• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ಶಾಸ್ತ್ರೀಯ ಕನ್ನಡ ಕೇಂದ್ರ- ಸ್ವಾಯತ್ತತೆಯ ಸಂಘರ್ಷದಲ್ಲಿ

ನಾ ದಿವಾಕರ by ನಾ ದಿವಾಕರ
February 18, 2023
in ಅಂಕಣ
0
ಶಾಸ್ತ್ರೀಯ ಕನ್ನಡ ಕೇಂದ್ರ- ಸ್ವಾಯತ್ತತೆಯ ಸಂಘರ್ಷದಲ್ಲಿ
Share on WhatsAppShare on FacebookShare on Telegram

ಕಟ್ಟಡ ಎಂಬ ಸ್ಥಾವರ-ಸ್ವಾಯತ್ತತೆಯ ಜಂಗಮ ಈ ಸಂಘರ್ಷದಲ್ಲಿ ಗೆಲ್ಲಬೇಕಿರುವುದು ಸಾಹಿತ್ಯ

ADVERTISEMENT

ಮೈಸೂರಿನಲ್ಲಿರುವ ಪ್ರತಿಷ್ಠಿತ ಕೇಂದ್ರೀಯ ಭಾರತೀಯ ಭಾಷಾ ಸಂಸ್ಥೆ (ಸಿಐಐಎಲ್‌) ಆಶ್ರಯದಲ್ಲಿ ಕಳೆದ 15 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಮೈಸೂರಿನಲ್ಲಿರುವ  ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ತನ್ನ ಸಾಹಿತ್ಯಕ ಪಯಣದ 15 ವರ್ಷಗಳನ್ನು ಪೂರೈಸಿದೆ. ಈ ಸಂಸ್ಥೆ ಯುಪಿಎ ಸರ್ಕಾರದ ಒಂದು ಮಹತ್ತರ ಯೋಜನೆಯ ಫಲ ಎನ್ನಬಹುದು.  ಉತ್ತಮ ಧ್ಯೇಯೋದ್ದೇಶಗಳೊಂದಿಗೆ, ಪ್ರಾಚೀನ ಭಾರತದ ಶಾಸ್ತ್ರೀಯ ಸಾಹಿತ್ಯದ ಮೂಲ ಬೇರುಗಳನ್ನು ಶೋಧಿಸಿ, ಮರುಶೋಧಿಸಿ, ಸಂಶೋಧನೆ ಮತ್ತು ಅಧ್ಯಯನಗಳ ಮೂಲಕ, ಹೊಸ ಪೀಳಿಗೆಯಲ್ಲಿ ಸಾಹಿತ್ಯಾಧ್ಯಯನ ಮತ್ತು ಸಾಹಿತ್ಯ ಸಂಶೋಧನೆಯನ್ನು ಉತ್ತೇಜಿಸುವ ಮಹತ್ತರ ಆಶಯದೊಂದಿಗೆ ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಸಮಕಾಲೀನ ಸಾಹಿತ್ಯದಲ್ಲೇ ಆಸಕ್ತಿ ತೋರದ ಒಂದು ಬೃಹತ್‌ ಯುವ ಪೀಳಿಗೆಯ ನಡುವೆ, ಶಾಸ್ತ್ರೀಯ ಸಾಹಿತ್ಯವನ್ನು ಕೊಂಡೊಯ್ಯಲು ಹೊಸ ಮಾದರಿಗಳನ್ನು, ವಿಧಾನಗಳನ್ನು ಅಳವಡಿಸಿಕೊಳ್ಳುವ ಅವಶ್ಯಕತೆಯೂ ಇದೆ. ಈ ಪ್ರಯತ್ನಗಳಿಗೆ ಒಂದು ಸಾಂಸ್ಥಿಕ ಸ್ವರೂಪ ನೀಡುವುದು ಶಾಸ್ತ್ರೀಯ ಅಧ್ಯಯನ ಕೇಂದ್ರದ ಮೂಲ ಉದ್ದೇಶಗಳಲ್ಲಿ ಒಂದಾಗಿದೆ.

ಕರ್ನಾಟಕದ ಜನತೆಯ ಒತ್ತಾಸೆ ಮತ್ತು ಹಲವು ವರ್ಷಗಳ ಪರಿಶ್ರಮ ಹಾಗೂ ನಿರಂತರ ಹೋರಾಟದ ಫಲವಾಗಿ 2008ರಲ್ಲಿ ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ ಒದಗಿತ್ತು. ತಮಿಳು ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡಿದ್ದ ಹಿನ್ನೆಲೆಯಲ್ಲಿ ಕನ್ನಡ ಭಾಷೆಗೂ ಈ ಸಮ್ಮಾನ ದೊರೆಯಬೇಕು ಎಂದು ಒತ್ತಾಯಿಸುವ ಮೂಲಕ ಕನ್ನಡದ ಹಿರಿಯ ಸಾಹಿತಿಗಳು, ಕಲಾವಿದರು, ಕನ್ನಡ ಪರ ಹೋರಾಟಗಾರರು, ಕನ್ನಡ ಸಂಘಟನೆಗಳು ಮತ್ತು ಸಾರ್ವಜನಿಕರು ವರ್ಷಗಟ್ಟಲೆ ನಡೆಸಿದ ಹೋರಾಟದ ಪರಿಣಾಮ ಈ ಬೇಡಿಕೆ ಈಡೇರಿತ್ತು. 2008ರಲ್ಲಿ ಮೈಸೂರಿನಲ್ಲಿ ಸಿಐಐಎಲ್‌ ಆವರಣದಲ್ಲಿ ಮತ್ತು ಆಡಳಿತಾತ್ಮಕವಾಗಿ ಆ ಸಂಸ್ಥೆಯ ಒಂದು ಭಾಗವಾಗಿ ಸ್ಥಾಪಿಸಲಾದ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವು ಈವರೆಗೆ ಹೇಳಿಕೊಳ್ಳುವಂತಹ ಸಾಧನೆಯನ್ನಾಗಲೀ, ಸಂಶೋಧನೆಗಳನ್ನಾಗಲೀ ಕೈಗೊಂಡಿಲ್ಲ ಎನ್ನುವ ವಿಷಾದದೊಂದಿಗೇ ಈ ಸಂಸ್ಥೆ ಎದುರಿಸುತ್ತಿರುವ ಆಡಳಿತಾತ್ಮಕ ಸಮಸ್ಯೆಗಳತ್ತಲೂ ಗಮನಹರಿಸಬೇಕಾದ್ದು ಇಂದಿನ ತುರ್ತು. ಈ ಸಂಸ್ಥೆಯಲ್ಲಿ ಸಂಶೋಧನೆ ನಡೆಸಿರುವ ಸಂಶೋಧನಾ ವಿದ್ವಾಂಸರ ಯಾವುದೇ ಕೃತಿಯನ್ನು ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಸಂಸ್ಥೆಯು ಈವರೆಗೂ ಪ್ರಕಟಿಸಿಲ್ಲ ಇದಕ್ಕೆ ಹಲವಾರು ಆಡಳಿತಾತ್ಮಕ-ಅಧಿಕಾರಶಾಹಿ ಮನೋವೃತ್ತಿಯ  ಕಾರಣಗಳೂ ಇವೆ.

ಈ ಹಿನ್ನೆಲೆಯಲ್ಲಿ ನೋಡಿದಾಗ ಕನ್ನಡದ ಶಾಸ್ತ್ರೀಯ ಸಾಹಿತ್ಯದಲ್ಲಿನ ಅಮೂಲ್ಯ ಕೃತಿಗಳನ್ನು ಮುಂದಿನ ಪೀಳಿಗೆಗಾಗಿ ಕಾಪಿಟ್ಟುಕೊಳ್ಳುವ ಉದ್ದೇಶದಿಂದ, ಸಂಶೋಧನೆ, ಅಧ್ಯಯನ ಮತ್ತು ಸಾಹಿತ್ಯಕ ಉತ್ಖನನದ ಪ್ರಕ್ರಿಯೆಯ ಮೂಲಕ, ಕನ್ನಡ ಭಾಷೆಯ ಶ್ರೀಮಂತಿಕೆಯನ್ನೂ, ಚಾರಿತ್ರಿಕ ಹೆಜ್ಜೆಗಳನ್ನೂ ಗುರುತಿಸುವ ಒಂದು ಬೌದ್ಧಿಕ ಕೇಂದ್ರವಾಗಿ ಪೂರ್ಣ ಸ್ವಾಯತ್ತತೆಯೊಂದಿಗೆ ಈ ಕೇಂದ್ರ ರೂಪುಗೊಳ್ಳಬೇಕಿದೆ. ಈ ಸಂಸ್ಥೆಯನ್ನು ಒಂದು ಅಧ್ಯಯನ ಪೀಠದಂತೆ ಅಥವಾ ಸಂಶೋಧನಾ ಕೇಂದ್ರದಂತೆ ಪರಿಗಣಿಸುವುದೇ ಅಕ್ಷಮ್ಯ. ಶಾಸ್ತ್ರೀಯ ಸಾಹಿತ್ಯ ಸಂಶೋಧನೆಯ ಮೂಲಕ,  ವಿಚಾರ ಸಂಕಿರಣಗಳು, ಅಧ್ಯಯನ ಶಿಬಿರಗಳು ಮತ್ತು ಕಾರ್ಯಾಗಾರಗಳ ಮೂಲಕ ಶಾಸ್ತ್ರೀಯ ಸಾಹಿತ್ಯದ ವಿಭಿನ್ನ ಮಜಲುಗಳನ್ನು ಮುಕ್ತ ಸಂವಾದದ ಮೂಲಕ ಚರ್ಚೆಗೊಳಪಡಿಸುವ ನಿಟ್ಟಿನಲ್ಲಿ ಒಂದು ಕ್ರಿಯಾಶೀಲ ಸಂಸ್ಥೆಯಾಗಿ ಈ ಕೇಂದ್ರವನ್ನು ಬೆಳೆಸುವುದು ನಮ್ಮ ಆದ್ಯತೆಯಾಗಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯದ ಹಲವು ಖ್ಯಾತ ಸಾಹಿತಿಗಳು ತಮ್ಮದೇ ಆದ ಪ್ರಯತ್ನಗಳನ್ನು ನಡೆಸಿದ್ದರೂ, ಸ್ವಾಯತ್ತತೆ ಇಲ್ಲದೆ ಸೊರಗಿರುವ ಈ ಸಂಸ್ಥೆ ಆಮೆಗತಿಯಲ್ಲಿ ಸಾಗುತ್ತಿರುವುದು ಸ್ಪಷ್ಟ.

ಹೊಸ ಪೀಳಿಗೆಯ ಕನ್ನಡ ಸಾಹಿತ್ಯ ವಿದ್ಯಾರ್ಥಿಗಳಿಗೆ, ಸಾಹಿತ್ಯಾಸಕ್ತರಿಗೆ ಮತ್ತು ಸಂಶೋಧಕರಿಗೆ ಶಾಸ್ತ್ರೀಯ ಕನ್ನಡ ಸಾಹಿತ್ಯವನ್ನು ಪರಿಚಯಿಸುವುದು ಮತ್ತು ಸಮಕಾಲೀನ ಸಮಾಜಕ್ಕೆ ಈ ಅಮೂಲ್ಯ ಅಕ್ಷರ ಕಣಜವನ್ನು ವಿಭಿನ್ನ ಆಯಾಮಗಳಲ್ಲಿ ಪರಿಚಯಿಸುವುದು ಈ ಕೇಂದ್ರದ ಆದ್ಯತೆಯೂ ಹೌದು, ಆಯ್ಕೆಯೂ ಹೌದು. ಸಿಐಐಎಲ್‌ ಆಶ್ರಯದಲ್ಲೇ ತೆಲುಗು, ಮಲಯಾಳಿ, ತಮಿಳು ಮತ್ತು ಒಡಿಯಾ ಶಾಸ್ತ್ರೀಯ ಸಾಹಿತ್ಯ ಅಧ್ಯಯನ ಕೇಂದ್ರಗಳನ್ನೂ ಸ್ಥಾಪಿಸಲಾಗಿತ್ತು. ತಮ್ಮ ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಸಾಧನೆಯನ್ನು ಸಾಕಾರಗೊಳಿಸಲು ಪ್ರತ್ಯೇಕ ಸಾಂಸ್ಥಿಕ ಅಸ್ತಿತ್ವ ಮತ್ತು ಸ್ವಾಯತ್ತತೆ ಅತ್ಯವಶ್ಯ ಎನ್ನುವುದನ್ನು ಮನಗಂಡೇ ಇದೇ ಕೇಂದ್ರೀಯ ಸಂಸ್ಥೆಯ ಆಶ್ರಯದಲ್ಲಿದ್ದ ಶಾಸ್ತ್ರೀಯ ತಮಿಳು ಅತ್ಯುನ್ನತ ಅಧ್ಯಯನ ಕೇಂದ್ರ ತನ್ನ ಬಂಧನವನ್ನು ಬಿಡಿಸಿಕೊಂಡು ಚೆನ್ನೈಗೆ ವರ್ಗಾವಣೆಯಾಗಿತ್ತು. ತಮಿಳು ಶಾಸ್ತ್ರೀಯ ಕೇಂದ್ರವನ್ನು ವರ್ಗಾಯಿಸಿದ ಒಂದೇ ವರ್ಷದಲ್ಲಿ ತಮಿಳುನಾಡಿನ ಎಲ್ಲ ರಾಜಕೀಯ ಪಕ್ಷಗಳ ನಾಯಕರೂ ಪಕ್ಷಭೇದವನ್ನು ಮರೆತು, ದೆಹಲಿಗೆ ನಿಯೋಗಗಳನ್ನು ಕಳುಹಿಸುವ ಮೂಲಕ, ಒಕ್ಕೊರಲಿನಿಂದ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ತಮಿಳು ಶಾಸ್ತ್ರೀಯ ಕೇಂದ್ರಕ್ಕೆ ಸ್ವಾಯತ್ತತೆಯನ್ನು ಒದಗಿಸುವುದರಲ್ಲಿ ಯಶಸ್ವಿಯಾಗಿದ್ದರು. ಕಳೆದ ವರ್ಷ ಈ ಕೇಂದ್ರವು ತನ್ನದೇ ಆದ ಸ್ವಂತ ಕಟ್ಟಡವನ್ನೂ ನಿರ್ಮಿಸಿ, ಪೂರ್ಣ ಪ್ರಮಾಣದ ಸ್ವಾತಂತ್ರ್ಯವನ್ನು ಪಡೆದಿದೆ. ಶಾಸ್ತ್ರೀಯ ತಮಿಳು ಅಧ್ಯಯನ ಕೇಂದ್ರವು, ತಮಿಳು ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆತ ಕೂಡಲೇ, ಅಲ್ಪಾವಧಿಯಲ್ಲೇ ಸ್ವಾಯತ್ತ ಸಂಸ್ಥೆಯಾಗಿ ಮಾನ್ಯತೆ ಪಡೆದು ಇಂದು ನೂರಾರು ಸಂಶೋಧಕರೊಂದಿಗೆ ಬೃಹದಾಕಾರವಾಗಿ ಬೆಳೆದು ನಿಂತಿದೆ.  ಭಾಷೆ , ಸಾಹಿತ್ಯ ಮತ್ತು ಭಾಷಾ ಬೆಳವಣಿಗೆಯ ನಡುವೆ ಇರುವ ಸೂಕ್ಷ್ಮ ಸಂಬಂಧಗಳನ್ನು ಗ್ರಹಿಸುವುದರಲ್ಲಿ ಕರ್ನಾಟಕದ ಜನಪ್ರತಿನಿಧಿಗಳು ತಮಿಳುನಾಡಿನಿಂದ ಪಾಠ ಕಲಿಯುವುದಿದೆ.

ಈ ನಡುವೆ 2021ರಲ್ಲಿ ಕೇಂದ್ರ ಸರ್ಕಾರವು ತನ್ನ ಹೊಸ ಶಿಕ್ಷಣ ನೀತಿಯ ಅನುಸಾರ ಮೈಸೂರಿನಲ್ಲಿರುವ ಸಿಐಐಎಲ್‌ ಸ್ಥಾನದಲ್ಲಿ, ಭಾರತೀಯ ಭಾಷಾ ವಿಶ್ವವಿದ್ಯಾಲಯವನ್ನು ಸ್ಥಾಪಿಸಿ, ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವನ್ನು ಇದರ ಒಂದು ವಿಭಾಗವನ್ನಾಗಿ ಪರಿವರ್ತಿಸುವ ಪ್ರಯತ್ನಗಳೂ ನಡೆದಿದ್ದವು. ಈ ನಿಟ್ಟಿನಲ್ಲಿ 13 ಸದಸ್ಯರ ಉನ್ನತ ಮಟ್ಟದ ಸಮಿತಿಯೊಂದು ನಿವೃತ್ತ ನ್ಯಾ ಗೋಪಾಲಸ್ವಾಮಿ ಅವರ ನೇತೃತ್ವದಲ್ಲಿ ಮೈಸೂರಿನ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಈ ಹಿನ್ನೆಲೆಯಲ್ಲಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವನ್ನು ನೂತನ ವಿಶ್ವವಿದ್ಯಾಲಯದೊಳಗೆ ವಿಲೀನಗೊಳಿಸುವ ಪ್ರಸ್ತಾವನೆಯೂ ಕೇಳಿಬಂದಿತ್ತು. ಆದರೆ ಈ ರೀತಿಯ ಪ್ರಸ್ತಾಪವನ್ನು ಮಾಡಿಲ್ಲ ಎಂದು, ಆ ಸಂದರ್ಭದಲ್ಲಿ ಶ್ರೀಯುತ ಗೋಪಾಲಸ್ವಾಮಿ ಅವರು ಸಾಹಿತಿ ಕಲಾವಿದರ ನಿಯೋಗವೊಂದಕ್ಕೆ ಖಚಿತಪಡಿಸಿದ್ದು, ಸದ್ಯದಲ್ಲಿ ಕೇಂದ್ರ ಸರ್ಕಾರವೂ ಈ ವಿಶ್ವವಿದ್ಯಾಲಯದ ಸ್ಥಾಪನೆಯ ಬಗ್ಗೆ ಮುಂದುವರೆದಂತೆ ತೋರುತ್ತಿಲ್ಲ. ಆದರೂ 2020ರ ಹೊಸ ಶಿಕ್ಷಣ ನೀತಿಯ ಆಶಯದಂತೆ, ಈ ಪ್ರಯತ್ನ ಮತ್ತೊಂದು ಸ್ವರೂಪದಲ್ಲಿ ಸಾಕಾರಗೊಳ್ಳುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗುವುದಿಲ್ಲ

ಇಷ್ಟರ ನಡುವೆ ರಾಜಧಾನಿ  ಬೆಂಗಳೂರು ಕೇಂದ್ರಿತ ಆಳ್ವಿಕೆಯ ಒಂದು ಭಾಗವಾಗಿ 2013ರಲ್ಲಿ ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಈ ಕೇಂದ್ರವನ್ನು ಬೆಂಗಳೂರಿಗೆ ವರ್ಗಾಯಿಸುವ ಪ್ರಯತ್ನಗಳೂ ನಡೆದಿದ್ದವು. ಉಮಾಶ್ರೀ ಅವರು ಸಂಸ್ಕೃತಿ ಇಲಾಖೆಯ ಸಚಿವರಾಗಿದ್ದ ಸಂದರ್ಭದಲ್ಲಿ ಈ ಪ್ರಸ್ತಾಪದೊಂದಿಗೇ ರಾಜ್ಯ ಸರ್ಕಾರದ ನಿಯೋಗವು ಸಂಸ್ಥೆಗೆ ಭೇಟಿ ನೀಡಿತ್ತು. ಆ ಸಂದರ್ಭದಲ್ಲಿ ಇಲ್ಲಿನ ಜನಪ್ರತಿನಿಧಿಗಳಿಗಿಂತಲೂ, ಶಾಸ್ತ್ರೀಯ ಕನ್ನಡ ಕೇಂದ್ರವನ್ನು ಮೈಸೂರಿನಲ್ಲೇ ಉಳಿಸಿಕೊಳ್ಳಲು ಸರ್ಕಾರದ ಮೇಲೆ ಒತ್ತಡ ಹೇರಿದ್ದು ಮೈಸೂರಿನ ಸಾಹಿತಿಗಳು, ಕಲಾವಿದರು ಮತ್ತು ಕನ್ನಡ ಪರ ಹೋರಾಟಗಾರರು ಎನ್ನುವುದನ್ನು ಸ್ಮರಿಸಬೇಕಿದೆ. ಈ ಒತ್ತಡಕ್ಕೆ ಮಣಿದು ಸರ್ಕಾರ ಸಂಸ್ಥೆಯನ್ನು ಮೈಸೂರಿನಲ್ಲೇ ಉಳಿಸಲು ಒಪ್ಪಿತ್ತು. ಈ ಪ್ರಯತ್ನದಲ್ಲಿ ದಿವಂಗತ ಪ. ಮಲ್ಲೇಶ್‌ ಅವರ ಕೊಡುಗೆಯನ್ನು ಸ್ಮರಿಸದಿದ್ದರೆ ನಾವು ಕೃತಘ್ನರಾಗುತ್ತೇವೆ.  ಇಂದು ಕನ್ನಡ ಶಾಸ್ತ್ರೀಯ ಅತ್ಯುನ್ನತ ಅಧ್ಯಯನ ಸಂಸ್ಥೆಯು ಮೈಸೂರಿನಲ್ಲಿದೆ ಎಂದರೆ ಅದರ ಹಿಂದೆ ಮೈಸೂರಿನ ಮೈಸೂರಿನ ಸಾಹಿತಿಗಳು, ಕಲಾವಿದರು ಮತ್ತು ಕನ್ನಡಪರ ಹೋರಾಟಗಾರರು ನಡೆಸಿದ ಹೋರಾಟದ ಪರಿಶ್ರಮವೂ ಇರುವುದನ್ನು ಅಲ್ಲಗಳೆಯಲಾಗುವುದಿಲ್ಲ.

ಸಾಹಿತ್ಯ ಅಧ್ಯಯನ ಸಂಸ್ಥೆಯೊಂದು ಕೇಂದ್ರ ಸಂಸ್ಥೆಯೊಂದರ ಆಶ್ರಯದಲ್ಲಿ ಬೆಳೆಯುವುದಕ್ಕೂ, ತನ್ನದೇ ಆದ ಸ್ವಾಯತ್ತತೆಯೊಂದಿಗೆ ಮತ್ತು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುವುದಕ್ಕೂ ಇರುವ ಸೂಕ್ಷ್ಮ ವ್ಯತ್ಯಾಸಗಳು ರಾಜಕೀಯ ನಾಯಕರಿಗೆ ಅರ್ಥವಾಗುವುದಿಲ್ಲ. ಆದರೆ ಸಾಹಿತ್ಯಕ ಮನಸುಗಳಿಗೆ ಇದರ ಮಹತ್ವ ಅರ್ಥವಾಗುತ್ತದೆ. ಕಳೆದ ನಾಲ್ಕು ವರ್ಷಗಳಿಂದ ಮೈಸೂರಿನ ಸಾಹಿತ್ಯ ವಲಯದ ಆಸಕ್ತ ಮನಸುಗಳು ಒಂದಾಗಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಸ್ವಾಯತ್ತತೆಗಾಗಿ ಹೋರಾಡುತ್ತಿವೆ.. ಹತ್ತಾರು ಬಾರಿ ಸಿಐಐಎಲ್‌ ಸಂಸ್ಥೆಯ ನಿರ್ದೇಶಕರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿದೆ. ಸಂಸ್ಥೆಯ ಸ್ವಂತ ಕಟ್ಟಡ ನಿರ್ಮಾಣ ಮಾಡಲು ನಾಲ್ಕೂವರೆ ಎಕರೆ ಭೂಮಿಯನ್ನು ನೀಡುವುದಾಗಿ ಮೈಸೂರು ವಿಶ್ವವಿದ್ಯಾಲಯವೂ ತಾತ್ವಿಕ ಒಪ್ಪಿಗೆ ನೀಡಿದೆ. ಒಡಂಬಡಿಕೆಗೆ ಸಹಿ ಮಾಡಲೂ ಸಿದ್ಧವಾಗಿತ್ತು.  ಆದರೆ ಆ ಕಡತ ಬಹುಶಃ ಯಾವುದೋ ಕಪಾಟಿನಲ್ಲಿ ಧೂಳು ತಿನ್ನುತ್ತಾ ಕುಳಿತಿದ್ದಂತೆ ಕಾಣುತ್ತದೆ. ಈಗ ಶಾಸ್ತ್ರೀಯ ಕನ್ನಡ ಕೇಂದ್ರವನ್ನು ಜಯಲಕ್ಷ್ಮಿ ವಿಲಾಸ ಅರಮನೆ ಕಟ್ಟಡಕ್ಕೆ ವರ್ಗಾವಣೆ ಮಾಡಲು ಪ್ರಯತ್ನಗಳು ನಡೆಯುತ್ತಿದ್ದು, ತಡವಾಗಿಯಾದರೂ ಈ ವಿಚಾರದಲ್ಲಿ ಆಸಕ್ತಿ ತೋರಿದ ಸಂಸದ ಪ್ರತಾಪ ಸಿಂಹ ಅವರ ಪ್ರಯತ್ನಗಳು ಶ್ಲಾಘನೀಯವೇ. ಈ ಕಟ್ಟಡವೂ ದುರಸ್ತಿಯಾಗಬೇಕಿದ್ದು, ಶಾಸ್ತ್ರೀಯ ಕೇಂದ್ರಕ್ಕೆ ಬೇಕಾದ ಕಟ್ಟಡದ ಒಂದು ಭಾಗವನ್ನು ದುರಸ್ತಿ ಮಾಡಲು  ಕೇಂದ್ರ ಸರ್ಕಾರದಿಂದ 27 ಕೋಟಿ ರೂ ಮಂಜೂರಾಗಿರುವುದಾಗಿ ಸಂಸದರು ಹೇಳಿದ್ದಾರೆ. ಮೈಸೂರು ವಿಶ್ವವಿದ್ಯಾಲಯವೇ ಪ್ರತ್ಯೇಕ ಕಟ್ಟಡ ನಿರ್ಮಿಸಲು ಭೂಮಿ ನೀಡಲು ಸಿದ್ಧವಾಗಿರುವಾಗ, ಮತ್ತೊಂದು ಕಟ್ಟದ ಒಂದು ಮೂಲೆಯಲ್ಲಿ ಈ ಪ್ರತಿಷ್ಠಿತ ಸಂಸ್ಥೆಯನ್ನು ನಿರ್ವಹಿಸುವುದರ ಔಚಿತ್ಯವನ್ನು ಪ್ರಶ್ನಿಸಲೇಬೇಕಿದೆ.

ಮೇಲಾಗಿ, ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಅಭಿವೃದ್ಧಿಗೆ ಒಂದು ಸ್ಥಾವರಕ್ಕಿಂತಲೂ ಅವಶ್ಯವಾಗಿ ಬೇಕಿರುವುದು ಶಾಸ್ತ್ರೀಯ ಕನ್ನಡ ಸಾಹಿತ್ಯದ ಜಂಗಮ ಸ್ವರೂಪಿ ಅಧ್ಯಯನವನ್ನು ಮುಂದುವರೆಸಲು ಮತ್ತು ಅಭಿವೃದ್ಧಿಪಡಿಸಲು ನೆರವಾಗುವ ಸ್ವಾಯತ್ತತೆ.  ಕನ್ನಡದ ಮನಸುಗಳು ಈ ಸ್ವಾಯತ್ತತೆಗಾಗಿ ಹಲವು ಹೋರಾಟ, ಪ್ರತಿಭಟನೆಗಳನ್ನು ನಡೆಸಿ, ಮನವಿಗಳನ್ನು ಸಲ್ಲಿಸಿದ್ದರೂ, ನಮ್ಮ ಜನಪ್ರತಿನಿಧಿಗಳು ತುಟಿಪಿಟಕ್ಕೆನ್ನದೆ ಇರುವುದು ಕನ್ನಡದ ದುರಂತ ಅಲ್ಲವೇ ? ಈಗಲೂ ಮಾನ್ಯ ಸಂಸದರು ಒಂದು ಸ್ಥಾವರಕ್ಕಾಗಿ ಶ್ರಮಿಸುತ್ತಿದ್ದಾರೆ ಆದರೆ ಸ್ವಾಯತ್ತತೆ ಪಡೆಯಲು ಕೇಂದ್ರ ಸರ್ಕಾರದ ಮೇಲೆ ರಾಜಕೀಯ ಒತ್ತಡ ತರುವ ಲಕ್ಷಣಗಳು ಕಾಣುತ್ತಿಲ್ಲ. ಇಡೀ ರಾಜ್ಯವನ್ನು ಬದಿಗಿಡೋಣ, ಕನಿಷ್ಟ ಮೈಸೂರು-ಚಾಮರಾಜನಗರ ಜಿಲ್ಲೆಗಳ ಜನಪ್ರತಿನಿಧಿಗಳಾದರೂ ಒಂದು ನಿಯೋಗವನ್ನು ರಚಿಸಿ, ಎರಡೂ ಜಿಲ್ಲೆಯ ಸಾಹಿತಿ ಕಲಾವಿದರೊಡನೆ, ರಂಗಕರ್ಮಿಗಳೊಡನೆ, ಸಾಹಿತ್ಯಾಸಕ್ತರೊಡನೆ ಸಮಾಲೋಚನೆ ನಡೆಸಿ,  ಸಂಸ್ಥೆಯ ಸ್ವಾಯತ್ತತೆಗಾಗಿ ಕೇಂದ್ರದ ಮೇಲೆ ಒತ್ತಡ ಹೇರಬಹುದಲ್ಲವೇ ? ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಭಾಷಾ ಪ್ರಾಧಿಕಾರ ಮತ್ತು ಸಂಸ್ಕೃತಿ ಇಲಾಖೆ, ಸಾಹಿತ್ಯ ಬಳಗದ ಬೆಂಬಲದೊಂದಿಗೆ ಈ ಪ್ರಯತ್ನವನ್ನು ಮಾಡಿದ್ದಿದ್ದರೆ ಬಹುಶಃ ಈ ವೇಳೆಗೆ ಕನ್ನಡ ಶಾಸ್ತ್ರೀಯ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತತೆ ಲಭಿಸುತ್ತಿತ್ತು. ಸ್ವಾಯತ್ತತೆ ಇಲ್ಲದೆ ಕಟ್ಟಡ ಬದಲಾಗುವುದರಿಂದ ಏನೂ ಸಾಧಿಸಲಾಗುವುದಿಲ್ಲ. ತನ್ನದೇ ಆದ ಸ್ವಂತ ಸ್ಥಾವರದಲ್ಲಿ ಕನ್ನಡ ಅಭಿಜಾತ ಸಾಹಿತ್ಯದ ಜಂಗಮವಾಣಿ ಮುನ್ನಡೆಯುವುದಾದರೆ ಈ ಸಂಸ್ಥೆಗಾಗಿ ಹೋರಾಡಿದ ಕನ್ನಡ ಮನಸುಗಳ ಶ್ರಮವೂ ಸಾರ್ಥಕವಾದೀತು. ಇದು ರಾಜಕೀಯ ಪ್ರತಿಷ್ಠೆಯ ವಿಚಾರವಲ್ಲ ಶುದ್ಧ ಸಾಹಿತ್ಯಕ ಅಭಿವ್ಯಕ್ತಿಯ ಪ್ರಶ್ನೆ ಎನ್ನುವುದು ಜನಪ್ರತಿನಿಧಿಗಳಿಗೆ ಅರ್ಥವಾಗಬೇಕಿದೆ.

ಕೊನೆಯದಾಗಿ ಹಿರಿಯ ಸಮಾಜವಾದಿ, ದಿವಂಗತ ಪ. ಮಲ್ಲೇಶ್‌ ಅವರ :

 “ ಕನ್ನಡ ಶಾಸ್ತ್ರೀಯ ಅತ್ಯುನ್ನತ ಅಧ್ಯನ ಕೇಂದ್ರಕ್ಕೆ ಸ್ವಾಯತ್ತತೆ ಮೊದಲು ಕೊಡಲಿ ರೀ, ಮರದ ಕೆಳಗೆ ಟೇಬಲ್ಲು ಕುರ್ಚಿ ಹಾಕ್ಕೊಂಡು ಕೆಲಸ ಮಾಡೋಣ “  ಎಂಬ ಬಿರುನುಡಿಗಳು ಸಹಜವಾಗಿಯೇ ನೆನಪಾಗುತ್ತದೆ.

Tags: ಮೈಸೂರುಶಾಸ್ತ್ರೀಯ ಕನ್ನಡ ಕೇಂದ್ರ
Previous Post

ಬಸವರಾಜ ಬೊಮ್ಮಾಯಿಗೆ ನಾಯಿ ಮೇಲೆ ಈ ಪ್ರೀತಿ ಬಂದಿದ್ದು ಯಾಕೆ..?

Next Post

ಪ್ರೀತಿ ನಿರಾಕರಿಸಿದ್ದಕ್ಕೆ ಬಾಲಕಿ ಮೇಲೆ ಆ್ಯಸಿಡ್ ಎರಚಿದ ಯುವಕನ ಬಂಧನ

Related Posts

Top Story

HD Kumarswamy: ಮೇಕೆದಾಟು; ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ತಾಕತ್ತು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ

by ಪ್ರತಿಧ್ವನಿ
July 5, 2025
0

ಮಿತ್ರಪಕ್ಷದ ಮುಲಾಜಿನಲ್ಲಿ ಕಾಂಗ್ರೆಸ್; ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ, ಮಂಡ್ಯಕ್ಕೆಷ್ಟು ಅನುದಾನ; ಮೊದಲು ತಿಳಿಯಲಿ ಎಂದು ಚೆಲುವರಾಯಸ್ವಾಮಿಗೆ ತಿರುಗೇಟು, RSS ಬಗ್ಗೆ ಟೀಕೆ; ಪ್ರಿಯಾಂಕ್ ಖರ್ಗೆ...

Read moreDetails

DK Shivakumar: ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕು ನನಗೆ ಮುಖ್ಯ: ಡಿಸಿಎಂ ಡಿ.ಕೆ. ಶಿವಕುಮಾರ್

July 5, 2025

Vijay Raghavendra: ಸಿನಿಮಾ ವಿಭಾಗದಲ್ಲಿ ಪ್ರಕಟಿಸಲು ಕೋರಿಜುಲೈ 25ಕ್ಕೆ ‘ಸ್ವಪ್ನಮಂಟಪ’ ಬಿಡುಗಡೆ

July 5, 2025

Mallikarjuna Kharge: ರಾಜ್ಯದಲ್ಲಿ ಅರಣ್ಯ ಪ್ರದೇಶ ಬೆಳಸಿ ಪರಿಸರ ಉಳಿಸಿ: ಮಲ್ಲಿಕಾರ್ಜುನ ಖರ್ಗೆ ಒತ್ತಾಸೆ.

July 5, 2025
SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!

SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!

July 5, 2025
Next Post
ಪ್ರೀತಿ ನಿರಾಕರಿಸಿದ್ದಕ್ಕೆ ಬಾಲಕಿ ಮೇಲೆ ಆ್ಯಸಿಡ್ ಎರಚಿದ ಯುವಕನ ಬಂಧನ

ಪ್ರೀತಿ ನಿರಾಕರಿಸಿದ್ದಕ್ಕೆ ಬಾಲಕಿ ಮೇಲೆ ಆ್ಯಸಿಡ್ ಎರಚಿದ ಯುವಕನ ಬಂಧನ

Please login to join discussion

Recent News

Top Story

Lakshmi Hebbalkar: ವಿಶೇಷ ಚೇತನ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 5, 2025
Top Story

Jockey 42: ನಟ ಕಿರಣ್ ರಾಜ್ ಹುಟ್ಟು ಹಬ್ಬಕ್ಕೆ ಗುಡ್ ನ್ಯೂಸ್ ನಿರ್ದೇಶಕ ಗುರುತೇಜ್ ಶೆಟ್ಟಿ.

by ಪ್ರತಿಧ್ವನಿ
July 5, 2025
Top Story

HD Kumarswamy: ಮೇಕೆದಾಟು; ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ತಾಕತ್ತು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ

by ಪ್ರತಿಧ್ವನಿ
July 5, 2025
Top Story

DK Shivakumar: ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕು ನನಗೆ ಮುಖ್ಯ: ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
July 5, 2025
Top Story

Vijay Raghavendra: ಸಿನಿಮಾ ವಿಭಾಗದಲ್ಲಿ ಪ್ರಕಟಿಸಲು ಕೋರಿಜುಲೈ 25ಕ್ಕೆ ‘ಸ್ವಪ್ನಮಂಟಪ’ ಬಿಡುಗಡೆ

by ಪ್ರತಿಧ್ವನಿ
July 5, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Lakshmi Hebbalkar: ವಿಶೇಷ ಚೇತನ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 5, 2025

Jockey 42: ನಟ ಕಿರಣ್ ರಾಜ್ ಹುಟ್ಟು ಹಬ್ಬಕ್ಕೆ ಗುಡ್ ನ್ಯೂಸ್ ನಿರ್ದೇಶಕ ಗುರುತೇಜ್ ಶೆಟ್ಟಿ.

July 5, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada