ಮೈಸೂರು: ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಕುವೆಂಪುನಗರದ ಬಿಜಿಎಸ್ ಬಿ.ಇಡಿ ಕಾಲೇಜಿನ ಸುಮಾರು 170 ಜನ ಪ್ರಶಿಕ್ಷಣಾರ್ಥಿಗಳು ಬುಧವಾರ ಚಾಮುಂಡಿಬೆಟ್ಟದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು.
ಅರಣ್ಯ ಇಲಾಖೆ ಈಗಾಗಲೇ ಪ್ಲಾಸ್ಟಿಕ್ ಮುಕ್ತ ಚಾಮುಂಡಿ ಬೆಟ್ಟ ಅಭಿಯಾನವನ್ನು ನಡೆಸುತ್ತಿದ್ದು, ಅದಕ್ಕೆ ಕಾಲೇಜಿನವರು ಕೈ ಜೋಡಿಸಿದ್ದಾರೆ.
ನಗರ ಹಸಿರೀಕರಣ ಪ್ರಾದೇಶಿಕ ಅರಣ್ಯಾಧಿಕಾರಿ ಧನ್ಯಶ್ರೀ ಅವರ ಮಾರ್ಗದರ್ಶನದಲ್ಲಿ ೬ ತಂಡಗಳಾಗಿ ವಿಂಗಡಿಸಿ ಚಾಮುಂಡಿ ಬೆಟ್ಟದ ದ್ವಾರದಿಂದ ಸ್ವಚ್ಛತಾ ಅಭಿಯಾನವನ್ನು ಪ್ರಾರಂಭಿಸಿ ಪ್ಲಾಸ್ಟಿಕ್, ಪ್ಲಾಸ್ಟಿಕ್ ಬಾಟೆಲ್, ಮದ್ಯದ ಬಾಟೆಲ್ ಹಾಗೂ ಇನ್ನಿತರ ತ್ಯಾಜ್ಯ ವಸ್ತುಗಳನ್ನು ಸುಮಾರು 50-60ಕ್ಕೂ ಹೆಚ್ಚು ಚೀಲಗಳಲ್ಲಿ ಸಂಗ್ರಹಿಸಲಾಯಿತು. ವಿದ್ಯಾರ್ಥಿಗಳು ರಸ್ತೆಯ ಬದಿ ಅರಣ್ಯದೊಳಗೆ ಇಳಿದು ತ್ಯಾಜ್ಯಗಳನ್ನು ಸಂಗ್ರಹಿಸಿದರು. ತ್ಯಾಜ್ಯ ಸಂಗ್ರಹಿಸಿ ಇವುಗಳ ಸೂಕ್ತ ವಿಲೇವಾರಿಗೆ ಅರಣ್ಯ ಇಲಾಖೆಯ ಸಿಬ್ಬಂದಿಯರಿಗೆ ಕೊಡಲಾಯಿತು. ಸಿಬ್ಬಂದಿಯವರು ಸ್ಥಳೀಯರು ಪಂಚಾಯಿತಿ ಅವರ ನೆರವಿನಿಂದ ತ್ಯಾಜ್ಯವನ್ನು ಸುಯೋಜ್ ಫಾರಂಗೆ ಕಳುಹಿಸಿಕೊಡಲಾಯಿತು.
ಬೆಟ್ಟಕ್ಕೆ ಬರುವ ಭಕ್ತರು ಮತ್ತು ಪ್ರವಾಸಿಗರು ಯಾವುದೇ ರೀತಿಯ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬೀಸಾಡಬಾರದು. ನಿಗದಿತ ಸ್ಥಳದಲ್ಲಿ ಹಾಕಿ ಪ್ರತಿಯೊಬ್ಬರೂ ಸ್ವಚ್ಛತೆ ಕಾಪಾಡಬೇಕೆಂದು ಈ ಸಂದರ್ಭ ಮನವಿ ಮಾಡಿದರು.
ಈ ಸ್ವಚ್ಛತಾ ಅಭಿಯಾನದಲ್ಲಿ ಡಿಸಿಎಫ್ ಡಾ.ಕೆ.ಎನ್.ಬಸವರಾಜು, ಎಸಿಎಫ್ ಗಳಾದ ಲಕ್ಷ್ಮೀಕಾಂತ್, ಶಿವರಾಮ್, ಬಿಜಿಎಸ್ ಬಿ.ಇಡಿ ಕಾಲೇಜಿನ ಪ್ರಾಂಶುಪಾಲ ಡಾ.ನಾಗರಾಜು, ಕಾರ್ಯಕ್ರಮದ ಸಂಯೋಜಕ ಬಿಜಿಎಸ್ ಬಿ.ಇಡಿ ಕಾಲೇಜಿನ ಸಿ.ಆರ್.ಶರತ್ ಕುಮಾರ್, ಗಸ್ತು ಅರಣ್ಯ ಪಾಲಕರಾದ ವೈ.ಕೆ.ಸತೀಶ್, ಗಗನ್, ಅಪ್ಪಣ, ಡಿಆರ್ ಎಫ್ ಒ ಎಂ.ಜೆ.ಸತೀಶ್ ಕುಮಾರ್ , ಸಹಾಯಕ ಪ್ರಾಧ್ಯಾಪಕ ಕೆ.ಟಿ.ಬಸವರಾಜು ಹಾಗೂ ಕಾಲೇಜಿನ ಪ್ರಾಧ್ಯಾಪಕ ವರ್ಗದವರು ಭಾಗವಹಿಸಿದ್ದರು.