
ಇಂದು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ವಿಚಾರ ಚರ್ಚೆಗೆ ಬರಲಿದೆ. ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡುವ ಶಕ್ತಿ ಇರುವ ವಿಚಾರವನ್ನು ಸಿದ್ದರಾಮಯ್ಯ ಕಡೆಗೂ ಗಟ್ಟಿ ಮನಸ್ಸು ಮಾಡಿ ಚರ್ಚೆಗೆ ತೆಗೆದುಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ನಡೆದಿದ್ದ ಜಾತಿ ಜನಗಣತಿ ವರದಿಯನ್ನು ಸಂಪುಟದ ಮುಂದೆ ಮಂಡನೆ ಮಾಡಲು ಸರ್ಕಾರ ಮುಂದಾಗಿದೆ.

ಇಂದಿನ ಕ್ಯಾಬಿನೆಟ್ ಅಜೆಂಡಾದಲ್ಲಿ ಜಾತಿ ಜನಗಣತಿ ವಿಚಾರ ಪ್ರಸ್ತಾಪ ಆಗಿದ್ದು, ವರದಿ ಮಂಡನೆಗೆ ಹಿಂದುಳಿದ ವರ್ಗಗಳ ಇಲಾಖೆಯಿಂದ ಪ್ರಸ್ತಾವನೆ ಬಂದಿದೆ. ಜಾತಿಗಣತಿ ವರದಿ ಮಂಡನೆ ಬಳಿಕ ಸರ್ಕಾರದ ನಡೆ ಏನು..? ಎಂಬುದು ಇಂದಿನ ಸಂಪುಟ ಸಭೆ ಬಳಿಕ ನಿರ್ಧಾರ ಆಗಲಿದೆ. ವರದಿ ಪರಿಶೀಲನೆಗೆ ಸಂಪುಟ ಉಪಸಮಿತಿ ರಚನೆ ಮಾಡಬೇಕಾ..? ಅಥವಾ ಜಾತಿ ಜನಗಣತಿ ನವರದಿ ಬಿಡುಗಡೆ ಮಾಡಿ ಸಾರ್ವಜನಿಕ ಚರ್ಚಗೆ ಬಿಡುವುದು ಸೂಕ್ತನಾ.? ಅನ್ನೋ ಬಗ್ಗೆ ಚರ್ಚೆ ಆಗಲಿದೆ.

ಒಂದು ವೇಳೆ ಜಾತಿ ಜನಗಣತಿ ವರದಿ ಮಂಡನೆಗೆ ಒಪ್ಪಿಗೆ ಸೂಚಿಸಿದ್ರೆ, ಪ್ರಬಲ ಸಮುದಾಯಗಳ ಆಕ್ರೋಶಕ್ಕೆ ಗುರಿಯಾಗುವ ಆತಂಕವೂ ಸರ್ಕಾರಕ್ಕೆ ಇದೆ. ಇಂದಿನ ಸಚಿವ ಸಂಪುಟ ಸಭೆಗೆ ಗೈರಾಗಲು ಮೇಲ್ವರ್ಗಗಳ ಕೆಲವು ಸಚಿವರು ಚಿಂತನೆ ಮಾಡಿದ್ದಾರೆ ಎನ್ನಲಾಗಿದೆ. ತಾಯಿ ಆರೋಗ್ಯ ವಿಚಾರಣೆ ನೆಪದಲ್ಲಿ ವಿಜಯಪುರಕ್ಕೆ ತೆರಳುತ್ತಿದ್ದಾರೆ ಸಚಿವ ಎಂ.ಬಿ.ಪಾಟೀಲ್. ಇನ್ನು ಡಿ.ಕೆ ಶಿವಕುಮಾರ್ ಯಾವ ನಿರ್ಧಾರ ಮಾಡ್ತಾರೆ, ಹಾಗೆ ಉಳಿದ ನಾಯಕರ ನಿರ್ಧಾರ ಏನು ಅನ್ನೋದು ಇನ್ನಷ್ಟೇ ಗೊತ್ತಾಗಬೇಕಿದೆ.

ರಾಜ್ಯ ಕ್ಯಾಬಿನೆಟ್ನಲ್ಲಿ ಜಾತಿ ಜನಗಣತಿ ವರದಿ ಮಂಡನೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರದ ಚಿಂತಾಮಣಿಯಲ್ಲಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿದ್ದು, ಜಾತಿ ಜನ ಗಣತಿ ವರದಿ ಬಿಡುಗಡೆ ಆಗಬೇಕು, ಜನರಿಗೆ ಗೊತ್ತಾಗಬೇಕು. ಯಾರು ಎಷ್ಟಿದ್ದಾರೆ..? ಯಾವ ಸಮುದಾಯ ಎಷ್ಟಿದೆ..? ಬಡತನ ಎಷ್ಟಿದೆ..? ನಿರುದ್ಯೋಗ ಎಷ್ಟಿದೆ..? ಎಲ್ಲವೂ ಗೊತ್ತಾಗುತ್ತಲ್ಲ ಎಂದಿದ್ದಾರೆ. ಜಾತಿ ಗಣತಿ ವರದಿಯನ್ನ ನಾವೇ ತಯಾರು ಮಾಡಿದ್ದೇವೆ. ಜಯಪ್ರಕಾಶ್ ಹೆಗ್ಡೆ ವರದಿಯನ್ನು ಸರ್ಕಾರಕ್ಕೆ ಒಪ್ಪಿಸಿದ್ದಾರೆ. ಕ್ಯಾಬಿನೆಟ್ನಲ್ಲಿ ಈ ಬಗ್ಗೆ ಚರ್ಚೆ ಮಾಡ್ತೇವೆ ಎಂದಿದ್ದಾರೆ.

ಚಿಕ್ಕಮಗಳೂರಲ್ಲಿ ಜಾತಿ ಜನಗಣತಿ ವರದಿ ಬಗ್ಗೆ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ನಾನು ಹಲವಾರು ಬಾರಿ ಹೇಳಿದ್ದೇನೆ. ಜಾತಿ ಜನಗಣತಿ ಒಂದು ರೀತಿ ಗೊಂಬೆ ಆಟದಂತೆ ಮಾಡಿಕೊಂಡಿದ್ದಾರೆ. ಯಾವಾಗ ಮುಖ್ಯಮಂತ್ರಿ ಕುರ್ಚಿ ಅಲ್ಲಾಡುತ್ತೋ, ಯಾವಾಗ ಸರ್ಕಾರಕ್ಕೆ ಗಂಡಾಂತರ ಬರುತ್ತೋ ಅವಾಗ ಬೆದರು ಗೊಂಬೆಯಾಗಿ ಇದನ್ನ ಉಪಯೋಗಿಸಿಕೊಳ್ಳುತ್ತಿದ್ದಾರೆ. ಇವತ್ತು ಭ್ರಷ್ಟ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ವಾಲ್ಮೀಕಿ ಮೂಡಾ ಹಗರಣ ಸೇರಿದಂತೆ ಬೇರೆ ಬೇರೆ ಹಗರಣದಲ್ಲಿ ಮುಳುಗಿದೆ. ಅವರ ಕುರ್ಚಿ ಅಲ್ಲಾಡುವಾಗ ಮತ್ತೆ ಇಂತಹ ವಿಚಾರವನ್ನು ಮುಂದೆ ತರುತ್ತಾರೆ ಎಂದು ವ್ಯಂಗ್ಯ ಮಾಡಿದ್ದಾರೆ.