ಭಾರೀ ಕುತೂಹಲ ಕೆರಳಿಸಿದ್ದ ಪಶ್ಚಿಮ ಬಂಗಾಳದ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಭವಾನಿಪುರ ಕ್ಷೇತ್ರದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಗೆಲುವಿನ ನಗೆ ಬೀರಿದ್ದಾರೆ. ಖೇಲೋ ಹೊಬೇ ಎಂದು ಚುನಾವಣಾ ಅಖಾಡಕ್ಕೆ ಧುಮುಕಿದ್ದ ಮಮತಾ ಬ್ಯಾನರ್ಜಿ ಗೆಲುವಿನೊಂದಿಗೆ ಉಪಚುನಾವಣೆಯ ಆಟ ಮುಗಿಸಿದ್ದಾರೆ. ಆದರೆ ದೀದಿ ಗೆಲುವು ರಾಷ್ಟ್ರ ರಾಜಕಾರಣದಲ್ಲಿ ಹೊಸ ರಾಜಕೀಯದಾಟಕ್ಕೆ ನಾಂದಿ ಹಾಡೋ ಸಾಧ್ಯತೆಯಿದೆ ಎಂಬ ಚರ್ಚೆ ಜೋರಾಗಿದೆ.
ಪಶ್ಚಿಮ ಬಂಗಾಳದ ಭವಾನಿಪುರ ಕ್ಷೇತ್ರ ಉಪಚುನಾವಣೆ, ಸಿಎಂ ಮಮತಾ ಬ್ಯಾನರ್ಜಿ ಪಾಲಿಗೆ ಅಳಿವು-ಉಳಿವಿನ ಹೋರಾಟವಾಗಿತ್ತು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಂದಿಗ್ರಾಮದಲ್ಲಿ ಸೋಲು ಕಂಡಿದ್ದ ದೀದಿ ಸಿಎಂ ಗದ್ದುಗೆಯಲ್ಲಿ ಮುಂದುವರಿಯಬೇಕಾದರೆ ಚುನಾವಣೆಯಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಇತ್ತು. ಜೊತೆಗೆ ವಿಧಾನಸಭೆಯಲ್ಲಿ ಸೋಲುಣಿಸಿದ್ದ ಬಿಜೆಪಿ ಪಕ್ಷದ ವಿರುದ್ಧ ಗೆಲುವು ಸಾಧಿಸೋದು ಮಮತಾ ಪಾಲಿಗೆ ಪ್ರತಿಷ್ಠೆಯ ಪ್ರಶ್ನೆಯೂ ಆಗಿತ್ತು. ಅಂತೂ ಕೊನೆಗೂ ಈ ಪ್ರತಿಷ್ಠೆಯ ಕಾದಾಟದಲ್ಲಿ ಮಮತಾ ಬ್ಯಾನರ್ಜಿ, ಬಿಜೆಪಿ ಅಭ್ಯರ್ಥಿ ಪ್ರಿಯಾಂಕ ಟಿಬ್ರೆವಾಲ್ ಅವರನ್ನು 58 ಸಾವಿರಕ್ಕೂ ಹೆಚ್ಚು ಮತಗಳ ಅಂತದರಿಂದ ಸೋಲಿಸಿ ಗೆಲುವಿನ ನಗೆ ಬೀರಿದ್ದಾರೆ.
ಖೇಲೋ ಹೋಬೆ ಎನ್ನುತ್ತಾ ಉಪಚುನಾವಣೆಯ ಅಖಾಡಕ್ಕೆ ಮಮತಾ ಬ್ಯಾನರ್ಜಿ ಧುಮುಕಿದ್ರು. ಮುಖ್ಯಮಂತ್ರಿ ಪಟ್ಟ ಅಲಂಕರಿಸಿದ್ದ ದೀದಿಗೆ ಈ ಚುನಾವಣೆಯ ಗೆಲುವು ಅನಿವಾರ್ಯವಾಗಿತ್ತು. ಒಂದು ವೇಳೆ ಮಮತಾ ಚುನಾವಣೆಯಲ್ಲಿ ಸೋಲನ್ನಪ್ಪಿದ್ದರೆ ಮುಖ್ಯಮಂತ್ರಿ ಗದ್ದುಗೆಯನ್ನು ಪಕ್ಷದ ಬೇರೆ ನಾಯಕನಿಗೆ ಬಿಟ್ಟು ಕೊಡಬೇಕಾಗಿತ್ತು. ಇದೇ ಉದ್ದೇಶಕ್ಕೆ ಉಪಚುನಾವಣೆಯಲ್ಲಿ ಮತ್ತೆ ತವರು ಕ್ಷೇತ್ರವನ್ನೇ ಆಯ್ದುಕೊಂಡ ಮಮತಾ ಬ್ಯಾನರ್ಜಿ ಇದೀಗ 58,000 ಕ್ಕೂ ಹೆಚ್ಚು ಮತಗಳಿಂದ ಗೆಲುವು ಸಾಧಿಸಿದ್ದಾರೆ. ಸದ್ಯ ಮಮತಾ ಗೆಲುವು ರಾಷ್ಟ್ರ ರಾಜಕಾರಣ ಹೊಸ ದಿಕ್ಕಿನಲ್ಲಿ ಸಾಗುವ ಸಾಧ್ಯತೆ ದಟ್ಟವಾಗಿದೆ.

‘ದೀದಿ’ ಮತ್ತಷ್ಟು ಬಲ
ಭವಾನಿಪುರ ಗೆಲುವಿನ ಮೂಲಕ ದೀದಿ ಮತ್ತಷ್ಟು ಬಲ, ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ ದೀದಿ, ಭವಾನಿಪುರ ಬೈ ಎಲೆಕ್ಷನ್ನಲ್ಲಿ ಸ್ಪರ್ಧಿಸಿ ದೀದಿ ಗೆಲುವು, ಎರಡು ರೀತಿಯಲ್ಲಿ ಮಮತಾ ಬ್ಯಾನರ್ಜಿಗೆ ನೆರವಾದ ಗೆಲುವು, ಗೆಲುವಿನ ಮೂಲಕ ಸಿಎಂ ಕುರ್ಚಿ ಉಳಿಸಿಕೊಂಡ ದೀದಿ, 2024ಕ್ಕೆ ಪ್ರಧಾನಿ ಕುರ್ಚಿಯ ಮೇಲೆ ಕಣ್ಣಿಟ್ಟಿರುವ ಮಮತಾ, ಪ್ರಧಾನಿ ಮೋದಿಗೆ ಪರ್ಯಾಯ ನಾಯಕಿಯಾಗುವ ಹಂಬಲ.
ಭವಾನಿಪುರ ಗೆಲುವಿನ ಮೂಲಕ ದೀದಿ ಮತ್ತಷ್ಟು ಬಲಗೊಂಡಿದ್ದಾರೆ. ಸಾರ್ವತ್ರಿಕ ಚುನಾವಣೆಯಲ್ಲಿ ಸೋಲು ಕಂಡಿದ್ದ ದೀದಿ ಉಪಚುನಾವಣೆಯಲ್ಲಿ ಮತ್ತೆ ಗೆಲುವು ಸಾಧಿಸಿರೋದು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಉಪಚುನಾವಣೆಯ ಗೆಲುವು ಮಮತಾ ಬ್ಯಾನರ್ಜಿಗೆ ಎರಡು ರೀತಿಯಲ್ಲಿ ನೆರವಾಗಿದೆ. ಈ ಗೆಲುವಿನ ಮೂಲಕ ಸಿಎಂ ಕುರ್ಚಿಯನ್ನು ದೀದಿ ಉಳಿಸಿಕೊಂಡಿದ್ದಾರೆ. ಜೊತೆಗೆ 2024ಕ್ಕೆ ಪ್ರಧಾನಿ ಕುರ್ಚಿಯ ಮೇಲೆ ಕಣ್ಣಿಟ್ಟಿರೋ ಮಮತಾಗೆ ಈ ಗೆಲುವು ಮೋದಿಗೆ ಪರ್ಯಾಯ ನಾಯಕಿಯಾಗಿ ಬೆಳೆಯುವ ಹಂಬಲಕ್ಕೆ ಮತ್ತಷ್ಟು ಬಲ ನೀಡಿದೆ.
ಇನ್ನು ಚುನಾವಣೆಯಲ್ಲಿ ಮಮತಾ ಗೆಲುವು ದಾಖಲಿಸುತ್ತಿದ್ದಂತೆ ದೀದಿ ಬೆಂಗಲಿಗರ ಸಂಭ್ರಮಾಚಾರಣೆ ಮುಗಿಲುಮುಟ್ಟಿತ್ತು. ಪಟಾಕಿ ಸಿಡಿಸಿ, ದೀದಿ ಪರ ಘೋಷಣೆಗಳನ್ನು ಕೂಗಿ ತೃಣಮೂಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಂಭ್ರಮಿಸಿದರು.
ಇಡೀ ರಾಷ್ಟ್ರದ ಗಮನಸೆಳೆದಿದ್ದ ಭವಾನಿಪುರ ಕ್ಷೇತ್ರದ ಉಪಚುನಾವಣೆಯಲ್ಲಿ ಜಯದ ಹಾರ ಸಿಎಂ ಮಮತಾ ಬ್ಯಾನರ್ಜಿ ಕೊರಳಿಗೆ ಬಿದ್ದಿದೆ. ಈ ಗೆಲುವಿನ ಮೂಲಕ ರಾಷ್ಟ್ರ ರಾಜಕಾರಣದಲ್ಲಿ ಹೊಸ ಆಟ ಶುರುವಾಗಿದ್ದು, ಈ ಆಟದಲ್ಲಿ ಬಿಜೆಪಿಗೆ ಟಿಎಂಸಿ ಪ್ರಬಲ ಪ್ರತಿಸ್ಪರ್ಧಿಯಾಗಲು ಪ್ರಯತ್ನಿಸುತ್ತಿದೆ. ಮಮತಾ ಗೆಲುವಿನಿಂದ ರಾಷ್ಟ್ರ ರಾಜಕಾರಣಕ್ಕೆ ತಿರುವು ಸಿಗೋದಂತು ನಿಚ್ಚಳ.