ಆಡಳಿತಾರೂಢ ಬಿಜೆಪಿಗಾಗಲೀ ಅಥವಾ ಪ್ರತಿಪಕ್ಷಗಳಿಗಾಗಲೀ ರಾಜಕೀಯವಾಗಿ ತೀರಾ ನಿರ್ಣಾಯಕವೆನಿಸದೇ ಇದ್ದರೂ, ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರಿಗೆ ಗಣನೀಯ ಎನಿಸಿರುವ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದು, ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ.
ಹಾನಗಲ್ ಮತ್ತು ಸಿಂಧಗಿ ಕ್ಷೇತ್ರಗಳಲ್ಲಿ ಕ್ರಮವಾಗಿ ಬಿಜೆಪಿ ಮತ್ತು ಜೆಡಿಎಸ್ ನಿಂದ ಆಯ್ಕೆಯಾದ ಶಾಸಕರ ಅಕಾಲಿಕ ನಿಧನದಿಂದಾಗಿ ಎರಡೂ ಕಡೆ ಉಪಚುಣಾವಣೆ ನಡೆಯುತ್ತಿದೆ. ಹಾನಗಲ್ ನಲ್ಲಿ ಬಿ ಎಸ್ ಯಡಿಯೂರಪ್ಪ ಪರಮಾಪ್ತ ಸಿ ಎಂ ಉದಾಸಿ ಅವರ ನಿಧನದಿಂದಾಗಿ ಉಪ ಚುನಾವಣೆ ಎದುರಾಗಿದ್ದರೆ, ಸಿಂಧಗಿಯಲ್ಲಿ ಜೆಡಿಎಸ್ ಶಾಸಕ ಎಂ ಸಿ ಮನಗೋಳಿ ಅವರ ನಿಧನದಿಂದಾಗಿ ಚುನಾವಣೆ ಎದುರಾಗಿದೆ. ಹಾಗಾಗಿ ತಮ್ಮ ತಮ್ಮ ಕ್ಷೇತ್ರವನ್ನು ಉಳಿಸಿಕೊಳ್ಳಲು ಸಿಂಧಗಿಯಲ್ಲಿ ಜೆಡಿಎಸ್ ಮತ್ತು ಹಾನಗಲ್ ನಲ್ಲಿ ಬಿಜೆಪಿ ಇನ್ನಿಲ್ಲದ ಸಾಹಸ ನಡೆಸಿವೆ.
ಹಾನಗಲ್ ನಲ್ಲಿ ರಾಜ್ಯ ಸರ್ಕಾರವೇ ಬೀಡುಬಿಟ್ಟಿದೆ ಎಂಬಷ್ಟರ ಮಟ್ಟಿಗೆ ಬಿಜೆಪಿಯ ಸಚಿವರು, ಶಾಸಕರು, ಇತರೆ ನಾಯಕರು ಭರ್ಜರಿ ಪ್ರಚಾರ ನಡೆಸಿದ್ದಾರೆ. ಅದರಲ್ಲೂ ಮುಖ್ಯಮಂತ್ರಿಯಾಗಿ ಮೊಟ್ಟಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿರುವ ಬೊಮ್ಮಾಯಿ ಅವರಿಗೆ ಸ್ವತಃ ತಮ್ಮದೇ ಜಿಲ್ಲೆಯ ಈ ಕ್ಷೇತ್ರದ ಸೋಲು-ಗೆಲುವು ಹಲವು ಕಾರಣಗಳಿಂದಾಗಿ ನಿರ್ಣಾಯಕ. ಅಲ್ಲದೆ, ಬೊಮ್ಮಾಯಿ ಅವರ ಪತ್ನಿಯ ತವರು ಎಂಬ ಕಾರಣಕ್ಕೂ ಹಾನಗಲ್ ಕ್ಷೇತ್ರದ ಚುನಾವಣೆ ಸಿಎಂ ಹೆಸರಿನೊಂದಿಗೆ ಚರ್ಚೆಗೆ ಗ್ರಾಸವಾಗಿದೆ.
ಕಾಂಗ್ರೆಸ್ ಶ್ರೀನಿವಾಸ ಮಾನೆ ಎಂಬ ಅನುಭವಿ ನಾಯಕನನ್ನು ಕಣಕ್ಕಿಳಿಸಿದ್ದರೆ, ಬಿಜೆಪಿ ಉದಾಸಿ ಕುಟುಂಬದವರನ್ನು ಕಣಕ್ಕಿಳಿಸುವ ಬದಲಾಗಿ ಶಿವರಾಜ್ ಸಜ್ಜನರ್ ಎಂಬ ಹಾವೇರಿಯ ಮಾಜಿ ಶಾಸಕರನ್ನು ಕಣಕ್ಕಿಳಿಸಿದೆ. ಅಭ್ಯರ್ಥಿ ಆಯ್ಕೆಯ ವಿಷಯದಲ್ಲೇ ಆರಂಭದಿಂದಲೂ ಯಡಿಯೂರಪ್ಪ ಮತ್ತು ಬಿಜೆಪಿ ನಾಯಕತ್ವದ ನಡುವೆ ಭಿನ್ನಾಭಿಪ್ರಾಯದ ಬಿರುಕು ಉಂಟಾಗಿತ್ತು. ಉದಾಸಿ ಸೊಸೆ ಹಾಗೂ ಶಿವಕುಮಾರ್ ಉದಾಸಿ ಪತ್ನಿಯನ್ನು ಕಣಕ್ಕಿಳಿಸುವುದು ಇಲ್ಲವೇ ತಮ್ಮ ಪುತ್ರ ವಿಜಯೇಂದ್ರಗೆ ಟಿಕೆಟ್ ಕೊಡಿಸುವುದು ಯಡಿಯೂರಪ್ಪ ಯೋಜನೆಯಾಗಿತ್ತು. ಆದರೆ, ಅಷ್ಟರಲ್ಲಾಗಲೀ ಯಡಿಯೂರಪ್ಪ ಅವರನ್ನು ಬದಿಗೆ ಸರಿಸುವ ಕಾರ್ಯತಂತ್ರ ಜಾರಿಗೊಳಿಸಿದ್ದ ಬಿಜೆಪಿ ಹೈಕಮಾಂಡ್, ಅವರ ಯಾವ ಸಲಹೆ, ಬೇಡಿಕೆಯನ್ನೂ ಪರಿಗಣಿಸದೆ ಸಜ್ಜನರ್ ಅವರನ್ನು ಕಣಕ್ಕಿಳಿಸಿತ್ತು. ಜೊತೆಗೆ ಪ್ರಚಾರ ಸಮಿತಿಯಲ್ಲಿ ಆರಂಭದಲ್ಲಿ ವಿಜಯೇಂದ್ರ ಅವರಿಗೆ ಸ್ಥಾನ ಕೊಡದೆ ಹೊರಗಿಡುವ ಮೂಲಕ ಮತ್ತೊಂದು ಸಂದೇಶ ರವಾನಿಸಲಾಗಿತ್ತು. ಬಳಿಕ ಚುನಾವಣಾ ಕಣದಲ್ಲಿ ಅದು ತಿರುಗುಬಾಣವಾಗಬಹುದು ಎಂಬ ಲೆಕ್ಕಾಚಾರದಲ್ಲಿ ಯೂ ಟರ್ನ್ ಹೊಡೆದು ವಿಜಯೇಂದ್ರ ಅವರಿಗೆ ಉಸ್ತುವಾರಿ ಪಟ್ಟಿಯಲ್ಲಿ ಸ್ಥಾನ ನೀಡಲಾಗಿತ್ತು.
ಅಷ್ಟೇ ಅಲ್ಲದೆ, ಚುನಾವಣಾ ಪ್ರಚಾರದ ವಿಷಯದಲ್ಲಿ ಕೂಡ ಯಡಿಯೂರಪ್ಪ ಆರಂಭದಲ್ಲಿ ನಿರಾಸಕ್ತರಾಗಿದ್ದರು. ಹೈಕಮಾಂಡ್ ಮತ್ತು ಆರ್ ಎಸ್ ಎಸ್ ಪ್ರಮುಖರು ಅವರ ಮನವೊಲಿಸಿ ಪ್ರಚಾರಕ್ಕೆ ಕರೆ ತಂದಿದ್ದರು. ಪ್ರಚಾರಕ್ಕೆ ಬಂದ ಬಳಿಕವೂ ಸಮಯಾವಕಾಶದ ನೆಪದಲ್ಲಿ ಅವರ ಪ್ರಚಾರ ಸಭೆಗಳನ್ನು ಗಣನೀಯವಾಗಿ ಕಡಿತ ಮಾಡಲಾಯಿತು. ಅಷ್ಟೇ ಅಲ್ಲ ವಿಜಯೇಂದ್ರ ಅವರ ಪ್ರಚಾರ ಸಭೆಗಳಿಗೂ ಕತ್ತರಿ ಹಾಕಲಾಯಿತು ಮತ್ತು ಅವರೊಂದಿಗೆ ಪ್ರಮುಖ ಸಚಿವರು, ನಾಯಕರು ಸಭೆಗಳಲ್ಲಿ ಭಾಗಿಯಾಗದಂತೆ ತಡೆಯುವ ಯತ್ನವೂ ನಡೆಯಿತು ಎಂಬುದು ಬಿಜೆಪಿಯ ಆಂತರಿಕ ವಲಯದಲ್ಲೇ ಚರ್ಚೆಯಾಗುತ್ತಿರುವ ಸಂಗತಿ.
ಬಿಜೆಪಿಯಲ್ಲಿ ಹೀಗೆ ಆಂತರಿಕ ಬೇಗುದಿ ಚುನಾವಣಾ ಕಣದಲ್ಲಿ ಎದ್ದು ಕಾಣುತ್ತಿದ್ದರೆ, ಮತ್ತೊಂದು ಕಡೆ ಕಾಂಗ್ರೆಸ್ ಪಾಳೆಯದಲ್ಲಿ ಎಲ್ಲಿಲ್ಲದ ರಣೋತ್ಸಾಹ, ಒಗ್ಗಟ್ಟು ಎದ್ದು ಕಾಣುತ್ತಿತ್ತು. ಜೊತೆಗೆ ಶ್ರೀನಿವಾಸ ಮಾನೆ ಕ್ಷೇತ್ರದಲ್ಲಿ ಕಳೆದ ಹಲವು ವರ್ಷಗಳಿಂದ ಜನಪ್ರಿಯ ಮುಖ. ಆದರೆ, ಕಾಂಗ್ರೆಸ್ಗೆ ಆತಂಕವಿರುವುದು ಜೆಡಿಎಸ್ ನ ಮುಸ್ಲಿಂ ಅಭ್ಯುರ್ಥಿಯ ಅಡ್ಡ ಹೊಡೆತ. ಹಾನಗಲ್ ಮತ್ತು ಸಿಂಧಗಿ ಕ್ಷೇತ್ರಗಳೆರಡರಲ್ಲೂ ಜೆಡಿಎಸ್ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ನಿರ್ಣಾಯಕ ಪ್ರಮಾಣದಲ್ಲಿ ಇರುವ ಅಲ್ಪಸಂಖ್ಯಾತ ಮತಗಳನ್ನು ಬಾಚುವ ಯತ್ನ ಮಾಡಿದ್ದು, ಒಂದು ಕಡೆ ಬಿಜೆಪಿಗೆ ಅನುಕೂಲಕರ ವಾತಾವರಣ ನಿರ್ಮಿಸಿದ್ದರೆ, ಕಾಂಗ್ರೆಸ್ಸಿಗೆ ಆತಂಕ ಒಡ್ಡಿದೆ ಎಂಬುದು ಉಪ ಚುನಾವಣೆಯ ಮಟ್ಟಿಗೆ ಭಾರೀ ಚರ್ಚೆಗೊಳಗಾದ ಸಂಗತಿ.
ಜೆಡಿಎಸ್ ನ ಇಂತಹ ತಂತ್ರಗಾರಿಕೆಯ ಕಾರಣಕ್ಕೇ ಈ ಬಾರಿಯ ಈ ಉಪ ಚುನಾವಣೆ ಆಳುವ ಪಕ್ಷ ಮತ್ತು ಪ್ರತಿಪಕ್ಷಗಳ ನಡುವಿನ ವಾಕ್ಸಮರಕ್ಕಿಂತಲೂ, ಪ್ರತಿಪಕ್ಷಗಳೆರಡರ ನಡುವಿನ ಕೆಸರೆರಚಾಟಕ್ಕೇ ಹೆಚ್ಚು ಸದ್ದು ಮಾಡಿದೆ ಎಂಬುದು ಕೂಡ ನಿಜ.
ಸಿಂಧಗಿಯಲ್ಲಿ ಕೂಡ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ನೇರ ಹಣಾಹಣಿಯ ಚಿತ್ರಣವನ್ನು ಜೆಡಿಎಸ್ ನ ಮುಸ್ಲಿಂ ಅಭ್ಯರ್ಥಿಯ ದಾಳ ಸಂಪೂರ್ಣವಾಗಿ ಬದಲಿಸಿದೆ. ಎಂ ಸಿ ಮನಗೋಳಿ ಪುತ್ರ ಅಶೋಕ್ ಮನಗೋಳಿ ಅವರನ್ನು ಪಕ್ಷಕ್ಕೆ ಸೆಳೆದು ಕಾಂಗ್ರೆಸ್, ಅವರನ್ನೇ ಕಟ್ಟಾಳುವನ್ನಾಗಿ ಕಣಕ್ಕಿಳಿಸಿದ್ದರೆ, ಬಿಜೆಪಿ ರಮೇಶ್ ಭೂಸನೂರ ಅವರನ್ನು ಕಣಕ್ಕಿಳಿಸಿದೆ. 2008 ಮತ್ತು 2013ರಲ್ಲಿ ಶಾಸಕರಾಗಿ ಅನುಭವ ಹೊಂದಿರುವ ರಮೇಶ್, 2018ರಲ್ಲಿ ಜೆಡಿಎಸ್ ನ ಮನಗೋಳಿ ವಿರುದ್ಧ ಸೋಲು ಕಂಡಿದ್ದರು. ಹಾಗಾಗಿ ಮನಗೋಳಿ ಮನೆತನದ ವರ್ಚಸ್ಸು ಮತ್ತು ಬಿಜೆಪಿಯ ಸಾಂಪ್ರದಾಯಿಕ ಮತಗಳ ನಡುವೆ ನೇರ ಹಣಾಹಣಿ ನಡೆಯುವ ಸಂಭವವಿತ್ತು. ಆದರೆ, ಜೆಡಿಎಸ್ ನಾಜಿಯಾ ಅಂಗಡಿಯವರನ್ನು ಕಣಕ್ಕಿಳಿಸುವ ಮೂಲಕ ಅಲ್ಪಸಂಖ್ಯಾತ ದಾಳ ಉರುಳಿಸಿದೆ. ಹಾಗಾಗಿ ಮತ ವಿಭಜನೆಯ ಆತಂಕ ಕಾಂಗ್ರೆಸ್ಸಿಗೆ, ಹಿಂದುತ್ವದ ಮೇಲೆ ಮತ ಕ್ರೋಡೀಕರಣದ ಲೆಕ್ಕಾಚಾರ ಬಿಜೆಪಿಗೆ.
ಆದರೆ, ಈ ಎರಡೂ ಉಪ ಚುನಾವಣೆಯ ವಿಷಯದಲ್ಲಿ ಈ ಎಲ್ಲಾ ಅಂಶಗಳಿಗಿಂತ ಈ ಬಾರಿ ಕಣದಲ್ಲಿ ನಿರ್ಣಾಯಕ ಅಂಶ ಮಾಜಿ ಮುಖ್ಯಮಂತ್ರಿ ಹಾಗೂ ಲಿಂಗಾಯತ ನಾಯಕ ಬಿ ಎಸ್ ಯಡಿಯೂರಪ್ಪ ವರ್ಚಸ್ಸು. ಹೀನಾಯವಾಗಿ ಪದಚ್ಯುತಗೊಳಿಸಿದ ಬಳಿಕವೂ ಬಿಜೆಪಿಯ ಹೈಕಮಾಂಡ್ ಮತ್ತು ಆರ್ ಎಸ್ ಎಸ್ ಢಾಳಾಗಿ ಕಾಣುವಂತೆ ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡುವ ಒಂದೊಂದೇ ತಂತ್ರಗಳನ್ನು ಜಾರಿಗೊಳಿಸುತ್ತಿರುವಾಗ, ಯಡಿಯೂರಪ್ಪ ಮತ್ತು ಅವರ ಆಪ್ತರು ಈ ಉಪ ಚುನಾವಣೆಯಲ್ಲಿ ನಿಜವಾಗಿಯೂ ಗಂಭೀರವಾಗಿ ಪರಿಗಣಿಸಿದ್ದಾರೆಯೇ? ಅಥವಾ ಇಲ್ಲವೇ ಎಂಬುದಕ್ಕೆ ಈ ಚುನಾವಣಾ ಫಲಿತಾಂಶ ಒಂದು ಸಂದೇಶ ನೀಡಲಿದೆ. ಅದರಲ್ಲೂ ಎರಡೂ ಕ್ಷೇತ್ರಗಳಲ್ಲಿ ಲಿಂಗಾಯತ ಪ್ರಭಾವ ಸಾಕಷ್ಟಿರುವ ಹಿನ್ನೆಲೆಯಲ್ಲಿ ಇದು ಗಮನಿಸಬೇಕಾದ ಸಂಗತಿಯೇ. ಹಾಗೇ, ಯಡಿಯೂರಪ್ಪ ಪ್ರಭಾವ ಈಗಲೂ ಉತ್ತರ ಕರ್ನಾಟಕದ ಭಾಗದಲ್ಲಿ ಎಷ್ಟರಮಟ್ಟಿಗೆ ಉಳಿದಿದೆ ಅಥವಾ ಕರಗಿದೆ ಎಂಬುದಕ್ಕೂ ಈ ಚುನಾವಣಾ ಫಲಿತಾಂಶ ನಿರ್ಣಾಯಕ.
ಆ ದೃಷ್ಟಿಯಿಂದ ರಾಜ್ಯ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಈ ಉಪ ಚುನಾವಣೆ ಎಷ್ಟು ಮುಖ್ಯವೋ, ಅಷ್ಟೇ ಬಿಜೆಪಿ ಮತ್ತು ಯಡಿಯೂರಪ್ಪ ಸಂಬಂಧದ ವಿಷಯದಲ್ಲಿ ಕೂಡ ಇದು ನಿರ್ಣಾಯಕ.