ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಆರೋಪ ಮುಂದುವರೆಸಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನಾನು ಮುಖ್ಯಮಂತ್ರಿಯಾಗುವ ಅವಕಾಶವನ್ನು ತಪ್ಪಿಸಿದ್ದೇ ಯಡಿಯೂರಪ್ಪ. ಯತ್ನಾಳ್ ಅವರನ್ನು ಸಿಎಂ ಮಾಡಿದರೆ 3 ತಿಂಗಳಲ್ಲಿ ಸರ್ಕಾರವನ್ನೇ ಬೀಳಿಸುತ್ತೇನೆ ಎಂದು ಕೇಂದ್ರ ನಾಯಕರಿಗೆ ಬ್ಲಾಕ್ ಮೇಲ್ ಮಾಡಿ ಬಸವರಾಜ್ ಬೊಮ್ಮಾಯಿ ಅವರನ್ನು ಆಯ್ಕೆ ಮಾಡಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಶುಕ್ರವಾರ ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಯತ್ನಾಳ್, ಯಡಿಯೂರಪ್ಪ 10 ಸಾವಿರ ಕೋಟಿ ಭ್ರಷ್ಟಾಚಾರ ನಡೆಸಿದ್ದಾರೆ. ಒಂದು ವೇಳೆ ಯತ್ನಾಳ್ ಸಿಎಂ ಆದರೆ ಯಡಿಯೂರಪ್ಪ ಅವರ ಅಕ್ರಮ, ಭ್ರಷ್ಟಾಚಾರ ಬಯಲಿಗೆ ಬರುತ್ತೆ. ಹಲವರು ಜೈಲು ಸೇರಬೇಕಾಗುತ್ತೆ ಎಂಬ ಭಯ. ಸಿಎಂ ಸಂಭಾವ್ಯರ ಪಟ್ಟಿಯಲ್ಲಿ ನನ್ನೊಬ್ಬನ ಹೆಸರು ಮಾತ್ರ ಇತ್ತು ಹೊರತು ನಿರಾಣಿ, ಬೆಲ್ಲದ್, ಬೊಮ್ಮಾಯಿ ಇವರ್ಯಾರ ಹೆಸರೂ ಇರಲಿಲ್ಲ ಎಂದು ಹೇಳಿದ್ದಾರೆ.

ಆದರೆ ಯಡಿಯೂರಪ್ಪ ನವರು ಧರ್ಮೇಂದ್ರ ಪ್ರಧಾನ್ ಹಾಗೂ ಇನ್ನಿತರ ಕೇಂದ್ರ ನಾಯಕರನ್ನು ಬ್ಲಾಕ್ ಮೇಲ್ ಮಾಡಿ ನಾನು ಸಿಎಂ ಆಗುವುದನ್ನು ತಪ್ಪಿಸಿದರು. ನಾನೇನಾದರು ರಾಕ್ಯದ ಸಿಎಂ ಆಗಿದ್ದರೆ 150 ಸೀಟ್ ಗೆಲ್ಲುತ್ತಿತ್ತು ಎಂದು ಹೇಳಿದ್ದಾರೆ.
ಬಿಎಸ್ ಯಡಿಯೂರಪ್ಪ ಈಗ ಪಕ್ಷ ಸಂಘಟನೆಗಾಗಿ ಜಿಲ್ಲಾ ಪ್ರವಾಸ ಮಾಡುವುದಾಗಿ ಹೇಳುತ್ತಿದ್ದಾರೆ. ಇಷ್ಟೆಲ್ಲ ಆದ ಮೇಲೆ ವಿಜಯಪುರ ಜಿಲ್ಲೆಗೆ ಬರಲು ಇವರಿಗೆ ಯಾವ ನೈತಿಕತೆ ಇದೆ? ಇವರ ಜಿಲ್ಲಾ ಪ್ರವಾಸಗಳಿಂದಾಗಿ ಪಕ್ಷಕ್ಕೆ ಇನ್ನಷ್ಟು ಹಾನಿಯಾಗುತ್ತೆ. ಜಿಲ್ಲೆಗೆ ಬಂದರೆ ನಾನೇ ಯಡಿಯೂರಪ್ಪ ಅವರನ್ನು ಪ್ರಶ್ನೆ ಮಾಡುತ್ತೇನೆ ಎಂದಿದ್ದಾರೆ.