ರೌಡಿಸಂ ಹಿನ್ನಲೆಯಿರುವ ಸೈಲೆಂಟ್ ಸುನೀಲ ಪಡೆದಿದ್ದ ಬಿಜೆಪಿ ಸದಸ್ಯತ್ವ ರದ್ದು ಗೊಂಡಿದೆ. ಆತನ ಬಿಜೆಪಿ ಸದಸ್ಯತ್ವವನ್ನು ಬೆಂಗಳೂರು ಕೇಂದ್ರ ಬಿಜೆಪಿ ಘಟಕ ರದ್ದುಗೊಳಿಸಿದೆ.
ಸುನೀಲ್ ಬಿಜೆಪಿ ಸೇರಿದ್ದ ಬಗ್ಗೆ ಫೋಟೋ ವೈರಲ್ ಆದ ಬೆನ್ನಲ್ಲೇ ಕಾಂಗ್ರೆಸ್ ಶನಿವಾರ ಮತ್ತೆ ಕಮಲ ಪಕ್ಷವನ್ನು ಕುಟುಕಿತ್ತು. ನರೇಂದ್ರ ಮೋದಿ ಅವರು ಫೈಟರ್ ರವಿಗೆ ಕೈ ಮುಗಿದದ್ದನ್ನು ಮತ್ತೆ ಉಲ್ಲೇಖಿಸಿದ್ದ ಕಾಂಗ್ರೆಸ್, ಮುಂದಿನ ಬಾರಿ ರಾಜ್ಯಕ್ಕೆ ಆಗಮಿಸಿದಾಗ ನಿಮ್ಮನ್ನು ಸ್ವಾಗತಿಸಲು ಮತ್ತೊಬ್ಬ ಪಾತಕಿಯನ್ನು ಕರ್ನಾಟಕ ಬಿಜೆಪಿ ಪಕ್ಷ ಸೇರ್ಪಡೆ ಮಾಡಿಕೊಂಡಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿತ್ತು.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, “ಯಾವುದೇ ಕಾರಣಕ್ಕೂ ರೌಡಿ ಶೀಟರ್ಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದಿದ್ದ ಬಸವರಾಜ ಬೊಮ್ಮಾಯಿ ಅವರೇ, ನಿಮ್ಮ ನಾಲಿಗೆಯನ್ನು ಈಗ ಯಾವುದರಲ್ಲಿ ತೊಳೆದುಕೊಳ್ಳುವಿರಿ? ಗೋಮೂತ್ರವೋ, ಗೋಮಯವೋ!?” ಎಂದು ಪ್ರಶ್ನಿಸಿತ್ತು.
“ಫೈಟರ್ ರವಿ ಎದುರು ಕೈಮುಗಿದು ನಿಂತ ಪ್ರಧಾನಿ ನರೇಂದ್ರ ಮೋದಿ ಅವರೇ, ಮುಂದಿನ ಬಾರಿ ಬಂದಾಗ ಮತ್ತೊಬ್ಬ ರೌಡಿ ಸೈಲೆಂಟ್ ಸುನೀಲನಿಗೆ ಕೈ ಮುಗಿಯುವಿರಾ, ಕಾಲಿಗೆ ಬೀಳುವಿರಾ ನಿಮ್ಮ ವಿವೇಚನೆಗೆ ಬಿಟ್ಟಿದ್ದು! ನಿಮ್ಮನ್ನು ಸ್ವಾಗತಿಸಲು ಮತ್ತೊಬ್ಬ ಪಾತಕಿಯನ್ನು ಕರ್ನಾಟಕ ಬಿಜೆಪಿ ಪಕ್ಷ ಸೇರ್ಪಡೆ ಮಾಡಿಕೊಂಡಿದೆ . ಪ. ಬಂಗಾಳ, ಕೇರಳದ RSS ಕಚೇರಿಗಳಲ್ಲಿ ಗನ್ನು, ಗ್ರೆನೇಡ್, ಬಾಂಬುಗಳು ಇರುವುದು ಬೆಳಕಿಗೆ ಬಂದಿತ್ತು. ಕರ್ನಾಟಕದ ಬಿಜೆಪಿ ಕಚೇರಿಯಲ್ಲಿ ಇನ್ನು ಮುಂದೆ ಲಾಂಗು, ಮಚ್ಚು, ಡ್ರ್ಯಾಗರ್ಗಳ ಸಂಗ್ರಹ ಇರಲಿದೆ! ರೌಡಿಗಳಿಗೆ ಬಿಜೆಪಿ ಮೇಲೆ ಪ್ರೀತಿಯೋ, ಬಿಜೆಪಿಗೆ ರೌಡಿಗಳ ಮೇಲೆ ಪ್ರೀತಿಯೋ ನಳಿನ್ ಕುಮಾರ್ ಕಟೀಲ್ ಉತ್ತರಿಸಬೇಕು” ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.