ಅಗತ್ಯ ಇರುವಷ್ಟು ಲಸಿಕೆ ಪೂರೈಸುವ ವಿಷಯದಲ್ಲಿ ಮತ್ತು ಆಕ್ಸಿಜನ್ ಗಳ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಕಾದಾಟ ಆಗಿದ್ದಾಯ್ತು. ಈಗ ಕರೋನಾ ಲಸಿಕೆಗೆ ಯಾರು ಹಣ ನೀಡಬೇಕೆಂಬ ವಿಷಯದ ಸರದಿ. ಕರೋನಾ ಎಂಬುದನ್ನು ರಾಷ್ಟ್ರೀಯ ದುರಂತ ಎಂದು ಘೋಷಿಸುವಂತೆ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವರು ಒತ್ತಾಯ ಮಾಡಿದ್ದಾರೆ. ಕೇಂದ್ರ ಸರ್ಕಾರ ಕೇಳಿಸಿಕೊಂಡಿಲ್ಲ. ಈಗ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ. ಜೊತೆಗೆ ಕರೋನಾ ಲಸಿಕೆಗಳನ್ನು ರಾಷ್ಟ್ರೀಯ ಸ್ವತ್ತುಗಳು ಎಂದು ಘೋಷಿಸಿ ಅವುಗಳನ್ನು ರಾಜ್ಯಗಳಿಗೆ ಉಚಿತವಾಗಿ ನೀಡಿ ಎಂಬ ಹಕ್ಕೊತ್ತಾಯ ಮಂಡಿಸಿದ್ದಾರೆ. ಅದಕ್ಕಾಗಿ ಕೇಂದ್ರ ಸರ್ಕಾರ ತನ್ನ ಕರೋನಾ ಲಸಿಕೆ ವಿತರಣಾ ನೀತಿಯನ್ನು ಬದಲಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಪ್ರತಿಪಕ್ಷದಲ್ಲಿ ಇದ್ದ ಮಾತ್ರಕ್ಕೆ ಪಿಣರಾಯಿ ವಿಜಯನ್ ಕೇಂದ್ರ ಸರ್ಕಾರದ ಎಲ್ಲಾ ನಡೆಗಳನ್ನು ವಿರೋಧ ಮಾಡಿಲ್ಲ. 18 ವರ್ಷ ತುಂಬಿದವರೆಲ್ಲರಿಗೂ ಕರೋನಾ ಲಸಿಕೆ ನೀಡಬೇಕೆಂಬ ಕೇಂದ್ರ ಸರ್ಕಾರದ ನಡೆಯನ್ನು ಸ್ವಾಗತಿಸಿದ್ದಾರೆ. ಅದರ ಜೊತೆಜೊತೆಗೆ ‘ರಾಜ್ಯ ಸರ್ಕಾರಗಳು ಶೇಕಡಾ 50ರಷ್ಟು ಲಸಿಕೆಗಳನ್ನು ಖರೀದಿ ಮಾಡಲು ಅನುಮತಿ ಕೊಟ್ಟಿರುವ ಕ್ರಮವನ್ನು ಸ್ವಾಗತಿಸಿ ಅದಕ್ಕೆ ದುಡ್ಡನ್ನು ಕೇಂದ್ರ ಸರ್ಕಾರ ಪಾವತಿಸಬೇಕು’ ಎಂದಿದ್ದಾರೆ. ಈ ಸಂದರ್ಭದಲ್ಲಿ ಪಿಣರಾಯಿ ವಿಜಯನ್ ಪ್ರಸ್ತಾಪಿಸಿರುವ ವಿಚಾರಗಳು ಚರ್ಚೆಗೆ ಅವಕಾಶ ಮಾಡಿಕೊಟ್ಟಿವೆ. ಒಂದು, ಕರೋನಾ ಲಸಿಕೆಯನ್ನು ರಾಷ್ಟ್ರೀಯ ಸ್ವತ್ತುಗಳು ಎಂದು ಘೋಷಿಸುವ ವಿಚಾರ. ಇನ್ನೊಂದು ಅವುಗಳನ್ನು ರಾಜ್ಯಗಳಿಗೆ ಉಚಿತವಾಗಿ ನೀಡಬೇಕೆನ್ನುವ ವಿಚಾರ. (ಅಥವಾ ರಾಜ್ಯ ಸರ್ಕಾರಗಳು ಖರೀದಿಸುವ ಲಸಿಕೆಗಳಿಗೆ ಕೇಂದ್ರ ಸರ್ಕಾರ ಹಣ ಪಾವತಿಸುವ ವಿಚಾರ)

ಇತ್ತೀಚೆಗೆ ಮಾಜಿ ಪ್ರಧಾನ ಮಂತ್ರಿ, ರಾಜಕಾರಣಿ ಎನ್ನುವುದಕ್ಕಿಂತ ಜಗತ್ತು ಕಂಡ ಶ್ರೇಷ್ಠ ಅರ್ಥಶಾಸ್ತ್ರಜ್ಞ, ಮೇಧಾವಿ ಡಾ. ಮನಮೋಹನ್ ಸಿಂಗ್ ಅವರು ಕರೋನಾ ಕಷ್ಟಕಾಲ ನಿಭಾಯಿಸಲು ನೀಡಿದ ಸಲಹೆಗಳನ್ನು (ಟೀಕೆಗಳಲ್ಲ) ಕೂಡ ಕೇಂದ್ರ ಸರ್ಕಾರ ಮುಕ್ತ ಮನಸ್ಸಿನಿಂದ ಸ್ವೀಕರಿಸಲಿಲ್ಲ. ಕೇಂದ್ರ ಆರೋಗ್ಯ ಮಂತ್ರಿ ಡಾ. ಹರ್ಷವರ್ಧನ್ ಕಟುವಾಗಿ ಟೀಕಿಸಿ ಪ್ರತಿಕ್ರಿಯಿಸಿದರು. ಹೀಗಾಗಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪ್ರಸ್ತಾಪಿಸಿರುವ ವಿಷಯಗಳು ಪ್ರಸ್ತುತವೇ ಆದರೂ ಕೇಂದ್ರ ಸರ್ಕಾರ ಯಾವ ರೀತಿ ಪ್ರತಿಕ್ರಿಯಿಸುತ್ತೆ ಎಂಬುದನ್ನು ಕಾದುನೋಡಬೇಕು.
ಕರೋನಾ ವಿಷಯವನ್ನು ಯಾವ ಕಾರಣಕ್ಕಾಗಿ ರಾಷ್ಟ್ರೀಯ ದುರಂತ ಎಂದು ಘೋಷಿಸಬೇಕು ಎಂಬುದನ್ನು ತಿಳಿಯಲು ಪ್ರಧಾನಮಂತ್ರಿ ನರೇಂದ್ರ ಮೋದಿ ಬಹಳ ಅಧ್ಯಯನ ನಡೆಸಬೇಕಾಗಿಲ್ಲ. ದೇಶದಲ್ಲಿ ಮೊದಲ ಬಾರಿ ಲಾಕ್ಡೌನ್ ಘೋಷಣೆ ಮಾಡುವಾಗ ಅವರೇ ಮಾಡಿದ್ದ ಭಾಷಣವನ್ನು ಒಮ್ಮೆ ಕೇಳಿಸಿಕೊಳ್ಳಬೇಕಷ್ಟೇ. ಆಗ ಅವರೇ ಈ ಕರೋನಾ ಕಾಲವನ್ನು ಯುದ್ಧಕಾಲಕ್ಕೆ, ಅದೂ ಮಹಾಭಾರತದ ಯುದ್ಧಕ್ಕೆ ಹೋಲಿಸಿದ್ದಾರೆ. ಯುದ್ಧ ಕಾಲವನ್ನು ರಾಷ್ಟ್ರೀಯ ವಿಪತ್ತಿನ ದಿನಗಳೆಂದು ಘೋಷಿಸಿದ ಉದಾಹರಣೆಗಳು ವಿಫುಲವಾಗಿ ಲಭ್ಯವಾಗುತ್ತವೆ. ಭಾರತದಲ್ಲಿ ಮಾತ್ರವಲ್ಲ, ಜಗತ್ತಿನಾದ್ಯಂತ ಸಿಗುತ್ತವೆ.
ಕರೋನಾ ರೋಗದಿಂದಲೇ ಸುಮಾರು 2 ಲಕ್ಷ ಜೀವ ಕಳೆದುಕೊಂಡಿದ್ದಾರೆ. ನರೇಂದ್ರ ಮೋದಿ ಅವರು ಇದ್ದಕ್ಕಿದ್ದಂತೆ ಲಾಕ್ಡೌನ್ ಘೋಷಿಸಿದ ಪರಿಣಾಮ ಬೀದಿಗೆ ಬಿದ್ದ ವಲಸೆ ಕಾರ್ಮಿಕರು, ದಿನಗೂಲಿನೌಕರರ ಪೈಕಿ ಅನ್ನ-ನೀರು ಸಿಗದೆ ಪ್ರಾಣ ಕಳೆದಕೊಂಡವರ ಲೆಕ್ಕ ಸಿಕ್ಕಿಲ್ಲ. ಆಗ ಪರೋಕ್ಷವಾಗಿ ಪ್ರಾಣಕಳೆದುಕೊಂಡವರ ಮಾಹಿತಿ ಕೂಡ ಸರ್ಕಾರದ ಬಳಿ ಇಲ್ಲ. ಹೀಗೆ ಲಕ್ಷಾಂತರ ಜನರ ಜೀವ ಹಾನಿಯಾದದ್ದು ರಾಷ್ಟ್ರೀಯ ವಿಪತ್ತಲ್ಲವೇ?

ಇರಲಿ, ಕರೋನಾ ಪರಿಸ್ಥಿತಿ ನಿರ್ವಹಣೆಗೆ ಕೇಂದ್ರ ಸರ್ಕಾರ ‘ಪಿಎಂ ಕೇರ್ಸ್ ಫಂಡ್’ ಸೃಷ್ಟಿ ಮಾಡಿದೆ. ಅದರಲ್ಲಿ ಲಕ್ಷ ಕೋಟಿ ರೂಪಾಯಿಗಳ ಸಂಗ್ರಹವಾಗಿದೆ. ರಾಜ್ಯ ಸರ್ಕಾರಗಳಿಗೆ, ವಿವಿಧ ಸಂಘ ಸಂಸ್ಥೆಗಳಿಗೆ ಹೋಗುತ್ತಿದ್ದ ಹಣವನ್ನೆಲ್ಲಾ ಪಿಎಂ ಕೇರ್ಸ್ ಫಂಡ್ ಬಾಚಿಕೊಂಡಿದೆ. ಸಂಸದರ ನಿಧಿ, ಸಂಸದರು, ಸಚಿವರು, ಕೇಂದ್ರ ಸರ್ಕಾರದ ನೌಕರರು, ಖಾಸಗಿ ನೌಕರರ ಸಂಬಳದಲ್ಲೂ ಪಿಎಂ ಕೇರ್ಸ್ ಫಂಡ್ ತುಂಬಿಕೊಂಡಿದೆ. ಮೇಲಾಗಿ ರಾಜ್ಯಗಳ ಪಾಲಿಗೆ ಅರ್ಹವಾಗಿ ನೀಡಬೇಕಾಗಿದ್ದ ಜಿಎಸ್ ಟಿ ಪಾಲನ್ನು ಸರಿಯಾಗಿ ಕೊಟ್ಟಿಲ್ಲ. ಕರೋನಾ ಎನ್ನುವ ನೆಪದಲ್ಲಿ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಹಣಕಾಸು ಆಯೋಗದ ಅನುದಾನದಲ್ಲೂ ಕಡಿತ ಮಾಡಿದೆ. ಬೇರೆ ಬೇರೆ ಹೆಡ್ ಗಳ ಹಣ ಬಿಡುಗಡೆ ಮಾಡಿಲ್ಲ.
ಬರುವ ಹಣವನ್ನೆಲ್ಲಾ ಕೇಂದ್ರ ಸರ್ಕಾರ ತೆರಿಗೆ ಮತ್ತು ದೇಣಿಗೆ ರೂಪದಲ್ಲಿ ತಾನು ಪಡೆದುಕೊಂಡು, ಕರೋನಾ ಲಸಿಕೆಗಳಿಗೆ ರಾಜ್ಯ ಸರ್ಕಾರಗಳನ್ನು ನೀವು ಖರ್ಚು ಮಾಡಿ ಎಂದು ಹೇಳುತ್ತಿದೆ. ರಾಜಕೀಯ ಕಾರಣಗಳಿಗೆ ಬಿಜೆಪಿ ಆಡಳಿತ ಇರುವ ಮುಖ್ಯಮಂತ್ರಿಗಳು ಈ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಪ್ರತಿಪಕ್ಷಗಳು ಆಳ್ವಿಕೆ ನಡೆಸುತ್ತಿರುವ ರಾಜ್ಯಗಳ ಮಾತಿಗೆ, ಅಳಲಿಗೆ, ಆಗ್ರಹಕ್ಕೆ ಕೇಂದ್ರ ಸರ್ಕಾರ ಕಿಮ್ಮತ್ತು ಕೊಡುತ್ತಿಲ್ಲ. ಕರೋನಾ ವಿಷಯದಲ್ಲಿ ತಾನು ದುಡ್ಡು ಪಡೆದು ಲಸಿಕೆಗಳಿಗೆ ರಾಜ್ಯ ಸರ್ಕಾರಕ್ಕೆ ಹಣ ಪಾವತಿಸಿ ಎಂದು ಹೇಳುತ್ತಿರುವ ಕೇಂದ್ರ ಸರ್ಕಾರದ ನಡೆಗೆ ಏನನ್ನು ಹೇಳಬೇಕು?