ಬೆಂಗಳೂರು : ಕರ್ನಾಟಕಕ್ಕೆ ಅಭಿವೃದ್ಧಿ ಬೇಕು ಅಂಧರೆ ನಿಮಗೆ ಮೋದಿ ಆಶೀರ್ವಾದ ಬೇಕು ಎಂದು ಹೇಳಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ರಾಜ್ಯದ ಜನತೆಯಲ್ಲಿ ಕ್ಷಮೆಯಾಚಿಸಬೇಕು ಎಂದು ಲೇಖಕರ ಸಂಘ ಆಗ್ರಹಿಸಿದೆ. ಈ ಮಾತಿನ ಮೂಲಕ ಬಿಜೆಪಿಗೆ ಮತ ಹಾಕದೇ ಹೋದಲ್ಲಿ ಕರ್ನಾಟಕ ಅಭಿವೃದ್ಧಿ ಹೊಂದುವುದಿಲ್ಲ ಎಂಬ ಪರೋಕ್ಷ ಬೆದರಿಕೆಯನ್ನು ಮತದಾರರಿಗೆ ಹಾಕಿದ್ದಾರೆ. ಅಲ್ಲದೇ ಪ್ರಧಾನಿ ಹುದ್ದೆಯ ಘನತೆಗೆ ಈ ಹೇಳಿಕೆಯಿಂದ ಕುಂದು ಬಂದಿದೆ ಎಂದು ಲೇಖಕರು ದೂರಿದ್ದಾರೆ.

ಬೆಂಗಳೂರಿನ ನಿವೃತ್ತ ಪ್ರಾಧ್ಯಾಪಕ ಪ್ರೊ. ಕೆಎಂ ಮರುಳ ಸಿದ್ದಪ್ಪ , ಬೆಂಗಳೂರಿನ ಲೇಖಕಿ ಡಾ. ವಿಜಯಾ, ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರದ ಪೂರ್ವಾಧ್ಯಕ್ಷ ಪ್ರೊ. ಎಸ್ಜಿ ಸಿದ್ದರಾಮಯ್ಯ, ಪತ್ರಕರ್ತ ದಿನೇಶ್ ಅಮಿನ್ ಮಟ್ಟು, ದೆಹಲಿಯ ನಿವೃತ್ತ ಪ್ರಾಧ್ಯಾಪಕ ಪುರುಷೋತ್ತಮ ಬಿಳಿಮಲೆ ಹಾಗೂ ಮಂಗಳೂರಿನ ಅಂಕಣಕಾರ ಶ್ರೀನಿವಾಸ ಕಾರ್ಕಳ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಬಳಿಯಲ್ಲಿ ಕ್ಷಮೆ ಬೇಕೆಂದು ಆಗ್ರಹಿಸಿದ್ದಾರೆ.
ತನಗೆ ಬೇಕಾದ ಅಭ್ಯರ್ಥಿಗೆ ಮತ ಹಾಕುವ ಅಧಿಕಾರ ಮತದಾರರಿಗೆ ಸಂವಿಧಾನ ನೀಡಿದೆ. ಆದರೆ ನಡ್ಡಾರ ಈ ಹೇಳಿಕೆಯು ಸರ್ಕಾರದ ಮೂಲ ತತ್ವಗಳಿಗೆ ವಿರುದ್ಧವಾಗಿದೆ. ಕೇಂದ್ರದ ಎನ್ಡಿಎ ಸರ್ಕಾರವು ಹಂತ ಹಂತವಾಗಿ ರಾಜ್ಯ ಸರ್ಕಾರದ ಹಕ್ಕುಗಳನ್ನು ಮೊಟಕುಗೊಳಿಸುತ್ತಿದೆ. ಹೀಗಾಗಿ ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ಜೆಪಿ ನಡ್ಡಾ ಈ ಕೂಡಲೇ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದಾರೆ.






