ನಿನ್ನೆಯಿಂದ ಚಳಿಗಾಲದ ಅಧಿವೇಶ ಬೆಳಗಾವಿಯ ಸುವರ್ಣಸೌಧದಲ್ಲಿ ಆರಂಭವಾಗಿದೆ. ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಗಿಬೀಳುವುದಕ್ಕೆ ಸಜ್ಜಾಗಿದೆ. ಆದರೆ ಬಿಜೆಪಿ ಸರ್ಕಾರಕ್ಕೆ ಬಿಜೆಪಿ ನಾಯಕರಿಂದಲೇ ಭಾರೀ ಮುಜುಗರ ಆಗ್ತಿದೆ ಎನ್ನುವುದು ಗಮನಿಸಬೇಕಾದ ವಿಚಾರ. ನಿನ್ನೆ ಕಾಂಗ್ರೆಸ್ ನಾಯಕರು ಬೆಳಗಾವಿಗೆ ಬರುತ್ತಿದ್ದ ಹಾಗೆ ಸತೀಶ್ ಜಾರಕಿಹೊಳಿ ಹಾಗು ಸ್ಥಳೀಯ ಕಾಂಗ್ರೆಸ್ ನಾಯಕರು ಆಗಮಿಸಿ, ಭರ್ಜರಿ ಸ್ವಾಗತ ಕೋರಿದ್ರು. ವಿಮಾನ ನಿಲ್ದಾಣದಿಂದ ಸುವರ್ಣಸೌಧದ ತನಕ ಕಟೌಟ್ ಹಾಗು ಫ್ಲೆಕ್ಸ್ಗಳನ್ನು ಹಾಕಲಾಗಿತ್ತು. ಆದರೆ ಬಿಜೆಪಿಯಲ್ಲಿ ಸ್ವಲ್ಪ ಭಿನ್ನವಾಗಿತ್ತು. ಸ್ಥಳೀಯ ನಾಯಕರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನೇ ಸ್ವಾಗತ ಮಾಡಲು ಯಾರೂ ಬಂದಿರಲಿಲ್ಲ. ಕೇವಲ ಲೋಕೋಪಯೋಗಿ ಸಚಿವ ಸಿಸಿ ಪಾಟೀಲ್ ಆಗಮಿಸಿ, ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಸ್ವಾಗತಿಸಿದ್ರು. ಬೇರೆ ಯಾವುದೇ ನಾಯಕರು ಆಗಮಿಸಿದೆ ಸಿಎಂ ಮೇಲೆ ಮುನಿಸು ಪ್ರದರ್ಶನ ಮಾಡಿದ್ದಾರೆ.
ಯಡಿಯೂರಪ್ಪ ಅವರನ್ನು ನಿರ್ಲಕ್ಷ್ಯ ಮಾಡೋದು ಮತ್ತೆ ಶುರು..!
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಇತ್ತೀಚಿಗೆ ನಿರ್ಲಕ್ಷ್ಯ ಮಾಡಲಾಗ್ತಿದೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಆದರೆ ಬೆಳಗಾವಿಗೆ ಆಗಮಿಸಿದ ಯಡಿಯೂರಪ್ಪ ಅವರನ್ನು ಯಾವುದೇ ನಾಯಕರು ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ ಎನ್ನುವುದು ವಿಶೇಷ. ಈ ಹಿಂದಿನ ಸದನಗಳಲ್ಲಿ ಸ್ವಾಗತಿಸಲು ಬರ್ತಿದ್ದ ನಾಯಕರು ಈ ಬಾರಿ ರಾಜ್ಯ ನಾಯಕರ ಕಡೆ ಸುಳಿಯಲಿಲ್ಲ. ವಿಮಾನ ನಿಲ್ದಾಣಕ್ಕೆ ಬಂದು ಒಬ್ಬರೇ ಕಾರು ಹತ್ತಿ ಹೋಗಿದ್ದು, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಪಕ್ಷದಿಂದ ದೂರ ಮಾಡಲಾಗ್ತಿದೆ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಆದಂತಾಯ್ತು. ಬೆಳಗಾವಿಯ ಪ್ರಮುಖ ನಾಯಕರಾದ ರಮೇಶ್ ಜಾರಕಿಹೊಳಿ, ಶಶಿಕಲಾ ಜೊಲ್ಲೆ, ಲಕ್ಷ್ಮಣ ಸವದಿ, ಅಭಯ್ ಪಾಟೀಲ್ ಸೇರಿದಂತೆ ಪ್ರಮುಖ ನಾಯಕರು ಸ್ವಾಗತಕ್ಕೂ ಬಾರದೆ ಮುನಿಸು ತೋರಿಸಿದ್ದಾರೆ.

ಸರ್ಕಾರದ ವಿರುದ್ಧವೇ ತಿರುಗಿ ಬಿದ್ಧ ಮಾಜಿ ಡಿಸಿಎಂ ಈಶ್ವರಪ್ಪ..!
ವಿಧಾನಸಭಾ ಅಧಿವೇಶನ ಆರಂಭ ಆಗುತ್ತಿದ್ದ ಹಾಗೆ ಕೆ.ಎಸ್ ಈಶ್ವರಪ್ಪ ಸ್ವತಃ ಬಿಜೆಪಿ ಪಕ್ಷದ ವಿರುದ್ಧವೇ ತಿರುಗಿ ಬಿದ್ದಿದ್ದು, ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳದ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಬಾಗಲಕೋಟೆಯಲ್ಲಿ ಮಾಜಿ ಡಿಸಿಎಂ ಈಶ್ವರಪ್ಪ ಟೀಕೆ ಮಾಡಿದ್ದಾರೆ. ನನಗೇನು ವಯಸ್ಸಾಗಿದೆಯಾ..? ಇದನ್ನು ತೀರ್ಮಾನ ಮಾಡೋದು ಸಿಎಂ ಅಲ್ಲ, ಟಿಕೆಟ್ ಕೊಡುವ ಸಂದರ್ಭದಲ್ಲಿ ಪಕ್ಷ ಏನು ತೀರ್ಮಾನ ಮಾಡುತ್ತದೆಯೋ ಮಾಡಲಿ, ಮೊನ್ನೆ ತನಕ ನಾನು ಸಂಪುಟದಲ್ಲಿ ಇದ್ದವನು. ನನ್ನ ಮೇಲೆ ಆಪಾದನೆ ಬಂದ ಮೇಲೆ ರಾಜೀನಾಮೆ ಕೊಡುತ್ತೇನೆ ಎಂದಿದ್ದೆ. ಪ್ರಾರಂಭದಲ್ಲಿ ರಾಜೀನಾಮೆ ಬೇಡ ಎಂದರೂ ನಾನು ಅವರನ್ನೇ ಒಪ್ಪಿಸಿ ರಾಜೀನಾಮೆ ಕೊಟ್ಟಿದ್ದೆ. ಕೆ.ಜೆ.ಚಾರ್ಜ್ ಅವರು ಆಪಾದನೆ ಹೊತ್ತಾಗ ರಾಜೀನಾಮೆ ಕೊಟ್ಟು, ಆ ಬಳಿಕ ಕ್ಲೀನ್ ಚಿಟ್ ಸಿಗುತ್ತಿದ್ದ ಹಾಗೆ ಮರು ಸೇರ್ಪಡೆ ಆಗಿದ್ದರು. ಆದರೆ ಈಗ ನನಗೆ ಕ್ಲೀನ್ ಚೀಟ್ ಸಿಕ್ಕಿದೆ. ಆದರೆ, ನಮ್ಮ ಸರ್ಕಾರದ ನಾಯಕ ಬೊಮ್ಮಾಯಿಗೆ ಅವರಿಗೆ ಏನು ತೊಂದರೆ..? ಎಂದು ಪ್ರಶ್ನೆ ಮಾಡಿದ್ದಾರೆ.
ಕೆ.ಎಸ್ ಈಶ್ವರಪ್ಪ ಹಾಗು ರಮೇಶ್ ಜಾರಕಿಹೊಳಿ ಸುದ್ದಿಗೋಷ್ಠಿ..!
ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ ಕೆ.ಎಸ್ ಈಶ್ವರಪ್ಪ, ಸಂಜೆ ವೇಳೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿದ್ರು. ಆ ಬಳಿಕ ಇಬ್ಬರೂ ನಾಯಕರು ಬೆಂಗಳೂರಿನ ವಿಮಾನ ಹತ್ತಿ ಆಗಮಿಸಿದ್ದು, ಇಂದು ಮಧ್ಯಾಹ್ನ ಸುದ್ಧಿಗೋಷ್ಠಿ ನಡೆಸಲಿದ್ದಾರೆ ಎನ್ನುವುದು ಗೊತ್ತಾಗಿದೆ. ಈಗಾಗಲೇ ಬೆಂಗಳೂರಿಗೆ ಬಂದಿರುವ ಇಬ್ಬರು ನಾಯಕರು ಸ್ವಯಂ ಸರ್ಕಾರದ ವಿರುದ್ಧವೇ ವಾಗ್ದಾಳಿ ಮಾಡಲಿದ್ದಾರೋ ಅಥವಾ ಬೇರೆ ವಿಚಾರಗಳ ಬಗ್ಗೆ ಮಾತನಾಡುತ್ತಾರೋ ಅನ್ನೋ ಕುತೂಹಲ ಮೂಡಿಸಿದೆ. ನಿನ್ನೆಯಷ್ಟೆ ಡಿ.ಕೆ ಶಿವಕುಮಾರ್ ಲಂಚಕ್ಕೆ ಒಬ್ಬರು, ಮಂಚಕ್ಕೆ ಒಬ್ಬರು ರಾಜೀನಾಮೆ ಕೊಟ್ಟಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಈ ವಿಚಾರದ ಬಗ್ಗೆಯೂ ಸುದ್ದಿಗೋಷ್ಠಿಯಲ್ಲಿ ಉತ್ತರ ಸಿಗುವ ಸಾಧ್ಯತೆಯಿದೆ. ಇದರ ಜೊತೆಗೆ ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ಕೊಡಬೇಕು ಎನ್ನುವ ಆಗ್ರಹದೊಂದಿಗೆ ಬೆಳಗಾವಿಯಲ್ಲಿ ಭಾರೀ ಹೋರಾಟಕ್ಕೆ ವೇದಿಕೆ ಸಜ್ಜಾಗಿದೆ. ಒಂದು ವೇಳೆ ಡಿಸೆಂಬರ್ 22ರ ಒಳಗೆ 2A ಮೀಸಲಾತಿ ಸಿಗದಿದ್ದರೆ ಮತ್ತೊಮ್ಮೆ ಮುಜುಗರ ಕಟ್ಟಿಟ್ಟ ಬುತ್ತಿ.






