ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಬಿ.ವೈ ವಿಜಯೇಂದ್ರ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಆದರೆ ಬಿ.ವೈ ವಿಜಯೇಂದ್ರ ನೇಮಕದಿಂದ ಮುನಿಸಿಕೊಂಡಿರುವ ಬಿಜೆಪಿ ನಾಯಕರು ಬಿ.ವೈ ವಿಜಯೇಂದ್ರ ಪದಗ್ರಹಣ ಕಾರ್ಯಕ್ರಮದಿಂದ ದೂರು ಉಳಿಸಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಕಟುವಾಗಿ ಟೀಕಿಸಿದ್ದು, ವಿಜಯೇಂದ್ರರ ಪದಗ್ರಹಣ, ಬಿಜೆಪಿಗೆ ಹಿಡಿದ ಗ್ರಹಣ ಎಂದಿದೆ. ಬಿಜೆಪಿಯ ಮುಂದಿನ ಸಾಲಿನ ನಾಯಕರೇ ಪದಗ್ರಹಣ ಸಮಾರಂಭಕ್ಕೆ ಗೈರಾಗಿ ನೂತನ ಅಧ್ಯಕ್ಷರ ವಿರುದ್ಧ ಬಂಡಾಯ ಸಾರಿದ್ದಾರೆ. ಸಮಾರಂಭಕ್ಕೆ ರಾಷ್ಟ್ರೀಯ ನಾಯಕರೂ ಪತ್ತೆ ಇಲ್ಲ, ರಾಜ್ಯದ ನಾಯಕರೂ ಪತ್ತೆ ಇಲ್ಲ. ವಿಜಯೇಂದ್ರ ಬಿಜೆಪಿಯೊಳಗಿನ ‘ಕೆಜೆಪಿ’ಯ ಅಧ್ಯಕ್ಷರೇ ಹೊರತು ಬಿಜೆಪಿಯ ಅಧ್ಯಕ್ಷರಲ್ಲ. ಗೈರಾದವರ ಪಟ್ಟಿ ನೋಡುತ್ತಿದ್ದರೆ “ಸಂತೋಷ ಕೂಟ”ದ ಸದಸ್ಯರ ಸಂಖ್ಯೆ ಹೆಚ್ಚುವ ಲಕ್ಷಣವಿದೆ ಎಂದು ಗೈರಾದ ನಾಯಕರ ಹೆಸರುಗಳನ್ನು ಪಟ್ಟಿ ಮಾಡಿ ಹಾಕಲಾಗಿದೆ.
ಕಾಂಗ್ರೆಸ್ ನಾಯಕರ ಜೊತೆಗೆ ಬಿಜೆಪಿ ನಾಯಕರು..!
ಪಕ್ಷದ ರಾಜ್ಯಾಧ್ಯಕ್ಷರ ಪದಗ್ರಹಣಕ್ಕೆ ಗೈರು ಹಾಜರಾಗಿದ್ದ ಶಾಸಕ ಅರವಿಂದ ಬೆಲ್ಲದ್, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರ್ಯಕ್ರಮದಲ್ಲಿ ಹಾಜರಾಗಿದ್ದರು. ಬಿ.ವೈ ವಿಜಯೇಂದ್ರ ಆಯ್ಕೆ ಬಳಿಕ ಮುನಿಸಿಕೊಡಿರುವ ಹು-ಧಾರವಾಡ ಪಶ್ಚಿಮ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್, ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಧಾರವಾಡದಲ್ಲಿ ನಡೆದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಲಿಂ. ದೊಡ್ಡಭಾವೆಪ್ಪ ಮೂಗಿ ಸ್ಮರಣಾರ್ಥ ದತ್ತಿ ಉದ್ಘಾಟನೆಯಲ್ಲಿ ಭಾಗಿಯಾಗಿದ್ದರು. ದತ್ತಿ ಉದ್ಘಾಟನೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಗಮಿಸಿದ್ದರು. ಅತಿಥಿಯಾಗಿ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಭಾಗಿಯಾಗಿದ್ದರು. ವಿಶೇಷ ಅಂದ್ರೆ ಅರವಿಂದ್ ಬೆಲ್ಲದ್ ತಂದೆ ಚಂದ್ರಕಾಂತ ಬೆಲ್ಲದ್ ಅಧ್ಯಕ್ಷತೆ ಈ ಕಾರ್ಯಕ್ರಮ ನಡೀತು. ತಂದೆಯೊಂದಿಗೆ ದತ್ತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಬೆಲ್ಲದ್.
ಗೃಹ ಮಂತ್ರಿ ಜೊತೆಗೆ ಹೊರಟ ಮಾಜಿ ಮಿನಿಸ್ಟರ್
ಕಾಂಗ್ರೆಸ್ ಶಾಸಕರಾಗಿದ್ದ ಎಸ್.ಟಿ ಸೋಮಶೇಖರ್, ಕಾಂಗ್ರೆಸ್ ತೊರೆದು ಬಿಜೆಪಿ ಕಡೆಗೆ ಹೆಚ್ಚೆ ಹಾಕಿದ್ದರು. ಆ ಬಳಿಕ ಮಂತ್ರಿಯಾಗಿಯೂ ಕೆಲಸ ಮಾಡಿದ್ರು. ಇದೀಗ ಮತ್ತೆ ಕಾಂಗ್ರೆಸ್ ಕಡೆಗೆ ಹೆಜ್ಜೆ ಹಾಕುವ ಲಕ್ಷಣ ಕಾಣಿಸಿಕೊಳ್ತಿದೆ. ಬಿ.ವೈ ವಿಜಯೇಂದ್ರ ಅಧ್ಯಕ್ಷರಾಗಿ ಪದಗ್ರಹಣ ಸ್ವೀಕಾರ ಮಾಡುತ್ತಿದ್ರೆ, ಕಾರ್ಯಕ್ರಮಕ್ಕೆ ಗೈರು ಹಾಜರಾದ ಎಸ್.ಟಿ ಸೋಮಶೇಖರ್, ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅಧ್ಯಕ್ಷತೆಯಲ್ಲಿ ನಡೆದ ಕುಂಬಳಗೂಡು ಪೊಲೀಸ್ ಠಾಣೆ ಉದ್ಘಾಟನೆ ಸಮಾರಂಭದಲ್ಲಿ ಭಾಗಿಯಾಗಿದ್ದರು. ಈ ಬಗ್ಗೆ ಮಾತನಾಡಿದ ಸೋಮಶೇಖರ್, ನನಗೆ ಈ ಕಾರ್ಯಕ್ರಮ ಮೊದಲೇ ನಿಗದಿಯಾಗಿತ್ತು. ಹಾಗಾಗಿ ಕಾರ್ಯಕ್ರಮಕ್ಕೆ ಬಂದಿದ್ದೇನೆ ಅಂದ್ರು. ನನ್ನನ್ನ ಪಕ್ಷದಲ್ಲಿ ಯಾರೇ ಕಡೆಗಣಿಸಲಿ, ಕ್ಷೇತ್ರದ ಜನರು ಜೊತೆಗಿದ್ದಾರೆ. ನನ್ನ ಬಗ್ಗೆ ಮಾತನಾಡಿದ ರಾಷ್ಟ್ರೀಯ ನಾಯಕರು, ಈಗ ಯಾವ ಸ್ಥಿತಿಯಲ್ಲಿದ್ದಾರೆ ಎನ್ನುವ ಮೂಲಕ ಬಿಜೆಪಿ ನಾಯಕರಿಗೇ ಟಾಂಗ್ ಕೊಟ್ಟಿದ್ದಾರೆ.

ರಾಜನ ಆಯ್ಕೆ ಆಗಿದೆ.. ಆದರೆ ಮಂತ್ರಿ ಮಂಡಳ ಇಲ್ಲದಿದ್ರೆ ಹೇಗೆ..?
ಕಾಂಗ್ರೆಸ್ ಇಷ್ಟು ದಿನ ಬಿಜೆಪಿಗೆ ನೂತನ ರಾಜ್ಯಾಧ್ಯಕ್ಷರು ಇಲ್ಲ, ವಿರೋಧ ಪಕ್ಷದ ನಾಯಕ ಇಲ್ಲ ಅಂತಾ ವ್ಯಂಗ್ಯವಾಡ್ತಿತ್ತು. ಆದರೆ ಇದೀಗ ರಾಜ್ಯಾಧ್ಯಕ್ಷರ ನೇಮಕ ಆಗಿದೆ. ಆದರೆ ಮನೆಯೊಂದು ಮೂರು ಬಾಗಿ ಅನ್ನೋ ಬದಲು ಮನೆಯೊಂದು 30 ಹೆದ್ದಾರಿ ಅನ್ನುವಂತಾಗಿದೆ. ಅಧ್ಯಕ್ಷರನ್ನು ನೇಮಕ ಮಾಡಿರುವ ಹೈಕಮಾಂಡ್ ನಾಯಕರು ಕೂಡಲೇ ಎಚ್ಚರವಹಿಸಿ ಉಳಿದ ನಾಯಕರಿಗೆ ಖಡಕ್ ಸೂಚನೆ ಕೊಟ್ಟು ಸರಿದಾರಿಗೆ ತರದಿದ್ದರೆ, ವಿಜಯೇಂದ್ರ ನಾಮಕಾವಸ್ತೆ ಅಧ್ಯಕ್ಷರಾಗುತ್ತಾರೆ. ನಳೀನ್ ಕುಮಾರ್ ಕಟೀಲ್ ರೀತಿಯಲ್ಲೇ ಉತ್ಸಾಹ ಇಲ್ಲದ ಅಧ್ಯಕ್ಷರು, ಕಾರಿನ ಮೇಲೆ ಬೋರ್ಡ್ ಹಾಕಿಕೊಂಡು ಓಡಾಡಬೇಕಾಗುತ್ತದೆ ಅಷ್ಟೆ. ಪದಗ್ರಹಣ ಕಾರ್ಯಕ್ರಮದಲ್ಲಿ ನಾಯಕರ ಗೈರು ಹಾಜರು ಎದ್ದು ಕಾಣಿಸಿದ್ದು, ನಾಳೆ ನಿಗದಿ ಆಗಿರುವ ಶಾಸಕಾಂಗ ಸಭೆಗಾದರೂ ಶಾಸಕರು ಬರ್ತಾರಾ..? ಅಥವಾ ಅಲ್ಲೂ ಶಾಸಕರು ಇಲ್ಲದೆ ಸಭೆಯೇ ರದ್ದಾಗುತ್ತಾ..? ಅನ್ನೋ ಆತಂಕ ಮನೆ ಮಾಡಿದೆ.












