ಬಸವರಾಜ್ ಬೊಮ್ಮಾಯಿ ಸಂಪುಟ ರಚನೆಯಾದ ಕ್ಷಣದಿಂದಲೂ ಖಾತೆ ಕ್ಯಾತೆ ಮುಗಿಯದ ಕಥೆಯಾಗಿದೆ. ಅಸಮಾಧಾನಿತ ಸಚಿವರು ಖಾತೆ ಬದಲಾವಣೆಗೆ ಪಟ್ಟು ಹಿಡಿದಿದ್ರೆ, ಸಂಪುಟದಲ್ಲಿ ಖಾಲಿ ಉಳಿದಿರುವ ಸ್ಥಾನಗಳ ಭರ್ತಿಗೂ ಸಿಎಂ ಮೇಲೆ ಒತ್ತಡ ಹೆಚ್ಚಾಗಿದೆ. ಈ ಮಧ್ಯೆ ರಾಜ್ಯ ಪ್ರವಾಸ ಕೈಗೊಂಡಿರುವ ಉಸ್ತುವಾರಿ ಅರುಣ್ ಸಿಂಗ್ ಖಾತೆ ಅಸಮಾಧಾನಿತರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಸಿಎಂ ಬಸವರಾಜ್ ಬೊಮ್ಮಾಯಿ ಸಂಪುಟ ರಚನೆಯಾದ ಕ್ಷಣದಿಂದಲೂ ಖಾತೆ ಅಸಮಾಧಾನ ಅನ್ನೋ ಕೆಂಡ ಕಮಲ ಕೋಟೆಯಲ್ಲಿ ಹೊಗೆಯಾಡುತ್ತಲೇ ಇದೆ. ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಈ ಕ್ಷಣದವೆರಗೂ ತಮಗೆ ಕೊಟ್ಟಿರುವ ಖಾತೆಯನ್ನು ಬದಲಿಸಲು ತಮ್ಮ ಬಿಗಿಪಟ್ಟು ಮುಂದುವರಿಸಿದ್ದಾರೆ. ಸಿಎಂ ಬೊಮ್ಮಾಯಿಗೆ ಖಾತೆ ಕ್ಯಾತೆ ಬಿಸಿತುಪ್ಪದಂತಾಗಿದ್ದು, ಅಸಮಾಧಾನ ಶಮನ ಮಾಡೋಕೆ ಹರಸಾಹಸಪಡ್ತಿದ್ದಾರೆ. ಈ ನಡುವೆ ರಾಜ್ಯಕ್ಕೆ ಆಗಮಿಸಿರೋ ಅರುಣ್ ಸಿಂಗ್ ಖಾತೆ ಅಸಮಾಧಾನಿತರಿಗೆ ಎಚ್ಚರಿಕೆ ನೀಡಿದ್ದು, ಕೊಟ್ಟಿರೋ ಖಾತೆಯನ್ನು ಸಮರ್ಥವಾಗಿ ನಿಭಾಯಿಸುವಂತೆ ಸಂದೇಶ ರವಾನಿಸಿದ್ದಾರೆ.

ಪಕ್ಷದಲ್ಲಿ ಲಕ್ಷಾಂತರ ಕಾರ್ಯಕರ್ತರಿದ್ದಾರೆ. ಅವರಿಗೆ ಯಾವ ಅಧಿಕಾರವೂ ಸಿಕ್ಕಿಲ್ಲ. ಆದರೂ ಅವರು ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಇವರಿಗಂತೂ ಅಧಿಕಾರ ಸಿಕ್ಕಿದೆ. ಇವರು ಹೆಚ್ಚಿನ ಶ್ರದ್ಧೆಯಿಂದ ಪಕ್ಷಕ್ಕಾಗಿ ಕೆಲಸ ಮಾಡಬೇಕು. ಈ ರೀತಿಯ ಘಟನೆಗಳು ಪಕ್ಷದಲ್ಲಿ ನಡೆಯಬಾರದು ಎಂದಿದ್ದಾರೆ.
ಇನ್ನು ಸಂಪುಟದಲ್ಲಿ ಖಾಲಿ ಉಳಿದಿರೋ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿರೊ ನಾಯಕರಿಗೂ ಅರುಣ್ ಸಿಂಗ್ ತಿರುಗೇಟು ನೀಡಿದ್ದಾರೆ. ಸಚಿವ ಸ್ಥಾನಕ್ಕಾಗಿ ಹೈಕಮಾಂಡ್ ಕದ ತಟ್ಟುವ ಅವಶ್ಯಕತೆಯಿಲ್ಲ. ಸಂಪುಟ ವಿಸ್ತರಣೆ ಕುರಿತು ಸಿಎಂ ಅವರೇ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಅಂತಾ ಅರುಣ್ ಸಿಂಗ್ ತಿಳಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿಗಳು ನಿರ್ಣಯಕೈಗೊಳ್ಳಬೇಕಾಗುತ್ತೆ. ಇದು ಅವರ ಅಧಿಕಾರ ಕ್ಷೇತ್ರ. ಸೂಕ್ತ ಸಮಯದಲ್ಲಿ ಸಂಪುಟ ವಿಸ್ತರಣೆ ಕುರಿತು ಸಿಎಂ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದಿದ್ದಾರೆ.
ಇನ್ನು 3 ದಿನದ ರಾಜ್ಯ ಪ್ರವಾಸ ಕೈಗೊಂಡಿರೋ ಅರುಣ್ ಸಿಂಗ್, ಮೈಸೂರು ಭಾಗದಲ್ಲಿ ಪ್ರವಾಸ ಮಾಡಿ ಪಕ್ಷ ಸಂಘಟಿಸುವುದಾಗಿ ಹೇಳಿದ್ದಾರೆ. ಮೈಸೂರು ಪ್ರಾಂತ್ಯದಲ್ಲಿ ಪ್ರಾಬಲ್ಯ ಸಾಧಿಸಿದರೆ ಅಧಿಕಾರದ ಮೆಟ್ಟಿಲು ಮತ್ತಷ್ಟು ಸನಿಹವಾಗಲಿದೆ ಅನ್ನೋದು ಅರುಣ್ ಸಿಂಗ್ ಲೆಕ್ಕಾಚಾರ.
ಹಳೆ ಮೈಸೂರು ಭಾಗದಿಂದ ನಾನು ಜಿಲ್ಲಾ ಪ್ರವಾಸವನ್ನು ಆರಂಭಿಸಲಿದ್ದೇನೆ. ಹಳೆ ಮೈಸೂರು ಭಾಗದಲ್ಲಿ ಪಕ್ಷ ಅಷ್ಟೊಂದು ಪ್ರಬಲವಾಗಿಲ್ಲ. ಭಾರತೀಯ ಪಕ್ಷ ಸರಳ ಬಹುಮತದೊಂದಿಗೆ ಅಧಿಕಾರಕ್ಕೆ ಬರಲು ಹಳೆ ಮೈಸೂರು ಭಾಗ ತುಂಬಾ ಮಹತ್ವದ್ದಾಗಿದೆ. ಇತ್ತ ಸಿಎಂಗೆ ಸಚಿವಾಕಾಂಕ್ಷಿಗಳ ತಲೆನೋವು ಹೆಚ್ಚಾಗಿದೆ. 5 ದಿನ ದೆಹಲಿಯಲ್ಲೇ ಬೀಡುಬಿಟ್ಟಿದ್ದ ರಮೇಶ್ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ಹೈಕಮಾಂಡ್ ನಾಯಕರ ಮೂಲಕ ಮಮತ್ರಿಪಟ್ಟಕ್ಕಾಗಿ ಒತ್ತಡ ಹಾಕ್ತಿದ್ರೆ, ಮರಾಠ ಕೋಟಾದಡಿ ಮಂತ್ರಿಪಟ್ಟ ನೀಡುವಂತೆ ಹಾಗವಾಡ ಶಾಸಕ ಶ್ರೀಮಂತ ಪಾಟೀಲ್ ಸಮುದಾಯದ ಪಟ್ಟು ಹಾಕಿದ್ದಾರೆ. ಖಾತೆ ಕ್ಯಾತೆ ನಿಭಾಯಿಸಲು ಸಿಎಂ ಬೊಮ್ಮಾಯಿ ಹೆಣಗಾಡುತ್ತಿರೋ ಹೊತ್ತಲ್ಲೇ ರಾಜ್ಯ ಪ್ರವಾಸ ಕೈಗೊಂಡಿರೋ ಉಸ್ತುವಾರಿ ಅರುಣ್ ಸಿಂಗ್ ಅಸಮಾಧಾನಿತರಿಗೆ ಚಾಟಿ ಬೀಸಿರೊದು ಹೈಕಮಾಂಡ್ ಬೊಮ್ಮಾಯಿ ಬೆನ್ನಿಗೆ ಬಲವಾಗಿ ನಿಂತಿದೆ ಅನ್ನೋ ಸಂದೇಶ ಸಾರಿದಂತಿದೆ.