ಪ್ರಕರಣ ಸಂಬಂಧ ಸುಪ್ರಿಂ ಕೋರ್ಟ್ ಕದ ತಟ್ಟಿದ ಖಾಕಿ

ಅನಿಲ್ ನಿಶಾನಿ ಎಂಬುವರಿಂದ ಅರ್ಜಿ ಸಲ್ಲಿಕೆ, ಇಂದು ಅರ್ಜಿ ಸಲ್ಲಿಕೆ ಮಾಡಿರಿವ ಅನಿಲ್ ನಿಶಾನಿ ಅರ್ಜಿಯ ಜೊತೆ ಎಲ್ಲಾ ಸೂಕ್ತ ದಾಖಲೆಗಳ ಸಲ್ಲಿಕೆ ಸರ್ಕಾರದಿಂದ ಅನುಮತಿ ಪಡೆದ ಪ್ರತಿ, ಎಸ್ ಪಿ ಪಿ ಅವರ ಓಪಿನಿಯನ್ ಹಾಗು ಪ್ರಕರಣದ ಎಲ್ಲಾ ದಾಖಲೆ ಸಲ್ಲಿಕೆ ಇನ್ನು ಹತ್ತು ದಿನಗಳಲ್ಲಿ ಪ್ರಕರಣದ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆ.

ಚಿತ್ರದುರ್ಗದಿಂದ ಬೆಂಗಳೂರಿಗೆ ರೇಣುಕಾಸ್ವಾಮಿಯನ್ನು ಕರೆತಂದು ಹತ್ಯೆ ಮಾಡಿದ ಆರೋಪದಲ್ಲಿ ನಟ ದರ್ಶನ್ ಸೇರಿ ಅವರ ಸಹಚರರು ಜೈಲು ಸೇರಿದ್ದರು. ತಿಂಗಳುಗಳ ಕಾಲ ಜೈಲು ವಾಸ ಅನುಭವಿಸಿದ್ದರು ಇತ್ತೀಚೆಗೆ ಹೈಕೋರ್ಟ್ ಜಾಮೀನು ನೀಡಿತ್ತು.

ದರ್ಶನ್ಗೆ ಬೆನ್ನು ನೋವು ಕಾಡುತ್ತಿದೆ. ಹೆಚ್ಚಿನ ಚಿಕಿತ್ಸೆ ಬಗ್ಗೆ ಅವರು ವೈದ್ಯರ ಜೊತೆ ಮಾತುಕತೆ ನಡೆಸಿದ್ದಾರೆ. ಈ ನಡುವೆ ದರ್ಶನ್ ಅವರಿಗೆ ಹೊಸ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಸೇರಿದಂತೆ ಒಟ್ಟು 7 ಆರೋಪಿಗಳ ಜಾಮೀನು ರದ್ದು ಮಾಡುವಂತೆ ಕೋರಿ ಪೊಲೀಸರು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ

ಪರಪ್ಪನ ಅಗ್ರಹಾರದಲ್ಲಿ ಜೈಲಿನ ನಿಯಮಗಳನ್ನು ಗಾಳಿಗೆ ತೂರಿದ್ದು ಬಹಿರಂಗ ಆದ ಬಳಿಕ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಕಳಿಸಿದ್ದರು. ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಇದ್ದಾಗ ದರ್ಶನ್ಗೆ ಬೆನ್ನು ನೋವು ಕಾಣಿಸಿಕೊಂಡಿತ್ತು. ನಡೆದಾಡಲು ಕೂಡ ಕಷ್ಟಪಡುತ್ತಿದ್ದರು. ಶಸ್ತ್ರ ಚಿಕಿತ್ಸೆಯ ಅಗತ್ಯ ಇದೆ ಎಂದು ವೈದ್ಯರು ಸೂಚನೆ ನೀಡಿದ್ದರು. ವರದಿಯನ್ನು ಪರಿಗಣಿಸಿ ಮಧ್ಯಂತರ ಜಾಮೀನು ನೀಡಲಾಯಿತು. ಮಧ್ಯಂತರ ಜಾಮೀನು ಅವಧಿ ಮುಗಿಯುತ್ತಿದ್ದಂತೆಯೇ ದರ್ಶನ್ಗೆ ರೆಗ್ಯುಲರ್ ಬೇಲ್ ಸಿಕ್ಕಿತ್ತು.

ಜಾಮೀನು ಸಿಕ್ಕು ಸಾಕಷ್ಟು ದಿನಗಳು ಕಳೆದರೂ ಕೂಡ ದರ್ಶನ್ ಅವರು ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿಲ್ಲ. ಜಾಮೀನು ಸಿಕ್ಕ ಬಳಿಕ ಅವರು ಕೆಂಗೇರಿಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರು. ಇತ್ತೀಚೆಗೆ ಅವರು ನ್ಯಾಯಾಲಯದಿಂದ ಅನುಮತಿ ಪಡೆದು ಮೈಸೂರಿನ ಆಸ್ಪತ್ರೆಗೆ ಭೇಟಿ ನೀಡಿದ್ದರು. ಅಲ್ಲದೇ, ಮೈಸೂರಿನ ಟಿ. ನರಸೀಪುರ ರಸ್ತೆಯಲ್ಲಿರುವ ಫಾರ್ಮ್ ಹೌಸ್ಗೂ ದರ್ಶನ್ ತೆರಳಿದ್ದರು. ಈಗ ಕೋರ್ಟ್ ಅನುಮತಿ ನೀಡಿದ್ದ ಅವಧಿ ಮುಕ್ತಾಯ ಆದ ಹಿನ್ನೆಲೆಯಲ್ಲಿ ಅವರು ಬೆಂಗಳೂರಿಗೆ ವಾಪಸಾಗಿದ್ದಾರೆ. ಸುಪ್ರೀಂ ಕೋರ್ಟ್ ನೀಡಲಿರುವ ತೀರ್ಪಿನ ಆಧಾರದ ಮೇಲೆ ದರ್ಶನ್ ಹಾಗೂ ಇತರೆ ಆರೋಪಿಗಳ ಭವಿಷ್ಯ ನಿರ್ಧಾರ ಆಗಲಿದೆ.