ಕಳೆದ ವಾರ ಅರುಣಾಚಲ ಪ್ರದೇಶದ ಗಡಿ ಭಾಗದ ತವಾಂಗ್ ನ ಯಾಂಗ್ಸೆಯಲ್ಲಿ ಭಾರತ-ಚೀನಾ ಸೇನಾಪಡೆಗಳ ನಡುವೆ ಮುಖಾಮುಖಿ ಘರ್ಷಣೆ ನಡೆದಿದ್ದು, ಯಾಂಗ್ಸೆಯನ್ನು ಚೀನಾ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಪ್ರಯತ್ನಿಸಿದೆ ಎಂಬ ಮಾಹಿತಿ ಬಹಿರಂಗಗೊಂಡಿದೆ.
ʼಸ್ಥಳೀಯ ಕಮಾಂಡರ್ಗಳ ಮಟ್ಟದಲ್ಲಿ ಈ ಸಮಸ್ಯೆಯನ್ನು ಬಗೆಹರಿಸುವ ಕೆಲ ಗಂಟೆಗಳ ಮೊದಲು ಘರ್ಷಣೆ ನಡೆಯಿತು. ಯಾಂಗ್ತ್ಸೆ ಪಕ್ಕದಲ್ಲಿ ಗಸ್ತು ಸುತ್ತುತ್ತಿದ್ದ ಸಂದರ್ಭದಲ್ಲಿ ಭಾರತ ಮತ್ತು ಚೀನಾ ಸೈನ್ಯಗಳ ನಡುವೆ ಘರ್ಷಣೆ ಉಂಟಾಗಿದೆ. ನಂತರ ಸೈನಿಕರು ತಮ್ಮ ತಮ್ಮ ಕಡೆಗಳಿಗೆ ಮರಳುವಂತೆ ಒಬ್ಬರಿಗೊಬ್ಬರು ಕೇಳಿಕೊಂಡರುʼ ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತೀಯ ಪ್ರಾಂತ್ಯದ ಕಡೆ ಚೀನಾದ ಪಿಎಲ್ಎ ಸಿಬ್ಬಂದಿಗಳು ನುಸುಳಲು ಪ್ರಯತ್ನಿಸುವಾಗ ಈ ಸಂಘರ್ಷ ಉಂಟಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ಎ) ಯೊಂದಿಗೆ ನಡೆದ ಘರ್ಷಣೆಯಲ್ಲಿ ಯಾವುದೇ ಚೀನಾ ಸೈನಿಕರನ್ನು ಬಂಧಿಸಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟ ಪಡಿಸಿದೆ.

ಆಗಸ್ಟ್ 30 ರಂದು ಉತ್ತರಾಖಂಡದ ಕೇಂದ್ರ ವಲಯದಲ್ಲಿ ಸುಮಾರು 100ಕ್ಕೂ ಹೆಚ್ಚು ಸೈನಿಕರು ಚೀನಾದ ಗಸ್ತು ಎಲ್ಎಸಿ ದಾಟಿ, ಪಾದಚಾರಿ ಸೇತುವೆಯನ್ನು ಹಾನಿಗೊಳಿಸಿದ ಘಟನೆಯ ನಂತರ ಈ ಘಟನೆ ಸಂಭವಿಸಿದೆ. ಮಾತ್ರವಲ್ಲ ಈಶಾನ್ಯ ಲಡಾಖ್ ವಿವಾದಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ಸೇನಾ ಸಭೆ ನಡೆದ ಬಳಿಕ ಅರುಣಾಚಲ ಪ್ರದೇಶದಲ್ಲಿ ಈ ಬೆಳವಣಿಗೆ ನಡೆದಿದೆ.