ಕಳೆದ ವಾರ ದಿಲ್ಲಿ ಹೊರವಲಯದ ಸಿಂಘು ಗಡಿಯಲ್ಲಿ ನಡೆದ ಲಖ್ಬೀರ್ ಸಿಂಗ್ ಎಂಬ ದಲಿತ ಕಾರ್ಮಿಕನ ಹತ್ಯೆಯ ಕರಿ ನೆರಳು ಈಗ ರೈತರ ಪ್ರತಿಭಟನೆಯ ಮೇಲೆ ಆವರಿಸಿದ್ದು, ಸದ್ಯಕ್ಕೆ ಪ್ರತಿಭಟನೆಯ ಕಾವು ತಣಿಯಬಹುದು. ಆದರೆ, ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ತಂದ ಹೊಸ ಕೃಷಿ ಕಾಯ್ದೆಗಳ ವಿರೋಧಿಸಿ ತಿಂಗಳುಗಟ್ಟಲೇ ಶಾಂತಿಯುತವಾಗಿ ನಡೆಯುತ್ತ ಬಂದ ರೈತರ ಪ್ರತಿಭಟನೆ ಬರುವ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಮುಳುವಾಗುವ ಸಾಧ್ಯತೆ ದಟ್ಟವಾಗಿದೆ.
ಕಳೆದ ತಿಂಗಳು ಯುಪಿಯ ಮುಜಾಫರ್ನಗರದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ಆಯೋಜಿಸಿದ್ದ ‘ಮಹಾಪಂಚಾಯತ್’ ನಲ್ಲಿ ಪಾಲ್ಗೊಂಡ ರೈತರು ಆಕ್ರೋಶ ವ್ಯಕ್ತಿ ಪಡಿಸಿ; ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಪ್ರತಿಜ್ಞೆ ಮಾಡಿದ್ದರು. ಅಲ್ಲದೇ ಮಹಾಪಂಚಾಯಿತ್ ನಲ್ಲಿ ಉಪಸ್ಥಿತರಿದ್ದ ಕಬ್ಬು ಬೆಳೆಗಾರರು ಕಬ್ಬಿನ ಬೆಲೆ ಕುಂಠಿತವಾಗಿರುವ ಬಗ್ಗೆ ಯುಪಿ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿ, ಬರುವ ಯುಪಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲೇಬೇಕು ಎಂದು ರೈತರು ಕರೆ ಕೊಟ್ಟಿದ್ದಾರೆ. ಇದರಿಂದಾಗಿ ಬಿಜೆಪಿಯೊಳಗೆ ಭಯ ಸೃಷ್ಟಿಯಾದಂತೆ ಕಾಣುತ್ತಿದೆ.
ಈ ಕಾರಣಕ್ಕಾಗಿ ಅತೃಪ್ತ ಅನ್ನದಾತರನ್ನು ಸಮಾಧಾನಪಡಿಸಿ ಓಲೈಸಲು ಬಿಜೆಪಿ ಪಕ್ಷವು ಉತ್ಸುಕವಾಗಿರುವಂತೆ ತೋರುತ್ತಿದೆ. ಯುಪಿ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ತಮ್ಮ ಪಕ್ಷದ ಎಲ್ಲ ಸಂಸದರು, ಶಾಸಕರು ಮತ್ತು ಜಿಲ್ಲೆಯ ಪ್ರತಿನಿಧಿಗಳು ಸೇರಿದಂತೆ ಎಲ್ಲ ಬಿಜೆಪಿ ನಾಯಕರಿಗೆ ವಿಶೇಷ ಸೂಚನೆಯೊಂದು ಹೈಕಮಂಡ್ ಅಂಗಳದಿಂದ ಹೊರಬಿದ್ದಿದೆ. ಅದರಲ್ಲೂ ವಿಶೇಷವಾಗಿ ಪಶ್ಚಿಮ ಯುಪಿ ಮತ್ತು ಲಖಿಂಪುರ ಖೇರಿ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ (ಇಲ್ಲಿ ಸಿಖ್ ರೈತರು ಹೆಚ್ಚಾಗಿ ಕಂಡುಬರುತ್ತಾರೆ. ಈ ಪ್ರದೇಶದಲ್ಲಿ ಅನೇಕ ರೈತರ ಸಾವುಗಳು ಕೂಡ ನಡೆದಿವೆ) ಚುನಾವಣೆ ಘೋಷಣೆಯಾಗುವ ಮೊದಲೇ ಪ್ರತಿ ಗ್ರಾಮ ಪಂಚಾಯಿತಿಗೆ ತೆರಳಿ, ಮೋದಿ ಸರ್ಕಾರವು ರೈತರ ಕಲ್ಯಾಣಕ್ಕಾಗಿ ಜಾರಿಗೆ ತಂದಿರುವ ಎಲ್ಲ ಯೋಜನೆಗಳ ಬಗ್ಗೆ ರೈತರಿಗೆ ಮಾಹಿತಿ ತಲುಪುವಂತೆ ನೋಡಿಕೊಳ್ಳಲು ಕಾರ್ಯಯೋಜನೆಯೊಂದನ್ನು ರೂಪಿಸಿದೆ.
ಸಹಾನುಭೂತಿಯಿಂದ ವರ್ತಿಸಲು ನಾಯಕರಿಗೆ ಸೂಚನೆ
ಮೂಲಗಳ ಪ್ರಕಾರ ಬಿಜೆಪಿ ಪಕ್ಷವು ಪ್ರಕಾರ ಅಕ್ಟೋಬರ್ನಲ್ಲಿ ಯುಪಿಯ ಪ್ರತಿ ಹಳ್ಳಿಯಲ್ಲಿ ‘ಕಿಸಾನ್ ಚೌಪಾಲ್’ ಗಳನ್ನು (ಬಿಜೆಪಿ ನಾಯಕರು ಸೇರಿ ಸಣ್ಣ ಸಣ್ಣ ಗುಂಪುಗಳಲ್ಲಿ ರೈತರನ್ನು ಭೇಟಿ ಮಾಡುವುದು) ಆಯೋಜಿಸುತ್ತಿದೆ. ಮುಂದುವರೆದು, ಪ್ರತಿಭಟನಾ ನಿರತ ರೈತರು ಈ ಹಿಂದೆ ಹಮ್ಮಿಕೊಂಡಂತೆಯೇ ಟ್ರ್ಯಾಕ್ಟರ್ ರ್ಯಾಲಿಯನ್ನು ನವೆಂಬರ್ ನಲ್ಲಿ ಆಯೋಜಿಸಿ, ಡಿಸೆಂಬರ್ ತಿಂಗಳಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಕಿಸಾನ್ ಸಮ್ಮೇಳನಗಳನ್ನು ಆಯೋಜಿಸುವ ಗುರಿಯನ್ನು ಬಿಜೆಪಿ ಹಾಕಿಕೊಂಡಿದೆ. ಈ ಕಾರ್ಯ ಯೋಜನೆ ಯಶಸ್ವಿಯಾಗಲು ಅದರಲ್ಲೂ ಬಿಜೆಪಿ ವಿರುದ್ಧ ತೀವ್ರ ಕೋಪಗೊಂಡ ರೈತರೊಂದಿಗೆ ಸಂಪೂರ್ಣ ಸಹಾನುಭೂತಿಯಿಂದ ವರ್ತಿಸುವಂತೆ ಪಕ್ಷದ ನಾಯಕರಿಗೆ ಸೂಚಿಸಲಾಗಿದೆ. ಹಾಗೆಯೇ ಪಕ್ಷದ ವಿರುದ್ಧ ತೀವ್ರ ಪ್ರತಿರೋಧವಿರುವ ಹಳ್ಳಿಗಳಲ್ಲಿ ಪ್ರಚಾರ ಕೈಬಿಟ್ಟು, ಅದರ ಬದಲಾಗಿ ಪಕ್ಕದ ಹಳ್ಳಿಗಳ ಮೇಲೆ ವಿಶೇಷ ಗಮನ ಹರಿಸಲು ಸೂಚಿಸಲಾಗಿದೆ.
ರೈತರ ಆಂದೋಲನವು ಪಶ್ಚಿಮ ಯುಪಿಯಲ್ಲಿ ಹೆಚ್ಚಿನ ಈಗ ಪರಿಣಾಮ ಬೀರಿದೆ. ಅಲ್ಲಿಯ ರೈತರು ಕಬ್ಬಿನ ಕಡಿಮೆ ಬೆಲೆ ಬಗ್ಗೆ ತೀವ್ರ ಅಸಮಾಧಾನ ಕೂಡ ಹೊಂದಿದ್ದಾರೆ. ಇದನ್ನು ಮನಗಂಡೇ ಕೇಂದ್ರ ಸರ್ಕಾರವು ಆಗಸ್ಟ್ನಲ್ಲಿ ಕಬ್ಬಿನ ದರ ಹೆಚ್ಚಿಸಿತು. ಜೊತೆಗೆ ಯೋಗಿ ಆದಿತ್ಯನಾಥ್ ಸರ್ಕಾರ ಕೂಡ ಪ್ರತಿ ಕ್ವಿಂಟಾಲ್ ಕಬ್ಬು ಖರೀದಿಗೆ 25 ರೂ ಹೆಚ್ಚಿಸುವುದಾಗಿ ಘೋಷಿಸಿದೆ. ಆದಾಗ್ಯೂ ಕಬ್ಬು ಖರೀದಿಗೆ ನ್ಯಾಯೋಚಿತ ಬೆಲೆ ದೊರೆತಿಲ್ಲ ಎಂದು ರೈತರು ಅಸಮಾಧಾನ ಹೊರಹಾಕಿದ್ದಾರೆ. ಕೋವಿಡ್ ಸಾಂಕ್ರಾಮಿಕದ ಹೊಡೆತಕ್ಕೆ ನಿರುದ್ಯೋಗ ಸಮಸ್ಯೆ ಹೆಚ್ಚಿದೆ. ಬಿಜೆಪಿ ವಿರುದ್ಧ ಜಾಟ್ ರೈತರಲ್ಲಿ ಕೋಪ ಮನೆಮಾಡಿದೆ. ಈ ಎಲ್ಲ ಸಂಗತಿಗಳು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೋಗಬಹುದು. ಹೀಗಾಗಿಯೇ ಬಿಜೆಪಿ ತನ್ನ ನಾಯಕರನ್ನು ಹಳ್ಳಿಗಳಲ್ಲಿ ಪ್ರವಾಸ ಮಾಡಲು ಸೂಚಿಸಿದ್ದು, ಅಲ್ಲಿ ಕಿಸಾನ್ ಚೌಪಾಲ್ಗಳನ್ನು ಹೆಚ್ಚು ವಿಸ್ತಾರವಾಗಿ ನಡೆಸಲು ಮುಂದಾಗಿದೆ.
“ಶಾಂತಿಯುತವಾಗಿ ರೈತರನ್ನು ಭೇಟಿ ಮಾಡಿ, ಕೃಷಿ ಕಾಯ್ದೆಗಳ ಕುರಿತು ಅವರಲ್ಲಿರುವ ತಪ್ಪು ಕಲ್ಪನೆಗಳನ್ನು ನಿವಾರಿಸುವುದು ಯೋಜನೆಯ ಮುಖ್ಯ ಗುರಿಯಾಗಿದೆ. ಪಶ್ಚಿಮ ಯುಪಿಯಲ್ಲಿ ಬಿಜೆಪಿ ವಿರುದ್ಧ ವಾತಾವರಣ ಕಾದಿದೆ. ವಿರೋಧ ಪಕ್ಷಗಳು ಚುನಾವಣೆ ಸಮಯದಲ್ಲಿ ಈ ವಿಷಯ ಇಟ್ಟುಕೊಂಡು ಮತ್ತಷ್ಟು ಬೆಂಕಿ ಹಚ್ಚುವ ಕೆಲಸವನ್ನು ಮಾಡಬಹುದು. ಅದಕ್ಕಾಗಿಯೇ ನಾವು ಎಚ್ಚರಿಕೆಯಲ್ಲಿದ್ದೇವೆ. ಕೋಪಗೊಂಡ ರೈತರನ್ನು ನೇರವಾಗಿ ಎದುರಿಸಬೇಡಿ ಎಂದು ನಮಗೆ ಸೂಚಿಸಿಲಾಗಿದೆ. ಅವರು ನಮ್ಮ ದಾರಿಗೆ ಅಡ್ಡಿಪಡಿಸಿದರೆ, ನಾವು ಇನ್ನೊಂದು ಮಾರ್ಗವನ್ನು ಅನುಸರಿಸಿ, ಕಡಿಮೆ ವಿರೋಧವಿರುವ ಹಳ್ಳಿಗಳಲ್ಲಿ ಹೆಚ್ಚು ಪ್ರಚಾರ ಮಾಡಲು ತೀರ್ಮಾನಿಸಿದ್ದೇವೆ,” ಎಂದು ಪಶ್ಚಿಮ ಯುಪಿಯ ಬಿಜೆಪಿ ಶಾಸಕರೊಬ್ಬರು ‘ದಿ ಪ್ರಿಂಟ್’ ಗೆ ಹೇಳಿದ್ದನ್ನು ಇಲ್ಲಿ ಗಮನಿಸಿಬಹುದು.
ಪ್ರತಿ ಗ್ರಾಮ ಪಂಚಾಯಿತಿ ಪ್ರದೇಶದಲ್ಲಿ ಚೌಪಾಲ್ಗಳನ್ನು ಆಯೋಜಿಸಲಾಗುತ್ತಿದೆ. ಯುಪಿಯಲ್ಲಿ 58,195 ಗ್ರಾಮ ಪಂಚಾಯತಿಗಳಿದ್ದು, ಅಕ್ಟೋಬರ್ 31ರಂದು ನಡೆಯುವ ಸರ್ದಾರ್ ಪಟೇಲ್ ಅವರ ಜನ್ಮ ದಿನದಂದು ಚೌಪಾಲ್ಗಳನ್ನು ರಾಜ್ಯಾದ್ಯಂತ ಆಯೋಜಿಸಲು ಬಿಜೆಪಿ ಈಗ ಉತ್ಸುಕವಾಗಿದೆ. ಈ ಚೌಪಾಲ್ಗಳ ಮೂಲಕ ರೈತರಲ್ಲಿ ಮೂರು ಹೊಸ ಕೃಷಿ ಕಾಯ್ದೆಗಳ ಬಗ್ಗೆ ಹರಡಿರುವ ತಪ್ಪು ಕಲ್ಪನೆ ಹೋಗಲಾಡಿಸಿ, ಕಾಯ್ದೆಗಳ ಕುರಿತು ಸೂಕ್ತ ವಿವರ ನೀಡುವುದು, ಕೃಷಿ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿಗಳೊಂದಿಗೆ ನೇರ ಸಂವಾದ ನಡೆಸುವುದು, ಕೇಂದ್ರ ಯೋಜನೆ ಅಡಿಯಲ್ಲಿ ವರ್ಷಕ್ಕೆ 6,000 ರೂ. ಪರಿಹಾರ ಕುರಿತು ಹಾಗೂ ರಸಗೊಬ್ಬರ, ಕೃಷಿ ಉಪಕರಣಗಳು ಮತ್ತು ಬೀಜಗಳ ಮೇಲೆ ಕೇಂದ್ರವು ನೀಡುವ ಸಬ್ಸಿಡಿಗಳಂತಹ ಪ್ರಯೋಜನಗಳ ಬಗ್ಗೆ ರೈತರಿಗೆ ತಿಳುವಳಿಕೆ ಮೂಡಿಸುವುದು ಈ ಚೌಪಾಲ್ಗಳ ಹಿಂದಿನ ಉದ್ದೇಶ.
ಮೊದಲ ಹಂತದಲ್ಲಿ (ಅಕ್ಟೋಬರ್ 17-31ರವರೆಗೆ) ಸಂಸದರು, ಮಂತ್ರಿಗಳು, ಶಾಸಕರು, ಜಿಲ್ಲಾ ಅಧ್ಯಕ್ಷರು, ಹಳ್ಳಿಗಳಿಗೆ ಭೇಟಿ ನೀಡುವುದು. ನವೆಂಬರ್ನಲ್ಲಿ ಆರಂಭವಾಗುವ ಎರಡನೇ ಹಂತದಲ್ಲಿ ಪ್ರಧಾನಿ ಮೋದಿ ಮತ್ತು ಸಿಎಂ ಯೋಗಿ ಅವರು ಜಾರಿಗೆ ತಂದ ಯೋಜನೆಗಳ ಕುರಿತು ಸಮಗ್ರ ಮಾಹಿತಿಯನ್ನು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಟ್ರ್ಯಾಕ್ಟರ್ ರ್ಯಾಲಿ ಆಯೋಜಿಸುವ ಮೂಲಕ ರೈತರಿಗೆ ತಲುಪುಸುವುದು. ನಂತರ ಡಿಸೆಂಬರ್ನಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಕಿಸಾನ್ ಸಮ್ಮೇಳನ ಆಯೋಜಿಸುವುದು ಬಿಜೆಪಿ ಸದ್ಯದ ಗುರಿಯಾಗಿದೆ.
ಬಿಜೆಪಿಯೊಂದಿಗೆ ಅಂತರ ಕಾಯ್ದುಕೊಂಡ ಜಾಟ್ ಸಮುದಾಯ
ರೈತರ ಅಸಮಾಧಾನವನ್ನು ಹೋಗಲಾಡಿಸಲು ಬಿಜೆಪಿಯಿಂದ ಸರ್ವ ಪ್ರಯತ್ನಗಳು ನಡೆಯುತ್ತಿದ್ದರೂ ಇನ್ನೂ ಯಾವುದೇ ಫಲಿತಾಂಶ ಕಂಡಿಲ್ಲ. ಪ್ರಧಾನಿ ಮೋದಿಯವರ ಹೆಸರಿನಲ್ಲಿ ದೇಶಭಕ್ತಿಯ ಉತ್ಕಟತೆಯಿಂದಾಗಿ 2019 ರಲ್ಲಿ ಅತಿ ಉತ್ಸಾಹ ತೋರಿದ್ದ ಜಾಟ್ ಸಮುದಾಯದ ಯುವಕರು ಈಗ ರೈತ ಆಂದೋಲನದಂತಹ ಅಂಶಗಳಿಂದಾಗಿ ಬಿಜೆಯೊಂದಿಗೆ ಅಂತರ ಕಾಯ್ದುಕೊಂಡಿದ್ದಾರೆ. 2019 ರಲ್ಲಿ ಬಿಜೆಪಿಯು ಜಾಟ ಸಮುದಾಯದ ಶೇ.90 ರಷ್ಟು ಮತ ಬ್ಯಾಂಕ್ ಹೊಂದಿತ್ತು. ಈಗ ಜಾಟ್ ಸಮುದಾಯದ ಮತಗಳು ಸಮಾಜವಾದಿ ಪಕ್ಷ ಮತ್ತು ಅಜಿತ್ ಸಿಂಗ್ ಅವರ ಪಕ್ಷ RLD ಗೆ ಹರಿದು ಹೋಗುವ ಸಾಧ್ಯತೆಯೇ ಹೆಚ್ಚು. ರೈತರ ಪ್ರತಿಭಟನೆಯ ಪರಿಣಾಮವಾಗಿ ಜಾಟ್ರು, ಮುಸ್ಲಿಂರು, ಮತ್ತು ಗುಜ್ಜರ್ಗಳು ಮಾತ್ರವಲ್ಲ ಇಲ್ಲಿನ ಸಿಖ್ಖರು ಕೂಡ ಬಿಜೆಪಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಸಿಖ್ ವಿರೋಧಿ ಹಾಗೂ ಜಾಟ್ ವಿರೋಧಿ ಎಂಬ ಹಣೆಪಟ್ಟಿಯನ್ನು ಬಿಜೆಪಿ ಈಗ ಹೊಂದಿದೆ.
ಯುಪಿಯಲ್ಲಿ ಅತಿ ಹೆಚ್ಚು ಸಿಖ್ ಜನಸಂಖ್ಯೆ ಹೊಂದಿರುವ ಪ್ರದೇಶ ಲಖಿಂಪುರ ಖೇರಿ. ಈ ಪ್ರದೇಶದಲ್ಲಿ ಇತ್ತೀಚೆಗೆ ಬಿಜೆಪಿ ನಾಯಕನೊಬ್ಬನ ಮಗನ ಕಾರು ಹಾಯ್ದು ರೈತರು ಸಾವಿಗೀಡಾಗಿದ್ದನ್ನು ಇಲ್ಲಿ ನೆನೆಯಬಹುದು. ಅನ್ನದಾತರ ಸಾವು ಬಿಜೆಪಿಗೆ ದೊಡ್ಡ ಮಟ್ಟದಲ್ಲಿ ಡ್ಯಾಮೇಜ್ ಮಾಡಬಹುದು ೆನ್ನಲಾಗುತ್ತಿದೆ. 2012 ರ ವಿಧಾನಸಭಾ ಚುನಾವಣೆಯಲ್ಲಿ ಪಶ್ಚಿಮ ಯುಪಿಯಲ್ಲಿ 110 ಸ್ಥಾನಗಳ ಪೈಕಿ 38 ರಲ್ಲಿ ಮಾತ್ರ ಬಿಜೆಪಿ ಗೆದ್ದಿತ್ತು. ಆದಾಗ್ಯೂ, 2017 ರಲ್ಲಿ ಈ ಸಂಖ್ಯೆ 88 ಕ್ಕೆ ಏರಿದ್ದು ಗಮನಾರ್ಹ. ಹೆಚ್ಚಿನ ಸ್ಥಾನ ಗೆಲ್ಲಲು ಕಾರಣವಾಗಿದ್ದ ಅಂಶವೆಂದರೆ 2013 ರ ಮುಜಾಫರ್ನಗರ ಗಲಭೆಯ ನಂತರ ಜಾಟ್ ಮತ್ತು ಮುಸ್ಲಿಮರ ನಡುವಿನ ದ್ವೇಷ. ಅದು ಇಲ್ಲಿವರೆಗೂ ಬಿಜೆಪಿಗೆ ಲಾಭದಾಯಕವಾಗಿತ್ತು. ಈಗ ನಡೆಯುತ್ತಿರುವ ರೈತರ ಪ್ರತಿಭಟನೆ ಎರಡೂ ಸಮುದಾಯಗಳನ್ನು ಹತ್ತಿರಕ್ಕೆ ತಂದಿದ್ದು, ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇನ್ನು ಹಣದುಬ್ಬರ, ದಿನೇ ದಿನೇ ಏರುತ್ತಿರುವ ಪೆಟ್ರೋಲ್-ಡೀಸೆಲ್ ಬೆಲೆ ಮತ್ತು ಕೋವಿಡ್ ನಂತರದಲ್ಲಿ ಉದ್ಯೋಗಾವಕಾಶದಲ್ಲಿ ತೀವ್ರ ಕುಸಿತ. ಈ ಎಲ್ಲ ಸಂಗತಿಗಳು ಚುನಾವಣೆ ವೇಳೆ ಬಿಜೆಪಿ ವಿರುದ್ಧ ಹೇಗೆ ಕೆಲಸ ಮಾಡಬಲ್ಲವು ಎಂಬುದನ್ನು ಕಾದು ನೋಡಬೇಕಿದೆ.