ಸಿನಿಮಾ ರಂಗದಲ್ಲಿ ಇತ್ತೀಚೆಗೆ ಅತಿ ಹೆಚ್ಚು ಸುದ್ದಿಯಲ್ಲಿದ್ದ ವಿಷಯ ಅಂದ್ರೆ ನಾಗಚೈತನ್ಯ ಮತ್ತು ಸಮಂತಾ ಅವರ ಡಿವೋರ್ಸ್ ಪ್ರಕರಣ. ಈ ವಿಷಯದಲ್ಲಿ ಅವರಿಬ್ಬರೂ ಹೆಚ್ಚು ಮಾತನಾಡದೆ ದೂರವಾಗಿದ್ದರೂ, ಅವರಿವರ ಮಾತುಗಳಂತೂ ಸಾಕಷ್ಟು ಕೇಳಿಬಂದಿದ್ದವು. ಒಟ್ಟಿನಲ್ಲಿ ಸ್ಟಾರ್ ನಟ ನಾಗಾರ್ಜುನ ಅವರ ಪುತ್ರ ನಾಗ ಚೈತನ್ಯ ಮದುವೆ ಅಂತೂ ಮುರಿದು ಬಿತ್ತು. ಅದಕ್ಕೆ ಸಮಂತಾ ಅವರನ್ನೇ ಕಾರಣ ಮಾಡಿ ಹಲವರು ದೂರು ಹೇಳಿದ್ದೂ ಆಯ್ತು. ಆದ್ರೆ ಅದಾದ ನಂತರ ಈಗ ಐಶ್ವರ್ಯಾ, ಅಂದ್ರೆ ರಜಿನಿಕಾಂತ್ ಅವರ ಪುತ್ರಿ ಕೂಡಾ ಡಿವೋರ್ಸ್ ಮಾತನ್ನಾಡಿದ್ದಾರೆ. ನಟ ಧನುಷ್ ಅವರೊಂದಿಗಿನ ತಮ್ಮ ಸಂಬಂಧ ಕಡಿದುಕೊಳ್ಳುವ ಬಗ್ಗೆ ಅವರು ಹೇಳಿಕೊಂಡಿದ್ದಾರೆ. ಇದರ ಬೆನ್ನಲ್ಲೇ, ಸೌತ್ ಇಂಡಿಯಾದ ಇನ್ನೊಬ್ಬ ಸ್ಟಾರ್ ನಟ ಚಿರಂಜೀವಿ ಪುತ್ರಿ ಕೂಡಾ ಅದೇ ದಾರಿಯಲ್ಲಿದ್ದಾರೆ ಎನ್ನಲಾಗುತ್ತಿದೆ. ಚಿರು ಪುತ್ರಿ ಶ್ರೀಜಾ ಈಗ ತಮ್ಮ ಪತಿ ಕಲ್ಯಾಣ್ ದೇವ್ ಅವರೊಂದಿಗಿನ ಕಲ್ಯಾಣವನ್ನು ರದ್ದು ಮಾಡಿಕೊಳ್ಳುವ ಹಾದಿಯಲ್ಲಿದ್ದಾರೆ. ಹಾಗಾಗಿ, ಇತ್ತೀಚಿಗೆ ತಾನೇ ತಮ್ಮ ಅಭಿನಯದ ಸೂಪರ್ ಮಚ್ಚಿ ಚಿತ್ರ ಬಿಡುಗಡೆ ಮಾಡಿದ್ದ ಕಲ್ಯಾಣ್ ದೇವ್ ಈಗ ಡಿವೋರ್ಸ್ ನತ್ತ ಮುಖ ಮಾಡಿದ್ದಾರೆ.
ಇಲ್ಲಿ ಗಮನಿಸಬೇಕಾದ ವಿಷಯ ಅಂದ್ರೆ ಅದೇಕೆ ಇದ್ದಕ್ಕಿದ್ದಂತೆ, ಸ್ಟಾರ್ ನಟರ ಮಕ್ಕಳು ವಿಚ್ಛೇದನದ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಅನ್ನೋದು.
ಸ್ಟಾರ್ ನಟರ ಮಕ್ಕಳಾಗೋದು ಒಂಥರಾ ಸುಲಭದ ವಿಷಯ ಮತ್ತು ಕಷ್ಟದ ವಿಷಯ ಕೂಡಾ. ಇಂಥವರ ಮಗ ಮಗಳು ಅನ್ನೋ ಕಾರಣಕ್ಕೆ ಅದೆಷ್ಟು ಲಾಭ ಇದೆಯೋ, ಅದರಷ್ಟೇ ಕಷ್ಟಗಳೂ ಅದರಲ್ಲಿವೆ. ಸ್ಟಾರ್ ಮಕ್ಕಳು ಅನ್ನೋ ಕಾರಣಕ್ಕೆ ಸುಲಭವಾಗಿ ಅವರನ್ನು ಎಲ್ಲರೂ ಗುರುತಿಸುತ್ತಾರೆ. ಗೌರವಿಸುತ್ತಾರೆ. ಆದರೆ, ಈ ಡಿವೋರ್ಸ್ ನಂತಹ ವಿಷಯಗಳು ಬಂದಾಗ, ಇಂಥವರ ಮಗ, ಮಗಳು ಅನ್ನೋ ವಿಷಯವೇ ಹೈಲೈಟ್ ಆಗಿಬಿಡುತ್ತೆ. ಈ ಕಾರಣಕ್ಕೆ ತಮ್ಮ ಜೀವನದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಅವರ ಮೇಲೆ ಇನ್ನಿಲ್ಲದ ಒತ್ತಡ ಬೀಳುತ್ತದೆ. ಹಲವರು ಇದೇ ಕಾರಣಕ್ಕೆ, ತಂದೆಗೆ ತೊಂದರೆ ಕೊಡಬಾರದು. ಅವರಿಗೆ ಕೆಟ್ಟ ಹೆಸರು ಬರಬಾರದು ಎಂಬ ಕಾರಣಕ್ಕೆ ಇಷ್ಟವಿಲ್ಲದ ಸಂಬಂಧಗಳ ಜೊತೆ ಅಡ್ಜಸ್ಟ್ ಮಾಡಿಕೊಂಡೇ ಜೀವನ ಮಾಡುತ್ತಾರೆ. ಎಲ್ಲೋ ಕೆಲವರು ತಮ್ಮ ನಿರ್ಧಾರವನ್ನು ದಿಟ್ಟವಾಗಿ ಹೇಳಿಕೊಳ್ಳುತ್ತಾರೆ.
ಈ ವಿಷಯದ ಇನ್ನೊಂದು ಆಂಗಲ್ ಅನ್ನು ನೋಡೋದಾದ್ರೆ, ವಿಚ್ಛೇದನ ಬಹುತೇಕ ಜನರ ಬದುಕಿನಲ್ಲಿ ಆಗುವಂಥ ವಿಷಯ. ಆದರೆ ಸಣ್ಣ ಪುಟ್ಟವರು ಮಾಡಿಕೊಂಡರೆ ಅದು ಸುದ್ದಿ ಆಗೋದಿಲ್ಲ, ಆದರೆ ದೊಡ್ಡವರು ಮತ್ತು ದೊಡ್ಡವರ ಮಕ್ಕಳು ಮಾಡಿಕೊಂಡ್ರೆ ಮಾತ್ರ ಅದು ದೊಡ್ಡ ಸುದ್ದಿಯಾಗಿ ಇನ್ನಿಲ್ಲದಂತೆ ಟಿಆರ್ ಪಿ ಪಡೆದುಕೊಳ್ಳುತ್ತದೆ. ಆ ಕಾರಣಕ್ಕೆ ಅನೇಕರು ತಮ್ಮ ವೈಯಕ್ತಿಕ ಜೀವನದ ವಿಷಯಗಳನ್ನು ಎಲ್ಲರಿಂದ ಮುಚ್ಚಿಡಲು ಪ್ರಯತ್ನ ಪಡುತ್ತಾರೆ.
ಆದರೆ ಸ್ಟಾರ್ ಗಳ ಮಕ್ಕಳು ಅನ್ನೋದು ಈ ಡಿವೋರ್ಸ್ ತೆಗೆದುಕೊಳ್ಳುವಂಥ ಪ್ರಮುಖ ಮತ್ತು ಕಷ್ಟಕರ ನಿರ್ಧಾರಗಳನ್ನು ಸುಲಭಗೊಳಿಸುತ್ತದೆಯೇ ಅನ್ನೋ ಅನುಮಾನವೂ ಈ ಸಮಯದಲ್ಲಿ ಮೂಡುತ್ತದೆ. ಸಾಮಾನ್ಯರ ಮಕ್ಕಳಾದ್ರೆ, ಡಿವೋರ್ಸ್ ನಂತರದ ಜೀವನದ ಬಗ್ಗೆ ಒಂದು ಆತಂಕ ಇದ್ದೇ ಇರುತ್ತದೆ. ಆದರೆ ದೊಡ್ಡವರ ಮಕ್ಕಳಾದ್ರೆ, ಮನಯವರ ಬೆಂಬಲ ಇರುತ್ತದೆ. ಜೊತೆಗೆ, ಹಣಕಾಸಿನ ವಿಷಯದಲ್ಲೂ ಅವರಿಗೆ ತೊಂದರೆ ಆಗೋದಿಲ್ಲ. ಅವರು ಮದುವೆ ಆಗೋದೂ ದೊಡ್ಡ ಹೆಸರು ಮತ್ತು ದುಡ್ಡಿಗೆ ಬರವಿಲ್ಲದವರನ್ನ. ಹಾಗಾಗಿ, ಡಿವೋರ್ಸ್ ನಂತರದ ಪರಿಹಾರದ ವಿಷಯ ಕೂಡಾ ಅವರಿಗೆ ದೊಡ್ಡ ತಲೆನೋವಾಗೋದಿಲ್ಲ. ಜೊತೆಗೆ, ಡಿವೋರ್ಸ್ ನಂತರ ಇನ್ನೊಂದು ಮದುವೆ ಆಗೋದೂ ಕೂಡ ಸುಲಭ ಎಂಬಂತ ವಾತಾವರಣ ಇಂತಹ ಕಷ್ಟಕರ ನಿರ್ಧಾರಗಳನ್ನು ಸುಲಭವಾಗಿ ತೆಗೆದುಕೊಳ್ಳುವಂತೆ ಪ್ರೇರೇಪಣೆ ನೀಡುತ್ತದೆಯೇ, ಸಂಬಂಧಗಳನ್ನು ಶಿಥಿಲಗೊಳಿಸುತ್ತಿದೆಯೇ ಎಂಬ ಅನುಮಾನ ಮೂಡಿದರೆ ತಪ್ಪಿಲ್ಲ ಬಿಡಿ. ಆದರೆ, ಮದುವೆ, ದಾಂಪತ್ಯ ಎಂಬ ವಿಷಯಗಳು ಕೊನೆಗೂ ಅವರವರ ವೈಯಕ್ತಿಕ ಸಂಗತಿ, ಎಂಬುದನ್ನು ಉಳಿದವರು ಅರ್ಥ ಮಾಡಿಕೊಂಡು ಅವರ ನಿರ್ಧಾರಗಳನ್ನು ಗೌರವಿಸಬೇಕು. ಅವರ ವಿಷಯದಲ್ಲಿ ಅನವಶ್ಯಕವಾಗಿ ಮೂಗು ತೂರಿಸೋದನ್ನು ನಿಲ್ಲಿಸಬೇಕು ಅನ್ನೋದು ಕನಿಷ್ಟ ಪಕ್ಷ ಸಮಂತಾ ಅವರ ವಿಷಯದಲ್ಲಿ ತಲೆಹರಟೆ ಕಾಮೆಂಟ್ ಮಾಡುತ್ತಿರುವವರನ್ನು ನೋಡಿದಾಗ ಎಲ್ಲರಿಗೂ ಗೋಚರವಾಗುವ ವಿಷಯ.