ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದಾರೆ.
ಚಿಕ್ಕಬಳ್ಳಾಪುರ ತಾಲ್ಲೂಕಿನ ತೋಟಗಾರಿಕೆ ಇಲಾಖೆಯಲ್ಲಿ ಬೆಳೆ ಸರ್ವೆಯಲ್ಲಿ ಲೋಪದಿಂದಾಗಿ ಅಸಲಿ ಬೆಳೆಗಾರರು ವಂಚನೆಗೊಳಗಾಗುವಂತಾಗಿದೆ,ಕಳೆದೆರಡು ತಿಂಗಳ ಕೊರೋನಾ ಲಾಕ್ ಡೌನ್ ನಿಂದ ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೇ ರೈತರು ಸಂಕಷ್ಟಕ್ಕೊಳಗಾಗಿದ್ದರು. ಇದನ್ನರಿತ ಸರ್ಕಾರ ಹೆಕ್ಟೇರ್ ಗೆ 10 ಸಾವಿರದಂತೆ ತೋಟಗಾರಿಕಾ ಬೆಳೆಗಳಿಗೆ ಪರಿಹಾರ ನೀಡುವಂತೆ ಸೂಚಿಸಿತ್ತು. ಆದರೆ, ಘೋಷಣೆ ಮಾಡಿರೋ ಪರಿಹಾರದ ಹಣ ಸಮರ್ಪಕವಾಗಿ ಅರ್ಹ ಫಲಾನುಭವಿಗಳಿಗೆ ಸಿಗುತ್ತಾ ಇಲ್ಲ ಅಂತ ಚಿಕ್ಕಬಳ್ಳಾಪುರದಲ್ಲಿ ರೈತರು ಅಸಮಾಧಾನ ತೋಡಿಕೊಂಡಿದ್ದಾರೆ.
ಪರಿಹಾರದ ಹಣಕ್ಕಾಗಿ ರೈತರು ಚಿಕ್ಕಬಳ್ಳಾಪುರ ನಗರದ ತೋಟಗಾರಿಕಾ ಇಲಾಖಾ ಕಚೇರಿಗೆ ಬಂದು ನೋಡಿದರೆ ಪರಿಹಾರದ ಪಟ್ಟಿಯಲ್ಲಿ ತಮ್ಮ ಹೆಸರೇ ಇಲ್ಲವಂತೆ. ನಾನು ಹಣ್ಣು, ತರಕಾರಿ ಬೆಳೆದಿದ್ದೇನೆ, ಹೂವು ಬೆಳೆದಿದ್ದೇನೆ. ನಾನು ಗುಲಾಬಿ ಬೆಳೆದಿದ್ದೇನೆ ಆದರೆ ಪಾಹಣಿಯಲ್ಲಿ ರಾಗಿ ಅಂತ ಸೂಚಿಸಿದ್ದಾರೆ ಈಗ ನನ್ನ ಹೆಸರೇ ಫಲಾನುಭವಿ ಪಟ್ಟಿಯಲ್ಲಿ ಇಲ್ಲ ಬದಲಿಗೆ ಬೆಳೆ ಬೆಳೆಯದೇ ಬೀಡು ಬಿಟ್ಟಿರುವ ರೈತರನ್ನ ಫಲಾನುಭವಿಗಳನ್ನಾಗಿ ಮಾಡಿ ಅಸಲಿ ಬೆಳೆಗಾರರಿಗೆ ವಂಚಿಸುತ್ತಿದ್ದಾರೆ ಎಂದಿದ್ದಾರೆ.
ಇತ್ತ ಅಧಿಕಾರಿಗಳು, ಈಗಾಗಲೇ ಇಲಾಖೆಯಲ್ಲಿ ಯಾವ ರೈತರ ಗುರುತಿನ ನೋಂದಣಿ ಸಂಖ್ಯೆ ನಮೂದಾಗಿದೆಯೋ ಅಂತಹ ರೈತರಿಗೆ ಪರಿಹಾರದ ಹಣ ನೇರವಾಗಿ ಖಾತೆಗೆ ಜಮೆಯಾಗುತ್ತಿದೆ. ಇನ್ನೂ ಪಹಣಿಯಲ್ಲಿ ಬೆಳೆ ನಮೂದಾಗಿದ್ದರೆ ಅಂತಹವರು ಕೂಡ ದಾಖಲಾತಿಗಳನ್ನ ಸಲ್ಲಿಸಬಹುದಾಗಿದೆ.
ಆದರೆ ಬೆಳೆ ಸಮೀಕ್ಷೆ ಮಾಡುವ ವೇಳೆ ಕೆಲ ರೈತರು ಬೆಳೆ ಸಮೀಕ್ಷೆಗೆ ಒಳಪಟ್ಟಿಲ್ಲ. ಅಂತಹ ರೈತರಿಗೆ ಪರಿಹಾರದ ಹಣ ಸಿಕಿಲ್ಲ. ಯಾವ ಸರ್ವೆ ನಂಬರ್ ಭೂಮಿಯಲ್ಲಿ ಯಾವ ಬೆಳೆ ಬೆಳೆದಿದ್ದಾರೆ ಎಂಬುದನ್ನು ಬೆಳೆ ಸಮೀಕ್ಷೆ ವೆಬ್ ಸೈಟ್ಗೆ ರೈತರೇ ಅಪ್ಲೋಡ್ ಮಾಡಬಹುದು ಅವರಿಗೆ ಅನುಮತಿ ನೀಡಿದ್ದೇವೆ. ಪ್ರೈವೇಟ್ ರೆಸಿಡೆಂಟ್ ಎಂಬುವವರನ್ನು ರೆವಿನ್ಯೂ ಇಲಾಖೆಯಿಂದ ಕಳಿಸಿರುತ್ತಾರೆ, ಅವರು ರೈತರು ಬೆಳೆದಿರುವ ಮಾಹಿತಿಯನ್ನು ಪೋಟೋ ಸಮೇತೆ ಅಪ್ಲೋಡ್ ಮಾಡಬೇಕು ಅದರ ಆದಾರದ ಮೇಲೆ ರೈತರಿಗೆ ಹಣ ಸಂದಾಯ ಆಗುವುದು ಎನ್ನುತ್ತಾರೆ.
ಸರ್ಕಾರದ ಈ ನಡೆಯಿಂದ ರೈತರು ತೀವ್ರ ಅಸಮಾಧಾನ ಹೊರ ಹಾಕಿದ್ದು. ಯಾವುದೇ ಬೆಳೆ ಬೆಳೆಯದೆ ಇರೋರಿಗೆ ಪರಿಹಾರ ಸಿಗ್ತಾ ಇದೆ. ಆದರೆ ಅರ್ಹ ರೈತರಿಗೆ ಪರಿಹಾರ ಸಿಗ್ತಾ ಇಲ್ಲ ಎನ್ನುತ್ತಿದ್ದಾರೆ. ಸರ್ವೇ ಸಿಬ್ಬಂದಿ ಮಾಡಿದ ತಪ್ಪಿಗೆ ಅಸಲಿ ಬೆಳೆಗಾರರಿಗೆ ಪರಿಹಾರ ಸಿಗದಂತಾಗಿದೆ. ಇನ್ನಾದರೂ ಸರ್ಕಾರ ಆಗಿರೋ ತಪ್ಪು ಸರಿಪಡಿಸಿಕೊಂಡು ಅರ್ಹ ಪಲಾನುಭವಿಗಳಿಗೆ ಪರಿಹಾರ ಧನ ನೀಡಬೇಕು ಎಂದು ಕೇಳಿಕೊಂಡಿದ್ದಾರೆ.