ಬಿಎಂಟಿಸಿಗೆ ಅದರ ದರ್ಘಟನೆಗಳಿಂದಲೇ ಯಮದೂತ ಅನ್ನೋ ಕುಖ್ಯಾತಿ ಬಂದಿದೆ. ಇದೀಗ ಅಂತೂ ಮೇಲಿಂದ ಮೇಲೆ ಒಂದೊಂದೇ ಬಸ್ ಗಳು ಬೆಂಕಿಗಾಹುತಿ ಆಗುತ್ತಿರುವುದರಿಂದ ಜನರು ಬಸ್ ಹತ್ತೋಕೆ ಹಿಂದೆ ಮುಂದೆ ನೋಡ್ತಿದ್ದಾರೆ. ಸದ್ಯ ಮೂರನೇ ಬಸ್ ಧಗಧಗಿಸಿದ ಬಳಿಕ ಬಿಎಂಟಿಸಿ ಎಚ್ಚೆತ್ತಂತೆ ಕಾಣ್ತಿದೆ.
ನಗರದಲ್ಲಿ ಸತತ ಬೆಂಕಿಗೆ ಆಹುತಿಯಾಗುತ್ತಿದೆ BMTC ಬಸ್ ಗಳು !
ನಗರದಲ್ಲಿ ಬಿಎಂಟಿಸಿ ಬಸ್ ಗೆ ಬೆಂಕಿ ಬೀಳೋದು ಮಾಮೂಲಿಯಾಗಿದೆ. ಬೆಂಗಳೂರಲ್ಲಿ ಟೆಂಪ್ರೇಚರ್ ಜಾಸ್ತಿ ಇದೆ. ಹೀಗಾಗಿ ಈ ರೀತಿ ಅನಾಹುತ ನಡೀತಿರ್ಬಹುದು ಅಂತ ಮೊದಲಿಗೆ ನಂಬಲಾಗಿತ್ತು. ಆದರೆ ಅದು ಒಂದು ಬ್ಯಾಚ್ಗೆ ಸೇರಿದ ಬಸ್ಗಳೇ ಪದೇ ಪದೇ ಬೆಂಕಿಗೆ ಆಹುತಿ ಆಗ್ತಿರೋದು ನಿಗಮದ ನಿದ್ದೆಗೆಡಿಸಿತ್ತು. ಜನವರಿ 21 ರಂದು ಚಾಮರಾಜಪೇಟೆಯ ಮಕ್ಕಳ ಕೂಟ ಬಳಿ, ಫೆಬ್ರವರಿ 1 ರಂದು ಜಯನಗರ ಸೌತ್ ಎಂಡ್ ಸರ್ಕಲ್ ಮೆಟ್ರೋ ಸ್ಟೇಷನ್ ಬಳಿ ಬಸ್ ಗಳು ಪ್ರಯಾಣಿಕರನ್ನ ಹೊತ್ತು ಸಾಗುತ್ತಿರುವಾಗಲೇ ಧಗಧಗ ಹೊತ್ತಿ ಉರಿದಿದ್ದವು. ಈ ಎರಡೂ ಬಸ್ಗಳು ಅಶೋಕ್ ಲೈಲ್ಯಾಂಡ್ಗೆ ಸೇರಿದ ಬಸ್ಗಳಾಗಿದ್ವು. ಹಾಗೇ ಒಂದೇ ಬ್ಯಾಚ್ನಲ್ಲಿ ಖರೀದಿಸಿದ ಬಸ್ಗಳಾಗಿದ್ವು. ಹಿಗಾಗಿ ಬಸ್ಗಳ ಲೋಪ ದೋಷ ಪತ್ತೆಗಾಗಿ ಅಶೋಕ್ ಲೈಲ್ಯಾಂಡ್ ಕಂಪನಿಯಿಂದಲೇ ತಜ್ಞರನ್ನ ಬಿಎಂಟಿಸಿ ಕರೆಸಿತ್ತು. ಅವರೂಸಹ ಪರಿಶೀಲನೆ ನಡೆಸಿ ಬಸ್ನಲ್ಲಿರೋ ಸಮಸ್ಯೆ ಸರಿಪಡಿಸಿ ಎವ್ರಿತಿಂಗ್ ಈಸ್ ಆಲ್ ರೈಟ್ ಅಂದಿದ್ರು. ಆದ್ರೆ ಈ ಪರಿಶೀಲನೆ ಮುಗಿದು ತಿಂಗಳು ಕಳೆಯೋವಷ್ಟರಲ್ಲಿ ಮತ್ತೊಂದು ಬಸ್ ಬೆಂಕಿಗಾಹುತಿ ಆಗಿದೆ. ಏಪ್ರಿಲ್ 9 ರಂದು ಶೇಶಾದ್ರಿ ರಸ್ತೆಯಲ್ಲಿ ಚಲಿಸುತ್ತಿದ್ದ ಬಸ್ ಧಗಧಗಿಸಿ ಉರಿದಿದೆ.
ಈ ಘಟನೆಯಿಂದ ಸದ್ಯ ಬಿಎಂಟಿಸಿ ಎಚ್ಚೆತ್ತಂತೆ ಕಾಣ್ತಿದೆ. ತಾಂತ್ರಿಕ ದೋಷ ಪರಿಹರಿಸಿದ ಬಳಿಕವೂ ಬಸ್ ಬೆಂಕಿಗಾಹುತಿ ಆಗ್ತಿರೋದ್ರಿಂದ ಆ ಬ್ಯಾಚ್ನ ಎಲ್ಲಾ 186 ಬಸ್ಗಳನ್ನ ಸೇವೆಯಿಂದ ಹಿಂಪಡೆದಿದೆ. ಎಲ್ಲಾ ಡಿಪೋಗಳಿಗೂ ಈಬಗ್ಗೆ ಸೂಚನೆ ರವಾನಿಸಲಾಗಿದೆ. ಒಂದುವೇಳೆ ಈ ಬ್ಯಾಚ್ನ ಬಸ್ಗಳನ್ನ ರಸ್ತೆಗಿಳಿಸಿ ಏನಾದ್ರು ಅನಾಹುತ ಸಂಭವಿಸಿದ್ರೆ ಅಧಿಕಾರಿಗಳನ್ನ ನೇರಹೊಣೆ ಮಾಡೋ ಎಚ್ಚರಿಕೆ ರವಾನಿಸಲಾಗಿದೆ. ಹೀಗಾಗಿ ಸದ್ಯ 186 ಬಸ್ಗಳ ಪೈಕಿ 183 ಬಸ್ಗಳು ಸುಸ್ತಿತಿಯಲ್ಲಿದ್ರೂ ಮುಂಜಾಗ್ರತಾ ಕ್ರಮವಾಗಿ ಬಿಎಂಟಿಸಿ ಸೇವೆ ಬಂದ್ ಮಾಡಿದೆ.
![](https://pratidhvani.com/wp-content/uploads/2022/04/01bgBMTC-bus-fire.jpg)
ಒಟ್ಟಿನಲ್ಲಿ ಬೆಂಕಿ ಪ್ರಕರಣ ಬಿಎಂಟಿಸಿಯನ್ನ ಹೈರಾಣಾಗಿಸಿದ್ದಂತೂ ಸತ್ಯ. ಇನ್ನೊಮ್ಮೆ ಬೆಂಕಿ ಬಿದ್ದು ಪ್ರಯಾಣಿಕರಿಗೆ ಆಪತ್ತು ಎದುರಾಗಿ, ನಿಗಮದ ಪ್ರತಿಷ್ಠ ಬೀದಿಪಾಲಾಗೋ ಮುನ್ನ ಒಂದು ಬ್ಯಾಚ್ನ ಬಸ್ಗಳನ್ನೇ ಬಿಎಂಟಿಸಿ ಹಿಂಪಡೆಯೋ ನಿರ್ಧಾರ ಮಾಡಿದೆ.