ಸದ್ಯ ಸರ್ಕಾರಿಯೇತರ ಸಂಸ್ಥೆಯಾಗಿರುವ ಚಿಲುಮೆ ನಡೆಸಿದ ಅಕ್ರಮ ರಾಜ್ಯ ಕಾಂಗ್ರೆಸ್ ಕೈಗೆ ಮರುಭೂಮಿಯಲ್ಲಿ ಓಯಸಿಸ್ ಸಿಕ್ಕಂತಾಗಿದೆ. ಬಿಜೆಪಿ ಸಚಿವರೊಬ್ಬರ ಸಂಬಂಧಿಯೇ ನಡೆಸಿಕೊಂಡು ಬರುವ ಈ ಚಿಲುಮೆ 2018ರ ಡಿಸೆಂಬರ್ 22 ರಂದು ಬಿಬಿಎಂಪಿಯಿಂದ ಮತದಾರರಿಗೆ ಅರಿವು ಮೂಡಿಸುವುದರ ಜೊತೆಗೆ ಮತದಾನದ ಸ್ಥಳಕ್ಕೆ ಬೇಕಾಗುವ ಸೈಡ್ ಲೈಟ್ಸ್ ಒದಗಿಸುವ ಗುತ್ತಿಗೆ ಪಡೆದುಕೊಂಡಿತ್ತು. ಅಂದು ಬಿಬಿಎಂಪಿ ಈ ಚಿಲುಮೆ ಸಂಸ್ಥೆಗೆ ಯಾವುದೇ ಟೆಂಡರ್ ಕರೆಯದೆ ಈ ಗುತ್ತಿಗೆಯನ್ನು ನೀಡಿತ್ತು. ಅಂದು 2019ರ ಲೋಕಸಭಾ ಚುನಾವಣೆ ಸಂಬಂಧ ಕೆಲಸ ಮಾಡಿದ್ದ ಚಿಲುಮೆ ಇದೀಗ ಮುಂಬರುವ ಚುನಾವಣೆಗೂ ಕೂಡ ಅದೇ ಮಾದರಿಯ ಕೆಲಸಕ್ಕೆ ಗುತ್ತಿಗೆ ಪಡೆದುಕೊಂಡಿದೆ.
ಕಳೆದ ಎರಡೂವರೆ ತಿಂಗಳಿಂದ ಚಿಲುಮೆ ಮತದಾರರ ಬಳಿ ತೆರಳಿ ತಮ್ಮ ವೈಯಕ್ತಿಕ ಮಾಹಿತಿ ಸೇರಿದಂತೆ ಹಲವು ಮಾಹಿತಿಗಳನ್ನು ಕಲೆ ಹಾಕಿಕೊಂಡಿದೆ. ವಾಸ್ತವದಲ್ಲಿ ಚಿಲುಮೆಗೆ ಈ ರೀತಿಯ ಮಾಹಿತಿ ಕಲೆಹಾಕುವ ಯಾವುದೇ ಅಧಿಕಾರವಿಲ್ಲದೆ ಇದ್ದರೂ ಕೂಡ ಬಿಬಿಎಂಪಿ ಚುನಾವಣೆ ಅಧಿಕಾರಿಗಳ ನಕಲಿ ಗುರುತಿನ ಚೀಟಿ ತಯಾರಿಸಿ, ಅದನ್ನೇ ಮುಂದಿಟ್ಟುಕೊಂಡು ಈ ಕುಕೃತ್ಯ ನಡೆಸಿದೆ. ಈ ಸಂಬಂಧ ಚಿಲುಮೆ ವ್ಯವಸ್ಥಾಪಕರ ಮೇಲೆ ಪಾಲಿಕೆ ದೂರು ದಾಖಲಿಸಿ ತನಿಖೆ ನಡೆಸುವಂತೆ ಕೋರಿಕೊಂಡಿದೆ.
ಅಸಲಿಗೆ ಚಿಲುಮೆ ಸಂಸ್ಥೆಗೆ ಜಾಗೃತಿ ಮೂಡಿಸೋದಕ್ಕೆ ಅಷ್ಟೇ ಅನುಮತಿ ಕೊಡಲಾಗಿದೆ. ಮತದಾರರ ಡೇಟಾ ಕಲೆಕ್ಟ್ ಮಾಡಿಮುವುದಾಗಲಿ ಅಥವಾ ಯಾವುದೇ ವೈಯಕ್ತಿಕ ಮಾಹಿತಿ ಕಲೆ ಹಾಕುವಂತಾಗಲಿ ಮಾಡುವಂತಿಲ್ಲ. ಈವರೆಗೆ ಬಿಬಿಎಂಪಿ ವ್ಯಾಪ್ತಿಯ 28 ವಿಧಾನ ಸಭಾ ಕ್ಷೇತ್ರದಲ್ಲಿ 26% ಮಾತ್ರ ಓಟರ್ ಐಡಿ ಆಧಾರ್ ಲಿಂಕ್ ಆಗಿದೆ. ರಾಜ್ಯಾದ್ಯಂತ 60% ಓಟರ್ ಐಡಿ ಆಧಾರ್ ಲಿಂಕ್ ಮಾಡಲಾಗಿದೆ. ಆದರೆ ಬೆಂಗಳೂರಿನಲ್ಲಿ 26% ನಷ್ಟೇ ಆಗಿದ್ದು, ಮತದಾರ ಮಾಹಿತಿ, ಆಧಾರ್ ಲಿಂಕ್ ಮಾಹಿತಿ ಚುನಾವಣಾ ಆಯೋಗಕ್ಕೆ ಮಾತ್ರ ಸೀಮಿತವಾದದ್ದು. ಕೇಂದ್ರ ಚುನಾವಣಾ ಆಯೋಗಕ್ಕೆ ಬಿಟ್ಟರೆ ಬೇರೆ ಯಾರಿಗೂ ಕೂಡ ಈ ಮಾಹಿತಿ ಕಲೆ ಹಾಕುವ ಅಧಿಕಾರವಿಲ್ಲ.
2018ರಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಚೊಚ್ಚಲ ಬಾರಿಗೆ ಈ ಚಿಲುಮೆ ಎನ್ನುವ ಸಂಸ್ಥೆಗೆ ಗುತ್ತಿಗೆ ಕೊಡಲಾಗಿದೆ. ಅಲ್ಲಿಂದ ಇಲ್ಲಿಯವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಮತದಾರರಿಗೆ ಜಾಗೃತಿ ಮೂಡಿಸುವ ಹೊಣೆಯಷ್ಟೇ ಈ ಸಂಸ್ಥೆಯದ್ದು. ಆದರೀಗ ಬೆಂಗಳೂರಿನ ಮತದಾರರ ಮಾಹಿತಿ ಕಲೆ ಹಾಕಿ ಬಿಜೆಪಿ ಪಕ್ಷಕ್ಕೆ ನೀಡಿದ ಎಂಬ ಆರೋಪ ಕೇಳಿ ಬಂದಿದೆ. ಈ ಹಿಂದೆ ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ನಕಲಿ ವೋಟರ್ ಐಡಿ ಪ್ರಕರಣ ಸದ್ದು ಮಾಡಿತ್ತು. ಇದೇ ಮಾದರಿಯಲ್ಲಿ ಈ ಬಾರಿಯೂ ಆಡಳಿತರೂಢ ಬಿಜೆಪಿ ಎಲೆಕ್ಷನ್ ಗೋಲ್ಮಾಲ್ ಗೆ ಇಳಿದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಇಂಥಾ ಮಾಹಿತಿಯನ್ನು ಬಳಸಿ ಬಿಜೆಪಿ ಮಾಡ ಹೊರಟಿದ್ದೇನು ?
ಕಳೆದ ಲೋಕಸಭಾ ಚುನಾವಣೆ ಸಂಧರ್ಭದಲ್ಲಿ ಸ್ವತಃ ಮೋದಿ ಸರ್ಕಾರದ ವಿರುದ್ಧವೂ ಇದೇ ರೀತಿಯ ಆರೋಪ ಕೇಳಿ ಬಂದಿತ್ತು. ಡಿಜಿಟಲೈಸ್ಡ್ ಮಾಹಿತಿಯನ್ನು ಖಾಸಗಿ ಕಂಪೆನಿಗಳಿಂದ ಖರೀದಿ ಮಾಡಿಕೊಂಡು ಅದನ್ನೇ ಮುಂದಿಟ್ಟುಕೊಂಡು ಚುನಾವಣೆ ತಂತ್ರಗಾರಿಕೆ ಭಾಜಪ ರೂಪಿಸಿದೆ ಎನ್ನುವ ಗಂಭೀರ ಆರೋಪ ಅದು. ಖಾಸಗಿ ಕಂಪೆನಿಗಳು ನೀಡುವ ಇಂಥಾ ದತ್ತಾಂಶಗಳು ನಿರ್ದಿಷ್ಟ ವ್ಯಕ್ತಿಯ ಎಲ್ಲಾ ಮಾಹಿತಿಯನ್ನು ಒಳಗೊಂಡಿರಲಿದ್ದು, ಆತ ದಿನದ 24 ಗಂಟೆಗಳ ಕಾಲ ಯಾವ ರೀತಿಯ ಕೆಲಸ ಕಾರ್ಯಗಳಲ್ಲಿ ಮೊಬೈಲ್ ಬಳಸಿಕೊಂಡು ಮಾಡುತ್ತಿರುತ್ತಾನೆ ಎನ್ನುವ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ. ಸದ್ಯ ಎಲ್ಲಾ ಸರ್ಕಾರಿ ಕೆಲಸಗಳಿಗೂ ಆಧಾರ್ ನಂಬರ್ ಅಥವಾ ಆಧಾರ್ ಲಿಂಕ್ ಮಾಡಿಸುವ ಕಡ್ಡಾಯ ನಿಯಮವಿದ್ದು, ಈ ಮೂಲಕ ಚುನಾವಣೆ ಮತ ವಿಭಜನೆಗೆ ಇದು ಸಹಕಾರಿಯಾಗಲಿದೆ.
ಈಗ ಚಿಲುಮೆ ನಡೆಸಿದ ಈ ಅನಧಿಕೃತ ಸರ್ವೇ ಕೂಡ ಇದೇ ಮಾದರಿಯಲ್ಲೇ ಇದೆ ಮೇಲ್ನೋಟಕ್ಕೆ. ಸಂಪೂರ್ಣವಾಗಿ ಅಲ್ಲದಿದ್ದರೂ ಈವರೆಗೆ ಚಿಲುಮೆ ಕ್ರೂಢೀಕರಿಸಿರುವ ದತ್ತಾಂಶಗಳನ್ನು ಬಳಸಿಕೊಂಡು ಬೆಂಗಳೂರು ನಗರದ ಮತ ವಿಭಜನೆ ಮಾಡುವ ಎಲ್ಲಾ ಅವಕಾಶಗಳೂ ಕೂಡ ಬಿಜೆಗಿದೆ. ಒಂದು ವೇಳೆ ಹೀಗೇ ಆದರೆ ಮುಂಬವರುವ ಬಿಬಿಎಂಪಿ ಚುನಾವಣೆಯಲ್ಲಿ ಇದರ ಪರಿಣಾಮ ಎದ್ದು ಕಾಣಲಿದೆ. ಈಗಾಗಲೇ ಡಿಲಿಮಿಟೇಷನ್ ಹೆಸರಿನಲ್ಲಿ 198ರಿಂದ 243 ವಾರ್ಡ್ ಗಳಾಗಿ ಬೆಂಗಳೂರು ನಗರ ವ್ಯಾಪ್ತಿ ದೊಡ್ಡಾಗಿದೆ. ಪ್ರತಿ ವಾರ್ಡ್ ನಲ್ಲೂ 35 ಸಾವಿರ ಸರಾಸರಿ ಮತದಾರರ ಲೆಕ್ಕಾಚಾರದ ಮೇಲೆ ವಾರ್ಡ್ ಡಿ ಲಿಮಿಟ್ ಮಾಡಲಾಗಿದೆ ಎನ್ನುವುದು ಬಿಬಿಎಂಪಿಯೇ ಬಹಿರಂಗವಾಗಿ ನೀಡಿರುವ ಮಾಹಿತಿ. ಈಗ ಚಿಲುಮೆ ಕಲೆ ಹಾಕಿಕೊಂಡಿರುವ ಈ ದತ್ತಾಂಶದ ಆಧಾರದ ಮೇರೆಗೆ ಕೂಡ, ಗುಣಿಸಿ ನೋಡಿದರೆ ಬಿಜೆಪಿಗೆ ಸುಲಭವಾಗಿ ಮುಂದಿನ ಚುನಾವಣೆ ಏನೇನೆಲ್ಲಾ ತಯಾರಿ ಮಾಡಿಕೊಳ್ಳಬೇಕು ಮತ್ತು ಎಲ್ಲೆಲ್ಲಾ ತಮ್ಮ ಮತಗಟ್ಟೆಗಳಿವೆ ಅಲ್ಲೆಲ್ಲಾ ತಮ್ಮ ಮತಗಳನ್ನು ಕೇಂದ್ರೀಕರಿಸಿ, ಉಳಿದಂತಿರುವ ಇತರೆ ಪಕ್ಷಗಳ ಮತಗಳನ್ನು ಒಡೆದು, ಚುನಾವಣೆಯಲ್ಲಿ ಮುನ್ನಡೆಯನ್ನು ಸುಲಭವಾಗಿ ಸಾಧಿಸಬಹುದಾಗಿದೆ.
ಒಟ್ಟಾರೆ ರಾಜ್ಯದ ಆಡಳಿತ ವೈಫಲ್ಯ, ಕೇಂದ್ರದ ಈಡೇರದ ಭರವಸೆಗಳನ್ನು ಮೆಟ್ಟಿನಿಲ್ಲಲ್ಲು ಬಿಜೆಪಿ ಅಡ್ಡದಾರಿ ಹಿಡಿದಿದೆ ಎನ್ನುವುದು ಈಗ ಗೌಪ್ಯವಾಗಿ ಉಳಿದಿರುವ ಸಂಗತಿಯೇನು ಅಲ್ಲ. ಈಗ ಚಿಲುಮೆ ಎನ್ನುವ NGO ನಡೆಸಿರುವ ಈ ಅಕ್ರಮದ ಮೂಲದಲ್ಲಿ ಕಾಣದ ಕಮಲದ ಕೈಗಳೇ ಹೊರತು ಇನ್ನೇನು ಅಲ್ಲ. ಆದರೀಗ ಇರುವ ಏಕೈ ಪ್ರಶ್ನೆ ಅಂದ್ರೆ ಇದುವರೆಗೂ ಚಿಲುಮೆ ಕಲೆ ಹಾಕಿಕೊಂಡಿರುವ ಮತದಾರರ ಮಾಹಿತಿ ರಿಕವರಿ ಆಗಿದೆಯೇ..? ಅಥವಾ ಇದು ಕೇವಲ ಎರಡು ದಿನಗಳ ಆರೋಪ ಪ್ರತ್ಯಾರೋಗಳ ಹೈಡ್ರಾಮ ಮಾತ್ರವೇ..? ಎನ್ನುವುದಷ್ಟೇ.