‘ಕಾಶ್ಮೀರ್ ಫೈಲ್ಸ್’ ಎಂಬ ಬಿಜೆಪಿಯ ಹಿಂದುತ್ವ ಅಜೆಂಡಾದ ಸಿನಿಮಾದ ಕುರಿತ ಭಾರೀ ವಾಗ್ವಾದಗಳು ತಾರಕ್ಕೇರಿರುವಾಗಲೇ 1990ರ ದಶಕದ ಆರಂಭದಲ್ಲಿ ಕಾಶ್ಮೀರ ಕಣಿವೆಯಲ್ಲಿ ನಡೆದ ಉಗ್ರರ ಅಟ್ಟಹಾಸದಲ್ಲಿ ನೊಂದ ಕಾಶ್ಮೀರಿ ಪಂಡಿತರು ತಮ್ಮ ನೋವನ್ನು ತೋಡಿಕೊಳ್ಳತೊಡಗಿದ್ದಾರೆ.
ಬಹುತೇಕ ಮುಖ್ಯವಾಹಿನಿ ಮಾಧ್ಯಮಗಳು ಕಾಶ್ಮೀರಿ ಪಂಡಿತರ ಆ ನೋವನ್ನು ಮರೆಮಾಚಿ, ಕೇವಲ ಪಂಡಿತರ ನೋವನ್ನೇ ಬಂಡವಾಳ ಮಾಡಿಕೊಂಡು ಬಿಜೆಪಿಯ ಮತ ಬ್ಯಾಂಕ್ ಕ್ರೋಡೀಕರಣ ಮತ್ತು ಗಲ್ಲಾಪೆಟ್ಟಿಗೆಯಲ್ಲಿ ಹಣ ಬಾಚುವ ದಾಳವಾಗಿರುವ ‘ಕಾಶ್ಮೀರ್ ಫೈಲ್ಸ್’ ಸಿನಿಮಾದ ಕಾಲ್ಪನಿಕ ಕಥೆಯನ್ನೇ ವಾಸ್ತವ ಎಂಬಂತೆ ಬಿಂಬಿಸುತ್ತಿವೆ. ಆದರೆ, ನಿಜವಾಗಿಯೂ 32 ವರ್ಷಗಳ ಹಿಂದೆ ಪಂಡಿತರ ಹತ್ಯೆ ಮತ್ತು ಸಾಮೂಹಿಕ ವಲಸೆಗೆ ಕಾರಣವೇನು ಮತ್ತು ಆ ಬಳಿಕ ಈ ಮೂರು ದಶಕಗಳಲ್ಲಿ ಬಿಜೆಪಿ ಸರ್ಕಾರವೂ ಸೇರಿದಂತೆ ಸರ್ಕಾರಗಳು ತಮಗೆ ಏನು ಮಾಡಿವೆ ಎಂಬುದನ್ನು ಪಂಡಿತರು ಹೇಳುತ್ತಿದ್ದಾರೆ.
ಆದರೆ, ಪಂಡಿತರ ಆ ವಾಸ್ತವದ, ಸ್ವಾನುಭವದ ಮಾತುಗಳನ್ನು ಮುಖ್ಯವಾಹಿನಿ ಮಾಧ್ಯಮಗಳ ಬಹುತೇಕ ಮರೆಮಾಚುತ್ತಿದ್ದು, ಯೂಟ್ಯೂಬ್ ಚಾನೆಲ್, ಸುದ್ದಿ ಜಾಲತಾಣಗಳು, ಫೇಸ್ ಬುಕ್, ಟ್ವಿಟರ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ವಿವೇಕ್ ಅಗ್ನಿಹೋತ್ರಿ ಎಂಬ ಪೂರ್ವಗ್ರಹಪೀಡಿತ ಸಿನಿಮಾ ನಿರ್ದೇಶಕ ಹಾಗೂ ಆತನ ಸಿನಿಮಾವನ್ನು ಇನ್ನಿಲ್ಲದಂತೆ ಪ್ರಮೋಟ್ ಮಾಡುತ್ತಿರುವ ಬಿಜೆಪಿ ಮತ್ತು ಸಂಘಪರಿವಾರದ ಮಂದಿ ಮುಚ್ಚಿಟ್ಟ ಸತ್ಯಗಳು ಹೊರಬರತೊಡಗಿವೆ.
1990ರಲ್ಲಿ ಪಂಡಿತರ ಮೇಲೆ ಪಾಕ್ ಬೆಂಬಲಿತ ಬಂಡುಕೋರ ಗುಂಪುಗಳು ನಡೆಸಿದ ಯೋಜಿತ ದಾಳಿಯ ವೇಳೆ ಕೇಂದ್ರದಲ್ಲಿ ಬಿಜೆಪಿ ಬೆಂಬಲಿತ ವಿಪಿ ಸಿಂಗ್ ಸರ್ಕಾರವೇ ಅಧಿಕಾರದಲ್ಲಿತ್ತು. ರಾಜ್ಯದಲ್ಲಿ ಜಗ್ ಮೋಹನ್ ಎಂಬ ಆರ್ ಎಸ್ ಎಸ್ ಹಿನ್ನೆಲೆಯ ವ್ಯಕ್ತಿಯೇ ರಾಜ್ಯಪಾಲರಾಗಿದ್ದು, ಅವರದೇ ನೇರ ಆಡಳಿತದ ರಾಷ್ಟ್ರಪತಿ ಆಡಳಿತ ಹೇರಲಾಗಿತ್ತು. ಆದಾಗ್ಯೂ ಆಗ ಪಂಡಿತರ ಮಾನ ಮತ್ತು ಪ್ರಾಣ ರಕ್ಷಣೆಗಾಗಿ ಆ ಸರ್ಕಾರಗಳು ಏನು ಮಾಡಿದವು ಎಂದು ಪಂಡಿತರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಈಗ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಬಳಸಿಕೊಂಡು ಹಿಂದೂಗಳ ಮತ ಕ್ರೋಡೀಕರಣಕ್ಕೆ ಪಂಡಿತರನ್ನು ರಾಜಕೀಯ ದಾಳವಾಗಿ ಬಳಸಲಾಗುತ್ತಿದೆ. ಉಳಿದ ಸರ್ಕಾರಗಳು ಪಂಡಿತರ ಜೀವ ರಕ್ಷಣೆ ಮಾಡುವ, ಅವರ ಬದುಕು ಕಟ್ಟಿಕೊಡುವ ಕೆಲಸ ಮಾಡದೇ ಇದ್ದರೂ, ಅವರನ್ನು ರಾಜಕೀಯ ದಾಳವಾಗಿ ಬಳಸಿಕೊಂಡಿರಲಿಲ್ಲ. ರಾಜಕೀಯವಾಗಿ ಅವರನ್ನು ಬೇಟೆಯಾಡಿರಲಿಲ್ಲ. ಆದರೆ, ಹಿಂದುತ್ವದ ರಕ್ಷಕ ಎನ್ನುವ ಬಿಜೆಪಿ, ಹಿಂದೂಗಳ ಆಪತ್ಭಾಂಧವ ಎನ್ನುವ ಬಿಜೆಪಿ ಅವರನ್ನು ತನ್ನ ಮತಬ್ಯಾಂಕ್ ಕ್ರೋಡೀಕರಣಕ್ಕೆ ಬಳಸಿಕೊಳ್ಳುತ್ತಿರುವುದು ಹೇಯ ಎಂಬ ಮಾತುಗಳನ್ನೂ ಸ್ವತಃ ಕಾಶ್ಮೀರಿ ಪಂಡಿತರೇ ಆಡಿದ್ದಾರೆ.
ಹಾಗೇ, ಈ ಹಿಂದಿನ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಕಾಶ್ಮೀರಿ ಪಂಡಿತರ ಪುನರ್ವಸತಿಗೆ ಕೈಗೊಂಡ ಕ್ರಮಗಳನ್ನು, ಅವರಿಗೆ ಸರ್ಕಾರಿ ನೌಕರಿ ಮತ್ತು ಉದ್ಯೋಗಾವಕಾಶ ಸೃಷ್ಟಿಸಿದ ಕೆಲಸಗಳನ್ನು ಬಿಜೆಪಿ ಇದೀಗ ತಾನು ಮಾಡಿರುವುದಾಗಿ ಹೇಳಿಕೊಳ್ಳುತ್ತಿರುವುದನ್ನು ಕೂಡ ಕಾಶ್ಮೀರಿ ಪಂಡಿತರು ವಿರೋಧಿಸಿದ್ದು, ಬಿಜೆಪಿ ನಾಯಕರು ಇಂತಹ ಲಜ್ಜೆಗೇಡಿ ವರ್ತನೆಯನ್ನು ಬಿಡಬೇಕು. ಹಿಂದಿನ ಸರ್ಕಾರಗಳು ಮಾಡಿದ ಕೆಲಸಗಳನ್ನು ತಾವೇ ಮಾಡಿರುವುದಾಗಿ ಹೇಳುವುದು ಸರಿಯಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಹೀಗೆ ಸರಣಿ ವೀಡಿಯೋ ಹೇಳಿಕೆಗಳು ಕಳೆದ ಮೂರ್ನಾಲ್ಕು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕಾಶ್ಮೀರ್ ಫೈಲ್ಸ್ ಸಿನಿಮಾದ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವ ಬಿಜೆಪಿಯ ವರಸೆಗೆ ಸ್ವತಃ ಸಂತ್ರಸ್ತ ಕಾಶ್ಮೀರಿ ಪಂಡಿತರ ಕುಟುಂಬಗಳಿಂದಲೇ ಆಕ್ರೋಶ ವ್ಯಕ್ತಪಡಿಸುತ್ತಿರುವುದು ಕಂಡುಬಂದಿದೆ.
ಈ ನಡುವೆ, ಬಿಜೆಪಿ ಮತ್ತು ಪ್ರಧಾನಿ ಮೋದಿ ಅವರು ವಿವಾದಿತ ಕಾಶ್ಮೀರ್ ಫೈಲ್ಸ್ ಸಿನಿಮಾದ ಪ್ರಮೋಷನ್ ಗಾಗಿ ಇನ್ನಿಲ್ಲದ ಯತ್ನಗಳನ್ನು ಮುಂದುವರಿಸಿದ್ದಾರೆ. ಸಿನಿಮಾದ ಕುರಿತು ಬಿಜೆಪಿಯ ಘಟಾನುಘಟಿ ನಾಯಕರು ತಮ್ಮ ಸಾಮಾಜಿಕ ಜಾಲತಾಣಗಳು, ಮುಖ್ಯವಾಹಿನಿ ಟಿವಿ ಮತ್ತು ಪತ್ರಿಕಾ ಮಾಧ್ಯಮಗಳ ಹೇಳಿಕೆಗಳ ಮೂಲಕ ಸಿನಿಮಾವನ್ನು ನೋಡುವಂತೆ ದೇಶದ ಜನತೆಗೆ ಕರೆ ನೀಡುತ್ತಿದ್ದಾರೆ. ಜೊತೆಗೆ ಬಹುತೇಕ ಎಲ್ಲಾ ಬಿಜೆಪಿ ರಾಜ್ಯ ಸರ್ಕಾರಗಳು ಆ ಸಿನಿಮಾಗೆ ತೆರಿಗೆ ವಿನಾಯ್ತಿ ಘೋಷಿಸಿವೆ. ಹಾಗೇ ಕೆಲವು ಕಡೆ ಬಿಜೆಪಿ ಸರ್ಕಾರ ಮತ್ತು ಪಕ್ಷದಿಂದ ಮತ್ತು ಬಹುತೇಕ ಶಾಸಕರು ಮತ್ತು ಸಂಸದರು ಸಿನಿಮಾದ ಉಚಿತ ಪ್ರದರ್ಶನಕ್ಕೂ ವ್ಯವಸ್ಥೆ ಮಾಡಿದ್ದಾರೆ.
ಇದೆಲ್ಲದರ ಪರಿಣಾಮವಾಗಿ ಕಾಶ್ಮೀರ್ ಫೈಲ್ಸ್ ಸಿನಿಮಾ ಇದೀಗ ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆಯ ಕಥೆಯಾಗಿ ಮಾತ್ರ ಉಳಿಯದೆ, ಭಾರತದ ಉದ್ದಗಲಕ್ಕೆ ಮುಸ್ಲಿಂ ದ್ವೇಷ ಮತ್ತು ಇಸ್ಲಮೋಫೋಬಿಯಾದ ಅಸ್ತ್ರವಾಗಿ ಬದಲಾಗಿದೆ. ಹಾಗೆಂದೇ ಕಾಶ್ಮೀರ್ ಫೈಲ್ಸ್ ಸಿನಿಮಾ ಪ್ರದರ್ಶನದಲ್ಲಿ ಬಹುತೇಕ ಸಂದರ್ಭದಲ್ಲಿ ಚಿತ್ರಮಂದಿರದ ಒಳಗೇ ಯವಕರು ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಘೋಷಣೆ ಕೂಗುವ ವೀಡಿಯೋಗಳು ಕೂಡ ಜಾಲತಾಣಗಳಲ್ಲಿ ವೈರಲ್ ಆಗಿವೆ. ಚಿತ್ರದ ಪ್ರದರ್ಶನ ಮುಗಿಯುತ್ತಿದ್ದಂತೆ ಹೊರಬರುವ ವೀಕ್ಷಕರು ಹಿಂದುತ್ವ ಪರ ಮತ್ತು ಮುಸ್ಲಿಮರ ವಿರುದ್ಧ ಘೋಷಣೆ ಕೂಗುವುದು, ಆಕ್ರೋಶದ ಮಾತುಗಳನ್ನಾಡುವುದು ಸಾಮಾನ್ಯ ದೃಶ್ಯವಾಗಿದೆ.
ಅಂದರೆ, ಆ ಸಿನಿಮಾವನ್ನು ಒಂದು ಕೋಮಿನ ವಿರುದ್ಧದ ದ್ವೇಷ ಹುರಿದುಂಬಿಸುವ ಸಾಧನವಾಗಿ ಬಳಸಿಕೊಳ್ಳುವ ಸ್ವ ಹಿತಾಸಕ್ತ ಶಕ್ತಿಗಳ ಉದ್ದೇಶವಂತೂ ಸದ್ಯಕ್ಕೆ ಈಡೇರಿದಂತಾಗಿದೆ.
ಆದರೆ, ಒಂದು ಸಿನಿಮಾವನ್ನು ಸಿನಿಮಾವಾಗಿ, ಒಂದು ಕಲ್ಪನೆಯ ಕಲಾಕೃತಿಯಾಗಿ ನಿರ್ಮಿಸುವುದು ಮತ್ತು ಅದು ಜೀವಪರವಾಗಿರುವಂತೆ ಎಚ್ಚರಿಕೆ ವಹಿಸುವುದು ಯಾವುದೇ ಒಬ್ಬ ನಿಜವಾದ ಕಲಾವಿದನ ಆದ್ಯತೆಯಾಗಿರುತ್ತದೆ. ಆದರೆ, ಕಾಶ್ಮೀರ್ ಫೈಲ್ಸ್ ಸಿನಿಮಾ ಅದಕ್ಕೆ ಹೊರತು. ಆ ಸಿನಿಮಾದ ನಿರ್ಮಾಣದ ಉದ್ದೇಶವೇ ಒಂದು ಸಮುದಾಯದ ವಿರುದ್ಧ ಈಗಾಗಲೇ ಬಹುಸಂಖ್ಯಾತರಲ್ಲಿ ಇರುವ ಅಸಹನೆ, ದ್ವೇಷ ಭಾವನೆಗೆ ತುಪ್ಪ ಸುರಿಯುವುದಾಗಿತ್ತೆ ಎಂಬುದು ಮೇಲ್ನೋಟಕ್ಕೇ ಈಗ ಸಾಬೀತಾಗುತ್ತಿದೆ.
ಸಿನಿಮಾದಂತಹ ಜನಮಾಧ್ಯಮವೊಂದು ಹೀಗೆ ದುರುದ್ದೇಶವನ್ನೇ ಧ್ಯೇಯವಾಗಿಟ್ಟುಕೊಂಡು ದೇಶವ್ಯಾಪಿ ಪ್ರದರ್ಶನಕಂಡರೆ ಏನಾಗಬಹುದು ಎಂಬುದರ ಸೂಚನೆಗಳು ಈಗಾಗಲೇ ಸಿಗತೊಡಗಿವೆ. ಸ್ವತಃ ಜಮ್ಮುವಿನಲ್ಲಿ ಈಗಲೂ ನೆಲೆಸಿರುವ ಅಷ್ಟಿಷ್ಟು ಮಂದಿ ಕಾಶ್ಮೀರಿ ಪಂಡಿತರೇ ಅದರ ಪರಿಣಾಮಗಳಿಗೆ ತಾವೇ ಮತ್ತೆ ಬಲಿಯಾಗುವ ಆತಂಕ ವ್ಯಕ್ತಪಡಿಸತೊಡಗಿದ್ದಾರೆ. ಈ ಸಿನಿಮಾ ಕಾಶ್ಮೀರದಲ್ಲಿ ಪಂಡಿತರ ಮೇಲೆ ನಡೆದ ದಾಳಿಗಳಿಗೆ ಅಲ್ಲಿನ ಮುಸ್ಲಿಮರೇ ಕಾರಣ. ಅವರೇ ಅಂತಹ ದಾಳಿಗಳನ್ನು ಮಾಡಿ ಹಿಂದೂಗಳನ್ನು ಅಲ್ಲಿಂದ ಓಡಿಸಿದರು ಎಂಬಂತೆ ಬಿಂಬಿಸಿದೆ. ಆದರೆ ವಾಸ್ತವವಾಗಿ ಆ ದಾಳಿ ನಡೆಸಿದ್ದು ಪ್ರತ್ಯೇಕತಾವಾದಿ ಬಂಡುಕೋರ ಗುಂಪುಗಳು. ಪಾಕಿಸ್ತಾನ ಪ್ರೇರಿತ ಆ ದಾಳಿಯಲ್ಲಿ ಸಾವಿರಾರು ಮಂದಿ ಹಿಂದೂಗಳಲ್ಲದ ಸಿಖ್ಖರು, ಮುಸ್ಲಿಮರು ಕೂಡ ಸಾವು ನೋವು ಅನುಭವಿಸಿದ್ದಾರೆ. ಆದರೆ, ಆ ವಾಸ್ತವವನ್ನು ಸಿನಿಮಾ ತಿರುಚಿ ಕಣಿವೆ ರಾಜ್ಯದ ಮುಸ್ಲಿಮರನ್ನು ಇಡಿಯಾಗಿ ಧರ್ಮಾಂಧರನ್ನಾಗಿ, ಹಿಂದೂ ವಿರೋಧಿಗಳಾಗಿ ಬಿಂಬಿಸಿದೆ. ಹಾಗಾಗಿ, ಆ ಸಿನಿಮಾದ ವಿರುದ್ಧ ಸ್ಥಳೀಯ ಮುಸ್ಲಿಮರು ಆಕ್ರೋಶಗೊಂಡಿದ್ದಾರೆ. ಹಿಂದೆ ಎಷ್ಟೋ ಘಟನೆಗಳಲ್ಲಿ ದಾಳಿಗೊಳಗಾದ ಪಂಡಿತರಿಗೆ ಸ್ಥಳೀಯ ಮುಸ್ಲಿಮರು ಆಶ್ರಯ ನೀಡಿ ಜೀವ ಉಳಿಸಿದ ನಿದರ್ಶನಗಳೂ ಇವೆ. ವಾಸ್ತವ ಹಾಗಿರುವಾಗ ಒಂದು ಪಕ್ಷದ ರಾಜಕೀಯ ಲಾಭಕ್ಕಾಗಿ ಸತ್ಯ ಮತ್ತು ಇತಿಹಾಸವನ್ನು ತಿರುಚಿ ಸದ್ಯದ ಬದುಕಿನ ನೆಮ್ಮದಿಗೂ ಬೆಂಕಿ ಹಚ್ಚುವುದು ತರವೇ ಎಂಬುದು ಪಂಡಿತರ ಪ್ರಶ್ನೆ. ಆ ಹಿನ್ನೆಲೆಯಲ್ಲಿ ಇನ್ನೂ ಜಮ್ಮು ಮತ್ತಿತರ ಕಡೆ ನೆಲೆಸಿರುವ ಪಂಡಿತರಿಗೆ ಆತಂಕ ಎದುರಾಗಿದೆ.
“ಕಾಶ್ಮೀರ್ ಫೈಲ್ಸ್ ಸಿನಿಮಾ ಜಮ್ಮು-ಕಾಶ್ಮೀರದಲ್ಲಿ ಈಗಲೂ ನೆಲೆಸಿರುವ ಕಾಶ್ಮೀರಿ ಪಂಡಿತರ ಜೀವಕ್ಕೆ ಅಪಾಯವೊಡ್ಡಿದೆ” ಎಂದು ಸ್ವತಃ ಕಾಶ್ಮೀರಿ ಪಂಡಿತ್ ಸಂಘರ್ಷ ಸಮಿತಿ(ಕೆಪಿಎಸ್ ಎಸ್) ಹೇಳಿಕೊಂಡಿದೆ https://www.newsclick.in/The-Kashmir-Files-making-resident-Kashmiri-Pandits-feel-unsafe 90ರ ದಶಕದ ಘಟನೆಯ ಬಳಿಕವೂ ಕಣಿವೆಯಲ್ಲಿಯೇ ನೆಲೆಸಿರುವ ಪಂಡಿತರು ಮತ್ತು ಇತರೆ ಹಿಂದೂಗಳ ರಕ್ಷಣೆಗಾಗಿ ದಶಕಗಳಿಂದ ಕೆಲಸ ಮಾಡುತ್ತಿರುವ ಕೆಪಿಎಸ್ ಎಸ್ ವ್ಯಕ್ತಪಡಿಸಿರುವ ಈ ಆತಂಕ ನಿಜಕ್ಕೂ ಆಘಾತಕಾರಿ.
ಕೇವಲ ರಾಜಕೀಯ ಲಾಭವೊಂದನ್ನೇ ಗಮನದಲ್ಲಿಟ್ಟುಕೊಂಡು ಮತ್ತೊಬ್ಬರ ಬದುಕಿನ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದೇ ದ್ವೇಷ ಕಕ್ಕುವ ಆಂದೋಲನಗಳಿಗೆ ತುಪ್ಪ ಸುರಿದರೆ ಏನಾಗುತ್ತದೆ ಎಂಬುದಕ್ಕೆ ಈ ಕಾಶ್ಮೀರ್ ಫೈಲ್ಸ್ ಸಿನಿಮಾದ ಪ್ರಕರಣ ಒಂದು ತಾಜಾ ಉದಾಹರಣೆ. ಆ ಸಿನಿಮಾ ಮತ್ತು ಆ ಸಿನಿಮಾವನ್ನು ಪ್ರಮೋಟ್ ಮಾಡುತ್ತಿರುವ ಬಿಜೆಪಿ, ಯಾರ ನೋವನ್ನು, ಯಾರ ಸಂಕಷ್ಟವನ್ನು ವಿಜೃಂಭಿಸಿ ದೇಶದ ಹಿಂದೂಗಳನ್ನು ಪ್ರಚೋದಿಸುತ್ತಿದೆಯೋ, ಆ ಜನಗಳೇ ಇದೀಗ ಅಪಾಯಕ್ಕೇ ಸಿಲುಕಿದ್ದಾರೆ. ಯಾರ ರಕ್ಷಣೆಗಾಗಿ, ಯಾವ ಹಿತಕ್ಕಾಗಿ ನಾವು ಸಿನಿಮಾ ಮಾಡಿದ್ದೇವೆ ಮತ್ತು ಅದನ್ನು ನೀವು ಹೆಚ್ಚೆಚ್ಚು ನೋಡಿ ಎಂದು ಹೇಳಲಾಗುತ್ತಿದೆಯೋ ಆ ಜನಗಳ ಪಾಲಿಗೇ ಆ ಸಿನಿಮಾ ಮತ್ತು ಅದರ ಪ್ರಚಾರ ಅಪಾಯ ತಂದೊಡ್ಡಿದೆ ಎಂಬುದು ನಿಜಕ್ಕೂ ವಿಪರ್ಯಾಸ.
ಕಾಶ್ಮೀರ ಪಂಡಿತರು ಆಕ್ರೋಶ ವ್ಯಕ್ತಪಡಿಸಿದರುವ ವಿಡಿಯೋ ತುಣುಕಿನ ಲಿಂಕ್ ಇಲ್ಲಿದೆ.