ಶಿವಮೊಗ್ಗ: ಭದ್ರಾವತಿ ಉಕ್ಕಿನ ಕಾರ್ಖಾನೆಯ ಆಸ್ತಿ ಮೇಲೆ ರಾಜಕಾರಣಿಗಳ ಕಣ್ಣಿದೆ ಹಾಗಾಗಿ ಮುಚ್ಚುತ್ತಿದ್ದಾರೆ ಎಂದು ಕಾರ್ಖಾನೆ ಗುತ್ತಿಗೆ ನೌಕರರು ಆತಂಕ ವ್ಯಕ್ತಪಡಿಸಿದರು.
ಕಾರ್ಖಾನೆ ಮುಚ್ಚಲು ಬಿಡದಂತೆ ನಿರಂತರ ಹೋರಾಟ ಆರಂಭಿಸಿರುವ ಗುತ್ತಿಗೆ ಕಾರ್ಮಿಕರ ಸಂಘದ ಹೋರಾಟಗಾರರು ಬಿಎಸ್ ಯಡಿಯೂರಪ್ಪ, ಸಂಸದ ಬಿವೈ ರಾಘವೇಂದ್ರ ಹಾಗೂ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು.
ಗುತ್ತಿಗೆ ಕಾರ್ಮಿಕರ ಸಂಘದ ರಾಕೇಶ್ ಮಾತನಾಡಿ, ಭದ್ರಾವತಿಯ ಈ ಪುರಾತನ ಕಾರ್ಖಾನೆಗೆ 1918ರಲ್ಲಿ ಅಡಿಪಾಯ ಹಾಕಲಾಯ್ತು. 1923ರಲ್ಲಿ ಉತ್ಪಾದನೆ ಆರಂಭವಾಯ್ತು.ಭದ್ರಾವತಿಯ ಜನರ ಒಳಿತಿಗಾಗಿ, ನಿರುದ್ಯೋಗ ಸಮಸ್ಯೆ ನಿವಾರಣೆ ಉದ್ದೇಶದಿಂದ ಅಂದು ದಿವಾನರಾಗಿದ್ದ ವಿಶ್ವೇಶ್ವರಯ್ಯನವರು ಒಡೆಯರ್ ಜೊತೆ ಈ ಕಾರ್ಖಾನೆ ಸ್ಥಾಪಿಸಿದರು. ಈಗ ನಾವು ನೂರು ವರ್ಷದ ಸಂಭ್ರಮದಲ್ಲಿದ್ದೇವೆ. ಆದರೆ ನಷ್ಟದ ನೆಪವೊಡ್ಡಿ ಕಾರ್ಖಾನೆ ಮುಗಿಸಲು ಹುನ್ನಾರ ನಡೆಸಿದ್ದಾರೆ. ಕಾರ್ಖಾನೆ ಆರಂಭವಾದ ಸಂದರ್ಭದಲ್ಲಿ ಈ ಸರ್ಕಲ್ ನಲ್ಲಿ ನಿಂತ್ರೆ 45 ನಿಮಿಷ ರಸ್ತೆ ಕ್ರಾಸ್ ಮಾಡಲು ಆಗುತ್ತಿರಲಿಲ್ಲ. ಅಷ್ಟುಉದ್ಯೋಗಿಗಳು ಓಡಾಡುತ್ತಿದ್ದರು. ಇಂತಹ ವೈಭೋಗದಲ್ಲಿದ್ದ ಭದ್ರಾವತಿಯನ್ನು, ಕೇಂದ್ರ ಸುಪರ್ದಿಗೆ ತೆಗೆದುಕೊಂಡು ನಾಶ ಮಾಡುತ್ತಿದೆ. ದೇವೇಗೌಡರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಉಕ್ಕು ಪ್ರಾಧಿಕಾರಕ್ಕೆ ಇದನ್ನ ಪುನಶ್ಚೇತನಕ್ಕಾಗಿ ನೀಡಲಾಗಿತ್ತು. ಆದರೆ ಈತನಕ ಯಾವುದೇ ಬಂಡವಾಳ ಹಾಕಲಿಲ್ಲ. ಉತ್ತರ ಭಾರತದವರು ದಕ್ಷಿಣ ಭಾರತದವರಿಗೆ ಮಲತಾಯಿ ಧೋರಣೆ ಮಾಡಿಕೊಂಡು ಬಂದಿದ್ದಾರೆ. ಒಂದು ರೂಪಾಯಿ ಬಂಡವಾಳ ಹಾಕದೆ ಈ ಕಾರ್ಖಾನೆ ನಷ್ಟ ಅನುಭವಿಸಿದೆ ಎಂದು ಹೇಳುವುದು ಕಾರ್ಖಾನೆಯನ್ನು ವ್ಯವಸ್ಥಿತವಾಗಿ ಮುಚ್ಚುವ ಹುನ್ನಾರ. ಕಾರ್ಖಾನೆ ಮುಚ್ಚುವುದರ ಹಿಂದೆ ಇದಕ್ಕೆ ಸಂಬಂಧಿಸಿದ ಆಸ್ತಿಯ ಮೇಲೆ ರಾಜಕಾರಣಗಳ ಕಣ್ಣಿದೆ. ಆದರೆ ಒಂದಂತೂ ನಿಜ ಈ ಕಾರ್ಖಾನೆ ಮುಚ್ಚುವ ಹಂತಕ್ಕೆ ತೆಗೆದುಕೊಂಡು ಹೋದರೆ ಉಗ್ರ ಹೋರಾಟ ಮಾಡುತ್ತೇವೆ. ಭದ್ರಾವತಿಯ ಯಾವುದೇ ಚುನಾವಣೆ ಇರಬಹುದು ಸ್ಥಳೀಯ ಚುನಾವಣೆ ಆಗಿರಬಹುದು, ಲೋಕಸಭಾ ಚುನಾವಣೆ ಆಗಿರಬಹುದು ಮುಂಬರುವ ವಿಧಾನಸಭಾ ಚುನಾವಣೆಯೂ ಆಗಿರಬಹುದು ಎಲ್ಲಾ ಚುನಾವಣೆಗಳನ್ನ ನಾವು ಬಹಿಷ್ಕರಿಸುತ್ತೇವೆ. ಈ ಕಾರ್ಖಾನೆಯನ್ನು ಮುಚ್ಚಿ ಸುತ್ತಲ ಜಮೀನು ವಶಪಡಿಸಿಕೊಳ್ಳಲು, ಹುನ್ನಾರ ನಡೆದಿದೆ. ಇದು ಲಾಭದಲ್ಲಿದ್ದರೂ, ಇನ್ನಷ್ಟು ಬಂಡವಾಳ ಹಾಕಿದರೆ ಇನ್ನಷ್ಟು ಲಾಭದ ಹಾದಿಯಲ್ಲಿ ಹೋಗುತ್ತೆ. ಆದರೆ ಅಂತ ಇಚ್ಛಾಶಕ್ತಿ ಆಳುವ ವರ್ಗಕ್ಕೆ ಇಲ್ಲ. ನಮ್ಮ ಗುತ್ತಿಗೆದಾರರ ಸಂಘದಿಂದ ಈ ಕಾರ್ಖಾನೆಯನ್ನು ಲಾಭದ ಮಾರ್ಗದಲ್ಲಿ ತೆಗೆದುಕೊಂಡು ಹೋಗುವ ಜವಾಬ್ದಾರಿ ಇದೆ. ರಾಜಕಾರಣಿಗಳಿಗೆ ಈ ಕಾರ್ಖಾನೆಯ ನೆಲದ ಮೇಲೆ ಕಣ್ಣು ಇದೆ. ಕಾರ್ಖಾನೆ ಮೇಲೆ ಬಂಡವಾಳ ಹಾಕಿ ನಷ್ಟದಲ್ಲಿದ್ದರೆ ಬೇಕಾದರೆ ಮುಚ್ಚಲಿ ಆದರೆ ಒಂದೇ ರೂಪಾಯಿ ಬಂಡವಾಳ ಹಾಕದೆ ಲಾಭದಲ್ಲಿರುವ ಕಾರ್ಖಾನೆ ಹೇಗೆ ಮುಚ್ಚುತ್ತಾರೆ..? ಈಗಲೂ ಪುನಶ್ಚೇನಗೊಳಿಸಿ ಲಾಭ ತೆಗೆಯಬಹುದು. ಇಲ್ಲವಾದರೆ ಭದ್ರಾವತಿ ಸ್ಮಶಾನ ಆಗುತ್ತೆ. ನಮ್ಮ ಹೆಣವನ್ನೇ ಇಲ್ಲಿ ಹೂಳೋದು. ಇವೆಲ್ಲದಕ್ಕೂ ರಾಜಕಾರಣಿಗಳೇ ಕಾರಣರಾಗುತ್ತಾರೆ ಎಂಪಿಎಂ ಕಾರ್ಖಾನೆ ಮುಚ್ಚಿದಾಗ್ಲೂ ಕೂಡ ಯಾರು ಸರಿಯಾಗಿ ಹೋರಾಟ ಮಾಡ್ಲಿಲ್ಲ. ಆದರೆ ಅದು ಇಲ್ಲಿ ಮರುಕಳಿಸಬಾರದು. ಆದರೆ ರಾಜಕಾರಣಿಗಳು ಹಿತಾಸಕ್ತಿ ತೋರಿಸಬೇಕು ಈ ಕಾರ್ಖಾನೆ ಪುನಃ ಚೆನ್ನಾಗಿ ನಡೆಯಬೇಕು. ಆದರೆ ರಾಜಕಾರಣಿಗಳು ಆಸಕ್ತಿ ತೋರಿಸಬೇಕು ಚುನಾವಣೆ ಬಂದಾಗ ಮಾತ್ರ ಕಾರ್ಖಾನೆಗಳು ನೆನಪಾಗುತ್ತವೆ ಎಂದರು. ಸದ್ಯ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಮಾತ್ರ ಕ್ರಮಕ್ಕೆ ಮುಂದಾಗಿದೆ. ಆದರೆ ಇಲ್ಲಿನ ಸಂಸದ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಕಾರ್ಖಾನೆಯನ್ನು ಪಡೆಯಲು ಕ್ರಮವಹಿಸಬೇಕು ಎಂದು ರಾಕೇಶ್ ಆಕ್ರೋಶ ವ್ಯಕ್ತಪಡಿಸಿದರು.