ಕೇಂದ್ರ ಗೃಹ ಸಚಿವ ಅಮಿತ್ ಶಾ ಎರಡು ದಿನಗಳ ರಾಜ್ಯ ಪ್ರವಾಸದ ಬೆನ್ನಲೇ ಸರಣಿ ಟ್ವೀಟ್ ಮೂಲಕ ರಾಜ್ಯ ಬಿಜೆಪಿ ವಿರುದ್ದ ಮುಗಿಬಿದಿದ್ದ ಕಾಂಗ್ರೆಸ್-ಜೆಡಿಎಸ್ಗೆ ಬಿಜೆಪಿ ತಿರುಗೇಟು ನೀಡಿದೆ.
ನಿಮ್ಮ ಟೂಲ್ಕಿಟ್ ಭಾಗವಾದ ಕಮಿಷನ್ ಎಂಬ ಸುಳ್ಳನ್ನು ಎಷ್ಟು ಬಾರಿ ಕೂಗಿ ಹೇಳಿದರೂ ಅದು ಸತ್ಯವಾಗುವುದಿಲ್ಲ ಸಿದ್ದರಾಮಯ್ಯನವರೇ. ಕ್ರಮ ಕೈಗೊಳ್ಳಲು ಸಾಕ್ಷ್ಯ ಕೊಡಿ ಎಂದು PMO ಕೇಳಿದಾಗ ಕೊಡಲು ಸಾಕ್ಷ್ಯವಿರಲಿಲ್ಲ. ನ್ಯಾಯಾಲಯಕ್ಕೂ ಕೊಡಲು ಸಾಕ್ಷ್ಯವಿಲ್ಲದೆ ತಲೆತಪ್ಪಿಸಿಕೊಂಡು ಓಡಾಡಿದ ಮೇಲೂ ಸುಳ್ಳಿನ ಚಲಾವಣೆಗಿಳಿದ ತಮ್ಮ ಧೈರ್ಯ ಅಪ್ರತಿಮ.
ಪೊಲೀಸ್ ಇಲಾಖೆಯ ಆಧುನೀಕರಣದ ಹೆಸರಲ್ಲೇ 68.8 ಕೋಟಿ ರೂ. ಕಳ್ಳತನ ಮಾಡಿದ ತಾವು ಅಮಿತ್ ಶಾ ಭೇಟಿಯಿಂದ ಧೃತಿಗೆಟ್ಟು ಕಮಿಷನ್ ತುತ್ತೂರಿಯನ್ನೇ ಮತ್ತೆ ಊದುತ್ತಿದ್ದೀರಿ. ಅದೇ ಹಳೆ ರಾಗ ಹಾಡುತ್ತಾ ಜನರ ಕಣ್ಣಿಗೆ ಮಣ್ಣೆರಚಲು ಆಗುವುದಿಲ್ಲ ಮಿಸ್ಟರ್ ಸಿದ್ದರಾಮಯ್ಯನವರೇ.
ನಮ್ಮಲ್ಲಿ ಮುಖ್ಯಮಂತ್ರಿಯಾಗಲಿ ಯಾವುದೇ ಹುದ್ದೆ ಮಾರಾಟಕ್ಕಿಲ್ಲ. ಆದರೆ ಕಳ್ಳನ ಮನಸು ಹುಳ್ಳಹುಳ್ಳಗೆ ಎಂಬಂತೆ ಟಿಕೆಟ್ಟನ್ನೇ ಮಾರಾಟಕ್ಕಿಟ್ಟ ನಿಮ್ಮ ಪಕ್ಷಕ್ಕೆ ಹಾಗೆ ಕಾಣುವುದು ಸಹಜ. ನಿಮ್ಮ ಸರ್ಕಾರ ಖರ್ಚು ಮಾಡಿದ 35,000 ಕೋಟಿ ರೂ.ಗಳಿಗೆ ಲೆಕ್ಕವೇ ಇಲ್ಲ ಎಂಬುದು ಸಿಎಜಿ ವರದಿಯಲ್ಲಿ ಉಲ್ಲೇಖವಾಗಿದೆ. ಸಿದ್ದರಾಮಯ್ಯನವರೇ ಅದಕ್ಕೆ ನೀವು ಇಂದಿಗೂ ಉತ್ತರಿಸಿಲ್ಲ.
ಕೆರೆಗಳ ನೀರು ತುಂಬಿಸುತ್ತೇವೆ ಎಂದು ಸಿದ್ದರಾಮಯ್ಯ ಸರ್ಕಾರ 1,43,341 ಕೋಟಿ ರೂ. ಬಿಡುಗಡೆ ಮಾಡಿ ಜಾಣ ನಿದ್ರೆಗೆ ಜಾರಿತು. ನಿಮ್ಮ ಸರ್ಕಾರದ ಅವಧಿ ಮುಗಿಯುವ ಕಾಲಕ್ಕೂ ನೀರು ತುಂಬಿಸಲು ಯಾವುದೇ ಕಾಮಗಾರಿಯನ್ನು ಆರಂಭ ಮಾಡಲಿಲ್ಲ. ಯೋಜನೆ ಹೆಸರಲ್ಲಿ ನಿಮ್ಮ ಸಹೋದ್ಯೋಗಿಗಳ ಜೇಬು ತುಂಬಿದವು. ಕೊನೆಗೆ ಕೆರೆಗಳು ತುಂಬಿದ್ದು ಮಳೆಯಿಂದ.
ನಿಮ್ಮವರ ಗ್ರಾನೈಟ್ ಗಣಿಗಾರಿಕೆಗೆ 7,785 ಹೆಕ್ಟೇರ್ ಅರಣ್ಯವನ್ನು ಕೊಟ್ಟು, ಇಂದಿರಾ ಕ್ಯಾಂಟೀನ್ ಹೆಸರಲ್ಲಿ ಭ್ರಷ್ಟಾಚಾರವನ್ನು ಬೇಯಿಸಿ ನುಂಗಿದ್ದಕ್ಕೇ ಜನ ಸಿದ್ದರಾಮಯ್ಯ ಸರ್ಕಾರವನ್ನು ತಿರಸ್ಕರಿಸಿದ್ದು. ಆದರೂ ಅಧಿಕಾರಕ್ಕೆ ಬರಲು ಬೇರೆ ದಾರಿ ಕಂಡುಕೊಂಡಾಗ ಉಪಚುನಾವಣೆಯಲ್ಲೂ ಜನ ನಿಮಗೆ ಪಾಠ ಕಲಿಸಿದ್ದರು ಎಂಬುದು ನೆನಪಿರಲಿ ಎಂದು ತಿರುಗೇಟು ನೀಡಿದೆ.