ಕಿಚ್ಚ ಸುದೀಪ್ ಮಾರ್ಕ್ ಸಿನಿಮಾ ನಂತರ ಇದೀಗ ಬಿಲ್ಲ ರಂಗ ಬಾಷ ಸಿನಿಮಾದಲ್ಲಿ ಬಿಝಿಯಾಗಿದ್ದಾರೆ. ಸದ್ಯ ಆ ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಕಳೆದೆರಡು ದಿನಗಳಿಂದ ಬೆಂಗಳೂರಿನಲ್ಲೆ ಒಂದಷ್ಟು ಚಿತ್ರದ ದೃಶ್ಯಗಳನ್ನು ಸೆರೆ ಹಿಡಿಯಲಾಗುತ್ತಿದೆ. ಇತ್ತೀಚೆಗೆ ಸುದೀಪ್ ಅವರು ಹೊಸ ಕ್ಯಾರವಾನ್ ಮೂಲಕ ಚಿತ್ರೀಕರಣದ ಅಖಾಡಕ್ಕೆ ಇಳಿದಿದ್ದಾರೆ. ಹೊಸ ವಿಷಯ ಏನೆಂದರೆ, ಆ ಸಿನಿಮಾ ರಿಲೀಸ್ ಬಗ್ಗೆ ಚಿತ್ರತಂಡ ಸುಳಿವು ನೀಡಿದೆ.
ಅನೂಪ್ ಭಂಡಾರಿ ಮತ್ತು ಸುದೀಪ್ ಕಾಂಬಿನೇಷನ್ ನ ಬಹು ನಿರೀಕ್ಷೆಯ ಚಿತ್ರವಿದು. ಬಹುಕೋಟಿ ವೆಚ್ಚದಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ.

ಈ ಸಿನಿಮಾದಲ್ಲಿ ಸುದೀಪ್ ದ್ವಿಪಾತ್ರದಲ್ಲಿ ನಟಿಸುತ್ತಾರೆ ಎಂದು ಹೇಳಲಾಗುತ್ತಿದೆ. ಟೈಟಲ್ನಿಂದಲೇ ‘ಬಿಲ್ಲ ರಂಗ ಬಾಷ’ ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿರೋದು ನಿಜ. ಪ್ರೈಂ ಶೋ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಕೆ. ನಿರಂಜನ್ ರೆಡ್ಡಿ ಹಾಗೂ ಚೈತನ್ಯಾ ರೆಡ್ಡಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಸ್ಟಾರ್ ನಟರು ಎರಡು, ಮೂರು ವರ್ಷಕ್ಕೆ ಒಂದು ಸಿನಿಮಾ ಮಾಡುತ್ತಿದ್ದಾರೆ. ನಿಧಾನಗತಿಯಲ್ಲೇ ಅವರ ಕೆಲಸ ಸಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ‘ಮ್ಯಾಕ್ಸ್’ ಹಾಗೂ ‘ಮಾರ್ಕ್’ ಈ ಎರಡು ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ನೋಡುಗರ ಮುಂದೆ ಬಂದಿದ್ದವು.
ಸದ್ಯದಲ್ಲೇ ‘ಬಿಲ್ಲ ರಂಗ ಬಾಷ’ ಸಿನಿಮಾ ಕೂಡ ಬರುತ್ತೆ. ಅದರ ಜೊತೆಗೆ ಮತ್ತೊಂದು ಸಿನಿಮಾ ಮಾಡ್ತೀನಿ ಅಂತ ಸುದೀಪ್ ಕೂಡ ಹೇಳಿದ್ದರು. ‘ಮಾರ್ಕ್’ ಸಿನಿಮಾ ಬಿಡುಗಡೆಯಾಗಿ ಆರು ತಿಂಗಳ ಬಳಿಕ ಅನೂಪ್ ಭಂಡಾರಿ ನಿರ್ದೇಶನಲ್ಲಿ ನಟಿಸೋಕೆ ಆರಂಭಿಸಿದ್ದಾರೆ. ಆದರೂ ಸಾಧ್ಯವಾದಷ್ಟು ಬೇಗ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ. ಕ್ರಿಸ್ಮಸ್ ಸಂಭ್ರಮದಲ್ಲಿ ಸಿನಿಮಾ ಬಿಡುಗಡೆ ಮಾಡಿ ಸುದೀಪ್ ಎರಡು ಬಾರಿ ಗೆದ್ದಿದ್ದರು. ಆದರೆ ಇಪ್ಪತ್ತು ದಿನ ತಡವಾಗಿ ಸಂಕ್ರಾಂತಿಗೆ ‘ಬಿಲ್ಲ ರಂಗ ಬಾಷ’ ಸಿನಿಮಾ ಬಿಡುಗಡೆ ಆಗುತ್ತದೆ ಎನ್ನುವ ಚರ್ಚೆ ಶುರುವಾಗಿದೆ. ಅದಕ್ಕೆ ಕಾರಣ ಚಿತ್ರದ ನಿರ್ಮಾಪಕಿ ಮಾಡಿರುವ ಒಂದು ಟ್ವೀಟ್. ಅಭಿಮಾನಿಯೊಬ್ಬರು ಮಾಡಿರುವ ಟ್ವೀಟ್ ಅನ್ನು ನಿರ್ಮಾಪಕಿ ಚೈತನ್ಯಾ ರೆಡ್ಡಿ ರೀಟ್ವೀಟ್ ಮಾಡಿದ್ದಾರೆ.

ಬೆಂಗಳೂರಿನಲ್ಲಿ ‘ಬಿಲ್ಲ ರಂಗ ಬಾಷ’ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಮುಂದಿನ ಸಂಕ್ರಾಂತಿಗೆ ಸಿನಿಮಾ ತೆರೆಗೆ ಬರಲಿದೆ ಎಂಬ ಪೋಸ್ಟ್ ಅನ್ನು ಚೈತನ್ಯಾ ರೆಡ್ಡಿ ಹಂಚಿಕೊಂಡಿದ್ದಾರೆ. ಇದು ಅದ್ಧೂರಿ ಬಜೆಟ್ ಸಿನಿಮಾ. ಚಿತ್ರೀಕರಣಕ್ಕೆ ಬಹಳ ದಿನಗಳು ಬೇಕಾಗುತ್ತದೆ. ಅದೇ ರೀತಿ ಪೋಸ್ಟ್ ಪ್ರೊಡಕ್ಷನ್ಗೂ ಹೆಚ್ಚು ಸಮಯ ಬೇಕು. ಈ ಮಧ್ಯೆ ಮುಂದಿನ ಆರು ತಿಂಗಳಲ್ಲಿ ಸಿನಿಮಾ ಬಿಡುಗಡೆ ಆಗುವುದು ನಿಜವೇ? ಎಂದು ಅಭಿಮಾನಿಗಳು ಹುಬ್ಬೇರಿಸಿದ್ದಾರೆ. ಮನಸ್ಸು ಮಾಡಿದರೆ ಯಾವುದು ಅಸಾಧ್ಯವಲ್ಲ. ಸುದೀಪ್ ಹಾಗೂ ಅನೂಪ್ ಕಾಂಬಿನೇಷನ್ ಬಿಟ್ಟರೆ ‘ಬಿಲ್ಲ ರಂಗ ಬಾಷ’ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ. ಹೆಚ್ಚಿನ ತಾರಾಗಣ ಹಾಗೂ ತಂತ್ರಜ್ಞರ ಮಾಹಿತಿ ಸಿಗಬೇಕು.
ಸುದೀಪ್ ಹಾಗೂ ಅನೂಪ್ ಒಟ್ಟಿಗೆ ಸೇರಿದ್ದಾರೆ ಅಂದರೆ ನಿರೀಕ್ಷೆ ಸಹಜ. ಈ ಹಿಂದೆ ‘ವಿಕ್ರಾಂತ್ ರೋಣ’ ಚಿತ್ರದಲ್ಲಿ ಇಬ್ಬರೂ ಮೋಡಿ ಮಾಡಿದ್ದರು. ತೆಲುಗಿನಲ್ಲಿ ‘ಹನುಮಾನ್’ ಚಿತ್ರವನ್ನು ಪ್ರೈಂ ಶೋ ಎಂಟರ್ಟೈನ್ಮೆಂಟ್ ಸಂಸ್ಥೆ ನಿರ್ಮಾಣ ಮಾಡಿತ್ತು. ಸಿನಿಮಾ ಹಿಟ್ ಆಗಿದ್ದು ಗೊತ್ತೇ ಇದೆ. ‘ಬಿಲ್ಲ ರಂಗ ಬಾಷ’ ಸಿನಿಮಾ ಮೂಲಕ ಚಂದನವನಕ್ಕೆ ಈ ಸಂಸ್ಥೆ ಎಂಟ್ರಿ ಕೊಟ್ಟಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರ ತಯಾರಾಗುತ್ತಿದೆ.





