ಬೆಂಗಳೂರು : ರಾಜ್ಯದಲ್ಲಿ ಈ ತಿಂಗಳ ವಿದ್ಯುತ್ ಬಿಲ್ ಪ್ರತಿಯೊಬ್ಬರಿಗೂ ಜಾಸ್ತಿ ಬಂದಿದ್ದು ಫ್ರೀ ಕರೆಂಟ್ ಕನಸು ಕಾಣ್ತಿದ್ದ ರಾಜ್ಯದ ಜನತೆಗೆ ಆಘಾತ ತಂದಿದೆ. ಕರೆಂಟ್ ಬಿಲ್ ನೋಡಿದ ಜನರು ಸರ್ಕಾರಕ್ಕೆ ಹಿಡಿಶಾಪ ಹಾಕಲು ಆರಂಭಿಸಿದ್ದರು. ಈ ಎಲ್ಲದರ ನಡುವೆ ಇದೀಗ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಂಶ ಬೀಳಗಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು ವಿದ್ಯುತ್ ದರ ಏರಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
![](https://pratidhvani.com/wp-content/uploads/2023/06/How-to-save-big-money-on-electricity-1.jpg)
ಮೇ 12ರಂದು ಪ್ರತಿ ಯುನಿಟ್ಗೆ 70 ಪೈಸೆ ಏರಿಕೆಯಾಗಿತ್ತು. ಹೀಗಾಗಿ ಜೂನ್ ತಿಂಗಳಲ್ಲಿ ನೀಡಲಾಗು ಮೇ ತಿಂಗಳ ಬಿಲ್ನಲ್ಲಿ ಏಪ್ರಿಲ್ ತಿಂಗಳ ಬಿಲ್ನ್ನು ಬಾಕಿ ಮೊತ್ತ ಎಂದು ನೀಡಿದ್ದೇವೆ. 2 ಶ್ರೇಣಿಗಳಲ್ಲಿ ವಿದ್ಯುತ್ ಶುಲ್ಕ ಸಂಗ್ರಹ ನಡೆಯಲಿದೆ ಎಂದು ಹೇಳಿದ್ದಾರೆ. ಮೊದಲ 100 ಯೂನಿಟ್ಗೆ ಪ್ರತಿ ಯೂನಿಟ್ ದರ 4.75 ರೂ. ವಿಧಿಸಲಾಗಿದೆ. 100 ಯೂನಿಟ್ ಮೀರಿದರೆ 2ನೇ ಶ್ರೇಣಿ ದರ ಪ್ರತಿ ಯೂನಿಟ್ಗೆ 7 ರೂ. ಅನ್ವಯವಾಗಲಿದೆ. ಈ ಮೊದಲು ಮೂರು ಶ್ರೇಣಿ ದರಗಳಲ್ಲಿ ಶುಲ್ಕ ಸಂಗ್ರಹಿಸಲಾಗುತ್ತಿತ್ತು. ಮೊದಲ 50 ಯೂನಿಟ್ಗೆ 4.15 ರೂ., ನಂತರದ 50 ಯೂನಿಟ್ಗೆ 5.6 ರೂ. 100 ಯೂನಿಟ್ ಮೀರಿದರೆ 7.15 ರೂ. ಸಂಗ್ರಹಿಸಲಾಗುತ್ತಿತ್ತು.
ಚುನಾವಣೆಯ ಹಿನ್ನೆಲೆಯಲ್ಲಿ ಏಪ್ರಿಲ್ ತಿಂಗಳ ವಿದ್ಯುತ್ ದರ ಏರಿಕೆ ಘೋಷಣೆಗೆ ಬಿಜೆಪಿ ಸರ್ಕಾರ ತಡೆ ನೀಡಿತ್ತು. ಆದರೆ ಇದೀಗ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರ್ತಾ ಇದ್ದಂತೆ ದರ ಏರಿಕೆ ಶಾಕ್ ರಾಜ್ಯದ ಜನತೆಗೆ ತಟ್ಟಿದೆ.