ಕಳೆದ ಒಂದು ದಶಕದಿಂದ ಬಹುತೇಕ ರಾಜ್ಯ ರಾಜಕಾರಣದ ದಿಕ್ಕುದೆಸೆ ನಿರ್ಧರಿಸುವ ಮಟ್ಟಿಗೆ ಕೊಬ್ಬಿರುವ ಬೆಳಗಾವಿಯ ಸಕ್ಕರೆ ಲಾಬಿ ಈ ಹಿಂದಿನ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಉರುಳಿಸುವಲ್ಲಿ ನಿರ್ಣಾಯಕವಾಗಿತ್ತು. ಇದೀಗ ಮತ್ತೊಮ್ಮೆ ಗಡಿನಾಡಿನ ಉದ್ಯಮ ಲಾಬಿ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದೆ.
ಬೆಳಗಾವಿ ಉದ್ಯಮ ಮತ್ತು ರಾಜಕಾರಣದ ಮೇಲಿನ ಹಿಡಿತಕ್ಕಾಗಿ ಈ ಹಿಂದೆ ಕಾಂಗ್ರೆಸ್ ನಾಯಕರ ನಡುವೆಯೇ ನಡೆದ ಪೈಪೋಟಿ ಅಂತಿಮವಾಗಿ ರಮೇಶ್ ಜಾರಕಿಹೊಳಿ ಮತ್ತು ಡಿ ಕೆ ಶಿವಕುಮಾರ್ ನಡುವಿನ ಸಂಘರ್ಷವಾಗಿ ಬದಲಾಗಿ, ಜಾರಕಿಹೊಳಿ ಅತೃಪ್ತ ಶಾಸಕರ ಗುಂಪುಕಟ್ಟಿಕೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರುವ ಮೂಲಕ ಸಮ್ಮಿಶ್ರ ಸರ್ಕಾರ ಪತನವಾಗಿ ಬಿ ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣವಾಗಿತ್ತು.
ಇದೀಗ ಅದೇ ರಮೇಶ್ ಜಾರಕಿಹೊಳಿ ಮತ್ತು ಬೆಳಗಾವಿಯ ಮೂಲ ಬಿಜೆಪಿಯ ನಾಯಕರ ನಡುವೆ ಸಂಘರ್ಷ ಆರಂಭವಾಗಿದೆ. ಮೂಲತಃ ಜಾರಕಿಹೊಳಿ ಕುಟುಂಬದ ವಿರುದ್ಧವೇ ರಾಜಕಾರಣ ಮಾಡಿಕೊಂಡುಬಂದಿದ್ದ ಹಲವರು ಇದೀಗ ಕಳೆದ ವಿಧಾನಪರಿಷತ್ ಚುನಾವಣೆಯ ಬಳಿಕ ರಮೇಶ್ ಜಾರಕಿಹೊಳಿ ವಿರುದ್ಧ ಪರಸ್ಪರ ಕೈಜೋಡಿಸಿದ್ದಾರೆ. ವಿಧಾನಪರಿಷತ್ ಚುನಾವಣೆಯಲ್ಲಿ ತಮ್ಮ ಸಹೋದರ ಲಖನ್ ಜಾರಕಿಹೊಳಿಗೆ ಬಿಜೆಪಿ ಟಿಕೆಟ್ ಪಡೆಯಲು ಯತ್ನಿಸಿ ವಿಫಲವಾದ ಬಳಿಕ ರಮೇಶ್ ಜಾರಕಿಹೊಳಿ ಬಂಡಾಯ ಅಭ್ಯರ್ಥಿಯಾಗಿ ಲಖನ್ ಕಣಕ್ಕಿಳಿಸಿ ಬಿಜೆಪಿಯ ಅಧಿಕೃತ ಅಭ್ಯರ್ಥಿಯ ಎದುರು ಗೆಲ್ಲಿಸಿಕೊಂಡು ಬಂದಿದ್ದಾರೆ. ಆ ಮೂಲಕ ಬಿಜೆಪಿಯ ಅಧಿಕೃತ ಅಭ್ಯರ್ಥಿಯ ಸೋಲಿಗೆ ನೇರ ಹೊಣೆಗಾರರಾಗಿದ್ದಾರೆ.
ಇದೇ ವಿಷಯವನ್ನು ಮುಂದಿಟ್ಟುಕೊಂಡು ಬೆಳಗಾವಿ ಘಟಾನುಘಟಿ ನಾಯಕರಾದ ಪ್ರಭಾಕರ ಕೋರೆ, ಉಮೇಶ್ ಕತ್ತಿ, ಲಕ್ಷ್ಮಣ ಸವದಿ ಮತ್ತಿತರರು ಕಳೆದ ವಾರ ಬೆಳಗಾವಿಯಲ್ಲಿ ಪ್ರತ್ಯೇಕ ಸಭೆ ನಡೆಸಿ, ಜಾರಕಿಹೊಳಿ ಸಹೋದರರ ಪಕ್ಷದ್ರೋಹ ಕೃತ್ಯವನ್ನೇ ಬಳಸಿಕೊಂಡು ಪಕ್ಷದಲ್ಲಿ ಅವರನ್ನು ಮೂಲೆಗುಂಪು ಮಾಡುವ ತಂತ್ರಗಾರಿಕೆ ಹೆಣೆದಿದ್ದಾರೆ. ಆ ತಂತ್ರಗಾರಿಕೆಯ ಭಾಗವಾಗಿಯೇ ಶುಕ್ರವಾರ ಸಚಿವ ಉಮೇಶ್ ಕತ್ತಿ ಮತ್ತು ಲಕ್ಷ್ಮಣ ಸವದಿ ನೇತೃತ್ವದಲ್ಲಿ ಬೆಳಗಾವಿಯ ಬಿಜೆಪಿ ನಾಯಕರ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಬೆಳಗಾವಿ ರಾಜಕಾರಣದ ಕುರಿತು ಮಾತುಕತೆ ನಡೆಸಿದೆ ಎನ್ನಲಾಗಿದೆ.
ತಮ್ಮ ಸಿಎಂ ಭೇಟಿಗೆ ಬಜೆಟ್ ಹಿನ್ನೆಲೆಯಲ್ಲಿ ಜಿಲ್ಲೆಯ ಅಭಿವೃದ್ಧಿ ಕಾರ್ಯಕ್ಕೆ ಅನುದಾನ ಕೋರಿಕೆಯ ಕಾರಣ ನೀಡಿದ್ದರೂ, ಸ್ವತಃ ರಮೇಶ್ ಮತ್ತು ಬಾಲಚಂದ್ರ ಸೇರಿದಂತೆ ಜಾರಕಿಹೊಳಿ ಸಹೋದರರನ್ನು ಮತ್ತು ಅವರ ಆಪ್ತರಾದ ಮಹೇಶ್ ಕುಮಟಳ್ಳಿ ಮತ್ತಿತರರನ್ನು ಹೊರಗಿಟ್ಟು ಉಮೇಶ್ ಕತ್ತಿಯವ ನಿವಾಸದಲ್ಲಿ ಕಳೆದ ವಾರ ಸಭೆ ನಡೆಸಿದ ನಾಯಕರೇ ಬೆಂಗಳೂರಿಗೆ ಬಂದು ಭೇಟಿ ಮಾಡಿರುವುದು ಸಹಜವಾಗಿ ಜಾರಕಿಹೊಳಿ ವಿರುದ್ಧದ ಲಾಬಿಯ ಭೇಟಿ ಎಂಬುದನ್ನು ಸಾರಿ ಹೇಳಿದೆ.
ಮುಖ್ಯವಾಗಿ ವಿಧಾನಪರಿಷತ್ ಚುನಾವಣೆಯಲ್ಲಿ ಮತ್ತು ವಿಧಾನಸಭಾ ಉಪ ಚುನಾವಣೆಯಲ್ಲಿ ಪಕ್ಷಕ್ಕೆ ಆದ ಹಿನ್ನಡೆಗೆ ರಮೇಶ್ ಜಾರಕಿಹೊಳಿ ಕಾರಣ. ತಮ್ಮನ್ನು ಸಿಡಿ ಪ್ರಕರಣದ ಹಿನ್ನೆಲೆಯಲ್ಲಿ ಸಂಪುಟದಿಂದ ಕೈಬಿಟ್ಟ ಬಳಿಕ ಅವರು ಜಿಲ್ಲೆಯೂ ಸೇರಿದಂತೆ ಉತ್ತರಕರ್ನಾಟಕದ ಭಾಗದಲ್ಲಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಮುಖ್ಯವಾಗಿ ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಏಕಪಕ್ಷೀಯವಾಗಿ ಜಾರಕಿಹೊಳಿ ಸಹೋದರರೇ ಕಾರಣ. ಪಕ್ಷದ ಮೇಲೆ ಸವಾರಿ ಮಾಡುವ ಅವರನ್ನು ಇನ್ನು ಸಹಿಸಿಕೊಳ್ಳಲಾಗದು. ಜಿಲ್ಲೆಯಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ ತಮ್ಮನ್ನು ಮೂಲೆಗುಂಪು ಮಾಡಿ ರಾಜಕೀಯ ಪ್ರಾಬಲ್ಯ ಮೆರೆಯಲು ಯತ್ನಿಸುತ್ತಿದ್ದಾರೆ. ಇದು ಅಂತಿಮವಾಗಿ ಜಿಲ್ಲೆಯಷ್ಟೇ ಅಲ್ಲದೆ ಆ ಭಾಗದಲ್ಲೇ ಬಿಜೆಪಿಗೆ ಪೆಟ್ಟು ಕೊಡಲಿದೆ. ಮುಂದಿನ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈಗಲೇ ಅವರಿಗೆ ಕಡಿವಾಣ ಹಾಕಬೇಕು. ಇಲ್ಲವಾದಲ್ಲಿ ಅನಾಹುತ ಕಾದಿದೆ ಎಂಬುದನ್ನು ಸಿಎಂಗೆ ಮನವರಿಕೆ ಮಾಡುವ ಯತ್ನವೇ ಈ ಭೇಟಿ ಎನ್ನಲಾಗಿದೆ.
ಆದರೆ, ಒಂದು ಕಡೆ ಮತ್ತೆ ಸಚಿವ ಸಂಪುಟಕ್ಕೆ ಸೇರಲು ಪಕ್ಷದ ದೆಹಲಿ ವರಿಷ್ಠರಿಂದ ರಾಜ್ಯ ಪ್ರಮುಖರ ವರೆಗೆ, ಆರ್ ಎಸ್ ಎಸ್ ನಾಯಕರೂ ಸೇರಿದಂತೆ ಎಲ್ಲರ ಮೇಲೆ ಒತ್ತಡ ಹೇರುತ್ತಿರುವ ರಮೇಶ್ ಜಾರಕಿಹೊಳಿ ಸದ್ಯ ಬಿಜೆಪಿ ವರಿಷ್ಠರ ಪಾಲಿಗೆ ಬಿಸಿ ತುಪ್ಪವಾಗಿದ್ದಾರೆ. ಒಂದು ಕಡೆ ಸಿಡಿ ಹಗರಣದಂತಹ ನಾಚಿಕೆಗೇಡಿನ ಕೃತ್ಯದ ಬಳಿಕ ಸಂಪುಟದಿಂದ ಕೈಬಿಟ್ಟು ಮತ್ತೆ ತನಿಖೆ ಪೂರ್ಣಗೊಳ್ಳುವ ಮುನ್ನವೇ ಸಂಪುಟಕ್ಕೆ ವಾಪಸ್ ತೆಗೆದುಕೊಳ್ಳುವುದು ಸಾರ್ವಜನಿಕ ಮುಜುಗರದ ಪ್ರಶ್ನೆ. ಜೊತೆಗೆ ಪ್ರತಿಪಕ್ಷಗಳಿಗೆ ಚುನಾವಣಾ ಕಣದಲ್ಲಿ ಪ್ರಬಲ ಅಸ್ತ್ರ ಕೊಟ್ಟಂತಾಗುತ್ತದೆ. ಹಾಗಂತ ಸಂಪುಟಕ್ಕೆ ಸೇರಿಸಿಕೊಳ್ಳದೇ ಇದ್ದರೆ, ಸರ್ಕಾರ ಪೂರ್ಣಾವಧಿ ಪೂರೈಸಲು ಬಿಡದಂತೆ ಮತ್ತೆ ತಮ್ಮ ಆಪ್ತ ಶಾಸಕರ ಗುಂಪು ಕಟ್ಟಿಕೊಂಡು ಬಂಡಾಯವೇಳಬಹುದು ಎಂಬ ಆತಂಕ ಬಿಜೆಪಿ ವರಿಷ್ಠರದ್ದು ಎನ್ನಲಾಗುತ್ತಿದೆ.
ಆದರೆ, ಮತ್ತೊಂದು ಕಡೆ, ರಮೇಶ್ ಜಾರಕಿಹೊಳಿ ಪಕ್ಷಕ್ಕೆ ಸೇರ್ಪಡೆಯಾಗುತ್ತಲೇ ತಮ್ಮ ಆಪ್ತ ಶಾಸಕರ ಬಲದಿಂದಲೇ ಬಿಜೆಪಿ ಅಧಿಕಾರಕ್ಕೆ ಬಂದಿರುವುದು ಎಂಬುದನ್ನೇ ಮುಂದಿಟ್ಟುಕೊಂಡು ಸಂಪುಟ ಸ್ಥಾನಮಾನ, ಖಾತೆ ಹಂಚಿಕೆ, ಜಿಲ್ಲಾ ಉಸ್ತುವಾರಿ, ಉಪ ಚುನಾವಣೆಯ ಟಿಕೆಟ್, ವಿಧಾನಪರಿಷತ್ ಟಿಕೆಟ್ ಸೇರಿದಂತೆ ಪ್ರತಿ ಹಂತದಲ್ಲೂ ಪಕ್ಷದ ಮೇಲೆ ಸವಾರಿ ಮಾಡುತ್ತಿರುವುದು ಪಕ್ಷದ ವರಿಷ್ಠರು ರೋಸಿಹೋಗುವಂತೆ ಮಾಡಿದೆ. ಆ ಕಾರಣದಿಂದಲೇ ರಮೇಶ್ ಜಾರಕಿಹೊಳಿ ಆಪ್ತ ವಲಯದಲ್ಲಿ ಗುರುತಿಸಿಕೊಂಡು ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ವಲಸೆ ಬಂದ ಶಾಸಕರಿಗೆ ಒಳ್ಳೆಯ ಖಾತೆಗಳನ್ನು ನೀಡಿ, ಆಯಕಟ್ಟಿನ ಸ್ಥಾನಮಾನಗಳನ್ನು ನೀಡಿ ಅವರನ್ನು ವಿಶ್ವಾಸಕ್ಕೆ ಪಡೆಯುವ ಯತ್ನ ಮಾಡಲಾಗಿದೆ. ಆ ಮೂಲಕ ಜಾರಕಿಹೊಳಿಯನ್ನು ಏಕಾಂಗಿ ಮಾಡಿ ಅವರನ್ನು ಮೂಲೆಗುಂಪು ಮಾಡುವುದು ಬಿಜೆಪಿ ದೆಹಲಿ ವರಿಷ್ಠರ ತಂತ್ರಗಾರಿಕೆ.
ರಮೇಶ್ ಜಾರಕಿಹೊಳಿಯ ಸದ್ಯದ ಸ್ಥಿತಿಯಲ್ಲಿ ನಾಲ್ಕು ಮಂದಿ ಶಾಸಕರು ಕೂಡ ಅವರ ಹಿಂದೆ ಹೋಗಲಾರರು. ಹಾಗಿರುವಾಗ ಸರ್ಕಾರಕ್ಕೆ ತೊಂದರೆಯಾಗಲಾರದು. ಜೊತೆಗೆ ಸಿಡಿ ಪ್ರಕರಣ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಜಾರಕಿಹೊಳಿ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬಾಗಿಲು ಕೂಡ ಮುಚ್ಚಿದೆ. ಹಾಗಾಗಿ ರಮೇಶ್ ಜಾರಕಿಹೊಳಿಯನ್ನು ಮೂಲೆಗುಂಪು ಮಾಡಿದರೂ ಪಕ್ಷಕ್ಕಾಗಲೀ, ಅಥವಾ ಬೆಳಗಾವಿಯ ಮಟ್ಟಿಗೆ ತಮ್ಮ ರಾಜಕೀಯ ಭವಿಷ್ಯಕ್ಕಾಗಲೀ ದೊಡ್ಡ ಸವಾಲೇನೂ ಎದುರಾಗದು. ಅವರು ರಾಜಕೀಯವಾಗಿ ಏನೇ ಮಾಡಿದರೂ ಅದನ್ನು ನಾವೆಲ್ಲಾ ಮೂಲ ಬಿಜೆಪಿಗರು ಒಟ್ಟಾಗಿಯೇ ಎದುರಿಸಲು ಸಜ್ಜಾಗಿದ್ದೇವೆ ಎಂದು ಮೂಲಬಿಜೆಪಿಗರು ಮುಖ್ಯಮಂತ್ರಿಗೆ ಮನವರಿಕೆ ಮಾಡಿದ್ದಾರೆ ಎನ್ನಲಾಗಿದೆ.
ಅಂದರೆ ರಮೇಶ್ ಜಾರಕಿಹೊಳಿಯನ್ನು ಹೆಡಮುರಿ ಕಟ್ಟುವ ಯೋಜನೆ ಸದ್ಯ ಬಿಜೆಪಿಯಲ್ಲಿ ಜಾರಿಯಲ್ಲಿದೆ. ಆದರೆ ಆ ಯೋಜನೆ ಕೇವಲ ಬೆಳಗಾವಿಯ ಸಕ್ಕರೆ ಲಾಬಿಯ ಮಟ್ಟಿಗೆ ಸೀಮಿತವಾಗಿದೆಯೇ? ಅಥವಾ ಜಾರಕಿಹೊಳಿ ಉಪಟಳದಿಂದ ಬೇಸತ್ತಿರುವ ಬಿಜೆಪಿಯ ದೆಹಲಿ ಚಾಣಕ್ಯರೇ ಯೋಜನೆಯ ಸೂತ್ರಧಾರರೇ? ಎಂಬುದು ಮಾತ್ರ ಇನ್ನಷ್ಟೇ ಗೊತ್ತಾಗಬೇಕಿದೆ.