಾರದಲ್ಲೂ ಸಿಎಂ ಸಿದ್ದರಾಮಯ್ಯ ಇದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯ ಸರ್ಕಾರಕ್ಕೆ ಜಾತಿಜನಗಣತಿಯನ್ನ ಜಾರಿಗೆ ತರುವ ಆತುರ.. ಸಚಿವರು, ಶಾಸಕರು, ಜಾತಿವಾರು ನಾಯಕರಿಗೆ ಜಾತಿ ಜನಗಣತಿಯಲ್ಲಿ ಏನಿದೆ ಅಂತ ತಿಳಿದುಕೊಳ್ಳೋ ಕಾತುರ ಹೆಚ್ಚಾಗಿದೆ.

ಬೆಳಗಾವಿಯಲ್ಲಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ಜಾತಿ ಜನಗಣತಿ ಅಧ್ಯಯನ ಮಾಡೊಕೆ ನಮಗೂ ಹೇಳಿದ್ದಾರೆ. ಎಪ್ರಿಲ್ 17ಕ್ಕೆ ಅಂತಿಮವಾಗಿ ತೀರ್ಮಾನ ಆಗಲಿದೆ. ಅದರಲ್ಲಿ ಏನಿದೆ ಅಂತಾ ನಮಗೂ ಗೊತ್ತಿಲ್ಲ ಅಧ್ಯಯನ ಮಾಡಬೇಕು. ಜಾತಿ ಗಣತಿ ವರದಿ ಮಂಡನೆ ಆಗೋದು ಬಹಳ ಅವಶ್ಯಕತೆ ಇದೆ. ಇದು ಜನರ ಪ್ರಗತಿಗಾಗಿ ಮಾಡುತ್ತಿದ್ದೇವೆ. ಜಾತಿ ಗಣತಿಯನ್ನ ಈ ವರ್ಷ ಕೇಂದ್ರ ಸರ್ಕಾರ ಮಾಡುತ್ತಿದೆ. ಜನರ ಸ್ಥಿತಿಗತಿ ಅಧ್ಯಯನ ವರದಿ ಮಾಡಿದ್ದೇವೆ. ಇದಕ್ಕೆ ಯಾರು ವಿರೋಧ ಮಾಡೋ ಅವಶ್ಯಕತೆ ಇಲ್ಲ. ವರದಿಯನ್ನು ಸರ್ಕಾರ ಇನ್ನೂ ಒಪ್ಪಿಕೊಂಡಿಲ್ಲ ಎಂದಿದ್ದಾರೆ.
ಮೂರು ದಿನ ವಿಶೇಷ ಅಧಿವೇಶನ ಕರೆಯಬೇಕು, ಸದನದಲ್ಲಿ ಚರ್ಚೆ ಆಗಬೇಕು. ರಾಜ್ಯಕ್ಕೆ ಸಹ ಗೊತ್ತಾಗಬೇಕು ಅದರಲ್ಲಿ ಏನಿದೆ ಎಂದು. ಕ್ಯಾಬಿನೆಟ್ ಅಷ್ಟೇ ಅಲ್ಲದೇ ಸದನದಲ್ಲಿ ಚರ್ಚೆ ಆಗಬೇಕು. ಜಾತಿಗಣತಿಗೆ ವಿರೋಧದ ಪ್ರಶ್ನೆಯೇ ಇಲ್ಲ. ಅಂಕಿ ಅಂಶಗಳ ಆಧಾರದ ಮೇಲೆ ಸದನದಲ್ಲಿ ಚರ್ಚೆ ಆಗಬೇಕು. ಹಿಂದಿನ ಸರ್ಕಾರ ಮಾಡಬೇಕಿತ್ತು ಮಾಡಲಿಲ್ಲ. ಈ ಮಧ್ಯ ಐದು ವರ್ಷ ನಮ್ಮ ಸರ್ಕಾರ ಇರಲಿಲ್ಲ. ಬೇರೆ ಬೇರೆ ಕಾರಣಗಳಿಂದ ವರದಿ ಮಂಡನೆ ಆಗಲಿಲ್ಲ.
ನಮ್ಮ ಸರ್ಕಾರದ ಪ್ರಣಾಳಿಕೆಯಂತೆ ನಾವು ವರದಿ ಮಂಡನೆ ಮಾಡುತ್ತೇವೆ. ಬಿಡಗಡೆಯಾದ ಅಂಕಿ ಅಂಶಗಳು ಕರೆಕ್ಟ್ ಇವೆ. ಸೋರಿಕೆ ಅನೋ ಪ್ರಶ್ನೆ ಇಲ್ಲ. ಒಂದು ದಿನ ಸತ್ಯ ಹೊರಗೆ ಬರುತ್ತದೆ ಎಂದಿದ್ದಾರೆ.

ಜನಾಕ್ರೋಶ ಯಾತ್ರೆ ಡೈವರ್ಟ್ ಮಾಡೋಕೆ ಜಾತಿ ಗಣತಿ ವರದಿ ಬಿಡುಗಡೆ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ಕೊಟ್ಟಿದ್ದು, ಇದು ಶಾಶ್ವತವಾದ ಸರ್ವೇ, ಬಿಜೆಪಿ ಒಂದೆರೆಡು ದಿನದ ಹೋರಾಟ ಟೆಂಪರವರಿ ಇರುತ್ತದೆ. ಜಾತಿ ಗಣತಿ ವೈಜ್ಞಾನಿಕವಾಗಿ ಆಗಿಲ್ಲ ಅನೋದನ್ನ ಸದನದಲ್ಲಿ ಚರ್ಚೆ ಮಾಡಲಿ. ರಾಜ್ಯದ ಜನತೆಗೆ ಎಲ್ಲವೂ ಗೊತ್ತಾಗಲಿ. ಸರ್ವೇಯನ್ನ ಪಕ್ಷದ ಕಾರ್ಯಕರ್ತರು ಮಾಡಿಲ್ಲ. ಬೇರೆ ಬೇರೆ ಸಮಾಜದ ಟೀಚರ್ಗಳು ಸರ್ವೇಯಲ್ಲಿ ಭಾಗಿಯಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ಯಾರ ಒತ್ತಡಕ್ಕೆ ಮಣಿದಿಲ್ಲ ಎಂದಿದ್ದಾರೆ ಸತೀಶ್ ಜಾರಕಿಹೊಳಿ.