ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ತಾಯ್ತನ ಮತ್ತು ಮಕ್ಕಳ ಬೆಳವಣಿಗೆ ಕುರಿತು ಹಂಚಿಕೊಂಡ ಅಭಿಪ್ರಾಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿವೆ. ಪೋಷಕರು ತಮ್ಮ ಆಸೆಗಳನ್ನು ಮಕ್ಕಳ ಮೇಲೆ ಹೇರುವ ಪ್ರವೃತ್ತಿಯ ಬಗ್ಗೆ ಅವರು ತೆರೆದಮನಸ್ಸಿನಿಂದ ಮಾತನಾಡಿದ್ದು, ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ತಾಯ್ತನ ಎಂದರೇನು ಮತ್ತು ಮಕ್ಕಳು ಯಾಕೆ ಎನ್ನುವ ಪ್ರಶ್ನೆಗೆ ಉತ್ತರಿಸುತ್ತಾ, ಹಲವಾರು ಪೋಷಕರು ಮಕ್ಕಳ ಆಸೆ-ಆಕಾಂಕ್ಷೆಗಳನ್ನು ಕಡೆಗಣಿಸಿ ತಮ್ಮದೇ ನಿರ್ಧಾರಗಳನ್ನು ಅವರ ಮೇಲೆ ಹೇರಿಸುತ್ತಾರೆ ಎಂದು ರಶ್ಮಿಕಾ ಹೇಳಿದರು. ವಿಶೇಷವಾಗಿ ಶಿಕ್ಷಣ ಮತ್ತು ವೃತ್ತಿ ಆಯ್ಕೆ ವಿಚಾರದಲ್ಲಿ ಮಕ್ಕಳ ಆಸಕ್ತಿಗಿಂತ ಪೋಷಕರ ಪ್ರತಿಷ್ಠೆ, ಇಗೋ ಮತ್ತು ಸಮಾಜದ ಒತ್ತಡವೇ ಮೇಲುಗೈ ಸಾಧಿಸುತ್ತಿದೆ ಎಂಬುದನ್ನು ಅವರು ಸೂಚಿಸಿದರು.

“ನಮ್ಮ ಆಸೆಗಳನ್ನು ಈಡೇರಿಸಿಕೊಳ್ಳಲು ಮಕ್ಕಳನ್ನು ಬಳಸಿಕೊಳ್ಳುವುದು ಸರಿಯಲ್ಲ. ಮಕ್ಕಳು ತಮ್ಮದೇ ಕನಸುಗಳೊಂದಿಗೆ ಬೆಳೆಬೇಕು. ಪೋಷಕರ ಕರ್ತವ್ಯವು ಅವರಿಗೆ ಸುರಕ್ಷಿತ ಹಾಗೂ ಸಂತೋಷದ ಜೀವನವನ್ನು ನೀಡುವುದಾಗಿದೆ,” ಎಂದು ಅವರು ಅಭಿಪ್ರಾಯಪಟ್ಟರು.

ಇಂತಹ ಸ್ವಾರ್ಥಪೂರ್ಣ ಮನೋಭಾವ ನಮ್ಮ ಪೀಳಿಗೆಯಲ್ಲೇ ಕೊನೆಗೊಳ್ಳಬೇಕು ಎಂಬುದನ್ನು ಅವರು ಒತ್ತಿ ಹೇಳಿದ್ದು, ಈ ಮಾತುಗಳು ಅನೇಕ ಜನರ ಮನಸ್ಸಿಗೆ ತಟ್ಟಿವೆ. ಹಲವು ನೆಟ್ಟಿಗರು ತಮ್ಮ ಅನುಭವಗಳನ್ನು ಹಂಚಿಕೊಂಡು, ನಟಿಯ ಅಭಿಪ್ರಾಯಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ತಾವು ಭವಿಷ್ಯದಲ್ಲಿ ತಾಯಿಯಾಗಲು ಬಯಸುತ್ತೇನೆ ಎಂಬುದನ್ನು ಹೇಳಿದ ರಶ್ಮಿಕಾ, ಮಕ್ಕಳಿಂದ ಜೀವನಕ್ಕೆ ಬರುವ ಸಂತೋಷವನ್ನು ಸ್ಮರಿಸಿದರು. ಅವರ ಈ ವಿಚಾರಧಾರೆಗೆ ನೆಟ್ಟಿಗರು “ಒಳ್ಳೆಯ ತಾಯಿ ಆಗುವ ಗುಣ ನಿಮ್ಮಲ್ಲಿದೆ” ಎಂದು ಪ್ರಶಂಸಿಸಿದ್ದಾರೆ.






