ಛತ್ತೀಸ್ಗಢದ ರಾಯ್ಪುರದಲ್ಲಿ ರಕ್ಷಾ ಬಂಧನವನ್ನು ಆಚರಿಸಿ ತನ್ನ ಭಾವೀ ಪತಿಯೊಂದಿಗೆ ಹಿಂದಿರುಗುತ್ತಿದ್ದ 19 ವರ್ಷದ ಯುವತಿ ಹಾಗೂ ಆಕೆಯ ಅಪ್ರಾಪ್ತ ತಂಗಿಯ ಮೇಲೆ ಸ್ಥಳೀಯ ಬಿಜೆಪಿ ನಾಯಕನ ಪುತ್ರ ಹಾಗೂ ಸಂಗಡಿಗರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.
ಮೂವರು ಆರೋಪಿಗಳು ಮೊದಲು ಸಹೋದರಿಯರನ್ನು ಹಾಗೂ ಯುವಕನನ್ನು ಅಡ್ಡಗಟ್ಟಿದ್ದು, ಅವರಲ್ಲಿದ್ದ ನಗದು ಹಾಗೂ ಮೊಬೈಲ್ ಗಳನ್ನು ದೋಚಿದ್ದಾರೆ.
ಬಳಿಕ, ಉಳಿದ ಏಳು ಆರೋಪಿಗಳು ಸ್ಥಳಕ್ಕೆ ಬಂದಿದ್ದು, ಅಕ್ಕ-ತಂಗೊಯರೊಂದಿಗೆ ಇದ್ದ ಯುವಕನ ಮೇಲೆ ದಾರುಣವಾಗಿ ಹಲ್ಲೆ ನಡೆಸಿದ್ದಾರೆ.
ಇಬ್ಬರು ಸಹೋದರಿಯರನ್ನು ಮುಖ್ಯ ರಸ್ತೆಯಿಂದ ದೂರವಿರುವ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ದುಷ್ಕರ್ಮಿಗಳು, ಒಬ್ಬರಾದ ಮೇಲೆ ಒಬ್ಬರಂತೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ಬಳಿಕ ಅಲ್ಲಿಂದ ಆರೋಪಿಗಳು ಪರಾರಿಯಾಗಿದ್ದಾರೆ. ತೀವ್ರವಾಗಿ ದಾಳಿಗೊಳಗಾಗಿದ್ದ ಸಂತ್ರಸ್ತರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು, ಮಾಹಿತಿ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ, ಬಿಜೆಪಿ ಮುಖಂಡನ ಪುತ್ರ ಸೇರಿದಂತೆ ಹತ್ತು ಮಂದಿಯನ್ನು ಬಂಧಿಸಲಾಗಿದೆ.
ಸಾಮೂಹಿ ಅತ್ಯಾಚಾರ, ಪೋಕ್ಸೋ, ದರೋಡೆ, ಹಲ್ಲೆ ಸೇರಿದಂತೆ ಹಲವು ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದಾರೆ.
ಆರೋಪಿಗಳಲ್ಲಿ ಕೆಲವರು ಈಗಾಗಲೇ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದು, ಪ್ರಮುಖ ಆರೋಪಿಯಾಗಿರುವ ಪೂನಂ ಠಾಕೂರ್ ಸ್ಥಳೀಯ ಬಿಜೆಪಿ ನಾಯಕ ಲಕ್ಷ್ಮೀ ನಾರಾಯಣ ಸಿಂಗ್ ಅವರ ಪುತ್ರನಾಗಿದ್ದಾನೆ. ಜೈಲಿನಲ್ಲಿದ್ದ ಆತ ಕೆಲವು ದಿನಗಳ ಹಿಂದೆಯಷ್ಟೇ ಜಾಮೀನಿನ ಮೇಲೆ ಹೊರ ಬಂದಿದ್ದ.