ಕರೋನಾ ಸೋಂಕಿನಿಂದ ಮೃತಪಟ್ಟವರಿಗೆ ತಲಾ ನಾಲ್ಕು ಲಕ್ಷ ರೂ. ಪರಿಹಾರ ನಿಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರಿಂಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದೆ. ಕೋವಿಡ್ ನಿಂದ ಮೃತಪಟ್ಟವರಿಗೆ ಪರಿಹಾರ ಒದಗಿಸಬೇಕೆಂದು ಕೇಳಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿದ್ದ ಸುಪ್ರಿಂಕೊರ್ಟ್ ಕೇಂದ್ರಕ್ಕೆ ಪ್ರತಿಕ್ರಿಯಿಸಲು ಹೇಳಿತ್ತು.
ತನ್ ೧೮೩ ಪುಟಗಳ ಅಫಿಡವಿಟ್ ನಲ್ಲಿ, “ಕೋವಿಡ್ ಪ್ರಾಕೃತಿಕ ವಿಕೋಪದ ಅಡಿಯಲ್ಲಿ ಬರದಿರುವುದರಿಂದ ಪರಿಹಾರ ನೀಡಲು ಸಾಧ್ಯವಿಲ್ಲ. ಮೇಲಾಗಿ ಎಲ್ಲಾ ರಾಜ್ಯಗಳು ತೀವ್ರವಾದ ಆರ್ಥಿಕ ಸಂಕಷ್ಟವನ್ನು ಅನುಭವಿಸುತ್ತಿದೆ. ಕರೋನಾದಿಂದ ಮೃತಪಟ್ಟವರಿಗೆ ತಲಾ ನಾಲ್ಕು ಲಕ್ಷ ರೂ. ನೀಡುವುದು ಅಸಾಧ್ಯ. ವಿಕೋಪ ನಿರ್ವಹಣಾ ಕಾನೂನಿನ ಅಡಿಯಲ್ಲಿ ಪ್ರಾಕೃತಿಕ ವಿಕೋಪಗಳಾದ ಭೂಕಂಪ, ಪ್ರವಾಹದಂತಹ ಸಂದರ್ಭಗಳಲ್ಲಿ ಮಾತ್ರ ಪರಿಹಾರ ನೀಡಲಾಗುತ್ತದೆ. ಕೋವಿಡ್ ನಿಂದ ಮೃತಪಟ್ಟವರ ಸಂಖ್ಯೆ ತುಂಬಾ ಹೆಚ್ಚಿದೆ. ಹೀಗಾಗಿ ಇದನ್ನು ವಿಕೋಪ ನಿರ್ವಹಣಾ ಕಾನೂನಿನ ಅಡಿಯಲ್ಲಿ ತರಲು ಸಾಧ್ಯವಿಲ್ಲ,” ಎಂದಿದೆ.

“ತೆರಿಗೆಯಿಂದ ಬರುತ್ತಿದ್ದ ಆದಾಯದಲ್ಲಿಯೂ ಕೊರತೆ ಉಂಟಾಗಿದೆ. ಬಾಕಿಯಿರುವ ಅಲ್ಪ ಸಂಪನ್ಮೂಲಗಳಿಂದ ಪರಿಹಾರ ನೀಡಿದರೆ, ಆರೋಗ್ಯ ಕ್ಷೇತ್ರಕ್ಕೆ ಮತ್ತು ಇತರ ಕ್ಷೇತ್ರಗಳಿಗೆ ಅನುದಾನದ ಕೊರತೆ ಉಂಟಾಗುತ್ತದೆ. ಇದರಿಂದಾಗಿ ಒಳಿತಾಗುವುದಕ್ಕಿಂತ ಕೆಡುಕಾಗುವುದೇ ಜಾಸ್ತಿ,” ಎಂದು ಕೇಂದ್ರ ಹೇಳಿದೆ.
ಇನ್ನು ಸುಪ್ರೀಂ ಕೋರ್ಟ್ ನ ಹಳೆಯ ತೀರ್ಪುಗಳನ್ನು ಉಲ್ಲೇಖಿಸಿ ನ್ಯಾಯಾಲಯವು ಸರ್ಕಾರದ ಪರವಾಗಿ ಕಾರ್ಯನಿರ್ವಹಣಾ ನೀತಿಗಳ ಕುರಿತು ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆ.
“ಹಿಂದಿನ ಹಲವು ತೀರ್ಪುಗಳು ಈ ಕುರಿತಾಗಿ ಬೆಳಕು ಚೆಲ್ಲುತ್ತವೆ. ಆಡಳೊತಾತ್ಮಕವಾಗಿ ನಿರ್ಧಾರವನ್ನು ಕೈಗೊಳ್ಳಲು ಅಧಿಕಾರ ಇರುವಂತಹ ವ್ಯವಸ್ಥೆಗೆ ಮಾತ್ರ ಈ ಹಕ್ಕಿದೆ. ನ್ಯಾಯಾಲಯವು ಇದರಲ್ಲಿ ಮಧ್ಯಪ್ರವೇಶಿಸುವಂತಿಲ್ಲ ಎಂದು ಈ ಹಿಂದಿನ ಹಲವು ತೀರ್ಪುಗಳಲ್ಲಿ ಹೇಳಲಾಗಿದೆ,” ಎಂದು ಕೇಂದ್ರ ತನ್ನ ಅಫಿಡವಿಟ್ ನಲ್ಲಿ ಉತ್ತರಿಸಿದೆ.
ಈ ಪ್ರಕರಣದ ವಿಚಾರಣೆಯು ಸೋಮವಾರ ನಡೆಯಲಿದ್ದು, ಕೋರ್ಟ್ ನ ಆದೇಶ ಏನಾಗಿರುತ್ತದೆ ಎಂಬುದನ್ನು ಕಾದುನೋಡಬೇಕಿದೆ.