ಬೆಂಗಳೂರು : ಬಿಹಾರದಲ್ಲಿ ರಾಜ್ಯಸಭಾ ಚುನಾವಣೆಗೆ ಬಿರುಸಿನ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಈ ನಡುವೆಯೇ ಕಾಂಗ್ರೆಸ್ನ ಮೂವರು ಶಾಸಕರು ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗುತ್ತಿದೆ. ಪಶ್ಚಿಮ ಚಂಪಾರಣ್ ಜಿಲ್ಲೆಯ ವಾಲ್ಮೀಕಿನಗರದ ಸುರೇಂದ್ರ ಪ್ರಸಾದ್ ಕುಶ್ವಾಹ, ಫೋರ್ಬ್ಸ್ಗಂಜ್ನ ಮನೋಜ್ ಬಿಸ್ವಾಸ್ ಮತ್ತು ಮಣಿಹರಿಯ ಮನೋಹರ್ ಪ್ರಸಾದ್ ಸಿಂಗ್ ಪಕ್ಷದ ನಾಯಕರ ಸಂಪರ್ಕಕ್ಕೆ ಸಿಗುತ್ತಿಲ್ಲ. ಮೊಬೈಲ್ ಫೋನ್ಗಳು ಸ್ವಿಚ್ ಆಫ್ ಆಗಿದ್ದು, ಕೈ ನಾಯಕರಿಗೆ ದೊಡ್ಡ ತಲೆನೋವು ಶುರುವಾಗಿದೆ.

ಪ್ರತಿಷ್ಠಿತ ಚುನಾವಣೆಯಲ್ಲಿ ವಿಪಕ್ಷಗಳ ಕೂಟವಾಗಿರುವ ಮಹಾಘಟಬಂಧನ್ಗೆ ತೀವ್ರ ಹಿನ್ನಡೆಯಾಗುವ ಸಾಧ್ಯತೆ ಇದೆ. ಬಿಹಾರದ ಐದು ರಾಜ್ಯಸಭಾ ಸ್ಥಾನಗಳಿಗೆ ಮತದಾನ ನಡೆಯುತ್ತಿದ್ದು, ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಮತ್ತು ವಿರೋಧ ಪಕ್ಷ ರಾಷ್ಟ್ರೀಯ ಜನತಾ ದಳ (ಆರ್ಜೆಡಿ)ದ ನಾಮನಿರ್ದೇಶಿತರು ಕಣದಲ್ಲಿದ್ದಾರೆ. ಬಿಹಾರ ವಿಧಾನಸಭಾ ಸಂಕೀರ್ಣದಲ್ಲಿ ಬೆಳಿಗ್ಗೆ 9 ಗಂಟೆಗೆ ಮತದಾನ ಪ್ರಾರಂಭವಾಗಿ ಸಂಜೆ 5 ಗಂಟೆಯವರೆಗೆ ಮುಕ್ತಾಯವಾಗಲಿದ್ದು, ನಂತರ ಎಣಿಕೆ ಆರಂಭವಾಗಲಿದೆ.
ಇನ್ನೂ ಎನ್ಡಿಎ ಅಭ್ಯರ್ಥಿಗಳಲ್ಲಿ ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಕಣದಲ್ಲಿದ್ದಾರೆ. ಆಡಳಿತಾರೂಢ ಒಕ್ಕೂಟದಿಂದ ನಾಮನಿರ್ದೇಶಿತರಾದ ಇತರ ಮೂವರು ಕೇಂದ್ರ ಸಚಿವ ರಾಮ್ ನಾಥ್ ಠಾಕೂರ್, ರಾಜ್ಯಸಭೆಯ ಹಾಲಿ ಸದಸ್ಯರಾದ ರಾಷ್ಟ್ರೀಯ ಲೋಕ ಮೋರ್ಚಾ (ಆರ್ಎಲ್ಎಂ) ಮುಖ್ಯಸ್ಥ ಉಪೇಂದ್ರ ಕುಶ್ವಾಹ ಮತ್ತು ರಾಜ್ಯಸಭೆಗೆ ಮೊದಲ ಬಾರಿಗೆ ಸ್ಥಾನ ಪಡೆಯಲು ಬಯಸುತ್ತಿರುವ ಬಿಜೆಪಿಯ ಶಿವೇಶ್ ಕುಮಾರ್ ಕಸರತ್ತು ನಡೆಸುತ್ತಿದ್ದಾರೆ.
ಇದನ್ನೂ ಓದಿ : ಒಡಿಸ್ಸಾ ಕಾಂಗ್ರೆಸ್ ಶಾಸಕರಿಗೆ ತಲಾ ಐದು ಕೋಟಿ ಆಮಿಷ: ಡಿಸಿಎಂ ಡಿ.ಕೆ. ಶಿವಕುಮಾರ್
ಅಲ್ಲದೆ ಆರ್ಜೆಡಿ ಅಮರೇಂದ್ರ ಧಾರಿ ಸಿಂಗ್ ಅವರನ್ನು ಕಣಕ್ಕಿಳಿಸಿದೆ, ಅವರು ಮರುಚುನಾವಣೆ ಬಯಸುತ್ತಿದ್ದಾರೆ. ಎನ್ಡಿಎ ನಾಲ್ಕು ಸ್ಥಾನಗಳನ್ನು ಪಡೆಯಲು ಅನುಕೂಲಕರ ಸಂಖ್ಯಾಬಲವನ್ನು ಹೊಂದಿದ್ದರೂ, ಐದನೇ ಸ್ಥಾನವನ್ನು ಗೆಲ್ಲಲು ಅಗತ್ಯವಿರುವ ಸಂಖ್ಯಾಬಲದ ಕೊರತೆ ಇದೆ. ಹೀಗಾಗಿ ಮೂರು ವಿರೋಧ ಪಕ್ಷದ ಶಾಸಕರ ಬೆಂಬಲ ಬೇಕಾಗಲಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ನ ಶಾಸಕರು ಕಾಣೆಯಾದರಾ ಎಂಬ ಪ್ರಶ್ನೆ ಕಾಂಗ್ರೆಸ್ ಪಾಳಯದಲ್ಲಿ ಮೂಡಿದೆ.
ರಾಜ್ಯಸಭಾ ಚುನಾವಣೆಗೂ ಮುನ್ನೆಚ್ಚರಿಕೆ ಕ್ರಮವಾಗಿ ಅಡ್ಡ ಮತದಾನದ ಭೀತಿಯಿಂದ ಮಹಾ ಮೈತ್ರಿಕೂಟವು ತನ್ನ ಶಾಸಕರನ್ನು ಪಾಟ್ನಾದ ಹೋಟೆಲ್ನಲ್ಲಿ ಇರಿಸಿತ್ತು. ಆದರೂ ಮೂವರು ಶಾಸಕರ ನಡೆಯ ಬಗ್ಗೆ ಏನು ಮಾಹಿತಿ ಸಿಗುತ್ತಿಲ್ಲ ಎಂಬುವುದು ಕಾಂಗ್ರೆಸ್ ನಾಯಕರ ಸಂಕಟವಾಗಿದೆ.
ಒಟ್ಟು 243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ, ಎನ್ಡಿಎ ಪ್ರಸ್ತುತ ಸುಮಾರು 202 ಶಾಸಕರನ್ನು ಹೊಂದಿದ್ದು, ಐದು ರಾಜ್ಯಸಭಾ ಸ್ಥಾನಗಳನ್ನು ನಿರಾಯಾಸವಾಗಿ ಪಡೆಯಲು ಕೇವಲ ಮೂರು ಶಾಸಕರ ಕೊರತೆಯಿದೆ. ಮೇಲ್ಮನೆಯಲ್ಲಿ ಸ್ಥಾನ ಗೆಲ್ಲಲು ಒಬ್ಬ ಅಭ್ಯರ್ಥಿಗೆ ಕನಿಷ್ಠ 41 ಶಾಸಕರ ಬೆಂಬಲ ಬೇಕಾಗುತ್ತದೆ. ಹೀಗಾಗಿ ಬಿಹಾರದಲ್ಲಿ ನಡೆಯುತ್ತಿರುವ ರಾಜ್ಯಸಭಾ ಚುನಾವಣೆಯು ಉಭಯ ಪಕ್ಷಗಳಿಗೂ ಅತ್ಯಂತ ಮುಖ್ಯವಾದ ಚುನಾವಣೆಯಾಗಿದೆ ಎಂದು ಹೇಳಲಾಗುತ್ತಿದೆ.






