
ಕಿರುತೆರೆ ನಟ ಕಿರಣ್ ರಾಜ್ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದು, ರಾನಿ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಸಿನಿಮಾ ನಾಳೆಯೇ ಬಿಡುಗಡೆ ಆಗುತ್ತಿದ್ದು, ಅಪಘಾತದಿಂದ ಆಸ್ಪತ್ರೆ ಸೇರುವಂತಾಗಿದೆ.
ಮುದ್ದಯ್ಯನಪಾಳ್ಯದಲ್ಲಿರುವ ಶ್ರೀ ಸಿದ್ದೇಶ್ವರ ನಿರಾಶ್ರಿತರ ಸೇವಾಶ್ರಮಕ್ಕೆ ನಿನ್ನೆ ಭೇಟಿ ನೀಡಿದ್ದ ನಟ ಕಿರಣ್ ರಾಜ್, ಊಟ ಬಡಿಸಿ, ಚೇರ್ ವ್ಯವಸ್ಥೆ ಮಾಡ್ತೀನಿ ಎಂದಿದ್ದ ಮಾತಿನಂತೆ ನಿನ್ನೆ ಭೇಟಿ ಕೊಟ್ಟು ವಾಪಸ್ ಹೋಗುವಾಗ ದುರಂತ ಸಂಭವಿಸಿದೆ.

ದುರಂತದ ಬಗ್ಗೆ ಮಾತನಾಡಿರುವ ಮಾಗಡಿ ರಸ್ತೆಯ ಸಿದ್ದೇಶ್ವರ ನಿರಾಶ್ರಿತರ ಸೇವಾಶ್ರಮದ ಸಂಸ್ಥಾಪಕ ಪ್ರವೀಣ್, ನಟ ಕಿರಣ್ ನಿನ್ನೆ ನಮ್ಮ ಆಶ್ರಮಕ್ಕೆ ಬಂದಿದ್ರು, ಇಲ್ಲಿರುವವರ ಯೋಗ ಕ್ಷೇಮ ವಿಚಾರಿಸಿದ್ರು. ರೇಷನ್, ಇಲ್ಲಿರುವವರಿಗೆ ಬೇಕಾದ ಮೆಡಿಸಿನ್ ಕೂಡ ತಂದಿದ್ರು. ಆಶ್ರಮಕ್ಕೆ ಬೇಕಾದ ಎಲ್ಲಾ ಸಾಮಾಗ್ರಿಗಳನ್ನ ತಂದು ಕೊಟ್ಟಿದ್ರು. ಪ್ರತಿ ಭಾನುವಾರ, ಅನಾಥರಿಗೆ, ನಿರಾಶ್ರಿತರಿಗೆ ಊಟದ ವ್ಯವಸ್ಥೆ ಮಾಡ್ತಿದ್ರು. ನಿನ್ನೆ ಆಶ್ರಮಕ್ಕೆ ಬಂದು ಹೋಗುವಾಗ ಆ್ಯಕ್ಸಿಡೆಂಟ್ ಆಗಿರುವ ವಿಚಾರ ಕೇಳಿ ಶಾಕ್ ಆಯ್ತು ಎಂದಿದ್ದಾರೆ.

ಕಾರು ಚಾಲನೆ ಮಾಡುತ್ತಿದ್ದ ಗಿರೀಶ್ ಮಾತನಾಡಿ, ನಿನ್ನೆ ರಾತ್ರಿ 9:45 ಸಮಾರಿಗೆ ಘಟನೆ ಸಂಭವಿಸಿದೆ. ನಿನ್ನೆ ವೃದ್ದಾಶ್ರಮಕ್ಕೆ ಹೋಗಿದ್ವಿ. ಬಳಿಕ ಮೈಸೂರಿಗೆ ಹೋಗಲು ಮರಳಿ ಬರುತ್ತಿದ್ದ ಸಂದರ್ಭದಲ್ಲಿ ಘಟನೆ ಸಂಭವಿಸಿದೆ. ಮುದ್ದನಪಾಳ್ಯ ಬಳಿ ಬರುವ ವೇಳೆ ರಸ್ತೆಯಲ್ಲಿ ಸಡನ್ ಆಗಿ ಮುಂಗೂಸಿ ಬಂತು. ಮುಂಗೂಸಿಯನ್ನ ತಪ್ಪಿಸಲು ಹೋದಾಗ ಕಾರು ನಿಯಂತ್ರಣ ತಪ್ಪಿ ಡಿವೈಡರ್ ಗೆ ಗುದ್ದಿದೆ. ನು ಕಾರು ಚಾಲನೆ ಮಾಡುವಾಗ ಸೀಟ್ ಬೆಲ್ಟ್ ಧರಿಸಿದ್ದೇ, ಹಾಗಾಗಿ ನನಗೆ ಸೊಂಟಕ್ಕೆ ಸ್ವಲ್ಪ ಸಮಸ್ಯೆ ಆಗಿದೆ. ಕಿರಣ್ ಹಿಂದೆ ಕೂತಿದ್ದರಿಂದ ಎದೆ ಹಾಗೂ ಮುಖಕ್ಕೆ ಗಾಯಗಳಾಗಿದ್ದು ಚಿಕಿತ್ಸೆ ಕೊಡಿಸಲಾಗುತ್ತಿದೆ. ಸದ್ಯ ಕಿರಣ್ಗೆ ವೈದ್ಯರು ಚಿಕಿತ್ಸೆ ಕೊಡುತ್ತಿದ್ದು ಪ್ರಾಣಾಪಾಯಕ್ಕೆ ಯಾವುದೇ ರೀತಿ ತೊಂದರೆ ಇಲ್ಲ ಎಂದಿದ್ದಾರೆ.

ಅಪಘಾತದ ಬಳಿಕ ಆಸ್ಪತ್ರೆಯಿಂದ ನಟ ಕಿರಣ್ ರಾಜ್ ವಿಡಿಯೋ ಸಂದೇಶ ನೀಡಿದ್ದು, ನಥಿಂಗ್ ಟು ವರಿ, ಐಯಾಮ್ ಕಂಪ್ಲೀಟ್ಲಿ ಫೈನ್, ಸ್ವಲ್ಪ ಏಟಾಗಿತ್ತು. ಡಾಕ್ಟರ್ ಟ್ರೀಟ್ಮೆಂಟ್ ಕೊಡ್ತಿದ್ದಾರೆ ಎಂದಿದ್ದಾರೆ. ಜೊತೆಗೆ ದಯವಿಟ್ಟು ಯಾರು ಪ್ಯಾನಿಕ್ ಆಗ್ಬೇಡಿ, ಐಯಾಮ್ ಕಂಪ್ಲೀಟ್ಲಿ ಫೈನ್. ಥ್ಯಾಂಕ್ ಯೂ ಆಲ್ ಎಂದಿದ್ದಾರೆ.