
ದಾವಣಗೆರೆಯಲ್ಲಿ ಭಾನುವಾರ ಎರಡು ಕಾರ್ಯಕ್ರಮಗಳಲ್ಲಿ ಭಾಗಿಯಾದ ಸಿಎಂ ಸಿದ್ದರಾಮಯ್ಯ, ಎರಡೂ ಕಾರ್ಯಕ್ರಮದಲ್ಲೂ ಜಾತಿ, ಧರ್ಮ ರಾಜಕಾರಣದ ಬಗ್ಗೆ ವಾಗ್ದಾಳಿ ಮಾಡಿದ್ರು. ಕನಕ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕಾಂತರಾಜು ಜಾತಿ ಜನಗಣತಿಯನ್ನು ಮುಂದಿನ ಕ್ಯಾಬಿನೆಟ್ನಲ್ಲಿ ಚರ್ಚೆಗೆ ತರುವುದಾಗಿ ತಿಳಿಸಿದ್ರು. ನಾನು ಜಾತಿಯನ್ನು ದ್ವೇಷ ಮಾಡಲ್ಲ, ಜಾತಿಯನ್ನು ಹಿಡಿದು ರಾಜಕಾರಣ ಮಾಡುವುದನ್ನು ವಿರೋಧಿಸ್ತೀನಿ ಎಂದಿದ್ದಾರೆ.

ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗದ ಸಮುದಾಯಗಳ ಸ್ವಾಮೀಜಿಗಳು, ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ ಹಲವು ಸಮುದಾಯಗಳ ಧಾರ್ಮಿಕ ಗುರುಗಳು ಭಾಗಿಯಾಗಿದ್ದರು. ಕಾಗಿನೆಲೆ ಪೀಠದ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿ, ಶಾಖಾ ಮಠದ ಶ್ರೀ ಈಶ್ವರಾನಂದಿಪುರಿ ಸ್ವಾಮಿ ಸೇರಿದಂತೆ ಹಲವು ಮಠಾಧೀಶರು ಭಾಗಿಯಾಗಿ ಸಿಎಂ ಸಿದ್ದರಾಮಯ್ಯಗೆ ಬೆಂಬಲಿಸಿದ್ರು.
ಕನಕ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಭೈರತಿ ಸುರೇಶ್, ಸಿಎಂ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ್ದಾರೆ. ಇನ್ನು ಮೂರೂವರೆ ವರ್ಷದ ಕಾಲ ನಿಮ್ಮ ಸಿದ್ದರಾಮಯ್ಯನವರೇ ಸಿಎಂ ಆಗಿರ್ತಾರೆ. ಅಹಿಂದ ಸಮಾಜಕ್ಕೆ ಬೇಕಾದ ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ಮಾಡೋದಕ್ಕೆ ನಮ್ಮ ಸರ್ಕಾರ ಬದ್ಧ ಅಂತ ಹೇಳಿದ್ದಾರೆ.
ದಾವಣಗೆರೆಯ ಯುವಜನೋತ್ಸವದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾನು ಸಂತೋಷದಿಂದಲೇ ಯುವಜನೋತ್ಸವ ಉದ್ಘಾಟನೆ ಮಾಡಿದ್ದೇನೆ. ನಾಡಿನ ಯುವಜನರಿಗೆ ಹೊಸ ವರ್ಷದ ಶುಭಾಶಯಗಳು. 2025 ರಾಜ್ಯದ ಎಲ್ಲಾ ಜನರಿಗೂ ಒಳ್ಳೆದ ಮಾಡಲಿ ಅಂತ ಹಾರೈಸುತ್ತೇನೆ. ಮುಖ್ಯವಾಗಿ ರಾಜ್ಯದ ರೈತರಿಗೆ ಈ ವರ್ಷ ಮಳೆ ಬೆಳೆ ಒಳ್ಳೇದಾಗಲಿ ಎಂದು ಹಾರೈಸುತ್ತೇನೆ. ಇಡೀ ವರ್ಷ ಸಮಾಜದಲ್ಲಿ ಶಾಂತಿ ನೆಲೆಸಲಿ ಅಂತ ಬೇಡಿಕೊಳ್ತೇನೆ. ದೇಶದಲ್ಲಿ ಶೇ.35ರಷ್ಟು ಯುವಕರಿದ್ದಾರೆ. ಯುವಜನರು ಸಮಾಜಮುಖಿಯಾಗಿ ಬೆಳೆಯಬೇಕು. ಯುವಜನರಲ್ಲಿ ವೈಚಾರಿಕತೆ, ವೈಜ್ಞಾನಿಕವಾದ ಶಿಕ್ಷಣ ಸಿಗಬೇಕು ಅಂತ ಹೇಳಿದ್ರು.
ನಮ್ಮ ದೇಶದಲ್ಲಿ ಶೇಕಡ 35ರಷ್ಟು ಯುವಜನರೇ ಇದ್ದಾರೆ.. ಅವರೇ ನಮ್ಮ ದೇಶದ ಆಸ್ತಿ ಎಂದಿರುವ ಸಿಎಂ ಸಿದ್ದರಾಮಯ್ಯ, ಆದರೆ ಯುವಜನರು ಸಮಾಜಮುಖಿಯಾಗಿ ಬೆಳೆಯಬೇಕು. ಯುವಜನರಲ್ಲಿ ವೈಚಾರಿಕತೆ, ವೈಜ್ಞಾನಿಕವಾದ ಶಿಕ್ಷಣ ಸಿಗಬೇಕು. ಯುವಜನರು ತಮ್ಮಲ್ಲಿ ವೈಚಾರಿಕತೆ, ಜಾತ್ಯತೀತತೆ ಬೆಳೆಸಿಕೊಳ್ಳುವಂತೆ ಸಿಎಂ ಕರೆ ನೀಡಿದ್ದಾರೆ, ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂದು ವಿವೇಕಾನಂದ ಮಾತು ಪ್ರಸ್ತಾಪಿಸಿ ಯುವಜನರಿಗೆ ಸಿಎಂ ಕಿವಿಮಾತು ಹೇಳಿದ್ದು, ಯಾರಿಂದನೂ ಛೀ ಥೂ ಅಂತ ಅನ್ನಿಸಿಕೊಂಡು ಬದುಕಬಾರದು. ಘನತೆಯಿಂದ ಯಾರಿಗೂ ತೊಂದರೆ ಕೊಡದೆ ವೈಚಾರಿಕವಾಗಿ ಜೀವನ ಮಾಡಬೇಕು. ಅದಕ್ಕಾಗಿ ಪರಿಶ್ರಮ ಪಡಬೇಕು, ಸಾಧನೆಯ ಕಡೆಗೆ ಗಮನಹರಿಸಬೇಕು. ಎಲ್ಲರನ್ನೂ ಒಂದೇ ಅಂತಾ ಕಾಣುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದಿದ್ದಾರೆ.