ರಾಜ್ಯ ಸರ್ಕಾರದ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ವಿರುದ್ದ ಲಂಚದ ಆರೋಪ ಕೇಳಿಬಂದಿದೆ. ಸಚಿವರ ವಿರುದ್ಧ ಲಂಚದ ಆರೋಪ ರಾಜಭವನ ಅಂಗಳಕ್ಕೆ ತಲುಪಿದೆ. ಸ್ವತಃ ಮಂಡ್ಯ ಜಿಲ್ಲೆಯ ಎಲ್ಲಾ ತಾಲೂಕುಗಳ ಕೃಷಿ ಇಲಾಖೆ ಸಹಾಯಕ ನಿರ್ದೇಶಕರು ದೂರು ನೀಡಿದ್ದಾರೆ ಎನ್ನಲಾಲಾಗಿದೆ. ರಾಜ್ಯಪಾಲರಿಗೆ ಸಲ್ಲಿಕೆಯಾಗಿದೆ ಎನ್ನಲಾಗಿರುವ ದೂರಿನಲ್ಲಿ ಮಂಡ್ಯ ಜಿಲ್ಲೆಯ 7 ತಾಲ್ಲೂಕಿನ ಕೃಷಿ ಸಹಾಯಕ ನಿರ್ದೇಶಕರ ಹೆಸರು ಉಲ್ಲೇಖ ಆಗಿದೆ. ಪ್ರತಿ ನಿರ್ದೇಶಕರು ಎಷ್ಟು ಹಣ ನೀಡಬೇಕು..? ಎಂದು ದೂರಿನಲ್ಲಿ ನಮೂದು ಮಾಡಲಾಗಿದೆ. ಜಿಲ್ಲೆಯ ಎಲ್ಲಾ ಸಹಾಯಕ ನಿರ್ದೇಶಕರ ಸಹಿ ಇರುವ ದೂರನ್ನು ರಾಜ್ಯಪಾಲರಿಗೆ ಕಳುಹಿಸಲಾಗಿದ್ದು, ಕೃಷಿ ಇಲಾಖೆಯ ಸಿಬ್ಬಂದಿ ರಮೇಶ್ ಎಂಬುವವರ ಫ್ರಮ್ ಅಡ್ರಸ್ ಅನ್ನು ಎನ್ವಲಪ್ ಕವರ್ ಮೇಲೆ ಬರೆಯಲಾಗಿದೆ.
ಅಧಿಕಾರಿಗಳಿಂದ 6 ರಿಂದ 8 ಲಕ್ಷ ಹಣಕ್ಕೆ ಡಿಮ್ಯಾಂಡ್..!
ರಾಜಭವನದ ಕದ ತಟ್ಟಿರುವ ಅಧಿಕಾರಿಗಳು ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧ ಲಂಚ ಬೇಡಿಕೆ ಆರೋಪ ಮಾಡಿದ್ದಾರೆ. 6 ರಿಂದ 8 ಲಕ್ಷ ರೂಪಾಯಿ ನೀಡುವಂತೆ ಕೃಷಿ ಸಚಿವ ಚಲುವರಾಯಸ್ವಾಮಿ ಒತ್ತಡ ಹಾಕಿರುವ ಬಗ್ಗೆ ಪತ್ರದಲ್ಲಿ ಆರೋಪ ಮಾಡಿದ್ದಾರೆ. ಲಂಚದ ಅನಿಷ್ಟ ಪದ್ದತಿಗೆ ಕಡಿವಾಣ ಹಾಕದಿದ್ದರೆ ಅಧಿಕಾರಿಗಳು ಕುಟುಂಬ ಸಮೇತ ವಿಷ ಕುಡಿಯುವುದಾಗಿ ದೂರಿನ ಪ್ರತಿಯಲ್ಲಿ ಉಲ್ಲೇಖ ಮಾಡಲಾಗಿದೆ. ರಾಜ್ಯಪಾಲರ ಕಚೇರಿಯಿಂದ ಸರ್ಕಾರಕ್ಕೆ ಈ ಬಗ್ಗೆ ಪತ್ರ ಬರೆದಿದ್ದು, ರಾಜ್ಯಪಾಲರ ಅಧೀನ ಕಾರ್ಯದರ್ಶಿ ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು, ಲಂಚದ ಬಗ್ಗೆ ಅಧಿಕಾರಿಗಳು ಬರೆದಿರುವ ಪತ್ರದ ಬಗ್ಗೆ ಕ್ರಮವಹಿಸುವಂತೆ ಮುಖ್ಯಕಾರ್ಯದರ್ಶಿಗೆ ರಾಜಭನದಿಂದ ಪತ್ರದ ಬರೆದು ಸೂಚನೆ ನೀಡಲಾಗಿದೆ. ಇದೀಗ ರಾಜ್ಯಪಾಲರ ಕಚೇರಿಯಿಂದ ಪತ್ರ ಬಂದಿರುವ ಹಿನ್ನೆಲೆಯಲ್ಲಿ ಸರ್ಕಾರ ತನಿಖೆ ನಡೆಸಬೇಕಾದ ಅನಿವಾರ್ಯತೆಗೆ ಸಿಲುಕಿಕೊಂಡಿದೆ.
![](https://pratidhvani.com/wp-content/uploads/2023/08/WhatsApp-Image-2023-08-07-at-6.57.36-PM-806x1024.jpeg)
ಅದೊಂದು ಫೇಕ್ ಲೆಟರ್ ಎಂದು ಷರಾ ಬರೆದ ಸಚಿವರು..!
ಕೃಷಿ ಇಲಾಖೆ ADAಗಳು ಸಚಿವ ಚಲುವರಾಯಸ್ವಾಮಿ ವಿರುದ್ದ ದೂರು ನೀಡಿರುವ ಪ್ರಕರಣದ ಬಗ್ಗೆ ಸಚಿವರು ಮಾತನಾಡಿದ್ದು, ಆ ಲೆಟರ್ ಫೇಕ್ ಲೆಟರ್ ಎಂದಿದ್ದಾರೆ ಕೃಷಿ ಸಚಿವ ಚಲುವರಾಯಸ್ವಾಮಿ. ಮಂಡ್ಯದಲ್ಲಿ ಮಾತನಾಡಿರುವ ಕೃಷಿ ಸಚಿವ ಚಲುವರಾಯಸ್ವಾಮಿ, ನಾನು ಆ ಪತ್ರದ ವಿಚಾರವಾಗಿ ಕೃಷಿ ಇಲಾಖೆ ಜೆಡಿ ಜೊತೆ ಮಾತನಾಡಿದ್ದೇನೆ. ಆ ರೀತಿ ಯಾರು ಕೂಡ ದೂರು ನೀಡಿಲ್ಲ ಎಂದು ನನಗೆ ಮಾಹಿತಿ ನೀಡಿದ್ದಾರೆ. ಬಹಳ ಜನ ಈ ರೀತಿ ವಿಚಾರಗಳನ್ನ ಹುಡುಕಿ ಹುಡುಕಿ ನನ್ನ ವಿರುದ್ಧ ಕೆಲಸ ಮಾಡ್ತಿದ್ದಾರೆ. ನನ್ನ ಇಲಾಖೆಯ ಕಾರ್ಯದರ್ಶಿಗಳಿಗೂ ತನಿಖೆ ಮಾಡಲು ಹೇಳುತ್ತೇನೆ. ಮೊದಲು ಆ ಲೆಟರ್ ಬರೆದಿರೋದು ಸತ್ಯವಾ..? ಅಥವಾ ಫೇಕಾ..? ಅಂತ ವಿಚಾರಿಸಿ ನಂತರ ತನಿಖೆ ಮಾಡಿಸ್ತೇವೆ. ಈ ರೀತಿ ನನ್ನ ವಿರುದ್ದ ಪಿತೂರಿ ಮಾಡುತ್ತಿದ್ರೆ ನಾನು ಹೆಚ್ಚು ಪ್ರಕಾಶಮಾನವಾಗ್ತಿನಿ ಎಂದಿದ್ದಾರೆ. ರಾಜ್ಯದಲ್ಲೇ ನಾನು ಆ ರೀತಿ ಯಾರ ಹತ್ರನೂ ನಡೆದುಕೊಂಡಿಲ್ಲ, ಇನ್ನು ನನ್ನ ಜಿಲ್ಲೆಯಲ್ಲಿ ಹಾಗೆ ನಡೆದುಕೊಳ್ತಿನಾ.? ಎಂದು ಮರು ಪ್ರಶ್ನೆ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ ; ಪಕ್ಷ ಸಂಘಟನೆಗಾಗಿ ಜೆಡಿಎಸ್ ಸಂಘಟಿತ ಹೋರಾಟ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ
ಮಂಡ್ಯದಲ್ಲಿ ಕಾಂಗ್ರೆಸ್ನಿಂದಲೇ ಪತ್ರದ ಬಗ್ಗೆ ಎಸ್ಪಿಗೆ ದೂರು..!
ಮಂಡ್ಯ ಜಿಲ್ಲೆಯ ಕೃಷಿ ಅಧಿಕಾರಿಗಳು ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿರುವ ಪ್ರಕರಣದಲ್ಲಿ ಕಾಂಗ್ರೆಸ್ ಸ್ವಯಂಪ್ರೇರಿತವಾಗಿ ದೂರು ನೀಡಿದೆ. ಸುಳ್ಳು ದೂರು ಪತ್ರ ನೀಡಲಾಗಿದೆ ಎಂದು ಮಂಡ್ಯ ಎಸ್ಪಿಗೆ ಮಂಡ್ಯ ಜಿಲ್ಲೆಯ ಶಾಸಕರು ದೂರು ಸಲ್ಲಿಸಿದ್ದಾರೆ. ಪ್ರಕರಣದ ಬಗ್ಗೆ ತನಿಖೆ ನಡೆಸಿ ಎಂದು ಮಂಡ್ಯ ಎಸ್ಪಿಗೆ ಲಿಖಿತ ದೂರು ನೀಡಿದ್ದು, ಮಂಡ್ಯ ಶಾಸಕ ರವಿಕುಮಾರ್ ಗೌಡ, ಶಾಸಕ ರಮೇಶ್ ಬಂಡಿಸಿದ್ದೇಗೌಡ, ಎಂಎಲ್ಸಿ ಮಧು ಜಿ ಮಾದೇಗೌಡ, ಎಂಎಲ್ಸಿ ದಿನೇಶ್ ಗೂಳಿ ಗೌಡ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹ ಮಾಡಿದ್ದಾರೆ. ಕೃಷಿ ಅಧಿಕಾರಿಗಳು ರಾಜ್ಯಪಾಲರಿಗೆ ದೂರು ನೀಡಿದ ವಿಚಾರದ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿದ್ದು, ತನಿಖೆ ಮಾಡಿಸೋಣ ಬಿಡಿ, ಪಾಪ ಅವರಿಗೆ ಸಹಿಸಿಕೊಳ್ಳಲು ಆಗ್ತಿಲ್ಲ. ನಾವು ಏಳಕ್ಕೆ ಆರು ಗೆದ್ದಿದ್ದೀವಲ್ಲ ಅದಕ್ಕೆ ಸಹಿಸಿಕೊಳ್ಳಲು ಆಗ್ತಿಲ್ಲ, ಹೊಟ್ಟೆಕಿಚ್ಚು ಜಲಸಿಗೆ ಅಸೂಯೆಗೆ ಮದ್ದಿಲ್ಲ ಎಂದು ಜೆಡಿಎಸ್ ಕಡೆಗೆ ಬೊಟ್ಟು ಮಾಡಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರಕ್ಕೆ ಮುಜುಗರ ತಂದಿಟ್ಟಿದೆ ಪತ್ರ ಅನ್ನೋದು ಮಾತ್ರ ಸತ್ಯ.
ಕೃಷ್ಣಮಣಿ