ರಾಜ್ಯಸಭಾ ಚುನಾವಣೆ ಬೆನ್ನಲ್ಲೇ ರಾಷ್ಟ್ರಪತಿ ಚುನಾವಣೆಯ ತಯಾರಿಗಳು ಆರಂಭವಾಗುತ್ತಿವೆ. ರಾಷ್ಟ್ರಪತಿ ಚುನಾವಣೆಗೆ ಇನ್ನೆರಡು ತಿಂಗಳಷ್ಟೇ ಬಾಕಿ ಉಳಿದಿದ್ದು ಮತ್ತೆ ರಾಷ್ಟ್ರಪತಿ ಸ್ಥಾನವನ್ನು ಗಳಿಸಿಕೊಳ್ಳುವ ನಿಟ್ಟಿನಲ್ಲಿ ಸೋಮವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತಿತರರು ಸುಮಾರು ನಾಲ್ಕು ಗಂಟೆಗಳ ಕಾಲ ಸಮಾಲೋಚನೆ ನಡೆಸಿದ್ದಾರೆ.
ಬಿಜೆಪಿ ನೇತೃತ್ವದ ಮೈತ್ರಿಕೂಟ NDA ಮತ್ತು ವಿರೋಧ ಪಕ್ಷಗಳ ವತಿಯಿಂದ ಹೊಸ ರಾಷ್ಟ್ರಪತಿ ಆಯ್ಕೆಗೆ ತಮ್ಮದೇ ಆದ ಅಭ್ಯರ್ಥಿಗಳನ್ನು ಹಾಕಲು ಸಿದ್ಧ ನಡೆಯುತ್ತಿದೆ. ಎಲ್ಲಾ ಸಂಸದರು ಮತ್ತು ಶಾಸಕರ ಮತಗಳನ್ನು ಒಟ್ಟುಗೂಡಿಸಿದರೆ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ಪಾಲು ಶೇಕಡಾ 48.9ರಷ್ಟು. ಪ್ರತಿಪಕ್ಷಗಳ ಪಾಳೆಯ ಶೇಕಡಾ 51.1ರಷ್ಟು ಮತಗಳನ್ನು ಹೊಂದಿದೆ. ಹಾಗಾಗಿ ಇದು 2024ರ ಲೋಕಸಭಾ ಚುನಾವಣೆಗೂ ಮುನ್ನ ನಡೆಯುವ ಇನ್ನೊಂದು ಮಹತ್ವದ ರಾಷ್ಟ್ರೀಯ ಚುನಾವಣೆಯಾಗಲಿದೆ. ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಬಿಜೆಡಿ (ಬಿಜು ಜನತಾ ದಳ) ಅಥವಾ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ವೈಎಸ್ಆರ್ ಕಾಂಗ್ರೆಸ್ನಂತಹ ತಟಸ್ಥ ನಿಲುವು ಹೊಂದಿರುವ ಪಕ್ಷಗಳು ಮಾತ್ರ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಲು ಸಾಧ್ಯ ಎಂದು ಮೇಲುನೋಟಕ್ಕೆ ಕಾಣಿಸುತ್ತಿದೆ.
ಹಾಲಿ ಅಧ್ಯಕ್ಷ ರಾಮನಾಥ್ ಕೋವಿಂದ್ ಅವರ ಅಧಿಕಾರಾವಧಿ ಜುಲೈ 25ಕ್ಕೆ ಕೊನೆಗೊಳ್ಳಲಿದೆ. ಅಷ್ಟರೊಳಗೆ ರಾಷ್ಟ್ರಪತಿ ಚುನಾವಣೆಯ ಪ್ರಕ್ರಿಯೆ ಪೂರ್ಣಗೊಳ್ಳಬೇಕು. ಹಾಗಾಗಿ ಅದಕ್ಕೂ ಮೊದಲು ನಡೆಯುವ ರಾಜ್ಯಸಭಾ ಚುನಾವಣೆಯೂ ನಿರ್ಣಾಯಕವಾದುದಾಗಿದೆ. ಇದೇ ಹಿನ್ನೆಲೆಯಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಮನೆಯಲ್ಲಿ ಮಹತ್ವದ ಸಭೆ ನಡೆದಿದೆ.
ವಿಪಕ್ಷಗಳು ಇನ್ನೂ ರಾಷ್ಟ್ರಪತಿ ಹುದ್ದೆಗೆ ಜಂಟಿ ಅಭ್ಯರ್ಥಿಯನ್ನು ಘೋಷಿಸಿಲ್ಲ. ಈ ಬಗ್ಗೆ ಒಮ್ಮತವನ್ನು ಸೂಚಿಸಲು ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅಥವಾ ಎನ್ ಸಿಪಿ ನಾಯಕ ಶರದ್ ಪವಾರ್ ನೇತೃತ್ವದಲ್ಲಿ ಶೀಘ್ರವೇ ಸಭೆ ನಡೆಯುವ ಸಾಧ್ಯತೆಗಳು ಗೋಚರಿಸುತ್ತಿವೆ. 2024ರ ಸಾರ್ವತ್ರಿಕ ಚುನಾವಣೆಗೆ ಕಾಂಗ್ರೆಸ್ಸೇತರ ಮತ್ತು ಬಿಜೆಪಿಯೇತರ ರಂಗ ರಚನೆಗೆ ಕೆಲಸ ಮಾಡುತ್ತಿರುವ ಕೆ. ಚಂದ್ರಶೇಖರ್ ರಾವ್ ರಾಷ್ಟ್ರಪತಿ ಚುನಾವಣೆಯನ್ನು ಪರೀಕ್ಷಾರ್ಥವಾಗಿ ಬಳಸಿಕೊಳ್ಳಲು ಬಯಸಿದ್ದಾರೆ. ಇದೇ ಹಿನ್ನೆಲೆಯಲ್ಲಿ ಪ್ರಮುಖ ವಿರೋಧ ಪಕ್ಷದ ನಾಯಕರನ್ನು ಭೇಟಿಯಾಗುತ್ತಿದ್ದಾರೆ.
ಕಳೆದ ವಾರ ಕೆ. ಚಂದ್ರಶೇಖರ್ ರಾವ್ ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿಯಾಗಿದ್ದರು. ಇದಕ್ಕೂ ಹಿಂದೆ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಎನ್ ಸಿಪಿ ನಾಯಕ ಶರದ್ ಪವಾರ್, ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಅವರನ್ನು ಭೇಟಿಯಾಗಿದ್ದರು. ಅಲ್ಲದೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದರು. ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರನ್ನು ಕರ್ನಾಟಕದಲ್ಲಿ ಭೇಟಿಯಾಗುವ ನಿರೀಕ್ಷೆ ಕೂಡ ಇದೆ. ಇದೇ ರೀತಿ ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಇಬ್ಬರನ್ನೂ ಕೆಸಿಆರ್ ಭೇಟಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಮಿತ್ರಪಕ್ಷ ಬಿಜೆಪಿ ಜೊತೆಗಿನ ಸಂಬಂಧವು ಸ್ವಲ್ಪ ಹದಗೆಟ್ಟಿರುವ ಕಾರಣದಿಂದ ನಿತೀಶ್ ಕುಮಾರ್ ರಾಷ್ಟ್ರಪತಿ ಚುನಾವಣೆಗಳಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್ಡಿಎ) ಅಭ್ಯರ್ಥಿಯನ್ನು ಬೆಂಬಲಿಸುವ ಬಗ್ಗೆ ಪುನರ್ ಪರಿಶೀಲನೆಯಲ್ಲಿ ಇದ್ದಾರೆ. ರಾಷ್ಟ್ರೀಯ ಜನತಾ ದಳದ ನಾಯಕ ತೇಜಸ್ವಿ ಯಾದವ್ ಬಯಸುತ್ತಿರುವ ಮತ್ತು ಬಿಜೆಪಿ ವಿರೋಧಿಸುತ್ತಿರುವ ಜಾತಿ ಗಣತಿ ಕುರಿತು ನಡೆಯಬೇಕಿದ್ದ ಸರ್ವಪಕ್ಷಗಳ ಸಭೆಯನ್ನು ಮುಂದೂಡಿರುವ ನಿತೀಶ್ ಕುಮಾರ್ ನಡೆಯು ಅವರು ಮಿತ್ರಪಕ್ಷಕ್ಕೆ ನೀಡಿರುವ ದೊಡ್ಡ ಎಚ್ಚರಿಕೆಯಾಗಿದೆ.
ಈ ಬೆಳವಣಿಗೆಯಿಂದ ಬಾರಿ ನಿತೀಶ್ ಕುಮಾರ್ ಎನ್ಡಿಎ ಅಭ್ಯರ್ಥಿಯನ್ನು ಬೆಂಬಲಿಸುತ್ತಾರಾ ಎಂಬ ಪ್ರಶ್ನೆ ಹುಟ್ಟುಕೊಂಡಿದೆ. ಇಷ್ಟೇ ಅಲ್ಲ, ಕೇಂದ್ರ ಸಚಿವ ಆರ್ಸಿಪಿ ಸಿಂಗ್ಗೆ ಮತ್ತೊಮ್ಮೆ ರಾಜ್ಯಸಭೆ ಚುನಾವಣೆಗೆ ಟಿಕೆಟ್ ನೀಡಬಾರದು ಎಂದು ಕೂಡ ಸೂಚಿಸಿದ್ದಾರೆ. ಆರ್ಸಿಪಿ ಸಿಂಗ್ ಅವರು ಬಿಜೆಪಿ ನಾಯಕರಿಗೆ ನಿಕಟವಾಗಿದ್ದರು ಮತ್ತು ನಿತೀಶ್ ಕುಮಾರ್ ಅವರ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ್ದರು. ಆದರೂ ವಿರೋಧ ವ್ಯಕ್ತವಾಗುತ್ತಿರುವುದು ಆಶ್ಚರ್ಯಕರವಾಗಿದೆ. ಜಾತಿ ಗಣತಿ ಮತ್ತು ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ಈ ಬೆಳವಣಿಗೆಯಾಗಿದೆ ಎಂದು ಕೂಡ ಹೇಳಲಾಗುತ್ತಿದೆ. ಬಿಜೆಪಿಯ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಇತ್ತೀಚೆಗೆ ಪಾಟ್ನಾದಲ್ಲಿ ನಿತೀಶ್ ಕುಮಾರ್ ಅವರನ್ನು ಭೇಟಿ ಮಾಡಿ ರಾಷ್ಟ್ರಪತಿ ಚುನಾವಣೆಗೆ ಸಹಕರಿಸಿ ಎಂದು ಕೇಳಿಕೊಂಡಿದ್ದಾರೆ. ನಿತೀಶ್ ಕುಮಾರ್ ನಡೆ ಮಾತ್ರ ನಿಗೂಢವಾಗಿಯೇ ಇದೆ.
ಬಿಜೆಪಿಯಿಂದ ಇನ್ನೊಂದಷ್ಟು ಮಂದಿ ಬೆಂಬಲವನ್ನು ಕ್ರೋಢೀಕರಿಸಲು ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಜಗನ್ ರೆಡ್ಡಿ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ನವೀನ್ ಪಟ್ನಾಯಕ್ ಅವರೊಂದಿಗೆ ಬಿಜೆಪಿ ರಾಜ್ಯಸಭಾ ಸದಸ್ಯ ಜಿವಿಎಲ್ ನರಸಿಂಹರಾವ್ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ತನ್ನ ಆಯ್ಕೆಯ ಅಭ್ಯರ್ಥಿಯನ್ನು ಹಾಕುವ ಸಾಧ್ಯತೆಗಳು ಕಡಿಮೆ ಇದೆ. ಪ್ರಾದೇಶಿಕ ಪಕ್ಷಗಳಿಗೆ ಸೈದ್ದಾಂತಿಕ ಬದ್ಧತೆ ಕಡಿಮೆ ಎಂಬ ರಾಹುಲ್ ಗಾಂಧಿಯವರ ಹೇಳಿಕೆ ಕೆಲವು ನಾಯಕರಲ್ಲಿ ಅಸಮಾಧಾನವನ್ನು ಉಂಟುಮಾಡಿದೆ.