ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಇಂದು ಮೈಸೂರಿಗೆ ಆಗಮಿಸಿದ್ದಾರೆ.ನಗರದ ಉದಯಗಿರಿಯಲ್ಲಿ ನಡೆದ (Udayagiri riots) ಗಲಭೆಗೆ ಸಂಬಂಧಪಟ್ಟಂತೆ ನಿಷೇಧಾಜ್ಞೆ ನಡುವೆಯೂ ಬಿಜೆಪಿಯಿಂದ (Bjp) ಇಂದು ಜಾಥಾ ನಡೆಸಲು ಮುಂದಾಗಿದ್ದು, ಈ ಹಿನ್ನಲೆಯಲ್ಲಿ ವಿಜಯೇಂದ್ರ ಮೈಸೂರಿಗೆ ಆಗಮಿಸಿ ನಾಯಕರ ಜೊತೆ ಚರ್ಚೆ ನಡೆಸಿದ್ದಾರೆ.

ಈ ವೇಳೆ ಮಾಜಿ ಸಂಸದ ಪ್ರತಾಪ್ ಸಿಂಹ (Prathap simha), ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಒಟ್ಟಿಗೆ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು. ಈ ಹಿಂದೆ ಬಿ ಎಸ್ ವೈ ಮತ್ತು ವಿಜಯೇಂದ್ರ ವಿರುದ್ಧ ಪರೋಕ್ಷ ಅಸಮಾಧಾನ ಹೊಂದಿದ್ದ ಪ್ರತಾಪ್ ಸಿಂಹ ಯತ್ನಾಳ್ ಬಣದಲ್ಲಿ ಗುರುತಿಸಿಕೊಂಡಿದ್ದರು.

ಆದ್ರೆ ಇಂದು ಇಬ್ಬರು ಒಟ್ಟಿಗೆ ಕುಳಿತು ಮಾತನಾಡುತ್ತಾ ಚಹಾ ಸೇವಿಸಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ಈ ಮಧ್ಯೆ ಮೈಸೂರು ನಗರದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.ರಾತ್ರಿ 12 ಗಂಟೆಯಿಂದ ಮರುದಿನ ರಾತ್ರಿ 12 ಗಂಟೆ ವರೆಗೆ ನಿಷೇಧಾಜ್ಞೆ ಜಾರಿಯಲ್ಲಿದೆ. ಈ ಬಗ್ಗೆ ಪೊಲೀಸ್ ಕಮೀಷನರ್ ಸೀಮಾ ಲಾಟ್ಕರ್ ಆದೇಶ ಹೊರಡಿಸಿದ್ದಾರೆ.
ಮತ್ತೊಂದೆಡೆ ಈಗಾಗಲೇ ರಾಷ್ಟ್ರ ಸುರಕ್ಷಾ ಜನಾಂದೋಲನ ಸಮಿತಿ ಜಾಥಾ ಹಮ್ಮಿಕೊಂಡಿದ್ದು ಜಾಥಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಚಾಲನೆ ನೀಡಲಿದ್ದಾರೆ. ಇತ್ತ ಇದನ್ನು ವಿರೋಧಿಸಿ ಅದೇ ಸಮಯದಲ್ಲಿ ದಲಿತ ಮಹಾಸಭಾ ಮೌನ ಮೆರವಣಿಗೆ ಹಾಗೂ ಸಮಾವೇಶ ಹಮ್ಮಿಕೊಳ್ಳಲು ಮುಂದಾಗಿದೆ.