‘ಇಂದು ರಾಜೀನಾಮೆ ವಿಚಾರ. ಪ್ರಸ್ತಾಪಿಸಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಕಣ್ಣೀರಿಟ್ಟಿದ್ದು, ಇದು ಕೇವಲ ಒಬ್ಬ ವ್ಯಕ್ತಿಯ ಕಣ್ಣೀರಲ್ಲ. ರಾಜ್ಯವನ್ನು ಪ್ರತಿನಿಧಿಸುವ ಮುಖ್ಯಮಂತ್ರಿಯ ಕಣ್ಣೀರು. ಇದರ ಹಿಂದಿನ ನೋವೇನು? ಆ ನೋವು ಕೊಟ್ಟವರಾರು?’ ಎಂಬುದನ್ನು ರಾಜ್ಯದ ಜನರಿಗೆ ತಿಳಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.
ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪನವರ ರಾಜೀನಾಮೆ ಬಗ್ಗೆ ಸದಾಶಿವನಗರ ನಿವಾಸದಲ್ಲಿ ಸೋಮವಾರ ಪ್ರತಿಕ್ರಿಯಿಸಿದ ಶಿವಕುಮಾರ್ ಅವರು ‘ಯಡಿಯೂರಪ್ಪ ಅವರ ರಾಜೀನಾಮೆ ಹಿಂದೆ ಸಂತೋಷ ಕಾಣುತ್ತಿಲ್ಲ. ಬದಲಿಗೆ ಅವರ ನಿರ್ಧಾರದಲ್ಲಿ ನೋವು ಕಾಣುತ್ತಿದೆ. ಆ ನೋವು ಏನು? ಆ ನೋವು ಕೊಟ್ಟವರು ಯಾರು ಎಂಬುದನ್ನು ಮುಖ್ಯಮಂತ್ರಿಗಳು ರಾಜ್ಯದ ಜನರಿಗೆ ಸ್ಪಷ್ಟಪಡಿಸಬೇಕು.
ರಾಜೀನಾಮೆ ಕುರಿತ ನಮ್ಮ ವಿಮರ್ಶೆಯನ್ನು ಮುಂದೆ ತಿಳಿಸುತ್ತೇವೆ. ಆದರೆ ಅದಕ್ಕೂ ಮೊದಲು ಮುಖ್ಯಮಂತ್ರಿಗಳು ತಮ್ಮ ನೋವಿನ ಬಗ್ಗೆ ಜನರಿಗೆ ತಿಳಿಸಬೇಕು. ಎರಡು ವರ್ಷಗಳಲ್ಲಿ ಜನರು ಕೋವಿಡ್ ಸಮಸ್ಯೆಗೆ ತುತ್ತಾಗಿದ್ದರಿಂದ ನೋವಾಯ್ತಾ? ಪಕ್ಷದ ಶಾಸಕರನ್ನು ಹೈಕಮಾಂಡ್ ನಿಯಂತ್ರಣ ಮಾಡಲಿಲ್ಲ ಎಂದು ನೋವಾಯ್ತಾ? ಎಂಬುದು ಜನರಿಗೆ ಗೊತ್ತಾಗಬೇಕು.’ ಎಂದು ಹೇಳಿದ್ದಾರೆ.
ಬಿಜೆಪಿ ನಾಯಕರುಗಳೇ ಯಡಿಯೂರಪ್ಪ ಅವರಿಗೆ ಹಿಂದೆಯಿಂದ ಮುಂದೆಯಿಂದ ಚುಚ್ಚಿದ್ದಾರೆ. ಅವರ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದಾರೆ. ಈಶ್ವರಪ್ಪನವರು ರಾಜ್ಯಪಾಲರಿಗೆ ದೂರು ಕೊಡ್ತಾರೆ, ಮತ್ತೊಬ್ಬ ಪರೀಕ್ಷೆ ಬರೆದಿದ್ದೀನಿ ಎಂದರು, ಮಗದೊಬ್ಬರು ಅವರ ವಿರುದ್ಧ ಹಾದಿ-ಬೀದಿಯಲ್ಲಿ ಟೀಕೆ ಮಾಡುತ್ತಾ ಮಾನ ಕಳೆದರು. ಬಿಜೆಪಿಯ ರಾಜ್ಯ ಮತ್ತು ರಾಷ್ಟ್ರ ನಾಯಕರು ಯಡಿಯೂರಪ್ಪ ಅವರಿಗೆ ಮೊದಲಿಂದಲೂ ತೊಂದರೆ ಕೊಟ್ಟಿದ್ದಾರೆ. ಯಡಿಯೂರಪ್ಪ ಅವರಿಗೆ ಅವರ ಪಕ್ಷದ ಹೈಕಮಾಂಡ್ ನಿಂದ ಬೆಂಬಲ ಸಿಗಲಿಲ್ಲ. ಯಡಿಯೂರಪ್ಪ ವಿರುದ್ಧ ಮಾತನಾಡಿದವರನ್ನು ನಿಯಂತ್ರಿಸಲಿಲ್ಲ ಎಂದು ಅವರು ಹೇಳಿದ್ದಾರೆ.
ಯಡಿಯೂರಪ್ಪ ಇವತ್ತು ರಾಜೀನಾಮೆ ಕೊಟ್ಟು ಇದೆಲ್ಲದಕ್ಕೂ ತೆರೆ ಎಳೆದಿದ್ದಾರೆ. ನಾವು ಯಡಿಯೂರಪ್ಪ ಅವರಿಗೆ ತೊಂದರೆ ಕೊಡಲಿಲ್ಲ. ಚಪ್ಪಾಳೆ ತಟ್ಟಿ ಅಂದಾಗ ತಟ್ಟಿದ್ದೇವೆ. ಕರೋನ ಸಮಯದಲ್ಲಿ ಜನರಿಗೆ ಸಹಾಯ ಮಾಡಿ ಎಂದು ಹೇಳಿದ್ದೇವೆ. ಅಷ್ಟು ಬಿಟ್ರೆ ನಮ್ಮಿಂದ ಅವರಿಗೆ ಯಾವುದೇ ತೊಂದರೆ ಆಗಿಲ್ಲ. ಯಡಿಯೂರಪ್ಪನವರ ಸ್ಥಾನ ಯಾರು ತುಂಬುತ್ತಾರೆ ಎಂಬುದರ ಬಗ್ಗೆ ನಾನು ಮಾತಾಡಲ್ಲ. ಅದು ಅವರ ಪಕ್ಷಕ್ಕೆ ಬಿಟ್ಟ ವಿಚಾರ. ಕಾಂಗ್ರೆಸ್ ಬಿಟ್ಟು ಹೋದವರು ಇಂದು ಮಾಜಿಗಳಾಗಿದ್ದಾರೆ. ಅವರು ಪಕ್ಷಕ್ಕೆ ಬರುವ ವಿಚಾರವನ್ನು ಮುಂದೆ ನೋಡೋಣ. ಬಿಜೆಪಿ ನಾಯಕತ್ವದಿಂದ ಯಡಿಯೂರಪ್ಪ ಅವರನ್ನು ಬದಲಿಸಿದ್ದರಿಂದ ನಮಗೇನೂ ಲಾಭ ಇಲ್ಲ. ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ಬದಲಿಸಬೇಕು ಎಂದು ರಾಜ್ಯದ ಜನರೇ ತೀರ್ಮಾನಿಸಿದ್ದಾರೆ ಎಂದು ಡಿಕೆಶಿ ಹೇಳಿದ್ದಾರೆ.