ಮುಂಬೈ: ಬಾಲಿವುಡ್ನಲ್ಲಿ ನನಗೆ ಅವಕಾಶ ಕಡಿಮೆ ಆಗಲು ಕೋಮುವಾದವೂ ಕಾರಣವಿರಬಹುದು ಎಂದು ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಪರೋಕ್ಷವಾಗಿ ಬೇಸರ ಹೊರಹಾಕಿದ್ದಾರೆ.

ಬಿಬಿಸಿ ಏಷಿಯನ್ ನೆಟ್ವರ್ಕ್ ಸಂದರ್ಶನದ ವೇಳೆ ಬಾಲಿವುಡ್ ಮತ್ತು ಅವಕಾಶಗಳ ಬಗ್ಗೆ ಮಾತಾಡಿದ ಎಂದು ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್, ಧರ್ಮಾದಾರಿತ ಅನುಭವಗಳು ನನಗೆ ಪರೋಕ್ಷವಾಗಿ ಆಗಿವೆ ಎಂದಿದ್ದಾರೆ.
ಕಳೆದ 8 ವರ್ಷಗಳಲ್ಲಿ ಬಾಲಿವುಡ್ನಲ್ಲಿ ನನಗೆ ಅಷ್ಟಾಗಿ ಕೆಲಸಗಳು ಸಿಗುತ್ತಿಲ್ಲ. ಈ ಬದಲಾವಣೆಗೆ ಕೋಮುವಾದದ ಕಾರಣ ಇರಬಹುದು. ಆದರೆ ನೇರವಾಗಿ ಇದು ನನಗೆ ಅನುಭವಕ್ಕೆ ಬಂದಿಲ್ಲ ಎಂದು ತಮಗೆ ಅವಕಾಶ ಕಡಿಮೆ ಆಗಿರುವುದಕ್ಕೆ ಕಾರಣ ತಿಳಿಸಿದ್ದಾರೆ.

ನಾನು ಯಾವುದೇ ಅವಕಾಶಗಳನ್ನು ಹುಡುಕಿಕೊಂಡು ಹೋಗುವುದಿಲ್ಲ. ನನಗೆ ಬರುವ ಕೆಲಸಗಳನ್ನು ಶ್ರದ್ಧೆ ಇಟ್ಟು ಮಾಡುತ್ತೇನೆ. ಕೆಲಸ ಹುಡುಕಿ ಹೊರಟರೆ ಅದು ನಮಗೆ ಕೆಟ್ಟದಾಗಬಹುದು. 1990ರ ದಶಕದಲ್ಲಿ ಹಿಂದಿ ಸಿನಿಮಾಗಳಿಗಾಗಿ ಕೆಲಸ ಮಾಡುತ್ತಾ ವೃತ್ತಿ ಜೀವನ ಆರಂಭಿಸಿದಾಗ ಪೂರ್ವಗ್ರಹ ಅನುಭವ ಆಗಿರಲಿಲ್ಲ. ಬಹುಶಃ ಇಂತಹುದೆಲ್ಲ ನನ್ನ ಗಮನಕ್ಕೆ ಬರದೇ ಇರಬಹುದು. ದೇವರು ಇದನ್ನೆಲ್ಲಾ ಮರೆಮಾಡಿರಬಹುದು. ನಾನು ಅಂತಹ ಯಾವುದನ್ನೂ ಅನುಭವಿಸಲಿಲ್ಲ, ಆದರೆ, ಕಳೆದ 8 ವರ್ಷಗಳಲ್ಲಿ, ಆಗಿರುವ ಬದಲಾವಣೆಗಳು ಬಹುಶಃ, ಕೋಮು ಧೋರಣೆಯಿಂದಲೇ ನಡೆದಿರಬಹುದು ಎಂದು ಹೇಳಿದ್ದಾರೆ.

ಇನ್ನು ಸೃಜನಶೀಲರಲ್ಲದ ಜನರು ಈಗ ಬಾಲಿವುಡ್ ವಿಚಾರಗಳನ್ಮ ನಿರ್ಧರಿಸುವ ಅಧಿಕಾರ ಹೊಂದಿದ್ದಾರೆ. ಇದು ಸಾಮುದಾಯಿಕ ವಿಷಯವೂ ಆಗಿರಬಹುದು. ಆದರೆ, ನನಗೆ ನೇರವಾಗಿ ಅನುಭವಕ್ಕೆ ಬಂದಿಲ್ಲ. ಸಂಗೀತ ಸಂಯೋಜನೆಗೆ ನಿಮ್ಮ ಹೆಸರು ಅಂತಿಮಗೊಂಡಿತ್ತು. ಆದರೆ, ಮ್ಯೂಸಿಕ್ ಕಂಪನಿಯು ಅವರಿಗೆ ಬೇಕಾದ ಸಂಯೋಜಕರನ್ನು ನಿಯೋಜಿಸಿಕೊಂಡರು ಎಂಬುದು ನನ್ನ ಕಿವಿಗೆ ಬಿದ್ದಿತ್ತು. ಆಗ ನಾನು, ಪರವಾಗಿಲ್ಲ. ನನ್ನ ಕುಟುಂಬದ ಜೊತೆ ಕಾಲ ಕಳೆಯಲು ನನಗೆ ಸಮಯ ಸಿಕ್ಕಿತು ಎಂದಿದ್ದೆ ಎಂದು ರೆಹಮಾನ್ ಹೇಳಿದ್ದಾರೆ.

ನಾನು ಕೆಲಸದ ಆಯ್ಕೆಯಲ್ಲಿ ಅತ್ಯಂತ ಜಾಗರೂಕನಾಗಿರುತ್ತೇನೆ. ಕೆಟ್ಟ ಉದ್ದೇಶದಿಂದ ಮಾಡುವ ಚಿತ್ರಗಳಿಂದ ಅಂತರ ಕಾಯ್ದುಕೊಳ್ಳುತ್ತೇನೆ ಎಂದಿದ್ದಾರೆ. ಛಾವಾ ಸಿನಿಮಾದಲ್ಲಿ ಕೆಲಸ ಮಾಡುವಾಗ ಆ ಸಿನಿಮಾ ವಿಭಜನೆಗೆ ಕಾರಣವಾಗುತ್ತದೆ ಎಂದು ಟೀಕೆಗಳು ಬಂದವು. ಆದರೆ, ಅದರ ಮೂಲ ಉದ್ದೇಶ ಧೈರ್ಯವನ್ನು ತೋರಿಸುವುದು ಎಂದು ನಾನು ಭಾವಿಸುತ್ತೇನೆ ಎಂದು ಸಂದರ್ಶನ ವೇಳೆ ಉತ್ತರಿಸಿದ್ದಾರೆ.











