ಹಾಸನ: ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬೇಲೂರು ಬಿಜೆಪಿ ಶಾಸಕ ಹೆಚ್.ಕೆ ಸುರೇಶ್ ಚನ್ನಕೇಶವಸ್ವಾಮಿ ದೇವಸ್ಥಾನದಲ್ಲಿ ಆಣೆ ಪ್ರಮಾಣ ಮಾಡಿದ್ದಾರೆ.

ಮಂಗಳವಾರ ಬೆಳಗ್ಗೆ ಬೇಲೂರಿನ ಐತಿಹಾಸಿಕ ಚನ್ನಕೇಶವಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು, ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ದೇವಾಲಯದ ಆವರಣದಲ್ಲಿರುವ ಕರಿಕಲ್ಲು ಮುಟ್ಟಿ, ‘ನಾನು ವಿಧಾನಪರಿಷತ್ ಚುನಾವಣೆಯಲ್ಲಿ ಯಾವುದೇ ಅಡ್ಡಮತದಾನ ಮಾಡಿಲ್ಲ. ನಾನು ಬಿಜೆಪಿ ಪಕ್ಷಕ್ಕೆ ಎಂದಿಗೂ ದ್ರೋಹ ಮಾಡಿಲ್ಲ’ ಎಂದು ಮೂರು ಬಾರಿ ಪ್ರಮಾಣ ಮಾಡಿದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮ ವಿರುದ್ಧದ ಅಡ್ಡಮತದಾನ ಆರೋಪವು ರಾಜಕೀಯ ಪಿತೂರಿಯ ಭಾಗ ಎಂದು ಆರೋಪಿಸಿದರು. ‘ನಾನು ಪಕ್ಷದ ಸೂಚನೆಯಂತೆ ಮತ ಚಲಾಯಿಸಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಗೆ ನಾನು ದ್ರೋಹ ಮಾಡುವ ಪ್ರಶ್ನೆಯೇ ಇಲ್ಲ. ನಾನು ತಪ್ಪು ಮಾಡಿದ್ದರೆ ಭಗವಂತ ನನ್ನನ್ನು ಕ್ಷಮಿಸುವುದಿಲ್ಲ. ನನ್ನನ್ನು ಹಣದಿಂದ ಅಥವಾ ಒತ್ತಡದಿಂದ ಖರೀದಿಸಲು ಸಾಧ್ಯವಿಲ್ಲ. ಜನರ ಪ್ರೀತಿಯೇ ನನ್ನ ದೊಡ್ಡ ಶಕ್ತಿ’ ಎಂದು ಹೇಳಿದರು.

ವಿಧಾನಪರಿಷತ್ ಚುನಾವಣೆಯ ಬಳಿಕ ಬಿಜೆಪಿ ಶಾಸಕರ ಅಡ್ಡಮತದಾನದ ಆರೋಪಗಳು ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಬೆನ್ನಲ್ಲೇ ಸುರೇಶ್ ಅವರ ಈ ಆಣೆ ಪ್ರಮಾಣ ಹೊಸ ಸಂಚಲನ ಮೂಡಿಸಿದೆ.






