ಭೀಕರ ಹಿಂಸಾಚಾರಕ್ಕೆ ಪಶ್ಚಿಮ ಬಂಗಾಳ ಸಾಕ್ಷಿಯಾಗಿದೆ. ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದ ಹಿಂಸಾಚಾರದಲ್ಲಿ ಮಕ್ಕಳು ಮಹಿಳೆಯರು ಸೇರಿದಂತೆ ಕನಿಷ್ಟ ಎಂಟು ಮಂದಿ ಮೃತಪಟ್ಟಿದ್ದಾರೆ.
ಬಿರ್ಭೂಮ್ ಜಿಲ್ಲೆಯ ಬೋಗುತಿ ಗ್ರಾಮದಲ್ಲಿ ಟಿಎಂಸಿ ನಾಯಕನನ್ನು ನಾಲ್ವರು ಅಪರಿಚಿತ ದುಷ್ಕರ್ಮಿಗಳು ಹತ್ಯೆಗೈದ ಬೆನ್ನಲ್ಲೇ ಗ್ರಾಮದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಸೋಮವಾರ ರಾತ್ರಿ ಅಂಗಡಿಯೊಂದರ ಸಮೀಪ ನಿಂತಿದ್ದ ಪಂಚಾಯತ್ ಉಪಾಧ್ಯಕ್ಷ ಭದು ಶೇಖ್ ಅವರನ್ನು, ಬೈಕ್ನಲ್ಲಿ ಬಂದ ನಾಲ್ವರು ಮುಸುಕುಧಾರಿ ದುಷ್ಕರ್ಮಿಗಳು ನಾಡ ಬಾಂಬ್ ಎಸೆದು ಹತ್ಯೆ ಮಾಡಿದ್ದರು. ಭದು ಹತ್ಯೆಯಿಂದ ಉದ್ರಿಕ್ತರಾದ ಅವರ ಬೆಂಬಲಿಗರು ಹಿಂಸಾಚಾರ ನಡೆಸಿದ್ದಿ, ಗ್ರಾಮದ ಹಲವು ಮನೆಗಳಿಗೆ ಪೆಟ್ರೋಲ್ ಬಾಂಬ್ ದಾಳಿ ನಡೆಸಿದ್ದಾರೆ. ಕನಿಷ್ಟ 12 ಕ್ಕೂ ಹೆಚ್ಚು ಮನೆಗಳು ಬೆಂಕಿಗೆ ಆಹುತಿಯಾಗಿದೆ ಎಂದು ವರದಿಯಾಗಿದೆ.
ಶೇಖ್ ಹತ್ಯೆಯ ಆರೋಪಿಗಳಿಗೆ ಸೇರಿದೆ ಎನ್ನಲಾದ ಎರಡು ಮನೆ ಒಳಗೊಂಡಂತೆ ಹಲವಾರು ಮನೆಗಳ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಲಾಗಿದೆ. ಮೃತಪಟ್ಟವರಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಒಂದೇ ಮನೆಯಿಂದ ಏಳು ಸುಟ್ಟ ಮೃತದೇಹಗಳು ಪತ್ತೆಯಾಗಿದ್ದು, ಒಬ್ಬರು ಜಿಲ್ಲೆಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಸ್ಕ್ರಾಲ್.ಇನ್ ವರದಿ ಮಾಡಿದೆ.
ಮಮತಾ ಬ್ಯಾನರ್ಜಿ ರಾಜಿನಾಮೆಗೆ ಆಗ್ರಹ
ಬಿರ್ಭೂಮ್ ಹಿಂಸಾಚಾರದ ವಿರುದ್ಧ ಎಡಪಕ್ಷಗಳು ಹಾಗೂ ಬಿಜೆಪಿ ರಾಜ್ಯ ಸರ್ಕಾರವನ್ನು ತೀವ್ರವಾಗಿ ಖಂಡಿಸಿದ್ದು, ಮುಖ್ಯಮಂತ್ರಿ ಹುದ್ದೆಯಿಂದ ಮಮತಾ ಬ್ಯಾನರ್ಜಿ ಕೆಳಗಿಳಿಯಬೇಕೆಂದು ಪ್ರತಿಪಕ್ಷಗಳು ಪಟ್ಟು ಹಿಡಿದಿದೆ. ಪ್ರಕರಣವನ್ನು ಎನ್ಐಎ ಗೆ ವಹಿಸಬೇಕೆಂದು ಬಿಜೆಪಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ರಾಜಕೀಯ ನಾಯಕರೊಬ್ಬರ ಕೊಲೆಯಾಗಿದೆ. ಅದಕ್ಕೂ ಮೊದಲು, ಅವರ ಸಹೋದರನನ್ನು ಹತ್ಯೆಗೈಯಲಾಗಿತ್ತು. ಆ ಪ್ರದೇಶದಲ್ಲಿ ಕೆಲಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು ಆದರೂ ಪೊಲೀಸರು ಏಕೆ ಕ್ರಮ ಕೈಗೊಳ್ಳಲಿಲ್ಲ?. ಈ ಹಿಂಸಾಚಾರ ನಡೆಯಲು ಪೊಲೀಸರು ಅನುಮತಿ ನೀಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅದರ ಪರಿಣಾಮ ಎಂಟು ಮಂದಿ ಸಜೀವ ದಹನವಾದರು. ಇದು ಕಲ್ಪಿಸಲೂ ಸಾಧ್ಯವಿಲ್ಲ. ಹಿಂಸಾಚಾರದ ಬಗ್ಗೆ ರಾಜ್ಯಪಾಲರು ತಮ್ಮ ಕಳವಳವನ್ನು ವ್ಯಕ್ತಪಡಿಸಿದಾಗ, ಮುಖ್ಯಮಂತ್ರಿ ರಾಜ್ಯಪಾಲರ ಮೇಲೆ ಹರಿಹಾಯ್ದರು. ಆದರೆ, (ಹಿಂಸಾಚಾರದ) ಹೊಣೆಗಾರಿಕೆಯನ್ನು ತೆಗೆದುಕೊಳ್ಳಲಿಲ್ಲ” ಎಂದು ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ದಿಲೀಪ್ ಘೋಷ್ ಹೇಳಿದ್ದಾರೆ
ಉತ್ತರಪ್ರದೇಶ, ಮಧ್ಯಪ್ರದೇಶದಂತಹ ರಾಜ್ಯಗಳಲ್ಲಿ ಇಂತಹ ಘಟನೆ ಸಾಮಾನ್ಯವೆಂದ ಮಮತಾ ಬ್ಯಾನರ್ಜಿ
ಆದರೆ ಘಟನೆ ಹಿಂದೆ ವಿರೋಧ ಪಕ್ಷಗಳ ಕೈವಾಡ ಇದೆಯೆಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. “ಸರ್ಕಾರ ನಮ್ಮದು, ನಮ್ಮ ರಾಜ್ಯದ ಜನರ ಬಗ್ಗೆ ನಮಗೆ ಕಾಳಜಿ ಇದೆ. ಯಾರಾದರೂ ತೊಂದರೆಗೊಳಗಾಗುವುದನ್ನು ನಾವು ಎಂದಿಗೂ ಬಯಸುವುದಿಲ್ಲ. ಬಿರ್ಭೂಮ್ ರಾಂಪುರ್ಹತ್ ಘಟನೆ ದುರದೃಷ್ಟಕರ. ನಾನು ತಕ್ಷಣವೇ ಪ್ರಭಾರ ಅಧಿಕಾರಿ ಮತ್ತು ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಅವರನ್ನು ವಜಾಗೊಳಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಅಲ್ಲದೆ, ಇಂತಹ ಹಿಂಸಾಚಾರಗಳು ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಸಾಮಾನ್ಯವಾಗಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ಬಿರ್ಭೂಮ್ ಘಟನೆಯನ್ನು ಸಮರ್ಥಿಸುತ್ತಿಲ್ಲ. ಆದರೆ, ಇಂತಹ ಘಟನೆಗಳು ಉತ್ತರ ಪ್ರದೇಶ, ಗುಜರಾತ್, ಮಧ್ಯಪ್ರದೇಶ, ಬಿಹಾರ್ ಮತ್ತು ರಾಜಸ್ಥಾನಗಳಲ್ಲಿ ಸಾಮಾನ್ಯವಾಗಿ ನಡೆಯುತ್ತದೆ ಎಂದು ಬ್ಯಾನರ್ಜಿ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಹತ್ರಾಸ್ ಸಾಮೂಹಿಕ ಅತ್ಯಾಚಾರವನ್ನು ಉಲ್ಲೇಖಿಸಿದ ಬ್ಯಾನರ್ಜಿ, ಆದಿತ್ಯನಾಥ್ ಸರ್ಕಾರವು ತೃಣಮೂಲ ಕಾಂಗ್ರೆಸ್ ನಿಯೋಗವನ್ನು ಹತ್ರಾಸ್ ಘಟನೆ ನಡೆದ ಜಿಲ್ಲೆಗೆ ಪ್ರವೇಶಿಸಲು ಹಾಗೂ ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಲು ಅನುಮತಿಸಲಿಲ್ಲ. ಆದರೆ, ಬಿರ್ಭೂಮ್ ಜಿಲ್ಲೆಗೆ ಭೇಟಿ ನೀಡುವುದನ್ನು ತನ್ನ ಸರ್ಕಾರ ತಡೆಯುತ್ತಿಲ್ಲ ಎಂದು ಅವರು ಹೇಳಿದ್ದಾರೆ.
“ಇದು ಬಂಗಾಳ, ಉತ್ತರ ಪ್ರದೇಶ ಅಲ್ಲ” ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಗವರ್ನರ್ ಜಗದೀಪ್ ಧನ್ಖರ್ ಅವರು “ಮಾನವ ಹಕ್ಕುಗಳ ನಾಶ ಮತ್ತು ಕಾನೂನು ಮತ್ತು ಸುವ್ಯವಸ್ಥೆ ತಲೆಕೆಳಗಾಗಿದ್ದು ನೋಡಿ ದುಃಖಿತ ಮತ್ತು ವಿಚಲಿತನಾಗಿದ್ದೇನೆ” ಎಂದು ಹೇಳಿದ್ದರು.
ರಾಜ್ಯಪಾಲರ ಹೇಳಿಕೆಯನ್ನು ವಿರೋಧಿಸಿದ ಮುಖ್ಯಮಂತ್ರಿ, ಅಂತಹ ಹೇಳಿಕೆಗಳು ಎಸ್ಐಟಿಯ ತನಿಖೆಯ ಮೇಲೆ ಪ್ರಭಾವ ಬೀರಬಹುದು ಎಂದು ಪ್ರತಿಕ್ರಿಯಿಸಿದ್ದಾರೆ. ಧನ್ಖರ್ ಹೇಳಿಕೆಗಳು ರಾಜಕೀಯ ಪ್ರೇರಿತವಾಗಿವೆ ಎಂದು ಆರೋಪಿಸಿದ ಅವರು ಯಾವಾಗಲೂ ರಾಜ್ಯದ ಪ್ರತಿಷ್ಠೆಯನ್ನು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳುವ ಮೂಲಕ ಧನ್ಖರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದಕ್ಕೆ ಪ್ರತಿಪಕ್ಷ ನಾಯಕ ಸುವೇಂಧು ಅಧಿಕಾರಿ ಪ್ರತಿಕ್ರಿಯಿಸಿದ್ದು, ಇಂತಹ ಟೀಕೆಗಳನ್ನು ಮಾಡುವ ಬದಲು ಮುಖ್ಯಮಂತ್ರಿಗಳು ಮೊದಲು ಜವಾಬ್ದಾರಿ ವಹಿಸಿ ರಾಜೀನಾಮೆ ನೀಡಬೇಕು ಎಂದು ಹೇಳಿದ್ದಾರೆ. ಪಂಚಾಯತ್ ನಾಯಕನನ್ನು ಹತ್ಯೆ ಮಾಡಿದ ಬಾಂಬ್ ಸ್ಫೋಟದ ಬಗ್ಗೆ ಎನ್ಐಎ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ನಾನು ಈಗಾಗಲೇ ಕೇಂದ್ರ ಗೃಹ ಕಾರ್ಯದರ್ಶಿಗೆ ಪತ್ರ ಬರೆದಿದ್ದೇನೆ ಎಂದು ತಿಳಿಸಿದ ಸುವೇಂದು ಹಿಂಸಾಚಾರಕ್ಕೆ ಸಂಬಂಧಿಸಿದ ಎಲ್ಲಾ ಸಾಕ್ಷ್ಯಗಳನ್ನು ತಿರುಚಲು ಮುಖ್ಯಮಂತ್ರಿ ಬಿರ್ಭೂಮ್ಗೆ ಬರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪಶ್ಚಿಮ ಬಂಗಾಳ ಹೈಕೋರ್ಟ್, ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ. ಘಟನೆಗೆ ಸಂಬಂಧಪಟ್ಟಂತೆ ಯಾವುದೇ ಸಾಕ್ಷಿ ನಾಶವಾಗದಂತೆ ನೋಡಿಕೊಳ್ಳುವುದು ರಾಜ್ಯ ಸರ್ಕಾರದ ಹೊಣೆ ಎಂದು ಹೇಳಿದೆ. ಯಾವುದೇ ರೀತಿಯ ವಿಳಂಬ ಮಾಡದೆ ಅಪರಾಧ ನಡೆದ ಸ್ಥಳಕ್ಕೆ ಭೇಟಿ ನೀಡಿ, ವಿಧಿವಿಜ್ಞಾನ ಪರೀಕ್ಷೆಗೆ ಬೇಕಾದ ವಸ್ತುಗಳ ಸಂಗ್ರಹ ಮಾಡಲು ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಸೂಚನೆ ನೀಡಿದೆ. ಅಲ್ಲದೆ, ಸಾಕ್ಷ್ಯನಾಶ ಆಗಬಾರದೆಂದು ಸಿಸಿಟಿವಿ ಅಳವಡಿಸಲು ಕೂಡಾ ತಾಕೀತು ಪಡಿಸಿದೆ.
ಮೃತ ನಾಯಕನ ಪುತ್ರ ಸೇರಿ 20 ಕ್ಕೂ ಅಧಿಕ ಮಂದಿ ಬಂಧನ
ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಸುಮಾರು 22 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ನಡುವೆ ಕೇಂದ್ರ ಸರ್ಕಾರ ಕೂಡ ಘಟನೆ ಬಗ್ಗೆ ಸಮಗ್ರ ವರದಿ ನೀಡುವಂತೆ ಪಶ್ಚಿಮ ಬಂಗಾಳ ರಾಜ್ಯ ಗೃಹ ಸಚಿವಾಲಯವನ್ನು ಕೇಳಿದೆ.
ಘಟನೆಗೆ ಸಂಬಂಧಿಸಿ ಇದುವರೆಗೆ ಕನಿಷ್ಠ 22 ಮಂದಿಯನ್ನು ಬಂಧಿಸಲಾಗಿದೆ ಎಂದು ಬುಧವಾರ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಬಂಧಿತರ ಪೈಕಿ ಭದು ಶೇಕ್ ಅವರ ಮಕ್ಕಳು ಸೇರಿದ್ದಾರೆ ಎನ್ನಲಾಗಿದೆ. ಆದರೆ ಪೊಲೀಸರು ಇದುವರೆಗೆ ಬಂಧಿತ ಆರೋಪಿಗಳ ಹೆಸರನ್ನು ಬಹಿರಂಗಪಡಿಸಿಲ್ಲ.