ಪ್ರಗತಿಪರತೆಯನ್ನು ಪರ-ವಿರೋಧಿ ನೆಲೆಯಲ್ಲಿ ನಿಷ್ಕರ್ಷಿಸುವುದರಿಂದ ಸ್ವ ಹಿತಾಸಕ್ತಿಗಳು ಹೆಚ್ಚಾಗುತ್ತವೆ
ಕರ್ನಾಟಕದ ಮತದಾರರು ರಾಜ್ಯದ ಎಲ್ಲ ಪ್ರಗತಿಶೀಲ ಮನಸುಗಳಿಗೆ ಒಂದು ತೆರೆದ ವಾತಾವರಣವನ್ನು ಸೃಷ್ಟಿಸುವಂತಹ ನಿರ್ಣಾಯಕ ತೀರ್ಪು ನೀಡುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಮತ್ತೊಮ್ಮೆ ಆಡಳಿತ ನಡೆಸುವ ಅವಕಾಶವನ್ನು ನೀಡಿದ್ದಾರೆ. ಭೌತಿಕವಾಗಿ ಹಲವು ರೀತಿಯಲ್ಲಿ ನಿಯಂತ್ರಿಸಲ್ಪಟ್ಟು ಬೌದ್ಧಿಕವಾಗಿ ಉಸಿರುಗಟ್ಟಿದ ವಾತಾವರಣದಲ್ಲಿದ್ದ ರಾಜ್ಯದ ಸಾರ್ವಜನಿಕ ವಲಯ ಮತ್ತೊಮ್ಮೆ ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಸ್ವಾಯತ್ತತೆಗೆ ಮುಕ್ತವಾಗಿದೆ. ಹೊಸ ಕಾಂಗ್ರೆಸ್ ಸರ್ಕಾರ ತನ್ನ ಹಿಂದಿನ ಅವತಾರದಲ್ಲಿ ಮಾಡಿದ ತಪ್ಪುಗಳನ್ನೇ ಮತ್ತೆ ಮಾಡದೆ ಸಮಾಜಮುಖಿ ಆಡಳಿತವನ್ನು ನೀಡುತ್ತದೆ ಎಂಬ ಭರವಸೆಯೊಂದಿಗೆ ರಾಜ್ಯದ ಶೋಷಿತ ಸಮುದಾಯಗಳು, ದಲಿತ ಸಂಘಟನೆಗಳು, ರೈತಾಪಿ ಸಮುದಾಯ, ಮಹಿಳಾ ಸಂಘಟನೆಗಳು ಹಾಗೂ ಹಿಂದುಳಿದ ವರ್ಗಗಳು ರಾಜಕೀಯ ಮನ್ವಂತರಕ್ಕೆ ಪೂರಕವಾಗಿ ತಮ್ಮದೇ ಆದ ಕೊಡುಗೆಯನ್ನು ನೀಡಿವೆ.
ಕೋಮುವಾದ, ಜಾತಿ ದ್ವೇಷ, ಮತದ್ವೇ಼ಷ, ಮತಾಂಧತೆ ಹಾಗೂ ಕೆಲವೇ ಗುಂಪುಗಳ ಅನೈತಿಕ ಪೊಲೀಸ್ಗಿರಿಯಿಂದ ಬೇಸತ್ತಿದ್ದ ಜನತೆ ಕರ್ನಾಟಕದ ಸಮನ್ವಯ ಸಂಸ್ಕೃತಿ ಮತ್ತು ಸಾಂಸ್ಕೃತಿಕ ಸಹಬಾಳ್ವೆಯ ವಾತಾವರಣವನ್ನು ಕಾಪಾಡಿಕೊಳ್ಳುವ ಒಂದು ಗುರಿಯೊಂದಿಗೆ ಹೊಸ ಸರ್ಕಾರವನ್ನು ಆಯ್ಕೆ ಮಾಡಿದ್ದಾರೆ. ಜನತೆಯ ಈ ವಿಶ್ವಾಸವನ್ನು ಉಳಿಸಿಕೊಳ್ಳುವ ನೈತಿಕ ಜವಾಬ್ದಾರಿ ಕಾಂಗ್ರೆಸ್ ಸರ್ಕಾರದ ಮೇಲಿದೆ. ರಾಜಕೀಯ ಅರ್ಥದಲ್ಲಿ ವ್ಯಾಖ್ಯಾನಿಸಲಾಗುವ ಸೆಕ್ಯುಲರಿಸಂ ಅಥವಾ ಜಾತ್ಯತೀತತೆಯು ಇತ್ತೀಚೆಗೆ ಅರ್ಥಹೀನವಾಗುತ್ತಿರುವ ಸಂದರ್ಭದಲ್ಲಿ ರಾಜ್ಯದ ಜನತೆ ಬಯಸುವ ಸೌಹಾರ್ದಯುತ ವಾತಾವರಣ ಮತ್ತು ಕೂಡಿ ಬಾಳುವ ಸಾಂಸ್ಕೃತಿಕ ಪರಿಸರವನ್ನು ಖಚಿತಪಡಿಸುವ ನಿಟ್ಟಿನಲ್ಲಿ ಸಿದ್ಧರಾಮಯ್ಯ ಸರ್ಕಾರ ತನ್ನ ಆಡಳಿತ ನೀತಿಗಳನ್ನು ಜಾರಿಗೊಳಿಸಬೇಕಿದೆ. ಸರ್ಕಾರ ತನ್ನ ಆಳ್ವಿಕೆಯ ಆದ್ಯತೆಗಳನ್ನು ಕೇವಲ ಗ್ಯಾರಂಟಿಗಳಲ್ಲೇ ಕಂಡುಕೊಳ್ಳದೆ ತನ್ನ ಸಾಮಾಜಿಕ-ಸಾಂಸ್ಕೃತಿಕ ಜವಾಬ್ದಾರಿಯನ್ನೂ ಅರಿತು, ರಾಜ್ಯದ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಎಲ್ಲರನ್ನೂ ಒಳಗೊಳ್ಳುವ ಆಡಳಿತವನ್ನು ಖಚಿತಪಡಿಸಬೇಕಿದೆ.
ಒಳಗೊಳ್ಳುವಿಕೆಯ ಹಾದಿಗಳ ನಡುವೆ
ಈ ನಡುವೆ ನೆಮ್ಮದಿಯ ಬದುಕು ಬಯಸುವ ರಾಜ್ಯದ ಜನಸಾಮಾನ್ಯರ ನಡುವೆ ಸೋದರತ್ವವನ್ನು ಬೆಳೆಸುವುದಷ್ಟೇ ಅಲ್ಲದೆ ಈಗಾಗಲೇ ಮುಗಿಲೆತ್ತರಕ್ಕೆ ಎದ್ದುನಿಂತಿರುವ ಪ್ರತ್ಯೇಕತೆಯ ಗೋಡೆಗಳನ್ನು ಕೆಡವಿ “ ಎಲ್ಲರನ್ನೂ ಒಳಗೊಳ್ಳುವ ” ಸಾಂಸ್ಕೃತಿಕ ವಾತಾವರಣವನ್ನು ನಿರ್ಮಿಸುವ ಜವಾಬ್ದಾರಿ ನಾಗರಿಕ ಸಮಾಜದ ಮೇಲೆ ಇರುವುದನ್ನೂ ಗಂಭೀರವಾಗಿ ಪರಿಗಣಿಸಬೇಕಿದೆ. ಈ ನಾಗರಿಕ ಸಮಾಜದ ವಿವಿಧ ಗುಂಪುಗಳೇ ರಾಜ್ಯದಲ್ಲಿನ ರಾಜಕೀಯ ಬದಲಾವಣೆಯ ಹಿಂದಿನ ಪ್ರಧಾನ ಶಕ್ತಿಗಳಾಗಿ ಕಾರ್ಯನಿರ್ವಹಿಸಿರುವುದನ್ನು 2023ರ ಚುನಾವಣೆಗಳು ನಿರೂಪಿಸಿವೆ. ಹಾಗಾಗಿ ಮುಂದಿನ ದಿನಗಳಲ್ಲಿ ಹಾಲಿ ಸರ್ಕಾರ ಕೈಗೊಳ್ಳಬಹುದಾದ, ಜಾರಿಗೊಳಿಸುವ ಯಾವುದೇ ಜನವಿರೋಧಿ ಆಡಳಿತ ನೀತಿಗಳ ವಿರುದ್ಧ, ಅಪ್ರಜಾಸತ್ತಾತ್ಮಕ ಧೋರಣೆಯ ವಿರುದ್ಧ ಪ್ರತಿರೋಧ ವ್ಯಕ್ತಪಡಿಸುವ ವ್ಯವಧಾನ, ದಾರ್ಷ್ಟ್ಯ ಮತ್ತು ನೈತಿಕ ಹೊಣೆಗಾರಿಕೆ ಪ್ರಗತಿಪರ ಮನಸುಗಳ ಆದ್ಯತೆಯಾಗಬೇಕಿದೆ..
ಪ್ರಗತಿಪರತೆಯನ್ನು ವ್ಯಾಖ್ಯಾನಿಸುವ ಸಂದರ್ಭದಲ್ಲಿ ಎರಡು ಪ್ರಧಾನ ಧೋರಣೆಗಳನ್ನು ಅನುಸರಿಸಬೇಕಾಗುತ್ತದೆ.
ಮೊದಲನೆಯದು ಯಾವುದೇ ಒಂದು ಆಡಳಿತ ವ್ಯವಸ್ಥೆಯ ಅಥವ ರಾಜಕೀಯ ವಾತಾವರಣದ “ಪರ-ವಿರೋಧ”ದ ನೆಲೆಯಲ್ಲಿ ಪ್ರಗತಿಪರತೆಯನ್ನು ನಿಷ್ಕರ್ಷಿಸುವುದರಿಂದ ಸಮಾಜದ ಸರ್ವತೋಮುಖ ಪ್ರಗತಿ ಬಯಸುವ, ಎಲ್ಲರನ್ನೂ ಒಳಗೊಳ್ಳುವ ಸಮ ಸಮಾಜ ನಿರ್ಮಾಣದ ಕನಸು ಹೊತ್ತ ಬೌದ್ಧಿಕ ವರ್ಗವು ಸಂಕುಚಿತ ಸಿಕ್ಕುಗಳಲ್ಲಿ ಸಿಲುಕಿಬಿಡುವ ಅಪಾಯ ಇರುತ್ತದೆ. ಜಾತಿ-ವರ್ಗ ಅಥವಾ ಲಿಂಗತ್ವವನ್ನಾಧರಿಸಿದ ಸಾಂಘಿಕ ಚೌಕಟ್ಟುಗಳು ಸಾಮಾನ್ಯವಾಗಿ ಸಮಷ್ಟಿ ಪ್ರಜ್ಞೆಯೊಂದಿಗೇ ರೂಪುಗೊಳ್ಳುವುದರಿಂದ ಇಲ್ಲಿ ವ್ಯಕ್ತವಾಗುವ ಪ್ರಗತಿಪರ ಧೋರಣೆ ವೈಚಾರಿಕತೆ, ವೈಜ್ಞಾನಿಕ ಪ್ರಜ್ಞೆ ಹಾಗೂ ಸಮಾನತೆಯ ಆಶಯಗಳೊಂದಿಗೆ ಕೂಡಿರಬೇಕಾಗುತ್ತದೆ. ಅಧಿಕಾರ ರಾಜಕಾರಣದಲ್ಲಿ ಈ ಆಶಯಗಳಿಗೆ ವಿರುದ್ಧವಾದ ಬೆಳವಣಿಗೆಗಳನ್ನು ಕಂಡಾಗಲೆಲ್ಲಾ ಈ ಸಾಂಘಿಕ ಶಕ್ತಿಗಳು ತಮ್ಮ ಪ್ರತಿರೋಧದ ಧ್ವನಿಯನ್ನು ದಾಖಲಿಸಬೇಕಾಗುತ್ತದೆ. ಇಲ್ಲಿ ಸಂಘಟಿತವಾಗುವ ಪ್ರಗತಿಶೀಲ ಮನಸುಗಳು ಯಾವುದೇ ರೀತಿಯ ಸಾಮಾಜಿಕ-ಸಾಂಸ್ಕೃತಿಕ ಅನ್ಯಾಯ ಅಥವಾ ದೌರ್ಜನ್ಯದ ವಿರುದ್ಧ ಸಿಡಿದೇಳುವ ಧೋರಣೆಯನ್ನು ರೂಢಿಸಿಕೊಂಡಿರುತ್ತವೆ.
ಹಾಗಾಗಿ ಇಲ್ಲಿ ವ್ಯಕ್ತವಾಗುವ “ಪರ-ವಿರೋಧಿ” ನೆಲೆಗಳು ಮೂಲತಃ ರಾಜಕೀಯ ಅಧಿಕಾರ ಕೇಂದ್ರಗಳಿಂದ ಪ್ರಭಾವಿತವಾಗದಂತೆ ಎಚ್ಚರವಹಿಸುವುದು ನಮ್ಮ ಆದ್ಯತೆಯಾಗಬೇಕಾಗುತ್ತದೆ. ರಾಜಕೀಯವಾಗಿ ನಿರ್ವಚಿಸಲ್ಪಡುವ ಹಾಗೂ ಈ ಸಾಂಘಿಕ ಚೌಕಟ್ಟುಗಳಲ್ಲಿ ನಿಷ್ಕರ್ಷೆಗೊಳಗಾಗುವ ಸೆಕ್ಯುಲರಿಸಂ ಅಥವಾ ಜಾತ್ಯತೀತತೆಯ ವ್ಯಾಖ್ಯಾನಗಳು ಸಹಜವಾಗಿಯೇ ಭಿನ್ನವಾಗಿರುತ್ತವೆ. “ಎಲ್ಲರ ಒಳಗೊಳ್ಳುವಿಕೆ ” ಎನ್ನುವ ಒಂದು ಉದಾತ್ತ ಪ್ರಗತಿಶೀಲ ಧೋರಣೆ ಇಲ್ಲಿ ಮುಖ್ಯವಾಗುತ್ತದೆ. ಭಿನ್ನ ಸಿದ್ಧಾಂತಗಳನ್ನು ಅಥವಾ ಸೈದ್ಧಾಂತಿಕ ನೆಲೆಗಳೊಡನೆ ಮುಖಾಮುಖಿಯಾಗುವ ಸಂದರ್ಭದಲ್ಲಿ ಪ್ರಗತಿಪರ ಶಕ್ತಿಗಳ ನಡುವೆಯೂ ಕಂಡುಬರುವ ತಾತ್ವಿಕ ಸಂಘರ್ಷಗಳು ಸಾಂಘಿಕ ಐಕ್ಯತೆ ಮತ್ತು ಐಕಮತ್ಯಕ್ಕೆ ಭಂಗ ಉಂಟುಮಾಡದಂತೆ ಎಚ್ಚರ ವಹಿಸಬೇಕಾಗುತ್ತದೆ. ಹಾಗೆಯೇ ಒಳಗೊಳ್ಳುವಿಕೆಯ ಪ್ರಜ್ಞೆಯ ನೆಲೆಯಲ್ಲೇ ಭಿನ್ನ ಸಿದ್ಧಾಂತಗಳನ್ನು ಒಳಗೊಳ್ಳುವ, ಅನುಸಂಧಾನ ನಡೆಸುವ, ಪರಾಮರ್ಶಿಸುವ ಔನ್ನತ್ಯವನ್ನೂ ಸಹ ರೂಢಿಸಿಕೊಳ್ಳಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ಅನ್ಯ ಸಿದ್ಧಾಂತಗಳ ನಿರಾಕರಣೆಯ ಮನಸ್ಥಿತಿ ಕೆಲವೊಮ್ಮೆ ಪ್ರಗತಿಶೀಲರಲ್ಲೂ ಸಹ ಬಹಿಷ್ಕರಿಸುವ ಧೋರಣೆಗೆ ಕಾರಣವಾಗುತ್ತದೆ.
ಭಿನ್ನ ತಾತ್ವಿಕ ನೆಲೆಗಳನ್ನು ಒಪ್ಪದಿರುವುದಕ್ಕೂ, ನಿರಾಕರಿಸುವುದಕ್ಕೂ, ಬಹಿಷ್ಕರಿಸುವುದಕ್ಕೂ ನಡುವೆ ಇರುವ ಸೂಕ್ಷ್ಮ ಎಳೆಯನ್ನು ಗುರುತಿಸುವುದು ಇಲ್ಲಿ ಮುಖ್ಯವಾಗುತ್ತದೆ. ಇತ್ತೀಚೆಗೆ ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಖ್ಯಾತ ಉದ್ಯಮಿ ಮತ್ತು ಪತ್ರಕರ್ತ ವಿಶ್ವೇಶ್ವರ ಭಟ್ಟ ಅವರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಬಗ್ಗೆ ನಡೆದ ಸಂವಾದಗಳು ಹಾಗೂ ಚಕ್ರವರ್ತಿ ಸೂಲಿಬೆಲೆ ಅವರನ್ನು ಕಾಲೇಜಿನ ಕಾರ್ಯಕ್ರಮವೊಂದಕ್ಕೆ ಆಹ್ವಾನಿಸುವುದಕ್ಕೆ ವ್ಯಕ್ತವಾದ ವಿರೋಧ ಈ ಎರಡೂ ಪ್ರಸಂಗಗಳು ನಮ್ಮ ನಡುವಿನ ಸೂಕ್ಷ್ಮತೆಯನ್ನು ಹೊರಗೆಡಹುತ್ತವೆ. ಸೂಲಿಬೆಲೆ ಅವರ ಸೈದ್ಧಾಂತಿಕ ನೆಲೆಯನ್ನು ಒಪ್ಪದಿರುವ ಕಾರಣಕ್ಕೇ ಸಾರ್ವಜನಿಕ ಸಮಾರಂಭವೊಂದರಲ್ಲಿ ಅವರ ಭಾಗವಹಿಸುವಿಕೆಯನ್ನೇ ಬಹಿಷ್ಕರಿಸುವಂತೆ ಒತ್ತಾಯಿಸುವುದು ಪ್ರಗತಿಪರತೆ ಎನಿಸಿಕೊಳ್ಳುವುದಿಲ್ಲ. ನಿರಂಕುಶತ್ವ ಎನಿಸಿಕೊಳ್ಳುತ್ತದೆ. ಎಲ್ಲ ರೀತಿಯ ಆಲೋಚನೆಗಳಿಗೂ ಮುಕ್ತ ಅವಕಾಶ ನೀಡುವ ಪ್ರಜಾಸತ್ತಾತ್ಮಕ ಧೋರಣೆಗೆ ಇದು ತದ್ವಿರುದ್ಧವಾಗಿ ಕಾಣುತ್ತದೆ. ಬಲಪಂಥೀಯ ರಾಜಕಾರಣದ ಈ ಧೋರಣೆಯ ಪರಿಣಾಮವೇ ಇಂದು ದೇಶಾದ್ಯಂತ ಹಾಸ್ಯ ಕಲಾವಿದರೂ, ಸಾಹಿತಿಗಳೂ ಬಹಿಷ್ಕೃತರಾಗುತ್ತಿದ್ದಾರೆ. ವೈಚಾರಿಕತೆ ಮತ್ತು ವೈಜ್ಞಾನಿಕ ನೆಲೆಯ ಪ್ರಗತಿಪರತೆ ಈ ಧೋರಣೆಗೆ ಬಲಿಯಾಗುವುದರ ವಿರುದ್ಧ ನಾವು ಎಚ್ಚರವಹಿಸಬೇಕಿದೆ.
ಮುಂದುವರೆಯುತ್ತದೆ,,,,,