ಅದು 400 ವರ್ಷದಿಂದಲೂ ಪಾರಂಪರಿಕವಾಗಿ ನಡೆಯುತ್ತಾ ಬಂದಿರುವ ಹಬ್ಬ. ದೊಡ್ಡಗಣಪ ಹಾಗೂ ದೊಡ್ಡ ಬಸವರ ಸನ್ನಿಧಾನದಲ್ಲಿ ನಡೆಯುವ ಜಾತ್ರೆ. ಆ ಜಾತ್ರೆ ಕೊರೋನಾ ಕಾರಣದಿಂದ ಕಳೆದರಡು ವರ್ಷ ನಡೆದಿರಲಿಲ್ಲ. ಆದರೆ ಎಂದಿಗಿಂತಲೂ ಮಿಗಿಲು ಎಂಬಂತೆ ಅದ್ದೂರಿಯಾಗಿ ಬಸವನಗುಡಿ ಕಡಲೆಕಾಯಿ ಪರಿಷೆ ಇಂದಿನಿಂದ ಆರಂಭಗೊಂಡಿದೆ.
ಬಸವನಗುಡಿ ಕಡಲೆಕಾಯಿ ಪರಿಷಿಗೆ ಸಿಕ್ತು ಅದ್ದೂರಿ ಚಾಲನೆ.!!
ನಿಜಕ್ಕೂ ಅದೊಂದು ಅದ್ಭುತ, ಅಮೋಘ, ಅವರ್ಣನೀಯ ದೃಶ್ಯ. ಒಂದೇ ಕಡೆ ರಾಶಿ ರಾಶಿ ಕಡಲೆಕಾಯಿ. ಮತ್ತೆಲ್ಲೂ ಕಾಣಸಿಗದ ಕಡಲೆಕಾಯಿ ವೈಭವ. ಪುಟ್ ಪುಟಾಣಿಗಳಿಂದ ಹಿಡಿದು ಇಳಿವಯಸ್ಸಿಗರೂ ಸೇರಿ ಕಡಲೆ ಸಿಪ್ಪೆ ಸುಲಿಯುತ್ತಾ, ಬಾಯಿ ಚಪ್ಪರಿಸಿ ಕಡಲೆಕಾಯಿ ತಿನ್ನುತ್ತಾ.. ನಡೆಯುವ ದೃಶ್ಯ ನೋಡ ಕಣ್ಣುಗಳಿಗೆ ಇಂಪು. ಹೌದು, ಬಸವನಗುಡಿ ಕಡಲೆಕಾಯಿ ಪರಿಷೆ ಯಾಕಿಷ್ಟು ಪ್ರಸಿದ್ಧ ಎಂದರೆ ಇಂಥಾ ನೂರಾರು ಕಾರಣಗಳಿಗೆ. ಒಂದು ಹರಕೆಯಂತೆ ಕಡಲೆಕಾಯಿ ವ್ಯಾಪಾರಿಗಳು ಪ್ರತಿ ವರ್ಷ ಕಡಲೆಕಾಯಿ ತಂದು ಬೀದಿಯಲ್ಲಿಟ್ಟು ಮಾರಾಟ ಮಾಡುತ್ತಾರೆ. ಗಣಪನ, ಬಸವನನ್ನು ನೆನೆಯುತ್ತಾ, ಪೂಜಿಸುತ್ತಾ ಭಕ್ತಿ ವೈಭೋಗದೊಂದಿಗೆಯೇ ಬಡವರ ಬಾದಾಮಿ ಹಬ್ಬ ನಡೆಸುತ್ತಾರೆ. ಅಂಥಾ ಇತಿಹಾಸ ಪ್ರಸಿದ್ಧ ಬಸವನಗುಡಿ ಕಡಲೆಕಾಯಿ ಪರಿಷೆಗೆ ಇಂದು ಅದ್ದೂರಿ ಚಾಲನೆ ಸಿಕ್ಕಿದೆ.
ಕಡಲೆಕಾಯಿ ಎಂದರೆ ಬಡವರ ಬಾದಾಮಿ. ಹೀಗೆ ರಾಶಿ ರಾಶಿಯಾಗಿ ಗುಡ್ಡೆಹಾಕಿ ಸೇರು, ಲೀಟರು, ಕೆಜಿ ಲೆಕ್ಕದಲ್ಲಿ ವ್ಯಾಪಾರ ಮಾಡಲಾಗುತ್ತಿದೆ. ಕೊರೋನಾ ಕಾರಣದಿಂದಾಗಿ ಕಳೆದೆರಡು ವರ್ಷ ಕಡಲೆಕಾಯಿ ಪರಿಷೆ ನಡೆದಿರಲಿಲ್ಲ. ಆದರೆ ಈ ಬಾರಿ ಕೊರೋನಾ ಸೋಂಕು ಕಡಿಮೆಯಾಗಿರುವ ಹಿನ್ನೆಲೆ ಬಿಬಿಎಂಪಿ ಹಾಗೂ ಮುಜರಾಯಿ ಇಲಾಖೆ ಜಂಟಿಯಾಗಿ ಪರಿಷೆ ನಡೆಸುತ್ತಿದೆ. ಒಂದು ವಾರಗಳ ಹಿಂದಿಯಿಂದಲೇ ಕಡಲೆಕಾಯಿ ಅಂಗಡಿಗಳು ಬೀದಿಯಲ್ಲಿ ತೆರೆದಿದ್ದರೂ ಕೂಡ ಇಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗೌಪ್ತ ಹಾಗೂ ಸ್ಥಳೀಯ ಶಾಸಕರಿಂದ ಆರಂಭಗೊಂಡಿದೆ.
ಬಗೆಬಗೆಯ ಕಡಲೆಕಾಯಿ.. ಕೆಜಿಗೆ 80 ರೂಪಾಯಿ.!!
ಈ ಬಾರಿ ಒಟ್ಟು ನಾಲ್ಕು ಪ್ರಮುಖ ಕಡಲೆಕಾಯಿ ತಳಿಗಳು ಪರಿಷೆಯಲ್ಲಿದೆ. ನಾಟಿ, ಫಾರಂ, ಬೋಂಡಾ ಹಾಗೂ ಬಾದಾಮಿ ಎಂಬಿತ್ಯಾದಿ ಕಡಲೆಕಾಯಿಗಳು ಪರಿಷೆಯಲ್ಲಿ ಮಾರಾಟವಾಗುತ್ತಿದೆ.
ಬಾದಾಮಿ ಕಡಲೆಕಾಯಿ – 80 (kg)
ಬೋಂಡಾ ಕಡಲೆಕಾಯಿ – 70 (kg)
ನಾಟಿ ಕಡಲೆಕಾಯಿ – 80 (kg)
ಫಾರಂ ಕಡಲೆಕಾಯಿ – 70 (kg)
ಮೊದಲ ದಿನವೇ ಕಡಲೆಕಾಯಿ ಜಾತ್ರೆಯಲ್ಲಿ ಜನ ಜಾತ್ರೆ.!!
ಕೊರೋನಾ ಕಾರಣದಿಂದ ಎರಡು ವರ್ಷದಿಂದ ಕಡಲೆಕಾಯಿ ಪರಿಷೆ ಸಂಭ್ರಮ ಕಳೆದುಕೊಂಡಿದ್ದ ಬೆಂಗಳೂರು ಮಂದಿ ಈ ಬಾರಿ ಕಡಲೆಕಾಯಿ ಸಂಭ್ರಮದಲ್ಲಿ ಮಿಂದೇಳುವ ಲೆಕ್ಕಾಚಾರ ಹಾಕಿಕೊಂಡಂತಿತ್ತು ವಾತಾವರಣ. ಬೆಳ್ಳಂಬೆಳಗ್ಗೆಯೇ ಚೀಲ ಹಿಡಿದು ಕಡಲೆಕಾಯಿ ಖರೀದಿಗೆ ಆಗಮಿಸಿದ್ದರು. ಕುಟುಂಬ ಸಮೇತ ದೊಡ್ಡಗಣಪನ ದರ್ಶನ ಪಡೆದು ಕಡಲೆಕಾಯಿ ಸವಿಯುವ ದೃಶ್ಯಗಳು ಬೀದಿ ತುಂಬಾ ಕಾಣಸಿಗುತ್ತಿತ್ತು.
ಇಂದು ಹೀಗೆ ಅದ್ದೂರಿಯಾಗಿ ಆರಂಭಗೊಂಡ ಬಸವನಗುಡಿ ಕಡಲೆಕಾಯಿ ಪರಿಷೆ ಇನ್ನೊಂದು ವಾರ ನಡೆಯಲಿದೆ. ಪರಿಷೆಗೆ ಸಾಮಾನ್ಯವಾಗಿ ಲಕ್ಷಾಂತರ ಮಂದಿ ಸಾಕ್ಷಿಯಾಗುತ್ತಾರೆ. ಈ ಬಾರಿಯೂ ಲಕ್ಷಗಟ್ಟಲೆ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಜೊತೆಗೆ ಎಮಿಕ್ರಾನ್ ರೂಪಾಂತರಿ ಮೂರನೇ ಅಲೆ ಭೀತಿ ಹುಟ್ಟಿಸಿರುವ ಕಾರಣಕ್ಕೆ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಂಡು ಜನರು ತಮ್ಮ ತಮ್ಮ ಸುರಕ್ಷಿತಯನ್ನು ನೋಡಿಕೊಳ್ಳಬೇಕು. ಇದಕ್ಕೆಂದು ಬಿಬಿಎಂಪಿ ಕಡೆಯಿಂದ ಮಾರ್ಷಲ್ಗಳ ನಿಯೋಜನೆಯಾಗಿದ್ದರೂ ಕೂಡ ಜನರು ಈ ಬಗ್ಗೆ ಹೆಚ್ಚು ಎಚ್ಚರವಹಿಸಿ ಕೊರೋನಾ ಕಾನೂನುಗಳನ್ನು ಪಾಲಿಸಬೇಕಿದೆ.