ಕಳೆದ 14 ವರ್ಷಗಳಿಂದ ಚಿತ್ರರಂಗದಲ್ಲಿ ಸಹ ನಿರ್ದೇಶಕ ಹಾಗೂ ಬರಹಗಾರನಾಗಿ ಕೆಲಸ ಮಾಡಿ ಅನುಭವ ಹೊಂದಿರುವ ಪ್ರಾಣ್ ಸುವರ್ಣ ಅವರು ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದು, ಮೊದಲ ಬಾರಿಗೆ ಡೈರೆಕ್ಷನ್ ಕ್ಯಾಪ್ ತೊಟ್ಟಿದ್ದಾರೆ.ಪ್ರಾಣ್ ಸುವರ್ಣ ರುಕ್ಮಿಣಿ ರಾಧಾಕೃಷ್ಣ ಚಿತ್ರದ ಮೂಲಕ ನಿರ್ದೇಶನಕ್ಕೆ ಕಾಲಿಟ್ಟಿದ್ದಾರೆ.
ಬಿಡುಗಡೆಗೆ ಸಿದ್ದವಾಗಿರುವ ಮೆಜೆಸ್ಟಿಕ್-2 ಚಿತ್ರದ ಹೀರೋ ಭರತ್ ಕುಮಾರ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದು, ಮೋಕ್ಷಿತಾ ಪೈ ಹಾಗೂ ರಿಯಾ ಸಚ್ದೇವ್ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸಮಾರಂಭ ಕುಮಾರಕೃಪದ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ದೃಶ್ಯಕ್ಕೆ ಫಿಲಂ ಚೇಂಬರ್ ಅಧ್ಯಕ್ಷ ಆರ್. ನರಸಿಂಹಲು ಅವರು ಕ್ಲಾಪ್ ಮಾಡಿದರೆ, ನಿರ್ಮಾಪಕ ಆರ್. ಹನುಮಂತರಾಜು ಅವರ ಕ್ಯಾಮೆರಾ ಸ್ವಿಚಾನ್ ಮಾಡಿದರು.

‘ರುಕ್ಮಿಣಿ ರಾಧಾಕೃಷ್ಣ’ ಇದೊಂದು ತ್ರಿಕೋನ ಪ್ರೇಮಕತೆಯಾಧಾರಿತ ಚಿತ್ರವಾಗಿದ್ದು, ನಿರ್ದೇಶಕರು ಶ್ರೀಕೃಷ್ಣ, ರಾಧಾ, ರುಕ್ಮಿಣಿಯ ಪ್ರೇಮ ಕಥೆ ಇಟ್ಟುಕೊಂಡು ಈಗಿನ ಕಾಲದ ಜಂಜಿ ಟ್ರಯಾಂಗಲ್ ಲವ್ ಸ್ಟೋರಿಯನ್ನು ನಮ್ಮ ಚಿತ್ರದ ನಾಯಕ, ನಾಯಕಿಯರ ಮೂಲಕ ಹೇಳಹೊರಟಿದ್ದಾರೆ. ಚಿತ್ರಕ್ಕೆ 60 ದಿನಗಳ ಶೂಟಿಂಗ್ ಪ್ಲಾನ್ ಮಾಡಲಾಗಿದ್ದು, ಮೊದಲ ಹಂತದಲ್ಲಿ ಬೆಂಗಳೂರು ಸುತ್ತಮುತ್ತ ಹಾಗೂ ಎರಡನೇ ಹಂತದಲ್ಲಿ ಕುಂಭಕೋಣಂನಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.

ಶಿಲ್ಪಾ ಶ್ರೀನಿವಾಸ್ ಅರ್ಪಿಸುವ ರುಕ್ಮಿಣಿ ರಾಧಾಕೃಷ್ಣ ಚಿತ್ರವನ್ನು ಪೆನ್ ಡ್ರೈವ್ ಚಿತ್ರದ ನಿರ್ಮಾಪಕ ಎನ್. ಹನುಮಂತರಾಜು ಹಾಗೂ ಎನ್ .ಎಚ್. ಉಮೇಶ್ ಚಂದ್ ಸೇರಿ ನಿರ್ಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ಒಟ್ಟು 6 ಹಾಡುಗಳಿದ್ದು, ಸುನಾದ ಗೌತಮ್ ಅವರ ಸಂಗೀತ ನಿರ್ದೇಶನವಿದೆ. ಪ್ರಾಣ್ ಸುವರ್ಣ ಅವರೇ ಚಿತ್ರದ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದು, ಸುನೀಲ್ ನರಸಿಂಹಮೂರ್ತಿ ಅವರ ಛಾಯಗ್ರಹಣ, ಎಂ. ಲಕ್ಷ್ಮಣರಾವ್ ಅವರ ಸಂಕಲನ, ಮಹೇಶ್ ರಾಮ್ ಅವರ ಸಹ ನಿರ್ದೇಶನ ರುಕ್ಮಿಣಿ ರಾಧಾಕೃಷ್ಣ ಚಿತ್ರಕ್ಕಿದೆ.













