ಒಂದು ಸಮಾಜದ ಸ್ವಾಸ್ಥ್ಯ ನಿರ್ಧಾರವಾಗುವುದು ಕೇವಲ ಅರ್ಥವ್ಯವಸ್ಥೆಯ ತಳಹದಿಯ ಮೇಲಲ್ಲ. ಎಷ್ಟೇ ಸಂಪನ್ಮೂಲಗಳನ್ನು ಹೊಂದಿದ್ದರೂ, ಎಂತಹುದೇ ಸಂಪದ್ಭರಿತ ಆರ್ಥಿಕ ಬುನಾದಿಯನ್ನು ಹೊಂದಿದ್ದರೂ, ಸಂವೇದನಾಶೀಲ ಮನುಜ ಸಂಬಂಧಗಳನ್ನು ಕಾಪಾಡಿಕೊಳ್ಳಲು ಸಾಧ್ಯವಾಗದ ಒಂದು ಸಮಾಜ ಒಳಗಿಂದೊಳಗೇ ಕೊಳೆತುಹೋಗುತ್ತದೆ. ಭಾರತದಲ್ಲಿ ಜಾತಿ, ಮತ, ಸಂಸ್ಕೃತಿ, ಪಂಥ ಮತ್ತು ಭಾಷಿಕ ಅಸ್ಮಿತೆಗಳ ನಡುವೆಯೇ ಮಾನವೀಯ ಸಮಾಜವನ್ನು ನಿರ್ಮಿಸಲು ಶತಮಾನಗಳಿಂದ ನಡೆಯುತ್ತಿರುವ ಪ್ರಯತ್ನಗಳು ಇಂದೇಕೋ ವಿಫಲ ಪ್ರಯತ್ನಗಳಂತೆ ಕಾಣತೊಡಗಿವೆ. ಬುದ್ಧನಿಂದ ಬಸವ ಅಂಬೇಡ್ಕರ್ವರೆಗೆ, ಸೂಫಿ ಪರಂಪರೆಯಿಂದ ದಾಸ ಪರಂಪರೆಯವರೆಗೆ ಭಾರತದ ಬಹುತ್ವ ಸಂಸ್ಕೃತಿ ತನ್ನ ತೋಳುಗಳನ್ನು ಚಾಚಿಕೊಂಡಿದೆ. ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆಯಿಂದ ಸೃಷ್ಟಿಯಾಗಿದ್ದ ತಾರತಮ್ಯದ ನೆಲೆಗಳನ್ನು ಕೊನೆಗೊಳಿಸಿ, ಶಾಂತಿ, ಸಹಿಷ್ಣುತೆ ಮತ್ತು ಸೌಹಾರ್ದತೆಯನ್ನು ಸಾಧಿಸುವ ಪ್ರಯತ್ನಗಳು 12ನೆಯ ಶತಮಾನದ ಬಸವಣ್ಣನಿಂದ ಇಂದಿನವರೆಗೂ ನಡೆಯುತ್ತಲೇ ಬಂದಿದೆ.
ಈ ಕ್ರಾಂತಿಕಾರಕ ಪರಿವರ್ತನೆಯ ಹಾದಿಗಳಲ್ಲಿ ಮುಳ್ಳು ಕಂಟಕಗಳಾಗಿ, ಶತಮಾನಗಳಿಂದ ಸಮಾಜದ ಗರ್ಭದಲ್ಲೇ ಅಂತರ್ಗತವಾಗಿರುವ ಪುರುಷ ಪ್ರಾಧಾನ್ಯತೆ, ಊಳಿಗಮಾನ್ಯ ಧೋರಣೆ, ವೈದಿಕಶಾಹಿಯ ಜಾತಿ ಶ್ರೇಷ್ಠತೆ, ಅಸ್ಪೃಶ್ಯತೆಯಂತಹ ಅಮಾನುಷ ಆಚರಣೆ, ಜಾತಿ ತಾರತಮ್ಯ ದೌರ್ಜನ್ಯಗಳು ಇಲ್ಲಿಯವರೆಗೂ ಉಳಿದುಕೊಂಡೇ ಬಂದಿವೆ. ಸಮಾಜಮುಖಿ ಚಿಂತನೆಯ ವಿಭಿನ್ನ ಆಯಾಮಗಳು ಕಾಲದಿಂದ ಕಾಲಕ್ಕೆ ಮನ್ವಂತರ ಹೊಂದುತ್ತಿದ್ದರೂ, ಜನಸಮುದಾಯಗಳ ಮೇಲೆ ಸಾಂಪ್ರದಾಯಿಕ ಸಾಂಸ್ಕೃತಿಕ ಶಕ್ತಿಗಳ ಹಿಡಿತವನ್ನು ಸಡಿಲಗೊಳಿಸುವುದು ಸಾಧ್ಯವಾಗಿಲ್ಲ. ವೈದಿಕಶಾಹಿಯ ಜಾತಿ ತಾರತಮ್ಯದ ನೆಲೆಗಳು ಒಂದೆಡೆ ಗಟ್ಟಿಯಾಗುತ್ತಿದ್ದರೆ, ಜಾತಿ ಪದ್ಧತಿಯ ಶೋಷಣೆಯ ಆಯಾಮಗಳು ಹೊಸ ಸ್ವರೂಪಗಳನ್ನು ಪಡೆದುಕೊಳ್ಳುತ್ತಿವೆ. ಜಾತಿ ಮತ್ತು ಮತದ ನೆಲೆಗಳು ಶತಮಾನಗಳಷ್ಟು ಹಿಂದಕ್ಕೆ ಚಲಿಸುತ್ತಲೇ ತಮ್ಮ ಮೂಲ ಸ್ಥಿತಿಯನ್ನು ಮರಳಿ ಪಡೆಯಲೆತ್ನಿಸುತ್ತಿವೆ.
ಈ ನಡುವೆಯೇ ಹಿಂದೂ, ಮುಸ್ಲಿಂ, ಕ್ರೈಸ್ತ ಮತಗಳು ಜನಸಂಸ್ಕೃತಿಯ ನೆಲೆಗಳಿಂದ ವಿಮುಖವಾಗಿ ತಮ್ಮದೇ ಆದ ಮತಾಧಾರಿತ ಧಾರ್ಮಿಕ-ಸಾಂಸ್ಕೃತಿಕ ನೆಲೆಗಳನ್ನು ಸ್ಥಾಪಿಸಲು ಯತ್ನಿಸುತ್ತಿವೆ. 20ನೆಯ ಶತಮಾನದ ಆರಂಭದಿಂದಲೇ, ಸ್ವಾತಂತ್ರ್ಯ ಸಂಗ್ರಾಮದ ನಡುವೆಯೇ, ಬಹುಸಂಖ್ಯಾತ ಹಿಂದೂ ಮತೀಯವಾದ ರಾಜಕೀಯ ಸ್ವರೂಪ ಪಡೆದುಕೊಂಡಿದ್ದರಿಂದ, ಕ್ರೈಸ್ತ, ಸಿಖ್ ಮತ್ತು ಇಸ್ಲಾಂ ಮತಗಳು ಸಾಂಸ್ಥಿಕ ನೆಲೆಯಲ್ಲಿ ತಮ್ಮ ಅಸ್ಮಿತೆಗಳನ್ನು ಸಂರಕ್ಷಿಸಿಕೊಳ್ಳಲು ಹೆಣಗಾಡಬೇಕಾಯಿತು. ತಮ್ಮ ಮತೀಯ ನಂಬಿಕೆಗಳು ಮತ್ತು ಆಚರಣೆಗಳನ್ನು ಕಾಪಾಡಿಕೊಳ್ಳುವ ಮಾರ್ಗದಲ್ಲಿ ಎದುರಾಗಬಹುದಾದ, ಇಂದು ಬಹುತ್ವದ ಪರಿಕಲ್ಪನೆಯಲ್ಲಿ ಈ ಸಂಕಥನ ಜಾರಿಯಲ್ಲಿರುವ, ಭಾರತದ ಬಹುಸಾಂಸ್ಕೃತಿಕ ಆಯಾಮಗಳನ್ನು, ಈ ಮತಗಳ ಪ್ರಚಾರಕರು, ಸಾಂಸ್ಥಿಕ ವಾರಸುದಾರರು ನಿಷ್ಕರ್ಷೆ ಮಾಡಲು ಮುಂದಾಗಲೇ ಇಲ್ಲ ಎನ್ನುವುದು ವಾಸ್ತವ. ವರ್ಗ ಸಂಘರ್ಷದ ನೆಲೆಯಲ್ಲಿ ಸಾಮಾಜಿಕಾರ್ಥಿಕ ಸಮಾನತೆಗಾಗಿ ಹೋರಾಡಿದ ಎಡಪಕ್ಷಗಳಲ್ಲೂ ಸಹ ಭಾರತದ ಬಹುಸಂಸ್ಕೃತಿಯ ನೆಲೆಗಳನ್ನು ಶೋಧಿಸುವ ಪ್ರಯತ್ನಗಳು ನಡೆಯಲಿಲ್ಲ. ಶ್ರಮಜೀವಿಗಳ ಬದುಕಿನಲ್ಲಿ ಇರಬಹುದಾದ ನೆಲಮೂಲ ಸಂಸ್ಕೃತಿಯ ಬೇರುಗಳನ್ನು ಛೇದಿಸುವ ನಿಟ್ಟಿನಲ್ಲಿ ಎಡಪಕ್ಷಗಳು ಆಸ್ಥೆ ವಹಿಸಲಿಲ್ಲ.
ಹಾಗಾಗಿಯೇ ಭಾರತದಲ್ಲಿ ಸಂಸ್ಕೃತಿ ಎಂದ ಕೂಡಲೇ ವೈದಿಕಶಾಹಿಯನ್ನೇ ಮರುಸ್ಥಾಪಿಸುವ “ಸನಾತನ ಭಾರತೀಯ ಸಂಸ್ಕೃತಿ”ಯ ಪ್ರತಿಪಾದನೆಯೇ ಮುಂದಾಗತೊಡಗಿತ್ತು.ಈ ನಿರ್ದಿಷ್ಟ ವ್ಯಾಖ್ಯೆಯಲ್ಲಿ ಪಾರಂಪರಿಕ ಭಾರತದ ಬಹುತ್ವ ಸ್ವರೂಪದ ನೆಲಸಂಸ್ಕೃತಿ ಮತ್ತು ವೈದಿಕಶಾಹಿಯ ಸಂಸ್ಕೃತಿ ಅನುಸಂಧಾನವಾಗುವುದು ಸಾಧ್ಯವೇ ಆಗದಂತೆ ವೈದಿಕಶಾಹಿಯು ತನ್ನ ಮೂಲ ಬೇರುಗಳನ್ನು ಗಟ್ಟಿಗೊಳಿಸುತ್ತಲೇ ಬಂದಿದೆ. ಇಂದು ಬಹು ಚರ್ಚಿತವಾಗಿರುವ ಬ್ರಾಹ್ಮಣಶಾಹಿ ಮತ್ತು ಬ್ರಾಹ್ಮಣ್ಯದ ಬೇರುಗಳನ್ನು ಈ ಪ್ರಕ್ರಿಯೆಯಲ್ಲಿಟ್ಟು ಗಮನಿಸಿದಾಗ, ಜಾತಿ ವಿನಾಶದ ಹೋರಾಟಗಳು, ಅಸ್ಪೃಶ್ಯತಾ ವಿರೋಧಿ ಆಂದೋಲನಗಳು ಮತ್ತು ಸಾಮಾಜಿಕ ಸಮಾನತೆಯ ಕನಸುಗಳು ಏಕೆ ವಿಫಲವಾಗಿವೆ, ವಿಫಲವಾಗುತ್ತಿವೆ ಎಂದು ಅರ್ಥವಾಗುತ್ತದೆ. ಈ ಸಂದರ್ಭದಲ್ಲಿ ಅನ್ಯ ಮತಗಳ ಸಾಂಸ್ಥಿಕ ನೆಲೆಗಳು ಭಾರತದ ಬಹುತ್ವರೂಪಿ ನೆಲಸಂಸ್ಕೃತಿಯೊಡನೆ ಅನುಸಂಧಾನದ ಪ್ರಯತ್ನವನ್ನು ಮಾಡಿದ್ದಲ್ಲಿ ಬಹುಶಃ ಇಂದು ಚರ್ಚೆಯಲ್ಲಿರುವ ಬಹುತ್ವದ ವ್ಯಾಪ್ತಿ ಇನ್ನೂ ವಿಸ್ತರಿಸಬಹುದಿತ್ತು, ಇನ್ನೂ ಆಳವಾಗಬಹುದಿತ್ತು.

ಸ್ವಾತಂತ್ರ್ಯದ ನಂತರವೂ ತನ್ನ ಪಾರಮ್ಯವನ್ನು ಕಾಪಾಡಿಕೊಂಡೇ ಬಂದಿರುವ ಹಿಂದೂ ಎನ್ನಲಾಗುವ ಮತೀಯ ಸಾಂಸ್ಥಿಕ ನೆಲೆಗಳಿಗೆ “ಹಿಂದುತ್ವ” ಎನ್ನಲಾಗುವ ರಾಜಕೀಯ ಸಿದ್ಧಾಂತವನ್ನು ಬೆಸುಗೆ ಮಾಡುವ ಮೂಲಕ ಸಾಂಪ್ರದಾಯಿಕ ವೈದಿಕ ಶಾಹಿಯು ಜಾತಿ ಶೋಷಣೆ ಮತ್ತು ಅಸ್ಪೃಶ್ಯತೆಯಂತಹ ಅಮಾನುಷ ಪರಂಪರೆಯನ್ನು, ಜಾತಿ ಅಸಮಾನತೆ ಮತ್ತು ತರತಮಗಳನ್ನು ಉಳಿಸಿಕೊಂಡೇ ಬಂದಿದ್ದು, ಈ ಪರಂಪರೆಯಲ್ಲಿ ತಮ್ಮ ಅಸ್ತಿತ್ವವನ್ನೇ ಕಾಣಲಾಗದ ಇಲ್ಲದ ಜನಸಮುದಾಯಗಳನ್ನೂ ತನ್ನೊಳಗೆ ಸೆಳೆದುಕೊಳ್ಳುವುದರಲ್ಲಿ ಯಶಸ್ವಿಯಾಗಿದೆ. ವೀರ ಸಾವರ್ಕರ್ ಪ್ರತಿಪಾದಿಸಿದ ಹಿಂದುತ್ವ ಮತ್ತು ಗೋಲ್ವಾಲ್ಕರ್ ಮುಂದಿಟ್ಟ ಹಿಂದೂ ರಾಷ್ಟ್ರದ ಪರಿಕಲ್ಪನೆಗಳು ಶೋಷಿತ ಸಮುದಾಯಗಳನ್ನೂ ಸಹ ಭೌಗೋಳಿಕ ಹಿಂದೂ ರಾಷ್ಟ್ರದ ಕಾಲಾಳುಗಳನ್ನಾಗಿ ಮಾಡಲು ಈ ಪರಂಪರೆ ನೆರವಾಗಿದೆ. ತಮ್ಮ ಅಸ್ಮಿತೆಗಳನ್ನು ಜಾತಿ ನೆಲೆಯಲ್ಲಿ ಗುರುತಿಸಿಕೊಳ್ಳುತ್ತಲೇ ಇದ್ದರೂ ಶೋಷಿತ ಸಮುದಾಯಗಳು ತಮ್ಮ ಮೂಲ ಬಹುಸಾಂಸ್ಕೃತಿಕ ನೆಲೆಗಳನ್ನೂ ಮರೆತು, ಹಿಂದೂ ಮತೀಯ ಚೌಕಟ್ಟಿನಲ್ಲಿ ಅಸ್ತಿತ್ವವನ್ನು ಕಂಡುಕೊಳ್ಳುವಂತೆ ಮಾಡಿರುವುದು ಹಿಂದುತ್ವವಾದದ ಸಾಧನೆ ಎಂದೇ ಹೇಳಬಹುದು.
ಈ ಹಿಂದುತ್ವ ರಾಜಕಾರಣ 1980-90ರ ದಶಕದಲ್ಲಿ ಪೋಷಿಸಿ ಬೆಳೆಸಿದ ಒಂದು ಪೀಳಿಗೆ, ಬಿತ್ತಿದ ವಿಘಟನೆಯ ಬೀಜಗಳು ಮತ್ತು ಪ್ರಚೋದಿಸಿದ ಮತಾಂಧತೆಯ ಚಿಂತನೆಗಳು ಇಂದು ನಮ್ಮೆದುರು ಬೃಹದಾಕಾರದಲ್ಲಿ ನಿಂತಿದೆ. ಭಾರತೀಯತೆಯನ್ನು ನಿಷ್ಕರ್ಷೆ ಮಾಡಲು ಮತೀಯ ಅಸ್ಮಿತೆಗಳನ್ನೇ ಮಾನದಂಡವನ್ನಾಗಿ ಮಾಡುವ ಒಂದು ಪ್ರಕ್ರಿಯೆಯನ್ನು ಮಂದಿರ ಮಸೀದಿ ವಿವಾದದಲ್ಲಿ, ಅಯೋಧ್ಯೆ ರಾಮಮಂದಿರ ಘರ್ಷಣೆಯಲ್ಲಿ, ಇದಕ್ಕೆ ಪ್ರತಿಯಾಗಿ ರೂಪುಗೊಂಡ ಮುಸ್ಲಿಂ ಮೂಲಭೂತವಾದದಲ್ಲಿ, ಖಲಿಸ್ತಾನ ಮತ್ತು ಸಿಖ್ಖರ ಸಂಘರ್ಷದಲ್ಲಿ, ಕಾಶ್ಮೀರದ ಪ್ರಕ್ಷುಬ್ಧತೆಯಲ್ಲಿ ಗುರುತಿಸಬಹುದು. “ನಾನು ಭಾರತೀಯ” ಎನ್ನುವ ಘೋಷಣೆಯ ಸಮಾಧಿ ಮಾಡಿ “ನಾವೆಲ್ಲಾ ಹಿಂದೂ” ಎಂಬ ಮತೀಯ ಘೋಷಣೆಯನ್ನು ಪ್ರಚೋದಿಸಿದ ಮತಾಂಧ ಶಕ್ತಿಗಳು ಅನ್ಯ ಮತೀಯ ಅಸ್ಮಿತೆಗಳನ್ನು ಅಲ್ಲಗಳೆಯುವ ಮೂಲಕ “ಭಾರತೀಯತೆ”ಯನ್ನು ಹೊಸದಾಗಿ ವ್ಯಾಖ್ಯಾನಿಸಲು ಮುಂದಾದವು.” ಮೇರಾ ಭಾರತ್ ಮಹಾನ್ ” ಘೋಷಣೆಯಲ್ಲಿರುವ ಭಾರತಕ್ಕೂ, “ ಭಾರತ್ ಮಾತಾ ಕಿ ಜೈ ” ಘೋಷಣೆಯಲ್ಲಿರುವ ಭಾರತಕ್ಕೂ ಇರುವ ಸೂಕ್ಷ್ಮ ವ್ಯತ್ಯಾಸವನ್ನು ಗ್ರಹಿಸಬಹುದು.