ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಭಾರತ ಜೋಡೋ ಪಾದಯಾತ್ರೆ ಮಹರಾಷ್ಟ್ರ ಪ್ರವೇಶಿಸಿದ್ದು ಯಾತ್ರೆಯ ವೇಳೆ ವಿಋ ಸಾವರ್ಕರ್ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವುದಕ್ಕೆ ರಾಜ್ಯ ಬಿಜೆಪಿ ಟ್ವೀಟ್ ಮಾಡಿ ಕೆಂಡಕಾರಿದೆ.
ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡು ಬೆಳೆದ ರಾಜಕೀಯ ನಿರುದ್ಯೋಗಿ ರಾಹುಲ್ ಗಾಂಧಿ ವೀರ ಸಾವರ್ಕರ್ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ. ಕಠಿಣಾತಿ ಕಠಿಣ ಶಿಕ್ಷೆ ಎದುರಿಸಿದ ಸಾವರ್ಕರ್ ವೀರನಲ್ಲ ಎಂದಾದರೆ, ಅಪ್ರಬುದ್ಧ ನಡೆಗಳಿಂದ ನ್ಯಾಯಾಲಯದಿಂದ ಆಗಾಗ್ಗೆ ಛೀಮಾರಿ ಹಾಕಿಸಿಕೊಂಡು ಕ್ಷಮೆ ಕೇಳುವ ರಾಹುಲ್ ಗಾಂಧಿ ಏನು ಎಂದು ಪ್ರಶ್ನಿಸಿದೆ.
ಸಾವರ್ಕರ್ – ಅಂಡಮಾನ್ ಜೈಲು, 50 ವರ್ಷ ಜೀವಾವಧಿ ಶಿಕ್ಷೆ, ಹೆಗಲಲ್ಲಿ ಗಾಣ, ಏಕಾಂತ ವಾಸ, ಕಳಪೆ ಆಹಾರ ಪೂರೈಕೆ. ನೆಹರೂ – ಪಂಜಾಬಿನ ನಭಾ ಜೈಲಿನಲ್ಲಿ ಕೇವಲ 2 ವರ್ಷ ಶಿಕ್ಷೆ. ಜೈಲಿನೊಳಗೆ ಸಕಲ ವ್ಯವಸ್ಥೆ. 2 ವರ್ಷದ ಶಿಕ್ಷೆ ಕ್ಷಮಾಪಣಾ ಪತ್ರದ ಮೂಲಕ ಕೆಲವೇ ದಿನದಲ್ಲಿ ಅಂತ್ಯ. ನೆಹರೂ ಪರಾಕ್ರಮಿಯೇ? ಎಂದು ಕೇಳಿದೆ.
ನೆಹರೂ ಬ್ರಿಟೀಷರಿಗೆ ಬರೆದ ಕ್ಷಮಾಪಣಾ ಪತ್ರದ ಬಗ್ಗೆ ರಾಹುಲ್ ಗಾಂಧಿ ಮೌನವೇಕೆ ಕೇವಲ ಎರಡು ವರ್ಷದ ಶಿಕ್ಷೆಯನ್ನೇ ತಡೆದುಕೊಳ್ಳಲಾರದ ಕುಟುಂಬದವರು ಸ್ವಾತಂತ್ರ್ಯದ ಹೆಗ್ಗುರುತು, ಕಠಿಣಾತಿಕಠಿಣ ಶಿಕ್ಷೆ ಎದುರಿಸಿದ ಸಾವರ್ಕರ್ ಅವರ ವೀರತ್ವದ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ ಎಂದು ಟೀಕಿಸಿದೆ.
ಸಾವರ್ಕರ್ ಧೀರತೆಗೆ ಬೆರಗಾಗಿ ಸ್ವತಃ ಇಂದಿರಾ ಗಾಂಧಿ ಅವರೇ “ಭಾರತದ ವೀರ ಸುಪುತ್ರ” ಎಂದು ಸಂಬೋಧಿಸಿ ಸಾವರ್ಕರ್ ಜನ್ಮಶತಮಾನೋತ್ಸವ ಆಚರಣೆಗೆ ಸಹಕರಿಸಿದ್ದರು. ಸಾವರ್ಕರ್ ಕುರಿತಾಗಿ ಅಂಚೆಚೀಟಿ ಬಿಡುಗಡೆ ಮಾಡಿ, ಸಾಕ್ಷ್ಯಚಿತ್ರ ನಿರ್ಮಿಸಲು ಆದೇಶ ನೀಡಿದ್ದರು. ಸಾವರ್ಕರ್ ಟ್ರಸ್ಟ್ಗೆ 11 ಸಾವಿರ ದೇಣಿಗೆ ಕೂಡಾ ನೀಡಿದ್ದರು ಎಂದಿದೆ.