ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡಿದಾಗ ಅಹ್ಮದಾಬಾದಿನ ಮುನ್ಸಿಪಲ್ ಕಾರ್ಪೊರೇಶನ್ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂದಿರಾ ಬ್ರಿಡ್ಜ್ವರೆಗೆ ಬೃಹತ್ ಗೋಡೆ ನಿರ್ಮಾಣ ಮಾಡಿ ಸ್ಲಂ ಏರಿಯಾಗಳು ಟ್ರಂಪ್ ಕಣ್ಣಿಗೆ ಬೀಳದಿರುವಂತೆ ಮಾಡಿದ ಘಟನೆ ಇನ್ನೂ ಹಸಿಹಸಿ ಇರುವಾಗಲೇ ಈಗ ದೆಹಲಿಯಿಂದಲೂ ಅಂಥದೇ ಸುದ್ದಿ ಕೇಳಿ ಬರುತ್ತಿದೆ. ಆದರೆ ಈ ಬಾರಿ ಮಾತ್ರ ಇಂಥದ್ದೊಂದು ವಿನಂತಿ ಬಂದಿರುವುದು ಕೊಳಗೇರಿ ನಿವಾಸಿಗಳಿಂದಲೇ.
ಭಾರತವು 19 ದೇಶಗಳನ್ನು ಒಳಗೊಂಡಿರುವ ಅಂತರ-ಸರ್ಕಾರಿ ವೇದಿಕೆಯಾದ G20 ಯ ಅಧ್ಯಕ್ಷ ಸ್ಥಾನವನ್ನು ಈ ಬಾರಿ ಪಡೆದುಕೊಂಡಿದ್ದು ಇದರ ವಾರ್ಷಿಕ ಶೃಂಗ ಸಭೆಯು ದೆಹಲಿಯ ಪ್ರಗತಿ ಮೈದಾನದಲ್ಲಿ ಸಪ್ಟೆಂಬರ್ನಲ್ಲಿ ನಡೆಯಲಿದೆ. ಪ್ರಗತಿ ಮೈದಾನದ ವಿರುದ್ಧ ದಿಕ್ಕಿನಲ್ಲಿರುವ ಜನತಾ ಕ್ಯಾಂಪ್ ಒಂದು ಕೊಳಗೇರಿ ಪ್ರದೇಶವಾಗಿದ್ದು ಇಲ್ಲಿನ ಜನತೆಯೇ ಸರ್ಕಾರದ ಮುಂದೆ ಈಗ ಈ ವಿಚಿತ್ರ ಬೇಡಿಕೆ ಇಟ್ಟಿರೋದು.
ಪ್ರಗತಿ ಮೈದಾನವನ್ನು G-20 ಶೃಂಗಸಭೆಗಾಗಿ ಸಜ್ಜುಗೊಳಿಸುವ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು ಜನತಾ ಕ್ಯಾಂಪ್ನ ನಿವಾಸಿಗಳಿಗೆ ತೆರವು ನೋಟೀಸ್ ನೀಡುತ್ತಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಅಲ್ಲಿನ ನಿವಾಸಿಗಳು ಗೋಡೆ ಕಟ್ಟಿ ಪ್ರಪಂಚದ ಕಣ್ಣಿನಿಂದ ನಮ್ಮನ್ನು ಮರೆಯಾಗಿಸಿ, ಆದರೆ ಇಲ್ಲಿಂದ ಹೊರಹಾಕಬೇಡಿ ಎಂದು ವಿನಂತಿ ಮಾಡಿಕೊಳ್ಳುತ್ತಿದ್ದಾರೆ.
ಜನವರಿ 28 ರಂದು ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಅಧಿಕಾರಿಗಳು ತೆರವು ನೋಟಿಸ್ ಅಂಟಿಸಿ ನಿವಾಸಿಗಳು 15 ದಿನಗಳೊಳಗೆ ಮನೆಗಳನ್ನು ಖಾಲಿ ಮಾಡುವಂತೆ ಕೇಳಿಕೊಂಡಿದ್ದರು. ಯಾವ ಸ್ಪಷ್ಟ ಕಾರಣವನ್ನು ನೀಡದಿದ್ದರೂ, ಶೃಂಗಸಭೆಗಾಗಿ ಈ ಪ್ರದೇಶವನ್ನು “ಸ್ವಚ್ಛಗೊಳಿಸಲಾಗುತ್ತಿದೆ” ಎಂದು ಅಲ್ಲಿನ ನಿವಾಸಿಗಳು ಭಾವಿಸುತ್ತಿದ್ದಾರೆ.
ನೆಲಸಮ ಅಥವಾ ಹೊರಹಾಕುವ ಚಟುವಟಿಕೆಯನ್ನು ಕೈಗೊಳ್ಳುವ ಮೊದಲೇ ದೆಹಲಿ ಹೈಕೋರ್ಟ್, ಫೆಬ್ರವರಿ 14 ರಂದು ನೋಟಿಸ್ಗೆ ತಡೆಯಾಜ್ಞೆ ನೀಡಿ, ವರದಿ ಸಲ್ಲಿಸುವಂತೆ ಸರ್ಕಾರಿ ಅಧಿಕಾರಿಗಳಿಗೆ ಆದೇಶಿಸಿದೆ. ಆದರೂ ಅನಿಶ್ಚಿತತೆಯು ನಿವಾಸಿಗಳ ಮನಸ್ಸಿನಲ್ಲಿ ಮುಂದುವರಿದಿದೆ.
ನೂರಾರು ಕುಟುಂಬಗಳು ದಶಕಗಳಿಂದ ಜನತಾ ಕ್ಯಾಂಪ್ನಲ್ಲಿ ವಾಸಿಸುತ್ತಿವೆ. ಈ ಕೊಳಗೇರಿಯನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದ್ದು, ಮೊದಲನೆಯದನ್ನು ಉಳಿದ ಎರಡರಿಂದ ಬೇರ್ಪಡಿಸುವುದು ಬೃಹತ್ ಚರಂಡಿ. ಈಗ ಮುಖ್ಯರಸ್ತೆಯ ಪ್ರಗತಿ ಮೈದಾನದ ಗೇಟ್ 1ರ ಎದುರುಗಡೆ ಇರುವ 50 ಮನೆಗಳಿಗೆ ಮಾತ್ರ ನೋಟೀಸ್ ನೀಡಲಾಗಿದ್ದು ಇದು ನೇರವಾಗಿ ಸಾರ್ವಜನಿಕರ ಕಣ್ಣಿಗೆ ಬೀಳುವುದರಿಂದ ಈ ನೋಟಿಸ್ ನೀಡಲಾಗಿದೆ ಎಂದು ಅಲ್ಲಿನ ನಿವಾಸಿಗಳು ಆರೋಪಿಸುತ್ತಿದ್ದಾರೆ.
ಈ ಕ್ಯಾಂಪ್ ಪ್ರಧಾನವಾಗಿ ದಿನಗೂಲಿ ಕಾರ್ಮಿಕರು ಮತ್ತು ಬೀದಿ ವ್ಯಾಪಾರಿಗಳಿಗೆ ನೆಲೆಯಾಗಿದೆ. ಅವರು ಬುಲ್ಡೋಜರ್ಗಳ ಬೆದರಿಕೆಯನ್ನು ಎದುರಿಸುತ್ತಿರುವುದು ಇದೇ ಮೊದಲ ಬಾರಿಯೇನಲ್ಲ. 2010 ರಲ್ಲಿ ಭಾರತ ಆತಿಥ್ಯ ವಹಿಸಿದ್ದ ಕಾಮನ್ವೆಲ್ತ್ ಕ್ರೀಡಾಕೂಟಕ್ಕೂ ಮುನ್ನ ಸಹ ಇದೇ ರೀತಿಯ ನೋಟಿಸ್ಗಳನ್ನು ನೀಡಲಾಗಿತ್ತು.
ಆದರೆ “2010 ರಲ್ಲಿ ರಸ್ತೆ ಮತ್ತು ಫುಟ್ಪಾತ್ ಅನ್ನು ಮಾತ್ರ ತೆರವುಗೊಳಿಸಲು ಅಧಿಕಾರಿಗಳು ನಮ್ಮನ್ನು ಕೇಳಿದ್ದರು. ಅವರು ನಮ್ಮನ್ನು ಮನೆ ಖಾಲಿ ಮಾಡಲು ಹೇಳಿರಲಿಲ್ಲ” ಎಂದು ಹೇಳುತ್ತಾರೆ ಬಿಹಾರದಿಂದ ಬಂದಿರುವ ದಿನಗೂಲಿ ಕಾರ್ಮಿಕ 44 ವರ್ಷದ ಮೊಹಮ್ಮದ್ ಶಮಿ. ಈ ವಿಷಯದ ಕುರಿತು ದೆಹಲಿ ಹೈಕೋರ್ಟ್ಗೆ ಮೊರೆ ಹೋದ ನಿವಾಸಿಗಳಲ್ಲಿ ಶಮಿ ಕೂಡಾ ಒಬ್ಬರಾಗಿದ್ದಾರೆ.
“ನಾವು 27 ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದೇವೆ. 27 ವರ್ಷಗಳ ನಮ್ಮ ಜೀವನವನ್ನು ಕಿತ್ತು 15 ದಿನಗಳಲ್ಲಿ ಹೇಗೆ ಹೋಗುವುದು? ಇಷ್ಟು ಕಡಿಮೆ ಸಮಯದಲ್ಲಿ ನಾವು ಎಲ್ಲಿಗೆ ಹೋಗಲು ಸಾಧ್ಯ?” ಎಂಬ ಅವರ ಪ್ರಶ್ನೆಯು ಇಡೀ ಕೊಳಗೇರಿ ವಾಸಿಗಳ ಪ್ರಶ್ನೆಯೂ ಆಗಿದೆ.
ಜಿ-20 ಶೃಂಗಸಭೆ ಭಾರತದ ಪಾಲಿಗೆ ಪ್ರತಿಷ್ಠಿತವೇ ಆಗಿಯೇ ಇದ್ದರೂ ಸಹ ಜನರ ಮೂಲ ಅವಶ್ಯಕತೆಗಳನ್ನು ಕಡೆಗೆಣಿಸುವ, ದಶಕಗಳಿಂದ ಒಂದು ಪ್ರದೇಶದಲ್ಲಿ ವಾಸಿಸುತ್ತಿರುವವರನ್ನು ಒಕ್ಕಲೆಬ್ಬಿಸುವ ಅಧಿಕಾರದ ದಾಷ್ಟ್ರ್ಯವನ್ನು ಮಾತ್ರ ಪ್ರಭುತ್ವ ತೋರಬಾರದು. ಅವರೆಲ್ಲರ ಆತಂಕವನ್ನು ಅರ್ಥ ಮಾಡಿಕೊಂಡು ಸರ್ಕಾರ ಕಾರ್ಯನಿರ್ವಹಿಸುತ್ತದೆ ಎಂದಷ್ಟೇ ನಾವು ಈಗ ಆಶಿಸಬಹುದು.